ಜನವರಿ 16 ರಂದು ದೆಹಲಿಯ ಸಿಂಘು ಗಡಿಯ ರೈತರ ಪ್ರತಿಭಟನಾ ಸ್ಥಳದಿಂದ ಬಂಧಿಸಲ್ಪಟ್ಟ 24 ವರ್ಷದ ದಲಿತ ಕಾರ್ಮಿಕ ಸಂಘಟಕರಾದ ಶಿವಕುಮಾರ್ ಅವರಿಗೆ ಸೋನಿಪತ್ ನ್ಯಾಯಾಲಯವು ಜಾಮೀನು ನೀಡಿದೆ.
ಶಿವಕುಮಾರ್ರವರ ಸಹ ಕಾರ್ಯಕರ್ತೆ ದಲಿತ ನೊದೀಪ್ ಕೌರ್ (25) ಅವರನ್ನು ಬಂಧಿಸಿದಾಗ ಎಫ್ಐಆರ್ನಲ್ಲಿ ಶಿವಕುಮಾರ್ರವರನ್ನು ಹೆಸರಿಸಿಲ್ಲ. ಆದರೆ ನೊದೀಪ್ ಕೌರ್ ಬಂಧನದ ನಂತರ ಅವರ ಮೇಲೆ ಜನವರಿ 12 ರಂದು ಎಫ್ಐಆರ್ ಸಲ್ಲಿಸಿದ್ದು, ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ 11 ಅಪರಾಧಗಳನ್ನು ಪಟ್ಟಿ ಮಾಡಲಾಗಿದೆ.
ಭೂಹೀನ ದಲಿತ ಕೃಷಿ ಕೆಲಸಗಾರ ಮತ್ತು ಅರೆಕಾಲಿಕ ಭದ್ರತಾ ಸಿಬ್ಬಂದಿಯ ಮಗ ಶಿವಕುಮಾರ್ ಅವರು 2016 ರಲ್ಲಿ ಸೋನಿಪತ್ನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ-ಉಪಕರಣಗಳನ್ನು ನಿರ್ವಹಿಸುವ ತರಬೇತಿಯಲ್ಲಿ ಪದವಿ ಪಡೆದರು. ಕುಂಡ್ಲಿಯಲ್ಲಿ ಎಲ್ಇಡಿ ದೀಪಗಳು ಮತ್ತು ವಾಹನ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಎರಡು ವರ್ಷ ಕೆಲಸ ಮಾಡಿದರು. 2018 ರಲ್ಲಿ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ಸೇರಿದರು.
ಇದನ್ನೂ ಓದಿ: ದಲಿತ ಕಾರ್ಮಿಕ ಮುಖಂಡ ಶಿವಕುಮಾರ್ಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ: ವೈದ್ಯರ ವರದಿ
ರೈತ ಪ್ರತಿಭಟನೆಯನ್ನು ಬೆಂಬಲಿಸಿ ಕುಂಡ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಕಾರ್ಮಿಕರ ಗುಂಪಿನೊಂದಿಗೆ ನೊದೀಪ್ ಕೌರ್ ಸಿಂಘು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು, ಕಾರ್ಮಿಕರು ಸಹ ರೈತರಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಮಿಕರು ಕಾರ್ಖಾನೆಯ ಮಾಲಿಕರಿಂದ ಶೋಷಣೆಗೆ ಒಳಗಾಗಿದ್ದಾರೆ, ಅವರ ವೇತನವನ್ನು ತಡೆಹಿಡಿಯಲಾಗಿದೆ ಮತ್ತು ಅವರನ್ನು ಉದ್ಯೋಗಗಳಿಂದ ಕಿತ್ತು ಎಸೆಯಲಾಗಿದೆ ಎಂದು ಆರೋಪಿಸಿದ್ದರು. ಆ ನಂತರ ಅವರನ್ನು ಬಂಧಿಸಲಾಗಿತ್ತು.
ಎಫ್ಐಆರ್ಗಳಲ್ಲಿ ಶಿವ ಕುಮಾರ್ ಹೆಸರಿಲ್ಲದಿದ್ದರೂ ಸಹ ನೊದೀಪ್ ಕೌರ್ ಬಂಧಿಸಿದ ನಾಲ್ಕು ದಿನಗಳ ನಂತರ ಪೊಲೀಸರು ಕುಂಡ್ಲಿಯ ಪಕ್ಕದ ಸಿಂಘು ಗಡಿಯಿಂದ ಶಿವಕುಮಾರ್ರವರನ್ನು ಸಹ ಬಂಧಿಸಿದ್ದರು.
ಇದನ್ನೂ ಓದಿ: ಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್