ಇಂದು ನಡೆಯಬೇಕಿದ್ದ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಪ್ಯಾನಲ್ನ ವಿಚಾರಣೆಗೆ ಫೇಸ್ಬುಕ್ ಗೈರು ಹಾಜರಾಗಿದೆ. ಇದು ಫೇಸ್ಬುಕ್ಗೆ ಅಂತಿಮ ಎಚ್ಚರಿಕೆಯಾಗಿದ್ದು ಮುಂದೆಯು ಗೈರು ಹಾಜರಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಮಿತಿ ತಿಳಿಸಿದೆ.
ಈ ವಿಷಯವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಈಗಾಗಲೇ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಎದುರು ವಿಚಾರಣೆಗೆ ಹಾಜರಾಗಿದ್ದೇವೆ. ಹಾಗಾಗಿ ದೆಹಲಿ ವಿಧಾನಸಭಾ ಪ್ಯಾನಲ್ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಫೇಸ್ಬುಕ್ನ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಮಿತಿಯ ಅಧ್ಯಕ್ಷ ರಾಘವ್ ಛಡ್ಡಾ “ಫೇಸ್ಬುಕ್ ತಾನು ಪಾರ್ಲಿಮೆಂಟರಿ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿರುವುದಾಗಿ ತಿಳಿಸಿದೆ. ಆದರೆ ದೆಹಲಿ ವಿಧಾನಸಭೆಯು ಅದರಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ. ಹಾಗಾಗಿ ಅದು ದೆಹಲಿ ವಿಧಾನಸಭಾ ಪ್ಯಾನಲ್ ಮುಂದೆ ಹಾಜರಾಗುವುದು ಅನಿವಾರ್ಯ” ಎಂದಿದ್ದಾರೆ.
ಫೇಸ್ಬುಕ್ನ ಅಧಿಕಾರಿಗಳ ಈ ನಡೆಯನ್ನು ಸಮಿತಿಯ ಸದಸ್ಯರು ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಮಾಡುವ ಅವಮಾನ ಮತ್ತು ನಿಂದನೆಯೆಂದು ಕರೆದಿದ್ದಾರೆ. ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಫೇಸ್ಬುಕ್ನ ಪಾತ್ರದ ಬಗ್ಗೆ ವಿಚಾರಣೆ ನಡೆಸುವುದು ಸಮಿತಿಯ ಹಕ್ಕಾಗಿದೆ ಎಂದಿದ್ದಾರೆ.
ಗಲಭೆಯ ಸಂದರ್ಭದಲ್ಲಿ ದೆಹಲಿ ಹೊತ್ತಿ ಉರಿಯುತ್ತಿದ್ದಾಗ, ಫೇಸ್ಬುಕ್ ತನ್ನ ಸಾಮೂದಾಹಿಕ ನಿಯಮಗಳನ್ನು ಉಲ್ಲಂಘಿಸುವವರನ್ನು ನಿಯಂತ್ರಿಸುವಲ್ಲಿ ಪಕ್ಷಪಾತವೆಸಗಿತ್ತು ಎಂಬ ಆರೋಪ ಎದುರಿಸುತ್ತಿದೆ. ಈ ಕುರಿತು ಫೇಸ್ಬುಕ್ನ ಅಜಿತ್ ಮೋಹನ್ ಸಮಿತಿಯ ಮುಂದೆ ಹಾಜರಾಗಿ ಉತ್ತರಿಸಬೇಕು ಎಂದು ರಾಘವ್ ಛಡ್ಡಾ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಇದು ದೆಹಲಿಗೆ ಸಂಬಂಧಿಸಿದ ವಿಷಯದ ವಿಚಾರಣೆಯಾಗಿದೆ. ಇದನ್ನು ದೆಹಲಿಗೆ ಸಂಬಂಧಿಸಿದ್ದಲ್ಲ ಎಂದು ಫೇಸ್ಬುಕ್ ಹೇಗೆ ಹೇಳುತ್ತದೆ? ವಿಚಾರಣೆಗೆ ಹಾಜರಾಗುವುದರ ನಿರಾಕರಣೆಯು ದೆಹಲಿ ಗಲಭೆಯಲ್ಲಿ ನಿಮ್ಮ ಪಾತ್ರವನ್ನು ಅಂಗೀಕರಿಸುತ್ತದೆ ಎಂದು ಸಮಿತಿಯ ಮತ್ತೊಬ್ಬ ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಫೇಸ್ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