ಪರಿಸರ ಪರಿಣಾಮ ಮೌಲ್ಯಮಾಪನ (EIA)-2020 ಕರಡು ಅಧಿಸೂಚನೆಯನ್ನು ಹಿಂಪಡೆದುಕೊಂಡು, ಪ್ರಸ್ತುತ ಅಸ್ತಿತ್ವದಲ್ಲಿರುವ EIA-2006ನ್ನು ಇನ್ನೂ ಬಲಪಡಿಸಬೇಕು ಎಂದು ದೇಶದಾದ್ಯಂತ 500ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ವಿಜ್ಞಾನಿಗಳು ಮತ್ತು ಸಂಶೋಧಕರು ಪರಿಸರ ಸಚಿವಾಲಯಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
“ವಿವಿಧ 130 ಸಂಸ್ಥೆಗಳ ತಜ್ಞರು ಸಹಿ ಮಾಡಿರುವ ಪತ್ರದಲ್ಲಿ, EIA ಅಧಿಸೂಚನೆಗೆ ಸಂಬಂಧಿಸಿದಂತೆ ತಮ್ಮ ಕಳವಳಗಳನ್ನು ಪಟ್ಟಿ ಮಾಡಿ, ಇದು ಬಿಡುಗಡೆಯಾದಾಗಿನಿಂದಲೂ ವಿವಾದದಿಂದ ಕೂಡಿದೆ, ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗಾಗಿ ಇದನ್ನು ಹಿಂತೆಗೆದುಕೊಳ್ಳುವಂತೆ ಸಚಿವಾಲಯವನ್ನು ಒತ್ತಾಯಿಸಿದ್ದಾರೆ” ಎಂದು ನ್ಯೂಸ್ ಕ್ಲಿಕ್ ವರದಿ ಮಾಡಿದೆ.
ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER), ಭಾರತೀಯ ತಂತ್ರಜ್ಞಾನ ಸಂಸ್ಥೆ (IITs), ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS) ಮತ್ತು ವನ್ಯಜೀವಿ ಸಂಸ್ಥೆ ಆಫ್ ಇಂಡಿಯಾ (WII) ಮುಂತಾದ ಸಂಸ್ಥೆಗಳ ತಜ್ಞರು ಸೇರಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ವಿವಾದಾತ್ಮಕ ಅಧಿಸೂಚನೆಯು, “ವಾಣಿಜ್ಯ ವ್ಯವಹಾರವನ್ನು ಸುಲಭಗೊಳಿಸಿ ಉತ್ತೇಜಿಸುವ ಸಲುವಾಗಿ ಪರಿಸರ ಸುರಕ್ಷತೆಯನ್ನು ಕಡೆಗಣಿಸಿದೆ” ಎಂದು ಆರೋಪಿಸಿ ದೇಶದಾದ್ಯಂತ ಅನೇಕ ವಿದ್ಯಾರ್ಥಿಗಳು, ನಾಗರಿಕರು, ಕಾರ್ಯಕರ್ತರು, ಪರಿಸರವಾದಿಗಳಿಂದ ತೀವ್ರವಾಗಿ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ
“ವಿವಿಧ ಸಂಸ್ಥೆಗಳ ಪಿಎಚ್ಡಿ ವಿದ್ಯಾರ್ಥಿಗಳು ಪ್ರಾರಂಭಿಸಿದ cross-institutional ಸಹಯೋಗಕ್ಕೆ, 105 ಜನ ಅಧ್ಯಾಪಕರು, ಮಾಜಿ ಅಧ್ಯಾಪಕರು ಮತ್ತು ಹಿರಿಯ ವಿಜ್ಞಾನಿಗಳು, 400 ಕ್ಕೂ ಹೆಚ್ಚು ಪಿಎಚ್ಡಿ ವಿದ್ಯಾರ್ಥಿಗಳು, ಪೋಸ್ಟ್ ಡಾಕ್ಟರೇಟ್ ವಿದ್ಯಾರ್ಥಿಗಳು, ಸ್ವತಂತ್ರ ಸಂಶೋಧನಾ ವಿದ್ವಾಂಸರು ಸೇರಿದಂತೆ ಅನೇಕ ತಜ್ಞರು ಪತ್ರಕ್ಕೆ ಸಹಿ ಹಾಕಿದ್ದಾರೆ” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
“ಹೆಚ್ಚು ಪರಿಸರ ಮಾಲಿನ್ಯಕಾರಕ ಕೈಗಾರಿಕೆಗಳು ಮತ್ತು ಯೋಜನೆಗಳ ಮರು ವರ್ಗೀಕರಣ, ಸರಿಯಾಗಿ ಯೋಜಿಸದ ದೊಡ್ಡ-ಪ್ರಮಾಣದ ಅಭಿವೃದ್ಧಿ ಯೋಜನೆಗಳು, ಜೀವವೈವಿಧ್ಯತೆ, ಪರಿಸರ ವ್ಯವಸ್ಥೆಗಳು ಮತ್ತು ಜನರ ಮೇಲೆ ಹೆಚ್ಚಿನ ಋಣಾತ್ಮಕ ಪರಿಣಾಮ ಬೀರುತ್ತವೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಈ ಅಧಿಸೂಚನೆಯು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವಂತಹ ಯೋಜನೆಗಳಿಗೆ ಮುಕ್ತವಾಗುವುದರೊಂದಿಗೆ, ನಿಜವಾಗಿಯೂ ಅಗತ್ಯವಿರುವ ಜನರಿಗೆ ಪ್ರಯೋಜನವನ್ನು ಕಡಿಮೆ ಮಾಡುತ್ತದೆ” ಎಂದು ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ಬೆಂಗಳೂರಿನ IISc ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಶಂಕರ್ ಹೇಳಿದ್ದಾರೆ.
