‘ಬಜರಂಗದಳದ ಮೇಲೆ ನಿಷೇಧ ಹೇರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ’ ಎಂದು ಫೇಸ್ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ತಿಳಿಸಿದ್ದು, ಇದನ್ನು ತಮ್ಮ ಕಂಪನಿಯ ಸತ್ಯ ಪರಿಶೀಲನಾ ತಂಡವು ದೃಢಪಡಿಸಿದೆ ಎಂದು ಸಂಸದೀಯ ಸಮಿತಿಗೆ ಬುಧವಾರ ತಿಳಿಸಿದ್ದಾರೆ.
ಈ ಹಿಂದೆ ಜೂನ್ ತಿಂಗಳಲ್ಲಿ ದೆಹಲಿಯ ಚರ್ಚ್ ಒಂದರ ಮೇಲೆ ದಾಳಿ ನಡೆಸಿದ ವಿಡಿಯೊವನ್ನು ಬಜರಂಗದಳವು ಫೇಸ್ಬುಕ್ನಲ್ಲಿ ಹಂಚಿಕೊಂಡಿತ್ತು. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ತಿಳಿದಿದ್ದರೂ ಸಹ ಬಜರಂಗದಳವನ್ನು ನಿಷೇಧಿಸಲು ಫೇಸ್ಬುಕ್ ಮುಂದಾಗಿರಲಿಲ್ಲ.
ಇದನ್ನೂ ಓದಿ: ತನ್ನ ವ್ಯವಹಾರದ ರಕ್ಷಣೆಗೆ ಭಜರಂಗದಳದ ಪರ ನಿಂತ ಫೇಸ್ಬುಕ್: ವಾಲ್ಸ್ಟ್ರೀಟ್ ಜರ್ನಲ್ ವರದಿ
ಬಜರಂಗದಳವನ್ನು ನಿಷೇಧಿಸಿದರೆ ಕಂಪನಿಯ ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಫೇಸ್ಬುಕ್ ಕಂಪನಿಗೆ ಇತ್ತೆಂದು ವಾಲ್ಸ್ಟ್ರೀಟ್ ಜರ್ನಲ್ ಇತ್ತೀಚೆಗೆ ವರದಿ ಮಾಡಿತ್ತು.
ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸಮಿತಿಯು ಅಜಿತ್ ಮೋಹನ್ ಅವರಿಗೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: ಫೇಸ್ಬುಕ್ ದ್ವೇಷದಿಂದ ಲಾಭ ಗಳಿಸುತ್ತಿದೆ: ಮಾಜಿ ಫೇಸ್ಬುಕ್ ಉದ್ಯೋಗಿ ಮಾರ್ಕ್ ಲಕ್ಕಿ
“ಬಜರಂಗದಳದ ಪೋಸ್ಟ್ನಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಕಂಡುಬಂದಿಲ್ಲ. ಆ ಕಾರಣ, ಸಂಘಟನೆಯನ್ನು ನಿಷೇಧಿಸಿಸುವ ಅನಿವಾರ್ಯತೆ ಫೇಸ್ಬುಕ್ ಇಂಡಿಯಾ ಕಂಪನಿಗೆ ಇರಲಿಲ್ಲ” ಎಂದು ಅಜಿತ್ ಮೋಹನ್ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.
ಬಜರಂಗದಳವು ಭಾರತದಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಬೆಂಬಲಿಸುವ ಅಪಾಯಕಾರಿ ಸಂಘಟನೆಯೆಂದು ಫೇಸ್ಬುಕ್ನ ಭದ್ರತಾ ತಂಡವು ಗುರುತಿಸಿದ್ದರೂ, ರಾಜಕೀಯ ಮತ್ತು ವ್ಯವಹಾರದ ರಕ್ಷಣೆಯ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಮುಂದುವರೆಯಲು ಅವಕಾಶ ನೀಡಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಇದನ್ನೂ ಓದಿ: ಅಂಬೇಡ್ಕರ್ ಮೊಮ್ಮಗ ’ರಾಜರತ್ನ’ ಪೇಜನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ ಫೇಸ್ಬುಕ್!
ಬಜರಂಗದಳವು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಫೇಸ್ಬುಕ್ ಅರಿತುಕೊಂಡು, “ಬಜರಂಗದಳದ ವಿರುದ್ದ ಕ್ರಮ ಕೈಗೊಂಡರೆ ಕಂಪನಿ ವ್ಯವಹಾರದ ಭವಿಷ್ಯ ಮತ್ತು ಭಾರತದಲ್ಲಿನ ತನ್ನ ಸಿಬ್ಬಂದಿಗೆ ಅಪಾಯವಾಗಬಹುದು” ಎಂದು ಫೇಸ್ಬುಕ್ ಹೆದರಿತ್ತು ಎಂದು ಪತ್ರಿಕೆ ಉಲ್ಲೇಖಿಸಿದೆ.
ಕಳೆದ ಆಗಸ್ಟ್ನಲ್ಲಿ ತನ್ನ ನೀತಿಗಳಲ್ಲಿ ಫೇಸ್ಬುಕ್ ಪಕ್ಷಪಾತ ಮಾಡುತ್ತಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ವರದಿಯಲ್ಲಿ, “ಆಡಳಿತರೂಡ ಬಿಜೆಪಿಯ ಬಗ್ಗೆ ತನ್ನ ವ್ಯಾಪಾರ ಹಿತಾಸಕ್ತಿಗಳಿಗಾಗಿ ಒಲವು ತೋರಿಸಿದೆ ಹಾಗೂ ಫೇಸ್ಬುಕ್ನ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಮುಸ್ಲಿಂ ವಿರೋಧಿ ಟೀಕೆಗಳನ್ನು ಮಾಡಿದ್ದ ಬಿಜೆಪಿ ನಾಯಕನ ಪರವಾಗಿ ಲಾಬಿ ಮಾಡಿದ್ದಾರೆ” ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್ಬುಕ್ ಪೋಸ್ಟ್!
ಈ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜಕಾರಣಿಯೊಬ್ಬರ ಖಾತೆಯನ್ನು ಅಮಾನತ್ತು ಮಾಡಿದ್ದ ಫೇಸ್ಬುಕ್, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತಾದರೂ ದ್ವೇಷ ಭಾಷಣಗಳನ್ನು ನಿಗ್ರಹಿಸಲು ಇನ್ನೂ ಉತ್ತಮವಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ ಅದರ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಕೂಡಾ ಫೇಸ್ಬುಕ್ ತೊರೆದಿದ್ದರು.
ಭಾರತದಲ್ಲಿ ಐದು ಕಚೇರಿಗಳನ್ನು ನಡೆಸುತ್ತಿರುವ ಫೇಸ್ಬುಕ್, ಅಕ್ಟೋಬರ್ ತಿಂಗಳೊಂದರಲ್ಲೇ ಶತಕೋಟಿ ಡಾಲರ್ಗಳಷ್ಟು ದುಡ್ಡನ್ನು ಹೂಡಿಕೆ ಮಾಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಫೇಸ್ಬುಕ್ ಭಾರತವನ್ನು ಬಳಕೆದಾರರ ವಿಷಯದಲ್ಲಿ ತನ್ನ ಅತಿದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದೆ.
ಇದನ್ನೂ ಓದಿ: ಬಿಜೆಪಿ-ಫೇಸ್ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!


