Homeಮುಖಪುಟ‘ಗರಂ ಹವಾ’: ಒಂದು ನೆನಪು

‘ಗರಂ ಹವಾ’: ಒಂದು ನೆನಪು

- Advertisement -
- Advertisement -

ಎಂ.ಎಸ್. ಸತ್ಯು ಅವರಿಗೆ ಈಚೆಗೆ 80 ತುಂಬಿತು. ಈ ಹೊತ್ತಲ್ಲಿ ಅವರ ‘ಗರಂ ಹವಾ’ (1974) ನೆನಪಾಗುತ್ತಿದೆ. ನಾನು ನೋಡಿದ ಅತ್ಯಂತ ಶ್ರೇಷ್ಠ ಸಿನಿಮಾಗಳಲ್ಲಿ ಇದೊಂದು. ಇಸ್ಮತ್ ಚುಗ್ತಾಯಿಯವರ ಕಥೆಯನ್ನಾಧರಿಸಿ ರಚನೆಯಾದ ಇದಕ್ಕೆ ಚಿತ್ರಕಥೆ ಬರೆದವರು ಕೈಫಿ ಆಜ್ಮಿ ಮತ್ತು ಸತ್ಯು ಅವರ ಜೀವನಸಂಗಾತಿ ಶಮಾ ಝೈದಿ. ಸಂಗೀತ ಕಲ್ಕತ್ತೆಯ ಉಸ್ತಾದ್ ಬಹಾದೂರಖಾನರದು. ಮುಖ್ಯ ಭೂಮಿಕೆಯಲ್ಲಿ ಬಲರಾಜ್ ಸಹಾನಿಯಿದ್ದಾರೆ. ಕೈಫಿ ಆಜ್ಮಿಯವರ ರಚನೆಗೆ ಪ್ರಸಿದ್ಧ ವಾರಸಿ ಸೋದರರು ಖವಾಲಿ ಹಾಡಿದ್ದಾರೆ. ಹಲವಾರು ದೊಡ್ಡ ಪ್ರತಿಭೆಗಳು ಸೇರಿ ನಿರ್ಮಿಸಿದ ಕಲಾಕೃತಿಯಿದು.

ಸಿನಿಮಾದ ವಸ್ತು, ದೇಶವಿಭಜನೆಯ ಬಳಿಕ, ಉತ್ತರ ಭಾರತದಲ್ಲಿರುವ ಚಪ್ಪಲಿ ತಯಾರಿಕೆ
ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಸ್ಥ ಕುಟುಂಬವೊಂದು ಪಡುವ ಪಾಡಿನ ಕಥೆ. ಮೂರು ತಲೆಮಾರಿಗೆ ಸೇರಿದ, ನಗರದಲ್ಲಿ ಗೌರವದ ಸ್ಥಾನ ಹೊಂದಿದ್ದ ಈ ಕುಟುಂಬದಲ್ಲಿನ ಒಬ್ಬ ವ್ಯಕ್ತಿ, ಮನೆಮಾರಿ ಪಾಕಿಸ್ತಾನಕ್ಕೆ ವಲಸೆ ಹೋಗುತ್ತಾನೆ. ಅಲ್ಲಿಂದ ಕುಟುಂಬದ ಕಷ್ಟಗಳು ಶುರುವಾಗುತ್ತವೆ. ಸಾಲ ಪಡೆದವರೆಲ್ಲ ದೇಶ ಬಿಟ್ಟುಹೋಗಿದ್ದರಿಂದ ಈ ಕುಟುಂಬಕ್ಕೆ ಬ್ಯಾಂಕು ಸಾಲ ಕೊಡುವುದಿಲ್ಲ. ಮನೆ ಹರಾಜಾದ ಬಳಿಕ ಬಾಡಿಗೆಗೆ ಮನೆ ಸಿಗುವುದಿಲ್ಲ. ಕುಟುಂಬದ ಹುಡುಗರಿಗೆ ಯಾರೂ ಉದ್ಯೋಗ ಕೊಡುವುದಿಲ್ಲ. ದೇಶದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಕಳಿಸಿದ ಸುಳ್ಳು ಆಪಾದನೆಯನ್ನೂ ಹೊರಬೇಕಾಗುತ್ತದೆ. ದೇಶವಿಭಜನೆಯಂತಹ ರಾಜಕೀಯ ವಿದ್ಯಮಾನವೊಂದು, ಕುಟುಂಬದಲ್ಲಿ ಎಬ್ಬಿಸುವ ಸಂಕಟಗಳನ್ನು ತೆರೆತೆರೆಯಾಗಿ ಚಿತ್ರ ಹಿಡಿಯುತ್ತ ಹೋಗುತ್ತದೆ. ವಿಭಜನೆಯ ಬಳಿಕ ಭಾರತದಲ್ಲೇ ಉಳಿಯಲು ನಿರ್ಧರಿಸಿದ ಮುಸ್ಲಿಮರು, ಹಳೆಯ ಮಾನವ ಸಂಬಂಧಗಳೆಲ್ಲ ಭಗ್ನವಾಗಿ ಹುಟ್ಟಿರುವ ಘೋರವಾದ ಅವಿಶ್ವಾಸದ ವಾತಾವರಣದಲ್ಲಿ ಅನುಭವಿಸಿದ ಕಷ್ಟಗಳನ್ನು ಕಾಣಿಸುತ್ತದೆ. ಈ ಅಪನಂಬಿಕೆಯ ವಾತಾವರಣದಲ್ಲಿ ಬದುಕಲಾಗದೆ ಕುಟುಂಬದ ಒಬ್ಬೊಬ್ಬರೇ ಭಾರತ ಬಿಟ್ಟು ಹೋಗುತ್ತಾರೆ. ಆದರೆ ಕುಟುಂಬದ ಅಜ್ಜಿ, ಅಪ್ಪ ಮತ್ತು ಮಗ ಮಾತ್ರ ಭಾರತದಲ್ಲೇ ಉಳಿಯಲು ಛಲತೊಡುತ್ತಾರೆ.

