Homeಅಂಕಣಗಳುಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

ಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

- Advertisement -
- Advertisement -

ಈತ ಒಬ್ಬ ರಾಜಕಾರಣಿ; ತನ್ನ ರಾಜಕೀಯ ಬದುಕಿನ ಅತಿಮುಖ್ಯ ಚುನಾವಣೆಯಲ್ಲಿ ಸೋತು ಮನೆ ಸೇರಿದ ರಾಜಕಾರಣಿ, ಆದರೆ ಈತ ಇತರೆ ವೃತ್ತಿ ರಾಜಕಾರಣಿಗಳಂತೆ ಹಪಹಪಿಸಲಿಲ್ಲ; ಮತ್ತೆ ಸ್ಪರ್ಧಿಸಿ ಅಧಿಕಾರವನ್ನು ಹಿಡಿಯಬೇಕೆಂದು ಕುತಂತ್ರಗಳಲ್ಲಿ ತೊಡಗಲಿಲ್ಲ. ಬದಲಾಗಿ, “ಅಧಿಕಾರ ಇಲ್ಲದಿದ್ದರೇನು? ಜನರ ಬದುಕಿನಲ್ಲಿ ನಾನು ಹೇಗೆ ಬದಲಾವಣೆ ತರಬಲ್ಲೆ?” ಎಂದು ಚಿಂತಿಸಿದ. ಆತನಿಗೆ ಅಪಾರ ಆಸಕ್ತಿ ಇದ್ದ ಪರಿಸರ ರಕ್ಷಣೆ ಕೆಲಸದಲ್ಲಿ ತೊಡಗಿದ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಭೂಮಂಡಲಕ್ಕೆ ಎದುರಾಗಲಿರುವ ಸಮಸ್ಯೆಯ ಬಗ್ಗೆ ಚಿಂತಿಸಿದ, ಓದಿದ, ಮಾಹಿತಿ ಸಂಗ್ರಹಿಸಿದ. ಅವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಫೋಟೋಗಳನ್ನು ಪಡೆದ, ಚಾರ್ಟ್‌ಗಳನ್ನು ಮಾಡಿದ. ಆನಂತರ ತನ್ನನ್ನು ಆಹ್ವಾನಿಸಿದ ಸಾವಿರಕ್ಕೂ ಹೆಚ್ಚು ಜಾಗಗಳಿಗೆ ಹೋಗಿ ಜನರಿಗೆ ಗೊತ್ತಿಲ್ಲದಂತೆ ಜರುಗುತ್ತಿರುವ ವಾಯುಗುಣದಲ್ಲಿನ ಬದಲಾವಣೆಗಳನ್ನು, ಅದರಿಂದ ಆಗಲಿರುವ ಆಪಾಯಗಳನ್ನು ವಿವರಿಸಲಾರಂಭಿಸಿದ.

ಈಗ, ಈ ಮಾಜಿ ರಾಜಕಾರಣಿ ಮತ್ತು ಹಾಲಿ ಪರಿಸರವಾದಿ ಏರುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ನೀಡಿದ್ದ ಒಂದು ಭಾಷಣವೇ ಅಮೆರಿಕೆಯಲ್ಲಿ ಜನಪ್ರಿಯ ಸಿನಿಮಾವಾಗಿದೆ, ಅಲ್ಲಿನ ಜನರಲ್ಲಿ ತಳಮಳ ಹುಟ್ಟಿಸಿದೆ. ಹೇಗಾದರೂ ಮಾಡಿ ಈ ಭೂಮಿಯನ್ನು ನಮಗಾಗಿ, ನಮ್ಮ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬ ತಹತಹ, ಕಾಳಜಿ ಹೆಚ್ಚಿಸಿದೆ.

