ಹೌದು, ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ಇದೇನೂ ಗುಟ್ಟಿನ ವಿಷಯವಾಗುಳಿದಲ್ಲ. ಸೋಮಣ್ಣರ ಬಹಿರಂಗ ಅಸಮಾಧಾನ ಚಾನೆಲ್ಗಳಲ್ಲಿ ಸುದ್ದಿಯಾಗಿದೆ. ಆದರೆ, ಚಕ್ರವರ್ತಿ ಸೂಲಿಬೆಲೆ ಸ್ವತಃ ವಾಟ್ಸಾಪ್ ಸಂದೇಶ ಹರಿಬಿಟ್ಟಿರುವುದು ಮತ್ತು ಅವುಗಳ ಸ್ಕ್ರೀನ್ಷಾಟ್ಗಳೂ ಓಡಾಡುತ್ತಿರುವುದು ಇನ್ನೂ ಅವರ ವಲಯದೊಳಗೇ ಇದೆ. ಮೇ 23ರಂದು ತೇಜಸ್ವಿ ಹರಕೆಯ ಕುರಿಯಾದರೆ ಬಿಜೆಪಿ ಪರಿವಾರದೊಳಗಿನ ಆತನ ವಿರೋಧಿಗಳು ಸಂಪನ್ನರಾಗುವುದರಲ್ಲಿ ಸಂದೇಹವೇ ಇಲ್ಲ. ತೇಜಸ್ವಿನಿ ಅನಂತಕುಮಾರ್ರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ, ಈಗಾಗಲೇ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿರುವ ತೇಜಸ್ವಿ ಸೂರ್ಯನ ವಿರುದ್ಧ ಸಂಘಪರಿವಾರದ ಹುಡುಗರು ಮತ್ತು ಯುವ ಬ್ರಿಗೇಡ್ ಬಾಯ್ಸ್ ಸಹಾ ತೊಡೆತಟ್ಟಿದ್ದಾರೆ.
ಟಿಕೆಟ್ ಘೋಷಣೆಯಾದ ತಕ್ಷಣ ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಎಳಸು ವ್ಯಕ್ತಿ ಈತ. ಅಲ್ಲಿಂದಾಚೆಗೆ ಟ್ವಿಟ್ಟರ್ನಲ್ಲಿ ಕೆಲವರು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯನಿಂದ ತಾನು ಮೋಸ ಹೋಗಿದ್ದಾಗಿ ಸೋಮ್ ದತ್ತ ಎಂಬ ಉದ್ಯಮಿ ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಆಕೆ ಹೇಳಿರುವ ಮತ್ತೊಂದು ಮಾತು ಈ ರೀತಿ ಮೋಸ ಹೋಗಿರುವುದರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದು. ಇದರ ಕುರಿತು ಹೊರಗಿನ ವಲಯಕ್ಕೆ ಹೆಚ್ಚು ಗೊತ್ತಿಲ್ಲದಿದ್ದರೂ, ಸಂಘಪರಿವಾರದ ವಾಟ್ಸಾಪ್ ಗುಂಪುಗಳಲ್ಲಿ ಹೆಚ್ಚಿನ ಸುದ್ದಿ ಹರಿದಾಡುತ್ತಿದೆ. ಪ್ರಮುಖವಾಗಿ ರಿಪಬ್ಲಿಕ್ ಟಿವಿಯ ಮತ್ತೊಂದು ಹುಡುಗಿಯ ಬಗ್ಗೆ ಸಹಾ ಸುದ್ದಿ ಓಡಾಡುತ್ತಿದೆ. ಅದರ ಸ್ಕ್ರೀನ್ಷಾಟ್ನಲ್ಲಿ ಹೆಸರು ಇತ್ಯಾದಿಗಳ ವಿವರವಿದೆಯಾದ್ದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ.