ಅಪ್ಪ ಮಕ್ಕಳಿಗೆ ಈ ನಿರ್ಧಾರವು ಅವರ ಸಾರ್ವಜನಿಕ ಬದುಕಿನ ಅನುಭವ ಮತ್ತು ರಾಜಕೀಯ ಪ್ರಜ್ಞೆಯ ಫಲ. ಆದರೆ ಈ ಕುಟುಂಬದ ಸದಸ್ಯರಾದ ಒಬ್ಬ ಮುದುಕಿ ಮತ್ತು ತರುಣಿ ಕೂಡ ವಲಸೆಹೋಗಲು ತಮ್ಮದೇ ಕಾರಣಕ್ಕೆ ನಿರಾಕರಿಸುವವರು. ಮುದುಕಿಗೆ ತನ್ನ ದೇಶ ಪರದೇಶ ಎಂದರೇನು ಗೊತ್ತಿಲ್ಲ. ತಾನು ಮದುವೆಯಾಗಿ ಬಂದಾಗ ಮನೆದುಂಬಿಸಿಕೊಂಡ ಮನೆಯನ್ನು ಬಿಟ್ಟು ಅವಳಿಗೆ ಬೇರೆ ದೇಶದ ಕಲ್ಪನೆಯೇ ಗೊತ್ತಿಲ್ಲ. ಖಯಾಮತ್ ದಿನ ತೀರಿಹೋಗಿರುವ ತನ್ನ ಗಂಡ ‘ನಮ್ಮ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ಸತ್ತೆಯಾ?’ ಎಂದರೆ ನಾನೇನೆಂದು ಉತ್ತರಿಸಲಿ ಎನ್ನುವುದು ಅವಳ ಪ್ರಶ್ನೆ. ಕಡೆಗೂ ಅವಳು ತಾನು ಲಗ್ನವಾದ ಹವೇಲಿಯಲ್ಲಿಯೇ ಸಂತೋಷದಿಂದ ಸಾಯುತ್ತಾಳೆ. ಇನ್ನು ತರುಣಿ, ತನ್ನನ್ನು ಪ್ರೇಮಿಸಿದ ತರುಣರು ಭಾರತದಲ್ಲಿ ತಮಗೆ ನೌಕರಿ ಸಿಗುತ್ತಿಲ್ಲವೆಂದು ಹೇಳಿ ಪಾಕಿಸ್ತಾನಕ್ಕೆ ವಲಸೆ ಹೋದವರು, ಮರಳಿ ಬರುವುದನ್ನೇ ಕಾಯುತ್ತಾಳೆ. ಆದರೆ ಅವರು ಅಲ್ಲೇ ಮದುವೆಯಾಗಿ ನೆಲೆಸಲು ನಿಶ್ಚಯಿಸಿದ್ದಾರೆಂದು ತಿಳಿದು ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ-ತಾಯಿ ತನಗಾಗಿ ಹೆಣೆದ ಮದುಮಗಳ ತಲೆವಸ್ತ್ರವನ್ನು ಧರಿಸಿ ಬ್ಲೇಡಿನಲ್ಲಿ ಕೈಯ ನರವನ್ನು ಕೊಯ್ದುಕೊಂಡು.