PC: EarthTalk (ಆಲ್ ಗೋರ್)

ಈ ಮನುಷ್ಯನ ಹೆಸರು ಆಲ್ ಗೋರ್. ಬಿಲ್ ಕ್ಲಿಂಟನ್‌ನ ಅಧ್ಯಕ್ಷಾವಧಿಯಲ್ಲಿ ಉಪಾಧ್ಯಕ್ಷನಾಗಿದ್ದವರು. ನಾನು ಇಲ್ಲಿ ಹೇಳಹೊರಟಿದ್ದು ಗೋರ್‌ರವರೇ ’ನಟಿಸಿರುವ’, ಜಾಗತಿಕ ಪರಿಸರದಲ್ಲಿನ ಬದಲಾವಣೆಗಳೇ ’ಕಥಾವಸ್ತ್ತು’ವಾಗಿರುವ, ‘An Inconvenient Truth’ (ಒಂದು ಅನಾನುಕೂಲ ಸತ್ಯ) ಎಂಬ ಸಾಕ್ಷ್ಯ ಚಿತ್ರ ಹೇಗೆ ಹಾಲಿವುಡ್‌ನ ಮಸಾಲಾ ಸಿನಿಮಾಗಳನ್ನೂ ಮೀರಿ ಜನಪ್ರಿಯವಾಗಿದೆ ಎಂಬುದರ ಬಗ್ಗೆ.

ಈ ಚಿತ್ರದ ಬಗ್ಗೆ ನನಗೆ ಗೊತ್ತಾಗಿದ್ದೇ ನನ್ನ 28 ವರ್ಷಗಳ ಸ್ನೇಹಿತ ಚಿದು (ಚಿದಾನಂದ ರಾಜಘಟ್ಟ) ಅದರ ಬಗ್ಗೆ ಹೇಳಿದಾಗ. 2004ರಲ್ಲಿ ಭಾರತವನ್ನು ಅಪ್ಪಳಿಸಿದ ಸುನಾಮಿಗೂ, 2005ರಲ್ಲಿ ಮುಂಬೈಯನ್ನೇ ಮುಳುಗಿಸಿದ ಅತಿವೃಷ್ಟಿಗೂ, ಆನಂತರ ಅಮೆರಿಕವನ್ನೇ ತಲ್ಲಣಿಸಿದ ಸುಂಟರಗಾಳಿ ’ಕ್ಯಾಟ್ರಿನಾ’ಗೂ ಈಗ ಉತ್ತರ ಕರ್ನಾಟಕವನ್ನು ಮಳೆಯಲ್ಲಿ ಮುಳುಗಿಸಿ, ದಕ್ಷಿಣ ಕರ್ನಾಟಕವನ್ನು ಬರಗಾಲಕ್ಕೆ ದೂಡುತ್ತಿರುವ ಜಾಗತಿಕ ತಾಪಮಾನಗಳ ನಡುವೆ ಸಂಬಂಧವಿದೆಯೇ?

ಹಾಗೆಯೇ ಇನ್ನು ಹಲವು ವರ್ಷಗಳಲ್ಲಿ ಜಗತ್ತಿನ ಬಹಳಷ್ಟು ನಗರಗಳನ್ನು (ಉದಾಹರಣೆಗೆ ನ್ಯೂಯಾರ್ಕ್) ಮತ್ತು ದೇಶಗಳನ್ನು (ಉದಾ: ಮಾಲ್ಡೀವ್) ಜಲಾಂತರವಾಗಿಸಲಿರುವ ಪ್ರಾಕೃತಿಕ ವಿಕೋಪಗಳ ನಡುವೆ ಸಂಬಂಧವಿದೆಯೇ?

