ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಎಂಎಸ್ಪಿ ಕಾನೂನನ್ನು ಲಿಖಿತವಾಗಿ ಖಾತರಿಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕ್ಯಾಂಪೇನ್ ಮಾಡಲಾಗುತ್ತಿದೆ. ರೈತರು ಮತ್ತು ಪ್ರತಿಭಟನೆಯ ಬೆಂಬಲಿಗರನ್ನು ವಿಭಜಿಸಲು ಯತ್ನಿಸುತ್ತಿರುವ ನಕಲಿ ಸರ್ದಾರರ ಗುಂಪೊಂದು, ಸಿಖ್ಖರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಅವುಗಳ ಮೂಲಕ ಕ್ಯಾಂಪೇನ್ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿದೆ. ಕ್ಯಾಂಪೇನ್ ಮಾಡುತ್ತಿದ್ದ ನಕಲಿ ಪ್ರೊಫೈಲ್ಗಳ ಜಾಲವನ್ನು ಬಹಿರಂಗಪಡಿಸಲಾಗಿದೆ.
ಟ್ವಿಟರ್ ಕೂಡ ಅಂತಹ ಖಾತೆಗಳ ನೆಟ್ವರ್ಕ್(ಜಾಲ)ಗಳನ್ನು ಗುರುತಿಸಿದ್ದು, 80 ನಕಲಿ ಖಾತೆಗಳನ್ನು ಅಮಾನತು ಗೊಳಿಸಿದೆ. ಟ್ವಿಟರ್ ಮಾತ್ರವಲ್ಲದೆ, ಫೇಸ್ಬುಕ್, ಇನ್ಸ್ಸ್ಟಾಗ್ರಾಮ್ಗಳಲ್ಲಿಯೂ ಇಂತಹ ನಕಲಿ ಖಾತೆಗಳನ್ನು ಹಿಂದೂ ರಾಷ್ಟ್ರೀಯತೆ ಮತ್ತು ರೈತ ವಿರೋಧಿ ಧೋರಣೆಗಳನ್ನು ಉತ್ತೇಜಿಸಲು ಬಳಸಲಾಗಿದೆ ಎಂದು ಸೆಂಟರ್ ಫಾರ್ ಇನ್ಫಾರ್ಮೇಶನ್ ರೆಸಿಲಿಯನ್ಸ್ (CIR) ವರದಿ ಬಹಿರಂಗ ಪಡಿಸಿದೆ.
ನಕಲಿ ಖಾತೆಗಳ ಜಾಲವು ಪ್ರಮುಖವಾಗಿ “ಸಿಖ್ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಮೌಲ್ಯಗಳ ಕುರಿತ ಜನರ ಗ್ರಹಿಕೆಗಳನ್ನು ತಿರುಚುವ (ವಿರೋಧಿ ಧೋರಣೆಯನ್ನು ಬಿತ್ತುವ) ಉದ್ದೇಶವನ್ನು ಹೊಂದಿವೆ” ಎಂದು ವರದಿಯ ಲೇಖಕ ಬೆಂಜಮಿನ್ ಸ್ಟ್ರಿಕ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಹೋರಾಟದಲ್ಲಿ ಮೃತಪಟ್ಟ ಹೆಚ್ಚಿನ ರೈತರು 3 ಎಕರೆಗಿಂಲೂ ಕಡಿಮೆ ಜಮೀನು ಹೊಂದಿರುವವರು!
‘ಕಾಲ್ಚೀಲದ ಬೊಂಬೆಗಳು’ (Sock puppets)
ಈ ನಕಲಿ ಖಾತೆಗಳ ಜಾಲವು ತಮ್ಮ ಖಾತೆಗಳನ್ನು “sock puppet” ಎಂದು ಕರೆದುಕೊಂಡಿದೆ. ಅವುಗಳು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವತಂತ್ರ ವ್ಯಕ್ತಿಗಳಂತೆ ನಟಿಸುತ್ತವೆ. ಆದರೆ, ಇವೆಲ್ಲವೂ ಒಂದು ಜಾಲಗಳಿಂದ ನಿಯಂತ್ರಿಸಲ್ಪಡುತ್ತಿವೆ.