ಎಂ.ಎಸ್. ಸತ್ಯು

ದೇಶವಿಭಜನೆ ಮತ್ತು ಹೊಸರಾಷ್ಟ್ರದ ಉದಯದಂತಹ ಬೃಹತ್ ರಾಜಕೀಯ ಘಟನೆಗಳಿಗೆ ಬಹುತೇಕವಾಗಿ ಸಾಮಾನ್ಯ ಜನ ಕಾರಣರಲ್ಲ. ಆದರೆ ಈ ಘಟನೆಗಳ ದುರಂತ ಫಲವನ್ನು ಅವರು ಉಣ್ಣಬೇಕಾಗುತ್ತದೆ. ಈ ಕಷ್ಟಗಳಲ್ಲೂ ಕುಟುಂಬದೊಳಗಿನ ಪ್ರೇಮ ವಾತ್ಸಲ್ಯ ಜಗಳದಂತಹ ಮಾನವ ಸಂಬಂಧದ ಮುಖಗಳನ್ನು ಚಿತ್ರ ಹಿಡಿದುಕೊಡುತ್ತದೆ. ಮುನಿಸಿಕೊಳ್ಳುವ ಅಪ್ಪನಿಗೆ ಮಗಳು ಕದ್ದು ತಂದು ರೊಟ್ಟಿ ತಿನಿಸುವ ದೃಶ್ಯ, ತಾನು ಹುಟ್ಟಿಬೆಳೆದ ಮನೆಯನ್ನು ಬಿಟ್ಟುಬರಲು ನಿರಾಕರಿಸಿ ಸೌದೆಗೂಡಿನಲ್ಲಿ ಅಡಗಿಕೊಳ್ಳುವ ಮುದುಕಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋಗುವ ದೃಶ್ಯವಾಗಲಿ ಇಂತಹವು. ಇಂತಹುದೇ ಕಷ್ಟ-ಸುಖಗಳನ್ನು ಪಾಕಿಸ್ತಾನದಲ್ಲಿ ತಮ್ಮ ಊರುಮನೆಗಳಲ್ಲೇ ಉಳಿದ ಮುಸ್ಲಿಮೇತರ ಕುಟುಂಬಗಳೂ ಅನುಭವಿಸುತ್ತಿರಬಹುದು ಎಂಬ ಧ್ವನಿಯನ್ನು ಚಿತ್ರ ಚಿಮ್ಮಿಸುತ್ತದೆ. ರಾಜಕೀಯ ಸಂದರ್ಭದ ಒತ್ತಡದಿಂದ ಕೆಲವರು ಎಷ್ಟೇ ಸಮುದಾಯ ಶಂಕೆ, ದ್ವೇಷ ಮಾಡಲಿ, ಜನರ ನೋವಿಗೆ ಧರ್ಮಾತೀತವಾಗಿ ಮಿಡಿವ ಜೀವಗಳು ಅದೇ ಸಮಾಜದಲ್ಲಿ ಇರುತ್ತವೆ ಎಂಬ ಸತ್ಯವನ್ನು ಚಿತ್ರ ಕಾಣಿಸುತ್ತದೆ. ‘ಸಂಬಂಜ ಎಂಬುದು ದೊಡ್ಡದು ಕನಾ’ ಎಂದು ಬಿಂಬಿಸುತ್ತದೆ.