ಆಲ್ ಗೋರ್ ಪ್ರಕಾರ ಸಂಬಂಧವಿದೆ. ವೈಜ್ಞಾನಿಕ ಸಂಶೋಧನೆಗಳನ್ನೇ ಆಧರಿಸಿ ಅವರು ನೀಡುವ ಮಾಹಿತಿ ಪ್ರಕಾರ ಇನ್ನು ಹಲವೇ, ಹೌದು ಹಲವೇ ವರ್ಷಗಳಲ್ಲಿ ಜಗತ್ತಿನ ಹಲವೆಡೆ ಅತಿಯಾದ ಚಂಡಮಾರುತಗಳು, ಹಲವೆಡೆ ನಿರಂತರವಾಗಿ ಮಳೆ, ಹಲವೆಡೆ ಕೊನೆ ಇಲ್ಲದಂತಹ ಬರಗಾಲ ಕಾಣಿಸಿಕೊಳ್ಳುತ್ತದೆ. ಅವರು ತೋರಿಸುವ ಚಿತ್ರಗಳಲ್ಲಿ ಸಾವಿರಾರು ವರ್ಷಗಳ ಕಾಲ ಸುರಕ್ಷಿತವಾಗಿಯೇ ಇದ್ದ ಹಿಮಪರ್ವತಗಳು ಕಳೆದ ಕೆಲವೇ ಶತಮಾನಗಳಲ್ಲಿ ಕರಗಿ ಹೋಗಿರುವುದನ್ನು ಕಾಣಬಹುದು. ಇದು ಹೀಗೆ ಮುಂದುವರೆದರೆ ಮಂಜುಗಡ್ಡೆಯ ಮೇಲೆ ನಿಂತಿರುವ ಗ್ರೀನ್ ಲ್ಯಾಂಡ್ ಬೇಗನೇ ಕರಗಿ, ಜಗತ್ತಿನ ಹಲವಾರು ದ್ವೀಪಗಳು ಮುಳುಗಿ ಹೋಗಲಿವೆ. ಅಷ್ಟೇ ಅಲ್ಲ, ನದಿಗಳು ಬತ್ತಿ ಹೋಗಿ, ನೂರಾರು ಜೀವಸಂಕುಲಗಳು ಮಾಯವಾಗಿ, ಕಾಡುಗಳು ನಾಶವಾಗಲಿವೆ. ಇದೆಲ್ಲ ಎಷ್ಟು ಘೋರವಾಗಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ: 20 ಅಡಿ ಎತ್ತರದ ಸುನಾಮಿ ಅಪ್ಪಳಿಸಿ ಮಾಯವಾಯಿತು. ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಇಡೀ ನಗರಗಳು/ ದೇಶಗಳು ಇಪ್ಪತ್ತು ಅಡಿ ನೀರಿನಲ್ಲಿ ಶಾಶ್ವತವಾಗಿ ಜಲಸಮಾಧಿ ಆಗುತ್ತವೆ.

ಇದೆಲ್ಲ ಅತಿಶಯೋಕ್ತಿ ಅಲ್ಲ. ಗೋರ್‌ರವರು ನೀಡುವ ಅಂಕಿಅಂಶಗಳ ಪ್ರಕಾರ ಇತಿಹಾಸದಲ್ಲೇ ಅತಿಹೆಚ್ಚು ’ಸೆಖೆ’ ಕಂಡ ಹತ್ತು ವರ್ಷಗಳು ಕಳೆದ ಹದಿನಾಲ್ಕು ವರ್ಷಗಳಲ್ಲಿ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಜಗತ್ತಿನ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ದಕ್ಷಿಣ ಅಮೆರಿಕದಲ್ಲಿ ಚಂಡಮಾರುತಗಳು ಬೀಸಿವೆ. ಜಪಾನ್ ಮತ್ತು ಪೆಸಿಫಿಕ್ ಪ್ರದೇಶಗಳು ಅಪರೂಪದ ತೂಫಾನುಗಳನ್ನು ಎದುರಿಸಿವೆ.