ಅರಬ್ ಮುಸ್ಲಿಂ ಮಹಿಳೆಯರ ಲೈಂಗಿಕತೆಯ ಕುರಿತೆಲ್ಲಾ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿಯ ಮನಸ್ಥಿತಿ ನೋಡಿದರೆ ಇಂತಹವು ಇನ್ನೂ ಹೆಚ್ಚಿರಬಹುದೆಂದು ಯಾರಿಗೂ ಗೊತ್ತಾಗುತ್ತದೆ. ಆತ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಆತನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ಗಳ ಸುರಿಮಳೆಯಾಗಿದೆ. ಅಂಬೇಡ್ಕರ್ ಬಗ್ಗೆ ಹೇಳಿಕೆ, ಸಂವಿಧಾನ ಬದಲಿಸುವುದು, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬೆಲ್ಲಾ ವಿಷಯಗಳಲ್ಲಿ ಆತ ಹಿಂದೆ ಹೇಳಿದ್ದ ಮಾತು ವಿಡಿಯೋಗಳನ್ನೆಲ್ಲಾ ತಂದು ಸುರಿದು ಅಪಹಾಸ್ಯ ಮಾಡುತ್ತಿದ್ದಾರೆ. ಮಹಿಳೆಯರ ಕುರಿತ ಈತನ ಅಸಭ್ಯ ನಡವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ಇನ್ನು ಮೋದಿ ಮೆಚ್ಚಿಸಲು ಕನ್ನಡ ವಿರೋಧಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಮಹತ್ವದ ವಿಷಯವೆಂದರೆ ಚಕ್ರವರ್ತಿ ಸೂಲಿಬೆಲೆಗೂ ತೇಜಸ್ವಿ ಸೂಯರ್ಂಗೂ ಮೊದಲಿಂದಲೂ ಮುಸುಕಿನ ಜಗಳ ಒಳಗೊಳಗೆ ಮೊದಲಿಂದಲೂ ಇತ್ತು. ತೇಜಸ್ವಿಗೆ ಟಿಕೆಟ್ ಘೋಷಣೆಯಾದ ದಿನ ನಿದ್ದೆ ಬಾರದೇ ಇದ್ದುದು ತೇಜಸ್ವಿಗಲ್ಲ, ಸೂಲಿಬೆಲೆಗೆ ಎಂಬುದು ಪರಿವಾರದ ಒಳಗಿನ ಮಾತು. ಇವರಿಬ್ಬರ ನಡುವೆ ಪರಸ್ಪರ ಅವಕಾಶ ಕಸಿಯುವುದು, ತಪ್ಪಿಸುವುದು ಹಿಂದಿನಿಂದಲೂ ನಡೆದೇ ಇತ್ತು. ಸುಳ್ಳುಗಳನ್ನು ಹರಡುವುದರಲ್ಲಿ, ಭಾಷಣಗಳನ್ನು ಮಾಡುವುದರಲ್ಲಿ, ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲಿಯೂ ಮೇಲಾಗಿದ್ದ ಸೂಲಿಬೆಲೆಗೆ ಟಿಕೆಟ್ ಸಿಗದೇ ತೇಜಸ್ವಿಗೆ ದಕ್ಕಿದ್ದು ಸೂಲಿಬೆಲೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಸ್ತವದಲ್ಲಿ ಒಂದು ವರ್ಷಕ್ಕೂ ಹಿಂದಿನಿಂದಲೇ ಚಕ್ರವರ್ತಿ ಸೂಲಿಬೆಲೆ ಫಾರ್ ಸಿಎಂ ಎಂಬ ಪೇಜ್ಗಳೆಲ್ಲಾ ಇದ್ದು, ಅಂತಹ ಮಹತ್ವಾಕಾಂಕ್ಷೆ ಆತನಿಗೂ ಅತಿಯಾಗಿಯೇ ಇದೆ. ಅದಕ್ಕೆ ಸೂಜಿ ಚುಚ್ಚಿದಂತಾಗಿದ್ದು, ಸೂಲಿಬೆಲೆ ತನ್ನ ಭಾಷಣಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಂಡ್ಯವನ್ನು ಉಲ್ಲೇಖಿಸುತ್ತಿದ್ದಾನೇ ಹೊರತು ಅಪ್ಪಿತಪ್ಪಿಯೂ ತೇಜಸ್ವಿ ಕುರಿತು ಒಂದೂ ಮಾತಾಡಿಲ್ಲ.