ಅಂತಃಕರಣ ಮಿಡಿವ ಈ ಚಿತ್ರವು ಒಂದು ಶ್ರೇಷ್ಠ ಕಲಾಕೃತಿಯೂ ಆಗಿದೆ. ಇಲ್ಲಿ ಉತ್ತರ ಪ್ರದೇಶದ ಉಚ್ಚವರ್ಗದ ಮುಸ್ಲಿಮರ ಬದುಕಿನ ಊಟ ಉಡುಪು ಭಾಷೆಯನ್ನು ಒಳಗೊಂಡ ರಿವಾಜುಗಳನ್ನು ಸಮರ್ಥವಾಗಿ ಹಿಡಿಯಲಾಗಿದೆ. ಕಥೆ ಜರುಗುವ ಗಲ್ಲಿ ಮತ್ತು ಹವೇಲಿಗಳು, ತನ್ನ ಸ್ಥಳೀಯ ವಾಸ್ತುಶಿಲ್ಪದ ಜತೆಯಲ್ಲಿ ತಾವೂ ಪಾತ್ರಗಳಾಗಿವೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಅರ್ಥಪೂರ್ಣ ಕಾವ್ಯದ ಒಂದೊಂದು ಸಾಲಿನಂತಿದೆ. ನೆಳಲು ಬೆಳಕಿನ ಸಂಯೋಜನೆಯು ದೇಶವಿಭಜನೆಯ ಒಳಿತುಕೇಡುಗಳ ಸಂಕೇತದಂತೆ ಇಡೀ ಚಿತ್ರದಲ್ಲಿ ಆವರಿಸಿಕೊಂಡಿದೆ. ಧನಿಪೂರ್ಣವೂ ಸಂಕ್ಷಿಪ್ತವೂ ಆದ ಸಂಭಾಷಣೆಯಿರುವ ಚಿತ್ರದಲ್ಲಿ ವಾಚಾಳಿತನವಿಲ್ಲ. ಮುಖಭಾವದಲ್ಲೇ ತಮ್ಮ ಒಳಗನ್ನು ಪ್ರಕಟಿಸುವ ಪ್ರಬುದ್ಧ ನಟನೆಯಿಂದ ಕೂಡಿದೆ. ಬಲರಾಜರ ಅಭಿನಯವಂತೂ ಮನೋಜ್ಞ. ದುರಂತವೆಂದರೆ, ಈ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಬಲರಾಜ್ ತೀರಿಕೊಂಡಿದ್ದರು.

1983ರಲ್ಲಿ ನಾನು ಕನ್ನಡ ಎಂ.ಎ.ಯಲ್ಲಿ ರ್‍ಯಾಂಕ್ ಪಡೆದಾಗ, ಆ ಹುಡುಗನನ್ನು ನೋಡಬೇಕಲ್ಲ ಎಂದು ಆಸೆಪಟ್ಟು ನನ್ನನ್ನು ತಮ್ಮ ಸಹಾಯಕರಾಗಿದ್ದ ಶಿರಾಳಕೊಪ್ಪದ ರಾಮಸ್ವಾಮಿಯವರ ಮೂಲಕ ಕರೆಸಿಕೊಂಡಿದ್ದರು. ಔತಣಕೊಟ್ಟು ಪ್ರೀತಿವಿಶ್ವಾಸ ತೋರಿದ್ದರು. ಕಾಲುಶತಮಾನದ ಬಳಿಕ, ನನ್ನ ‘ಅಮೀರಬಾಯಿ ಕರ್ನಾಟಕಿ’ ಓದಿ, ಬೆಂಗಳೂರಿನಲ್ಲಿ ಒಂದು ಚರ್ಚೆ ಇಟ್ಟುಕೊಂಡಿದ್ದರು. ಅವರೂ ಚಿರಂಜೀವಿಸಿಂಗರೂ ಮಾತಾಡಿದರು. ಮುಂಬೈ ಸಿನಿಮಾ ಜಗತ್ತಿಗೆ ಉತ್ತರ ಕರ್ನಾಟಕದ ಕೊಡುಗೆಯನ್ನು ಬಿಂಬಿಸುವ ಮ್ಯೂಸಿಯಮ್ಮನ್ನು ಬಿಜಾಪುರದ ಅಮೀರಬಾಯಿ ಅವರ ಹಳೆಯ ಮನೆಯಲ್ಲಿ ಮಾಡುವ ಕನಸನ್ನು ಸತ್ಯು ತಮ್ಮ ಪತ್ರದ ಮೂಲಕ ಹಂಚಿಕೊಂಡಿದ್ದರು. ಎಂ.ಎಸ್. ಸತ್ಯು ಹಾಗೂ ರಾಜೀವ ತಾರಾನಾಥ್ ಕರ್ನಾಟಕದಲ್ಲಿ ಹುಟ್ಟಿ ಭಾರತದಲ್ಲಿ ಹರಡಿದ ಪರಂಪರೆಯೊಂದರ ಎರಡು ಕೊಂಡಿಗಳಂತೆ ತೋರುತ್ತಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...