ಈ ನಕಲಿ ಪ್ರೊಫೈಲ್ಗಳು ಸಿಖ್ ಹೆಸರುಗಳನ್ನು ಬಳಸಿಕೊಂಡಿವೆ. ಅಲ್ಲದೆ, ತಾವು “ನಿಜವಾದ ಸಿಖ್ಖರು” ಎಂದು ಹೇಳಿಕೊಂಡಿವೆ. ಅವರು #RealSikh ಹ್ಯಾಶ್ಟ್ಯಾಗ್ಗಳನ್ನು ಬಳಸಿ ಕ್ಯಾಂಪೇನ್ ಮಾಡುತ್ತಿದ್ದು, ರೈತರನ್ನು #FakeSikh ಎಂದು ಅಪಖ್ಯಾತಿಗೊಳಿಸಲು ಯತ್ನಿಸಿವೆ. ಅದಕ್ಕಾಗಿ ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಬಳಸಿವೆ.
ಈ ನಕಲಿ ಖಾತೆಗಳ ಜಾಲವು ಒಂದೇ ರೀತಿಯ ಅನೇಕ ನಕಲಿ ಪ್ರೊಫೈಲ್ಗಳನ್ನು ಹಲವಾರು ಪ್ಲಾಟ್ಫಾರ್ಮ್ಗಳಲ್ಲಿ ಬಳಸಿರುವುದು ಕಂಡುಬಂದಿದೆ. ಈ ಖಾತೆಗಳು ಒಂದೇ ಹೆಸರುಗಳು, ಪ್ರೊಫೈಲ್ ಫೋಟೋಗಳು ಮತ್ತು ಕವರ್ ಫೋಟೋಗಳನ್ನು ಹೊಂದಿವೆ. ಮಾತ್ರವಲ್ಲದೆ, ಒಂದೇ ರೀತಿಯ ಪೋಸ್ಟ್ಗಳನ್ನು ಪ್ರಕಟಿಸಿವೆ ಎಂದು ಲಾಭರಹಿತ ಸಂಸ್ಥೆಯಾದ CIR ಕಂಡುಹಿಡಿದಿದೆ.
ಹಲವು ನಕಲಿ ಖಾತೆಗಳು ಪಂಜಾಬಿ ಚಿತ್ರರಂಗದ ನಟಿಯರು ಸೇರಿದಂತೆ ಸೆಲೆಬ್ರಿಟಿಗಳ ಪ್ರೊಫೈಲ್ ಚಿತ್ರಗಳನ್ನು ಬಳಸಿಕೊಂಡಿವೆ. ಅವರಿಗೆ ಸಿಖ್ ಹೆಸರುಗಳನ್ನು ನೀಡಿವೆ.
ಇದನ್ನೂ ಓದಿ: ಅಕ್ಕಿ, ಗೋಧಿಗೆ ಮಾತ್ರವಲ್ಲ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಬೇಕು: ರೈತರು
ಸೆಲೆಬ್ರಿಟಿಗಳ ಪ್ರೊಫೈಲ್ ಫೋಟೋವನ್ನು ಬಳಸುವುದರಿಂದ ಖಾತೆಯು ನಕಲಿ ಸುಲಭಕ್ಕೆ ಗೊತ್ತಾಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಆದರೆ, ಒಂದೇ ರೀತಿಯ ಸಂದೇಶಗಳು, ಆಗಾಗ್ಗೆ ಬಳಸುವ ಹ್ಯಾಶ್ಟ್ಯಾಗ್ಗಳು, ಇದೇ ರೀತಿಯ ಜೀವನಶೈಲಿಯ ವಿವರಣೆಗಳು ಮತ್ತು ಫಾಲೋವರ್ಗಳೊಂದಿಗೆ ಎಡಿಟ್ ಮಾಡಿದ ಚಿತ್ರಗಳು, ಈ ಎಲ್ಲಾ ಖಾತೆಗಳು ನಕಲಿ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿವೆ ಎಂದು CIR ವರದಿ ಹೇಳುತ್ತದೆ.