IIT-ಬಾಂಬೆಯ ಪಿಎಚ್ಡಿ ವಿದ್ಯಾರ್ಥಿಯಾದ ಅಯಾಜ್ ಅಹ್ಮದ್, “EIA ಪ್ರಕ್ರಿಯೆಯು ಮಾಲಿನ್ಯಕಾರಕ ಕೈಗಾರಿಕೆಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ನಿಯಂತ್ರಿಸಿ, ಪರಿಸರದ ಮೇಲೆ ಅವುಗಳ ಪ್ರಭಾವವನ್ನು ತಗ್ಗಿಸುತ್ತದೆ ಎಂದು ಭಾವಿಸಿದರೆ, ಇದು ಪರಿಸರ ಸುರಕ್ಷತೆಯನ್ನು ಸುಲಭೀಕರಿಸುವ ವಿಷಯವನ್ನು ಪ್ರಸ್ತಾಪಿಸಿದೆ. ನಮಗೆ ಬಲವಾದ ಪರಿಸರ ನಿಯಮಗಳು ಬೇಕಾಗುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಸರಘಟ್ಟದಲ್ಲಿ ಚಿತ್ರನಗರಿ ಬೇಡ; ಪರಿಸರವಾದಿಗಳು ಸೇರಿದಂತೆ ಹಲವರಿಂದ ಒತ್ತಾಯ
ಏನಿದು EIA-2020;
ಪರಿಸರ ಪರಿಣಾಮ ಮೌಲ್ಯಮಾಪನ (EIA)-2020 ಕರಡು ಅಧಿಸೂಚನೆಯ ಹೊಸ ಮಾರ್ಪಾಡುಗಳು, ಪ್ರಸ್ತುತ ಅಸ್ತಿತ್ವದಲ್ಲಿರುವ EIA-2006ನ್ನು ಕೂಲಂಕಷವಾಗಿ ಪರಿಶೀಲಿಸಲು ಪ್ರಯತ್ನಿಸುತ್ತದೆ.
ಕೈಗಾರಿಕೆಗಳು ತಮ್ಮ ಉದ್ದೇಶಿತ ಚಟುವಟಿಕೆಯ ಪರಿಸರ ಮತ್ತು ಪರಿಸರೀಯ ಪರಿಣಾಮವನ್ನು ಮತ್ತು ಕಾರ್ಯವಿಧಾನವನ್ನು ನಿರ್ಣಯಿಸಲು ಹೊಸ ಕಾರ್ಯವಿಧಾನವನ್ನು ಸೂಚಿಸುತ್ತವೆ. ಇವುಗಳನ್ನು ತಜ್ಞರ ಸಮಿತಿಗಳು ಮೌಲ್ಯಮಾಪನ ಮಾಡುತ್ತವೆ ಎಂದು ಪರಿಸರ ಸಚಿವಾಲಯ ತಿಳಿಸಿದೆ.
ಪರಿಸರ ಸಚಿವಾಲಯವು ಕರಡು ಮಸೂದೆಯನ್ನು ಮಾರ್ಚ್ 12 ರಂದು ಚರ್ಚೆಗೆ ಮತ್ತು ಪ್ರತಿಕ್ರಿಯೆಗಾಗಿ 60 ದಿನಗಳ ಅವಧಿಗೆ ಸಾರ್ವಜನಿಕ ವಲಯಕ್ಕೆ ಬಿಟ್ಟಿತ್ತು. ಜೂನ್ 30 ರಂದು ದೆಹಲಿ ಹೈಕೋರ್ಟ್ ಕರಡು ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಲು ಗಡುವನ್ನು ಆಗಸ್ಟ್ 11 ರವರೆಗೆ ವಿಸ್ತರಿಸಿತ್ತು. ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಸಮಯವನ್ನು ವಿಸ್ತರಿಸಿದೆ ಎಂದು ಪ್ರಸ್ತಾಪಿಸಲಾಗಿದೆ.
ಪರಿಸರ ಸಚಿವಾಲಯವು ಮಾರ್ಚ್ ನಲ್ಲಿ ಈ ಅಧಿಸೂಚನೆ ಹೊರಡಿಸಿದಾಗಿನಿಂದ, ಇದುವರೆಗೆ ಸುಮಾರು 17 ಲಕ್ಷ ಈ-ಮೇಲ್ ಗಳ ಮೂಲಕ ಸಲಹೆಗಳನ್ನು ಸ್ವೀಕರಿಸಿದೆ. ಇದರಲ್ಲಿ ಹಲವಾರು ಆಕ್ಷೇಪಣೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ: EIA-2020 ಕುರಿತ ಕಾಂಗ್ರೆಸ್ ಸಲಹೆಗಳು ಆಧಾರರಹಿತ: ಪ್ರಕಾಶ್ ಜಾವಡೇಕರ್


