ರಾಜ್ಯ ಸರ್ಕಾರವು ಹಿಂದುಳಿದ ಜಾತಿಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಅನ್ನು ಕಳೆದ 13 ತಿಂಗಳಿನಿಂದ ನೀಡದೆ ಇರುವುದನ್ನು ವಿರೋಧಿಸಿ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಸೋಮವಾರ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಾದ್ಯಂತ ಸುಮಾರು ಹನ್ನೊಂದು ವಿಶ್ವವಿದ್ಯಾಲಯಗಳು ಸೇರಿದಂತೆ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳ ಏಳುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಫೆಲೊಶಿಪ್ನಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆಯ ಕುರಿತು ಮಾತನಾಡಿದ ಸಂಶೋಧನಾ ವಿದ್ಯಾರ್ಥಿಯೊಬ್ಬರು, “ಈ ಹಿಂದೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮಾಸಿಕ 5 ಸಾವಿರ ರೂ. ವಿದ್ಯಾರ್ಥಿವೇತನವನ್ನು ನೀಡುತ್ತಿತ್ತು. 2018 ರಲ್ಲಿ ಈ ಮೊತ್ತವನ್ನು ದ್ವಿಗುಣಗೊಳಿಸಲಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪಡೆಯಬೇಕಾಗಿತ್ತು. ಆದರೆ ಡಿಸೆಂಬರ್ 2019 ರಿಂದ ಯಾವುದೇ ಫೆಲೋಶಿಪ್ ಸಿಕ್ಕಿಲ್ಲ’’ ಎಂದು ಹೇಳಿದ್ದಾರೆ.
“ಫೆಲೋಶಿಪ್ ಸಿಗದೆ ಇರುವುದರಿಂದ ನಮ್ಮ ಅಧ್ಯಯನಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ಗಳ ಬಿಲ್ ಕಟ್ಟಲು ಕಷ್ಟಪಡುತ್ತಿದ್ದಾರೆ. ದೈನಂದಿನ ಜೀವನವ ಕೂಡಾ ಕಷ್ಟಕರವಾಗಿದೆ. ಫೆಲೋಶಿಪ್ ಸಿಗುತ್ತಿಲ್ಲವಾದ್ದರಿಂದ ಕೆಲವು ವಿದ್ಯಾರ್ಥಿಗಳು ತಮ್ಮ ಸಂಶೋಧನೆಯನ್ನು ನಿಲ್ಲಿಸುವ ಹಂತದಲ್ಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ
ವಿದ್ಯಾರ್ಥಿಗಳು ತಮ್ಮ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಇಲಾಖೆಯ ಆಯುಕ್ತರಿಗೆ ಈ ಹಿಂದೆಯೆ ಪತ್ರಗಳನ್ನು ಬರೆದಿದ್ದರು. ತಮ್ಮ ಫೆಲೋಶಿಪ್ ಹಣವನ್ನು ಬಿಡುಗಡೆಗೊಳಿಸುವಂತೆ ಇನ್ನೂರಕ್ಕೂ ಹೆಚ್ಚು ಮನವಿಗಳನ್ನು ಅಂಚೆ ಮೂಲಕ ಮಾಡಿದ್ದಾರೆ ಎಂದು ಅವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
“ಆದರೆ ನಮ್ಮ ಪತ್ರಕ್ಕೆ ಯಾವುದೇ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಸಚಿವ ಕೋಟಾ ಶ್ರೀನಿವಾಸ ಪೂಜರಿಯ ಪಿಎ, ’ಸಚಿವರು ವಿಧಾನಸಭೆಯ ಊಟದ ವಿರಾಮದ ಸಮಯದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ’ ಎಂದು ತಿಳಿಸಿದ್ದರು. ಆದರೆ ಈಗ ಪಿಎ ಫೋನ್ ಈಗ ಸ್ವಿಚ್ ಆಗಿದ್ದು, ಅವರು ಇನ್ನು ಬರುವುದಿಲ್ಲ” ಎಂದು ವಿದ್ಯಾರ್ಥಿಯೊಬ್ಬರು ನಾನುಗೌರಿಗೆ ಸೋಮವಾರ ಹೇಳಿದ್ದಾರೆ.