ಈ ರೀತಿಯಲ್ಲಿ ನಕಲಿ ಖಾತೆಗಳಿಗೆ ಪೋಟೋಗಳನ್ನು ಬಳಸಲಾಗಿದ್ದ ಎಂಟು ಸೆಲೆಬ್ರೆಟಿಗಳನ್ನು ಸಂಪರ್ಕಿಸಲು BBC ಪ್ರಯತ್ನಿಸಿದೆ. ಅವರಲ್ಲಿ ಒಬ್ಬರು ತಮ್ಮ ಚಿತ್ರವನ್ನು ಈ ರೀತಿ ಬಳಸಿರುವುದು ತಮಗೆ ತಿಳಿದಿಲ್ಲವೆಂದು ಖಚಿತಪಡಿಸಿದ್ದಾರೆ. ಜೊತೆಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಮತ್ತೊಬ್ಬ ಸೆಲೆಬ್ರಿಟಿಯ ಮ್ಯಾನೇಜ್ಮೆಂಟ್, ತಮ್ಮ ಸೆಲೆಬ್ರಿಟಿಯ ಹೆಸರಿನಲ್ಲಿ ಇಂತಹ ಸಾವಿರಾರು ನಕಲಿ ಖಾತೆಗಳಿವೆ. ಅದರ ಬಗ್ಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ರಾಜಕೀಯ ಉದ್ದೇಶಗಳು
ಕೃಷಿ ಕಾಯ್ದೆಗಳ ವಿರುದ್ದದ ರೈತ ಹೋರಾಟ ಒಂದು ವರ್ಷ ಪೂರೈಸಿದೆ. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಶುಕ್ರವಾರ ಘೋಷಿಸಿದರು.
ಒಂದು ವರ್ಷದ ಹಿಂದೆ ಪ್ರಾರಂಭವಾದ ರೈತರ ಪ್ರತಿಭಟನೆಯನ್ನು ದಶಕಗಳ ಹಿಂದೆ ನಡೆದಿದ್ದ ಖಲಿಸ್ತಾನ್ ಸ್ವಾತಂತ್ರ್ಯ ಚಳವಳಿಯೊಂದಿಗೆ ಬೆಸೆದು, ಹೋರಾಟ ನಿರತ ರೈತರು ರೈತರಲ್ಲ ಅವರು ಖಲಿಸ್ತಾನಿಗಳು ಎಂದು ಬಿಂಬಿಸಲು ಈ ನಕಲಿ ಖಾತೆಗಳ ಜಾಲವು ಯತ್ನಿಸಿದೆ.
ವರದಿಯ ಪ್ರಕಾರ, ನಕಲಿ ಖಾತೆಗಳು ಸಿಖ್ ಸ್ವಾತಂತ್ರ್ಯದ ಕಲ್ಪನೆಗೆ ಉಗ್ರಗಾಮಿಯ ಲೇಬಲ್ ಅಂಟಿಸಲು ಯತ್ನಿಸಿವೆ ಮತ್ತು ರೈತರ ಪ್ರತಿಭಟನೆಗಳನ್ನು “ಖಲಿಸ್ತಾನಿ ಭಯೋತ್ಪಾದಕರು” ಹೈಜಾಕ್ ಮಾಡಿದ್ದಾರೆ ಎಂದು ಪ್ರತಿಪಾದಿಸಿವೆ.
