ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಯೋಗ ಗುರು ರಾಮದೇವ್ “ಕೊವಿಡ್-19 ಗಾಗಿ ಮೊದಲ ಸಾಕ್ಷ್ಯ ಆಧಾರಿತ ಔಷಧ” ಎಂದು ಪತಂಜಲಿಯ ಕೊರೊನಿಲ್ ಕುರಿತು ಸಮರ್ಥಿಸಿಕೊಂಡಿದ್ದನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತೀವ್ರವಾಗಿ ಟೀಕಿಸಿದೆ. ಆರೋಗ್ಯ ಸಚಿವರು ದೇಶದ ಮುಂದೆ “ಸುಳ್ಳು ಕಟ್ಟುಕಥೆ, ಅವೈಜ್ಞಾನಿಕ ಉತ್ಪನ್ನ”ವನ್ನು ಉತ್ತೇಜಿಸಲು ಹೇಗೆ ಸಾಧ್ಯ ಎಂದು ವೈದ್ಯಕೀಯ ಸಂಸ್ಥೆ ಪ್ರಶ್ನಿಸಿದೆ.
ಶುಕ್ರವಾರ, ರಾಮದೇವ್ ಅವರು ಪತಂಜಲಿ ಉತ್ಪನ್ನ ಕೊರೊನಿಲ್ ಅನ್ನು ಆರೋಗ್ಯ ಸಚಿವ ಹಷ್ವರ್ಧನ್ ಮತ್ತು ಮತ್ತೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದರು. ಈ ಮೂವರ ಹಿಂದಿರುವ ದೊಡ್ಡ ಪೋಸ್ಟರ್ನಲ್ಲಿ “ಔಷಧಿಯು CoPP ಮತ್ತು WHO- ಜಿಎಂಪಿ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಬರೆಯಲ್ಪಟ್ಟಿತ್ತು. ಅಂದರೆ ಇದು ಔಷಧೀಯ ಉತ್ಪನ್ನದ ಪ್ರಮಾಣಪತ್ರವನ್ನು (CoPP) ಹೊಂದಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಪ್ರಾಕ್ಟೀಸಸ್ (ಜಿಎಂಪಿ) ಗುರುತಿಸಿದೆ ಎಂದರ್ಥ.
ಈ ಎರಡೂ ಮಾನದಂಡಗಳು ಔಷಧೀಯ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆಯನ್ನು ಬಹುಪಾಲು ವ್ಯಾಖ್ಯಾನಿಸುತ್ತವೆ.
ಇದನ್ನೂ ಓದಿ: ಜನರ ಭಯದ ದುರುಪಯೋಗ: ರಾಮ್ದೇವ್ ಪತಂಜಲಿಗೆ 10 ಲಕ್ಷ ರೂ ದಂಡ
ಆದರೆ, ಕೊವಿಡ್-19 ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ಡಬ್ಲೂಎಚ್ಒ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದೆ. #COVID19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು WHO ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು WHO ಆಗ್ನೇಯ ಏಷ್ಯ ಟ್ವೀಟ್ ಮಾಡಿದೆ.
ಸ್ವತ: ವೈದ್ಯರೂ ಆಗಿರುವ ಆರೋಗ್ಯ ಸಚಿವರ ಸಮ್ಮುಖದಲ್ಲಿ ಅನಾವರಣಗೊಂಡ “ರಹಸ್ಯ ಔಷಧ”ಕ್ಕೆ WHO ಪ್ರಮಾಣೀಕರಣದ ಹಸಿ ಸುಳ್ಳು ಕಾಣಿಸಿಕೊಂಡಿದ್ದನ್ನು ಗಮನಿಸಿದಾಗ ಆಘಾತವಾಯಿತು ಎಂದು ಐಎಂಎ ಹೇಳಿದೆ. ದೇಶಕ್ಕೆ ಸಚಿವರ ವಿವರಣೆಯ ಅಗತ್ಯವಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ದೇಶದ ಆರೋಗ್ಯ ಮಂತ್ರಿಯಾಗಿ, ಇಂತಹ ಸುಳ್ಳು ಪ್ರಕ್ಷೇಪಗಳನ್ನು, ಪ್ರಮಾಣೀಕೃತವಲ್ಲದ ಔಷಧಿಗಳನ್ನು ಇಡೀ ದೇಶದ ಮುಂದೆ ಬಿಡುಗಡೆ ಮಾಡುವುದು ಎಷ್ಟು ಸೂಕ್ತ ಮತ್ತು ತರ್ಕಬದ್ಧವಾಗಿದೆ? ಇಂತಹ ಸುಳ್ಳು ಕಟ್ಟುಕಥೆಯ ಅವೈಜ್ಞಾನಿಕ ಉತ್ಪನ್ನವನ್ನು ಜನರಿಗೆ ಬಿಡುಗಡೆ ಮಾಡುವುದು ಎಷ್ಟು ಸಮರ್ಥನೀಯ? ಇಡೀ ದೇಶದ ಆರೋಗ್ಯ ಮಂತ್ರಿಯಾಗಿ, ಉತ್ಪನ್ನವನ್ನು ಅನೈತಿಕ, ತಪ್ಪು ಮತ್ತು ಸುಳ್ಳು ರೀತಿಯಲ್ಲಿ ಉತ್ತೇಜಿಸುವುದು ಎಷ್ಟು ನೈತಿಕವಾಗಿದೆ? ದೇಶದ ಆರೋಗ್ಯ ಸಚಿವರಾಗಿ ಮತ್ತು ಆಧುನಿಕ ವೈದ್ಯರಾಗಿ ಇಂತಹ ಆಧಾರರಹಿತ, ಪ್ರಮಾಣೀಕೃತವಲ್ಲದ ಉತ್ಪನ್ನವನ್ನು ಉತ್ತೇಜಿಸುವುದು ಎಷ್ಟು ನೈತಿಕವಾಗಿದೆ”ಎಂದು ವೈದ್ಯಕೀಯ ಸಂಸ್ಥೆ ಕಟುವಾಗಿ ಪ್ರಶ್ನಿಸಿದೆ.