ಫ್ಲೋರಿಡಾವನ್ನು ತತ್ತರಿಸುವಂತೆ ಮಾಡಿದ ಚಂಡಮಾರುತ ಕ್ಯಾಟ್ರಿನಾ ಕೊಲ್ಲಿ ಪ್ರದೇಶವನ್ನು ತಲುಪಿ, ಅಲ್ಲಿನ ಸೆಖೆಯನ್ನು ತಡೆಯಲಾರದೆ, ಕ್ಯಾಟಗೆರಿ ಮೂರರಿಂದ ಐದಕ್ಕೆ ಏರಿತು. ಕೊಲ್ಲಿ ಹರಿವು ಮತ್ತು ಜೆಟ್ ಹರಿವಿನಲ್ಲಿ ಬದಲಾವಣೆಗಳಾಗಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಧ್ರುವಗಳ ಹಿಮದಲ್ಲಿ ಇಂಗಾಲ ಡೈ ಆಕ್ಸೈಡ್ ಹೆಚ್ಚಾಗಿರುವುದನ್ನು ಗೋರ್ ತೋರಿಸುತ್ತಾರೆ. ಹಿಂದೆ ಪ್ರಕೃತಿಯಲ್ಲಿ ಈ ಇಂಗಾಲ ಡೈ ಆಕ್ಸೈಡ್ ತಿರುಗುತ್ತಿರುವ ಚಕ್ರದಂತೆ ಏರುತ್ತಾ ಮತ್ತು ಕಡಿಮೆ ಆಗುತ್ತಾ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಯುವಿನಲ್ಲಿ ಇಂಗಾಲ ಡೈ ಆಕ್ಸೈಡ್‌ನ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ, ಅದು ಚಕ್ರದಂತೆ ಏರುತ್ತಾ-ಇಳಿಯುತ್ತಾ ಹೋಗುವುದರ ಬದಲಾಗಿ ಕಳೆದ ಐದು ನೂರು ವರ್ಷಗಳಲ್ಲಿ ಬರೀ ಏರುತ್ತಾ ಸಾಗಿದೆ.

ಈ ಇಂಗಾಲ ಡೈ ಆಕ್ಸೈಡ್ ಇವತ್ತಿನ ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ. ಇದು ಯಾಕೆ ಮತ್ತು ಹೇಗೆ ಆಗುತ್ತಿದೆ? ಇದಕ್ಕೆ ಪ್ರಮುಖ ಕಾರಣ ನಾವೆಲ್ಲರೂ ದಿನನಿತ್ಯ ಬಳಸುತ್ತಿರುವ ಭೂಗರ್ಭದ ಇಂಧನಗಳು, ಲಕ್ಷಾಂತರ ವರ್ಷಗಳಿಂದ ಕಲ್ಲಿದ್ದಲು, ಅನಿಲ, ತೈಲ ರೂಪದಲ್ಲಿ ಸಂಗ್ರಹವಾಗಿದ್ದ ಇಂಧನಗಳನ್ನು ನಾವು ಈಗ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾ ಇಂಗಾಲ ಡೈ ಆಕ್ಸೈಡ್ ಅನ್ನು ಪರಿಸರದಲ್ಲಿ ಬಿಡುತ್ತಿರುವುದೇ ಜಾಗತಿಕ ತಾಪಮಾನ ಏರುವಿಕೆಗೆ ಒಂದು ಪ್ರಮುಖ ಕಾರಣವಾಗಿದೆ. ಹೀಗೆ ಬಿಡುಗಡೆಗೊಂಡ ಇಂಗಾಲ ಡೈ ಆಕ್ಸೈಡ್‌ನಿಂದಾಗಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಹಿಮಪರ್ವತಗಳು ಕರಗುತ್ತಿವೆ ಮಾತ್ರವಲ್ಲ ಸೂರ್ಯನ ಉಷ್ಣವನ್ನು ಹೀರುವ ಸಮುದ್ರಗಳು ಬಿಸಿಯಾಗುತ್ತಿವೆ. ಅಂದರೆ ಒಂದೆಡೆ ಕರಗುತ್ತಿರುವ ಹಿಮಪರ್ವತಗಳು, ಇನ್ನೊಂದೆಡೆ ಬಿಸಿಯಾಗುತ್ತಿರುವ ಸಮುದ್ರಗಳು. ಈ ಭೂಮಿಯ ಬಹಳಷ್ಟು ಭಾಗ ಈ ಪ್ರಕ್ರಿಯೆಯಲ್ಲಿ ಮುಳುಗದೇ ಇರುತ್ತದೆಯೇ?