ಆದರೆ ಇದಕ್ಕೂ ಮೊದಲು, ರೈತರ ಪ್ರತಿಭಟನೆಯಲ್ಲಿ “ಖಲಿಸ್ತಾನಿಗಳು ನುಸುಳಿದ್ದಾರೆ” ಎಂದು ಭಾರತ ಸರ್ಕಾರವೂ ಹೇಳಿಕೊಂಡಿತ್ತು. ಇದು ಉದ್ದೇಶಪೂರ್ವಕ ರಾಜಕೀಯ ನಡೆ ಎಂದು ಪ್ರತಿಭಟನಾ ನಿರತ ರೈತರು ತಿಳಿದಿದ್ದಾರೆ.
“ಈ ನಕಲಿ ಖಾತೆಗಳನ್ನು ಸರ್ಕಾರದ ಆದೇಶದ ಮೇರೆಗೆ ಸ್ಥಾಪಿಸಲಾಗಿದೆ ಎಂದು ನಾವು ನಂಬುತ್ತೇವೆ. ರೈತ ಹೋರಾಟದ ವಿರುದ್ಧ ಧೋರಣೆಯನ್ನು ಹರಡಲು ಇವುಗಳನ್ನು ರಚಿಸಲಾಗಿದೆ” ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ಜಗಜಿತ್ ಸಿಂಗ್ ದಲೇವಾಲ್ ಹೇಳಿದ್ದಾರೆ.
ಕೆಲವು ಖಾತೆಗಳ ಮೂಲಕ, UK ಮತ್ತು ಕೆನಡಾದಲ್ಲಿನ ಡಯಾಸ್ಪೊರಾ ಸಮುದಾಯಗಳು ಖಲಿಸ್ತಾನಿ ಚಳವಳಿಗೆ ಆಶ್ರಯ ನೀಡಿವೆ ಎಂದು ಬಣ್ಣಿಸಲಾಗಿದೆ.
ಈ ನಕಲಿ ಖಾತೆಗಳು ಸಾವಿರಾರು ಅನುಯಾಯಿಗಳನ್ನು ಹೊಂದಿವೆ. ಈ ಜಾಲದಿಂದ ಹಂಚಿಕೊಳ್ಳಲಾದ ಪೋಸ್ಟ್ಗಳಿಗೆ ಕೆಲವು ನೈಜ ಖಾತೆದಾರರು ಲೈಕ್ ಮಾಡಿ, ಮರುಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ನಕಲಿ ಟ್ವೀಟ್ಗಳನ್ನು ಸುದ್ದಿ ಸೈಟ್ಗಳಲ್ಲಿಯೂ ಉಲ್ಲೇಖಿಸಿದ್ದಾರೆ.
ಜಾಲದ ನಕಲಿ ಖಾತೆಯಿಂದ ಮಾಡಿದ ಈ ಟ್ವೀಟ್ಗೆ ಸುಮಾರು 17,000 ಲೈಕ್ಗಳು ಬಂದಿವೆ.
ಪ್ರಭಾವ ಮತ್ತು ಪರಿಣಾಮ
ನಕಲಿ ಖಾತೆಗಳ ಮೂಲಕ ಪ್ರಭಾವ ಬೀರುವ ಅನೇಕ ಕಾರ್ಯಾಚರಣೆಗಳು ನೈಜ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ವಿಫಲವಾಗುತ್ತವೆ. ಈ ಜಾಲದ ಪ್ರಕರಣದಲ್ಲಿ ನಡದ ಸಂಶೋಧನೆಯು, ಸಾರ್ವಜನಿಕ ವ್ಯಕ್ತಿಗಳ ಪರಿಶೀಲಿಸಿದ ಖಾತೆಗಳೊಂದಿಗೆ ಸಂವಹಿಸಲಾದ ಮತ್ತು ಅನುಮೋದಿಸಲಾದ ಪೋಸ್ಟ್ಗಳನ್ನು ಗುರುತಿಸಿದೆ.