ಇದನ್ನೂ ಓದಿ: ರಣಕೇಕೆಯ ಮಾಧ್ಯಮಗಳ ನಡುವೆ ನಮ್ಮ ಕರ್ತವ್ಯ; ನ್ಯಾಯಪಥ ಸಂಪಾದಕೀಯ
“ಆರೋಗ್ಯ ಸಚಿವರು ಒಂದು ಅವೈಜ್ಞಾನಿಕ ಔಷಧದ ಸುಳ್ಳು ಮತ್ತು ಕಲ್ಪಿತ ಪ್ರಕ್ಷೇಪಣವನ್ನು ಬೆಂಬಲಿಸುವುದು ಮತ್ತು WHO ಇದನ್ನು ತಿರಸ್ಕರಿಸುವುದು- ದೇಶದ ಜನರಿಗೆ ಮಾಡಿದ ಕಪಾಳಮೋಕ್ಷ ಮತ್ತು ಅವಮಾನ” ಎಂದು ಐಎಂಎ ಟೀಕಿಸಿದೆ.
ಕೊವಿಡ್ ತಡೆಗಟ್ಟಲು ಕೊರೊನಿಲ್ ಪರಿಣಾಮಕಾರಿಯಾಗಿದ್ದರೆ, ವ್ಯಾಕ್ಸಿನೇಷನ್ಗಾಗಿ ಸರ್ಕಾರ 35,000 ಕೋಟಿ ರೂ.ಗಳನ್ನು ಏಕೆ ಖರ್ಚು ಮಾಡಿದೆ ಎಂದು ಐಎಂಎ ಕೇಳಿದೆ.
ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು WHO ಟ್ವೀಟ್ಗೆ ಸ್ವಲ್ಪ ಮೊದಲು ಸ್ಪಷ್ಟನೆ ನೀಡಿದ್ದರು.
“ಕೊರೊನಿಲ್ಗೆ WHO ಜಿಎಂಪಿ ಕಂಪ್ಲೈಂಟ್ CoPP ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ. WHO ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು WHO ಕೆಲಸ ಮಾಡುತ್ತದೆ ಎಂದು ಬಾಲಕೃಷ್ಣ ಟ್ವೀಟ್ ಮಾಡಿದ್ದರು.
ಕಳೆದ ವರ್ಷ, ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿದ್ದವು, ಕೊರೊನಿಲ್ ಕೊರೊನಾವೈರಸ್ ವಿರುದ್ಧ ಬಲವಾದ ರಕ್ಷಣೆ ನೀಡಬಹುದೆಂದು ಪತಂಜಲಿ ಆಯುರ್ವೇದ ಹೇಳಿಕೊಂಡಿತ್ತು. ಅದರ ಸಮರ್ಥನೆಗಳ ಬಗ್ಗೆ ದೊಡ್ಡ ವಿವಾದದ ನಂತರ, ಆಯುಷ್ ಸಚಿವಾಲಯವು ಕೊರೊನಿಲ್ ಅನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿ ಮಾತ್ರ ಮಾರಾಟ ಮಾಡಬಹುದೆಂದು ಹೇಳಿತ್ತು.
ಇದನ್ನೂ ಓದಿ: ಪತಂಜಲಿಯಿಂದ ಕೊರೊನಾ ಗುಣಪಡಿಸಬಹುದೆಂದು ನಾವು ಹೇಳಿಲ್ಲ: ಸಿಇಒ ಆಚಾರ್ಯ ಬಾಲಕೃಷ್ಣ