ಭೂಭಾಗದ ವಿಷಯ ಬದಿಗಿರಲಿ, ಆದರೆ ಕರಗುತ್ತಿರುವ ಹಿಮಪರ್ವತಗಳು ಮತ್ತು ಕಾವೇರುತ್ತಿರುವ ಸಮುದ್ರಗಳ ನಡುವೆ ಮಾನವರು ಹೇಗೆ ತಾವು ವಿನಾಶದ ಆಂಚಿನಲ್ಲಿರುವುದರ ಬಗ್ಗೆ ಅರಿವೇ ಇಲ್ಲದಂತೆ ಬದುಕುತ್ತಿದ್ದಾರೆ? ಇದಕ್ಕೆ ಗೋರ್ “ಬಿಸಿ ನೀರು ಮತ್ತು ಕಪ್ಪೆಯ ಉದಾಹರಣೆಯನ್ನು ನೀಡುತ್ತಾರೆ. ನೀವು ಕುದಿಯುತ್ತಿರುವ ನೀರಿನ ಪಾತ್ರೆಯಲ್ಲಿ ಕಪ್ಪೆಯನ್ನು ಬಿಸಾಡಿದರೆ ಅದು ತಕ್ಷಣವೇ ಹಾರಿ ಹೊರಬರುತ್ತದೆ. ಆದರೆ ಅದೇ ಕಪ್ಪೆಯನ್ನು ತಣ್ಣೀರಿನ ಪಾತ್ರೆಯಲ್ಲಿ ಹಾಕಿ; ಆದು ಸುಮ್ಮನಿರುತ್ತದೆ. ನಿಧಾನವಾಗಿ ಆ ಪಾತ್ರೆಯಲ್ಲಿನ ನೀರನ್ನು ಕಾಯಿಸಲಾರಂಭಿಸಿ ನೋಡಿ, ನೀರು ಕುದಿಯಲಾರಂಭಿಸಿದರೂ ತನಗೆ ಏನಾಗುತ್ತಿದೆ ಎಂದು ಅರಿಯಲಾಗದ ಕಪ್ಪೆ ತಾನು ಬೆಂದುಹೋಗುವವರೆಗೂ ಅಲ್ಲೇ ಇರುತ್ತದೆ!

ಮನುಷ್ಯರು ಕೂಡ ಆ ಕಪ್ಪೆಯಂತೆ ಕಾವೇರುತ್ತಿರುವ ಭೂಮಂಡಲದಲ್ಲಿ ತಮಗರಿವಿಲ್ಲದಂತೆ ಬೆಂದು ವಿನಾಶದ ಅಂಚನ್ನು ತಲುಪುತ್ತಿದ್ದಾರೆ. ಆದರೆ ಗೋರ್ ಪ್ರಕಾರ ಮಾನವ ಕಪ್ಪೆಯಲ್ಲ. ಆತನಲ್ಲಿ ತನ್ನ ಸುತ್ತ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಬಹುದು. ಆ ಮೂಲಕ ಆತ ಕಾವೇರುತ್ತಿರುವ ಭೂಮಿಯನ್ನು ತಣ್ಣಗಾಗಿಸಿ ಪರಿಸರ ನಾಶವನ್ನು ತಡೆದು ಎಲ್ಲವನ್ನು ಸರಿಪಡಿಸಬಹುದು ಎಂದು ಹೇಳುತ್ತಾರೆ.