ಸುದ್ದಿ ಬ್ಲಾಗ್ಗಳು ಮತ್ತು ಕಾಮೆಂಟರಿ ಸೈಟ್ಗಳಲ್ಲಿ ಎಂಬೆಡ್ ಮಾಡಲಾದ ನಕಲಿ ಪ್ರೊಫೈಲ್ಗಳ ವಿಷಯಗಳನ್ನು ವರದಿಯು ಗುರುತಿಸಿದೆ.
ಈ ನಕಲಿ ಜಾಲದ ಪೋಸ್ಟ್ಗಳೊಂದಿಗೆ ಸಂವಹನ ನಡೆಸಿದ ಕೆಲವು ಅಧಿಕೃತ ಖಾತೆಗಳನ್ನು BBC ಸಂಪರ್ಕಿಸಿದೆ.
ಟ್ವಿಟರ್ನಲ್ಲಿ ತನ್ನನ್ನು ಮಾನವೀಯ ಮತ್ತು ಸಮಾಜ ಸೇವಕ ಎಂದು ಕರೆದುಕೊಂಡಿರುವ ರೂಬಲ್ ನಾಗಿ, ನಕಲಿ ಖಾತೆಗಳ ಟ್ವೀಟ್ವೊಂದಕ್ಕೆ ಎರಡು ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಅವರನ್ನು ಸಂಪರ್ಕಿಸಿದಾಗ, “ಇದು ನಕಲಿ ಖಾತೆ ಎಂದು ಬೇಸರವಾಗಿದೆ” ಎಂದು ಅವರು ಹೇಳಿದ್ದಾರೆ.
ಕರ್ನಲ್ ರೋಹಿತ್ ದೇವ್ ಅವರು ತಮ್ಮನ್ನು ಜಾಗತಿಕ ಸೇನಾ ವಿಶ್ಲೇಷಕ ಎಂದು ಕರೆದುಕೊಳ್ಳುತ್ತಾರೆ. ಥಂಬ್ಸ್-ಅಪ್ ಎಮೋಜಿಗಳೊಂದಿಗೆ ನಕಲಿ ಖಾತೆಗಳ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದ ಜಾಗತಿಕ ಸೇನಾ ವಿಶ್ಲೇಷಕ ಕರ್ನಲ್ ರೋಹಿತ್ ದೇವ್ ಅವರು, ‘ತಾವು ಪ್ರತಿಕ್ರಿಯಿಸಿದ್ದ ಟ್ವಿಟರ್ ಹ್ಯಾಂಡಲ್ನ ಹಿಂದೆ ಇರುವ ವ್ಯಕ್ತಿ ಯಾರು ಎಂದು ತಮಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.
“ಈ 80 ನಕಲಿ ಖಾತೆಗಳು ಅಗತ್ಯವಾಗಿ ಯಾವುದೇ ಪ್ರವೃತ್ತಿಯನ್ನು ಉಂಟುಮಾಡುವುದಿಲ್ಲ. ಆದರೆ, ಆ ಖಾತೆಗಳ ಪೋಸ್ಟ್ಗಳು, ರೈತ ಹೋರಾಟದ ದೃಷ್ಟಿಕೋನವನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುವೆ. ಇವು ದೊಡ್ಡ ಕಾರ್ಯಾಚರಣೆಯ ಭಾಗವಾಗಿವೆ” ಎಂದು ಟೆಕ್ನಾಲಜಿ ಪಾಲಿಸಿ ವೆಬ್ಸೈಟ್ ಮೀಡಿಯಾನಾಮ ಸಂಪಾದಕ ವಿಖಿಲ್ ಪಹ್ವಾ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ನ.26ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್!