ತೇಜಸ್ವಿ ಪಕ್ಕಾ ಸಂಘದ ಉತ್ಪನ್ನ. ಸಂತೋಷ್ ಜಿ ಬಿಟ್ರೆ ಸೂರ್ಯನೆ ಟಿಪಿಕಲ್ ಸಂಘಿ ರಾಜಕಾರಣಿ. ತೇಜಸ್ವಿ ಸೂರ್ಯ ಪಿಯುಸಿ ದಿನಗಳಲ್ಲೇ ಎಂ ಎಲ್ ಎ – ಎಂ ಪಿ ಆಗ್ಬೇಕು ಅಂತ ಮಹತ್ವಾಕಾಂಕ್ಷೆ ಇಟ್ಕೊಂಡಿದ್ದ. ಅದಕ್ಕಾಗಿ ಸಂಘದ ಬೇರೆ ಹುಡುಗರನ್ನು ತುಳಿದು ಮೇಲೆ ಬರದಂತೆ ತಡೀತಿದ್ದ ಅನ್ನೋ ಆರೋಪವಿದೆ. ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ಸುಳ್ಳೋ, ನಿಜವೋ ಅದನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವುದರಲ್ಲಿ ಈತನಿಗಿದ್ದ ಸಾಮಥ್ರ್ಯದ ಆಧಾರದ ಮೇಲೆ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಲಾಗಿತ್ತು. ಹಸಿ ಸುಳ್ಳುಗಳ ತಯಾರಿಕೆಯ ಆರೋಪದಲ್ಲಿ ಮಹೇಶ್ ವಿಕ್ರಮ ಹೆಗಡೆ ಜೈಲುಪಾಲಾದಾಗ ಆತನ ಪರವಾಗಿ ವಕೀಲಿಕೆ ಮಾಡಿದವನು ಇದೇ ತೇಜಸ್ವಿ ಸೂರ್ಯ.
ಈತನ ಮಾತು ಮಾತ್ರ ಸನಾತನ. ಜೀವನಶೈಲಿ ಮಾತ್ರ ಗಾಬರಿಯಾಗಬಹುದಾದಷ್ಟು ಆಧುನಿಕ. ವಿಲಾಸಿ, ಸ್ವೇಚ್ಛೆ. ಇವೆಲ್ಲಾ ಕಾರಣಗಳಿಂದ ಈತನನ್ನು ಕಂಡರೆ 50% ಬಿಜೆಪಿಗರಿಗೆ ಆಗಲ್ಲ. ಇನ್ನು 50% ಬಿಜೆಪಿಗರಿಗೆ ಅವನ್ಯಾರೆಂದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸರಿಯಾದ ಕಾರಣ ಸಿಗುವವರೆಗೂ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ವಿ. ಸೋಮಣ್ಣ ಬಂಡಾಯವೆದ್ದಿದಾಗಿದೆ. ಆರ್.ಅಶೋಕ್ಗಂತೂ ಮುಂದೆ ಈತ ಗೆದ್ದರೆ ಈತನೆದುರು ತಾವು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ತಯಾರಿಲ್ಲ. ಅದಕ್ಕಾಗಿ ಈ ಬಾರಿ ತೇಜಸ್ವಿ ಸೂರ್ಯನನ್ನು ಸೋಲಿಸಲು ಸೂಲಿಬೆಲೆ, ಸೋಮಣ್ಣ, ಅಶೋಕ್ಆದಿಯಾಗಿ ಎಲ್ಲರೂ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ.