ಇಡೀ ಮಾನವ ಸಂಕುಲ ಇವತ್ತು ಒಂದು ಟೈಮ್‌ಬಾಂಬ್ ಮೇಲೆ ಕೊತಿದೆ. ಇದನ್ನು ಬ್ರಿಟನ್ನಿನ ವಿಜ್ಞಾನಿ ಸರ್ ಜೇಮ್ಸ್ ಲವ್‌ಲಾಕ್‌ರವರೂ ದೃಢೀಕರಿಸುತ್ತಾರೆ. ಅವರು ಇತ್ತೀಚೆಗೆ ಪ್ರಕಟಿಸಿರುವ ಪುಸ್ತಕದಲ್ಲಿ ಏನು ಹೇಳಿದ್ದಾರಂತೆ ಗೊತ್ತಾ? ಮನುಷ್ಯ ತನ್ನ ಪರಿಸರವನ್ನು ಹೀಗೇ ನಾಶಮಾಡುತ್ತಾ ಸಾಗಿದರೆ, ಇನ್ನೆರಡು ತಲೆಮಾರುಗಳಲ್ಲಿ ಇಡೀ ಭೂಪ್ರದೇಶ ಮುಳುಗಡೆಯಾಗಿ ಮಾನವಸಂಕುಲ ಎಂಬುದು ಉತ್ತರ ಅಥವಾ ದಕ್ಷಿಣ ಧ್ರುವಗಳಲ್ಲಿ ವಾಸಿಸುವ ಹಲವೇ ಹಲವು ಸಂಖ್ಯೆಯಾಗುವ ಹಂತ ತಲುಪುತ್ತದೆ ಎಂದು.

ಒಂದುಕ್ಷಣ ಯೋಚಿಸಿ: ಇಡೀ ಹಿಮಾಲಯ ಪರ್ವತಗಳು ಕರಗಿದರೆ ಏನೇನಾಗುತ್ತದೆಂದು? ನಮ್ಮ ಮಕ್ಕಳನ್ನು ಭೂಕಂಪನಗಳಿಗೆ, ಸುನಾಮಿಗಳಿಗೆ, ಜ್ವಾಲಾಮುಖಿಗಳಿಗೆ, ಚಂಡಮಾರುತಗಳಿಗೆ ತುತ್ತಾಗಿಸುವ ಬಯಕೆ ನಮ್ಮದಾ? ಇಲ್ಲವಾದರೆ ನಾವು ಮಾಡಬೇಕಿರುವುದು ನಮ್ಮ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾತ್ರ.

ಹೈಡ್ರೋ ಫ್ಲೋರೋಕಾರ್ಬನ್‌ಗಳನ್ನು ಕಡಿಮೆಗೊಳಿಸಿ ಹೇಗೆ ಓಜೋನ್ ಪದರದಲ್ಲಿನ ರಂಧ್ರಗಳನ್ನು ಕಡಿಮೆಗೊಳಿಸಲಾಗಿತ್ತೋ, ಹಾಗೆಯೇ ಇಂಗಾಲ ಡೈ ಆಕ್ಸೈಡ್‌ಅನ್ನು ಹೊರ ಚೆಲ್ಲುವ ಕ್ರಿಯೆಗಳನ್ನು ಕಡಿತಗೊಳಿಸಿದರೆ ಜಾಗತಿಕ ತಾಪಮಾನ ಏರುವಿಕೆಯನ್ನು ತಡೆಯಬಹುದು, ನಮ್ಮ ಮಕ್ಕಳನ್ನು ರಕ್ಷಿಸಬಹುದು.

ವಿಚಿತ್ರ ನೋಡಿ, ಈ ಭೂಮಂಡಲ ಕೊನೆಗೂ ನಾಶವಾಗುವುದು ನಾಸ್ಟ್ರೋಡ್ಯಾಮಸ್‌ನಂತಹ ಯಾವನೋ ಒಬ್ಬ ಆಸಾಮಿ ಹಾಗಂತ ಹೀಗಂತ ಭವಿಷ್ಯ ನುಡಿದಿದ್ದ ಎಂಬ ಕಾರಣಕ್ಕಲ್ಲ. ಬದಲಾಗಿ, ಮಾನವನೇ ತನ್ನ ಕೈಯಾರೆ ಪರಿಸರಕ್ಕೆ ಮಾಡುತ್ತಿರುವ ಘೋರ ಹಾನಿಗಳಿಂದ.

ನಾವು ಬಿಸಿಯಾಗುತ್ತಿರುವ ನೀರಿನಲ್ಲಿರುವ ಕಪ್ಪೆಯಂತಿರಬಾರದಲ್ಲವೇ?

(ಆಗಸ್ಟ್ 30, 2006ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...