ಚಿತ್ರ ಕೃಪೆ ಬಿಬಿಸಿ: ಈ ಗ್ರಾಫ್ ನಕಲಿ ಖಾತೆಗಳ ಜಾಲದಲ್ಲಿ Twitter ಖಾತೆಗಳು ಹೇಗೆ ಪರಸ್ಪರ ಸಂವಹನ ನಡೆಸುತ್ತವೆ ಎಂಬುದನ್ನು ತೋರಿಸುತ್ತದೆ
ಭಾರತದಲ್ಲಿ ಅತೀ ಹೆಚ್ಚು ಸಿಖ್ಖರು ಮಾತನಾಡುವ ಭಾಷೆಯಾದ ಪಂಜಾಬಿ ಭಾಷೆಯಲ್ಲಿ ಪಠ್ಯವನ್ನು ಒಳಗೊಂಡಿರುವ ಪೋಸ್ಟ್ಗಳು ತುಂಬಾ ಕಡಿಮೆ ಇವೆ. ಈ ಎಲ್ಲಾ ಪೋಸ್ಟ್ಗಳು ಬಹುತೇಕ ಇಂಗ್ಲಿಷ್ನಲ್ಲಿವೆ. ರೈತ ಹೋರಾಟದ ಸುತ್ತ ಎಲ್ಲಾ ಕಡೆಯಿಂದಲೂ ರಾಜಕೀಯ ಧೋರಣೆಗಳು, ಹತ್ತಿಕ್ಕುವ ಹುನ್ನಾರಗಳಿದ್ದವು. ಜನರು ರೈತರನ್ನು ಬೆಂಬಲಿಸದಂತೆ ಮತ್ತು ಜನರ ದೃಷ್ಟಿಯಲ್ಲಿ ರೈತರನ್ನು ವಿಲನ್ಗಳಂತೆ ಬಿಂಬಿಸಲು ಪ್ರಯತ್ನ ನಡೆಯುತ್ತಿತ್ತು ಎಂದು ಪಹ್ವಾ ಅವರು ಗಮನಸೆಳೆದಿದ್ದಾರೆ. ಈ ಎಲ್ಲಾ ಆಟಗಳು ರೈತರ ವಿರುದ್ದ ಗೆಲ್ಲಲು ನಡೆದ ರಾಜಕೀಯ ಧೋರಣೆಯ ಭಾಗವಾಗಿದೆ.
“ಪ್ಲಾಟ್ಫಾರ್ಮ್ ಮ್ಯಾನಿಪ್ಯುಲೇಷನ್” ಮತ್ತು ನಕಲಿ ಖಾತೆಗಳನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ 80 ನಕಲಿ ಖಾತೆಗಳನ್ನು Twitter ಅಮಾನತುಗೊಳಿಸಿದೆ.
“ಈ ಸಮಯದಲ್ಲಿ, ವ್ಯಾಪಕವಾದ ಸಮನ್ವಯ, ಏಕ ವ್ಯಕ್ತಿಗಳಿಂದ ಬಹು ಖಾತೆಗಳ ಬಳಕೆ ಅಥವಾ ಇತರ ಪ್ಲಾಟ್ಫಾರ್ಮ್ ಮ್ಯಾನಿಪ್ಯುಲೇಷನ್ ತಂತ್ರಗಳಿಗೆ ಯಾವುದೇ ಪುರಾವೆಗಳಿಲ್ಲ” ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.
“ಅಸಮರ್ಪಕ ನಡವಳಿಕೆ” ಮತ್ತು ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿನ ನಕಲಿ ಖಾತೆಗಳನ್ನು ಸಹ ಮೆಟಾ ತೆಗೆದುಹಾಕಿದೆ.
“ಜನರನ್ನು ತಮ್ಮ ವಿಷಯದ ಮೂಲ ತಪ್ಪುದಾರಿಗೆಳೆಯುವ ಮತ್ತು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ನಕಲಿ ಖಾತೆಗಳನ್ನು ಬಳಸಲಾಗಿದೆ. ಅಂತಹ ಖಾತೆಗಳನ್ನು ಅಮಾನತುಗಗೊಳಿಸಲಾಗಿದೆ” ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ಕೃಪೆ: ಬಿಬಿಸಿ ನ್ಯೂಸ್