ಸಂಶೋಧನಾ ನಿರತ ವಿದ್ಯಾರ್ಥಿಗಳ ನಿಯೋಗವೊಂದು ಹಿಂದುಳಿದ ವರ್ಗಗಳ ಆಯೋಗದ ಆಯುಕ್ತ ವಸಂತ್ ಕುಮಾರ್ ಅವರೊಂದಿಗೆ ಮಾತನಾಡಿದ್ದು, ಆಯುಕ್ತರು ಫೆಲೋಶಿಪ್ ಪಾವತಿಸಲು ಹಣವಿಲ್ಲ. ಸರ್ಕಾರವು ಹಣವನ್ನು ಬಿಡುಗಡೆ ಮಾಡಿದರೆ ಎಲ್ಲಾ ಬಾಕಿಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು
‘‘ನಮಗೆ ಕೇವಲ ಆರು ತಿಂಗಳ ಬಾಕಿ ಪಾವತಿಸಬಹುದೆಂದು ಆಯುಕ್ತರು ಹೇಳಿದ್ದು, ಉಳಿದ ಹಣವನ್ನು ನೀಡುವ ಬಗ್ಗೆ ತಿಳಿಸಿಲ್ಲ. ಅಲ್ಲದೆ ಆರು ತಿಂಗಳ ಹಣವನ್ನು ಕೂಡಾ ಯಾವಾಗ ಪಾವತಿಸುತ್ತೇವೆ ಎಂದು ಹೇಳಿಲ್ಲ. ನಾವು ಅವರಿಗೆ ಫೆಬ್ರವರಿ 25, 2021 ರವರೆಗೆ ಕಾಲಾವಕಾಶ ನೀಡಿದ್ದೇವೆ. ಈ ಗಡುವಿನ ನಂತರ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ನಾನುಗೌರಿ.ಕಾಂಗೆ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಫೆಲೋಶಿಪ್ ಬಿಡುಗಡೆ ಮಾಡಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ
ಮಾಜಿ ಮುಖ್ಯಮಂತ್ರಿಗಳಾದ ದಿವಗಂತ ದೇವರಾಜು ಅರಸುರವರ ಸ್ಮರಣಾರ್ಥ “ವಿದ್ಯಾಸಿರಿ”ಯೋಜನೆಯಲ್ಲಿ ಪಿ.ಹೆಚ್.ಡಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಅನ್ನು 14 ತಿಂಗಳುಗಳಿಂದ ನೀಡದೆ ಹಿ೦ದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಅನ್ಯಾಯ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ಫೆಲೋಶಿಪ್ ವಂಚಿತ ವಿದ್ಯಾರ್ಥಿಗಳು ಬಡ ಮತ್ತು ರೈತಾಪಿ ಕುಟುಂಬದಿಂದ ಬಂದು ಪಿ.ಹೆಚ್.ಡಿ ವ್ಯಾಸಂಗ ಮಾಡುತಿದ್ದಾರೆ. ಅಲ್ಲದೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕುಟುಂಬದ ಆದಾಯವು ಕ್ಷೀಣಗೊಂಡಿರುತ್ತದೆ. ಹಲವಾರು ವಿದ್ಯಾರ್ಥಿಗಳು
ಪಿ.ಹೆಚ್.ಡಿ ವ್ಯಾಸಂಗವನ್ನು ಕೈ ಬಿಡುವ ನಿರ್ಧಾರ ಬಂದಿರುವುದು ಗಮನಕ್ಕೆ ಬಂದಿರುತ್ತದೆ. ಆದ್ದರಿ೦ದ ಸರ್ಕಾರವು ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ಆರ್ಥಿಕ ಸಮಸ್ಯೆಯನ್ನು ಅರಿತು ತಕ್ಷಣವೇ ಬಾಕಿ ಇರುವ ಫೆಲೋಶಿಪ್ ಅನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ


