Homeಮುಖಪುಟಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

ಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

- Advertisement -
- Advertisement -

ಜೂನ್ ಮೊದಲ ವಾರದಲ್ಲಿ ಒಂದು ಸುದ್ದಿ ಬಂತು. ಪ್ರಯೋಗಾಲಯಕ್ಕೆ ಸಂಬಂಧಿಸಿದ್ದಾದರೂ ಇದೇನು ಕೊರೊನಾ ವೈರಸ್ ಸಂಬಂಧಿತ ಸುದ್ದಿಯಲ್ಲ. ಚೈನಾದ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಕೃತಕ ಸೂರ್ಯನನ್ನು ವಿನ್ಯಾಸಗೊಳಿಸಿದ್ದು, ಇದು 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉರಿಯುತ್ತಿದೆ ಎಂಬ ವಿಶಿಷ್ಟ ಸುದ್ದಿ. ಹೌದು ನೀವು ಓದಿದ್ದು ನಿಜ. ‘ಕೃತಕ ಸೂರ್ಯ’ನೇ! ವಿಚಿತ್ರ ಅನ್ನಿಸೊದಿಲ್ವಾ? ಹಾಗಾದರೆ ಚೈನಾ ತಾನೇ ವಿನ್ಯಾಸಗೊಳಿಸಿದ ಕೃತಕ ಸೂರ್ಯನಿಂದ ಬೆಳಕು ಪಡೆಯತ್ತಾ? ಇಂತಹ ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಹಾಗಾದರೆ ಈ ಕೃತಕ ಸೂರ್ಯ ನಿಜವಾಗಲೂ ಆಕಾಶದಲ್ಲಿ ಕಾಣುವ ಸೂರ್ಯನ ತರಹವೇ ಇರತ್ತಾ? ಅದು ಬೆಳಕು ನೀಡುತ್ತಾ?

ಶಕ್ತಿ (Energy) ಜೀವ ಉಗಮಕ್ಕೆ ಮೂಲ ಕಾರಣ. ಸೌರ ಮಂಡಲದ ಗ್ರಹಗಳಲ್ಲಿ ಭೂಮಿಯು ಜೀವ ಸಂಕುಲವನ್ನು ಪೋಷಿಸುತ್ತಿದೆ. ಇದಕ್ಕೆ ಕಾರಣ ಭೂಮಿಗೆ ಹತ್ತಿರವಿರುವ ನಕ್ಷತ್ರ ಸೂರ್ಯ. ಸೂರ್ಯನ ಶಕ್ತಿ ಇಲ್ಲದಿದ್ದರೆ ಭೂಮಿಯಲ್ಲಿ ಜೀವ ಸಂಕುಲ ಉಗಮವಾಗುತ್ತಿರಲಿಲ್ಲ ಎನ್ನುವುದು ಅಷ್ಟೇ ಸತ್ಯ. ಆದರೆ, ಪ್ರಶ್ನೆ ಇರುವುದು ಸೂರ್ಯನಿಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು? ಇದಕ್ಕೆ ಉತ್ತರ ಸೂರ್ಯನ ಒಳಗಡೆ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ – Thermo Nuclear Fusion Reaction.

ಸೂರ್ಯ ಒಂದು ನಕ್ಷತ್ರ. ಸೂರ್ಯನಲ್ಲಿ ಶೇ75 ರಷ್ಟು ಹೈಡ್ರೋಜನ್ ಅನಿಲ ಇದೆ. ಸೂರ್ಯನ ತಿರುಳಲ್ಲಿ ಎರಡು ಹೈಡ್ರೋಜನ್ ನ್ಯೂಕ್ಲಿಯಸ್‌ಗಳು ಘರ್ಷಣೆಯಾಗಿ, ಸಮ್ಮಿಲನಗೊಂಡು ಹೀಲಿಯಂ ನ್ಯೂಕ್ಲಿಯಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ, ಎರಡು ಹೈಡ್ರೋಜನ್ ಪರಮಾಣು ಸಮ್ಮಿಲನಗೊಂಡು ಹೀಲಿಯಂ ಪರಮಾಣುವಾಗಿ ಪರಿವರ್ತನೆಗೊಂಡಾಗ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿ ಎಲ್ಲಿಂದ ಬರುತ್ತದೆ? ಹೊಸದಾಗಿ ರೂಪುಗೊಂಡ ಹೀಲಿಯಂ ಪರಮಾಣುವಿನ ದ್ರವ್ಯರಾಶಿಯು, ಸಮ್ಮಿಲಗೊಂಡ ಎರಡು ಹೈಡ್ರೋಜನ್ ಪರಮಾಣುವಿನ ದ್ರವ್ಯರಾಶಿಗಿಂತಲೂ ಕಡಿಮೆ ಇರುತ್ತದೆ.

ಈ ವ್ಯತ್ಯಾಸದ ದ್ರವ್ಯರಾಶಿಯು ಐನ್‌ಸ್ಟೈನ್ ಪ್ರಸ್ತಾಪಿಸಿರುವ E=mc2 (ಶಕ್ತಿ ಮತ್ತು ದ್ರವ್ಯರಾಶಿಯ ಸಮಾನತೆಯ ಸಮೀಕರಣ) ನಿಯಮಾನುಸಾರ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಈ ಕ್ರಿಯೆಯನ್ನು ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಂದು ಕರೆಯುತ್ತಾರೆ. ಸೂರ್ಯ ಒಂದು ಸೆಕೆಂಡಿಗೆ ಸುಮಾರು 600 ಲಕ್ಷ ಟನ್‌ಗಳ ಹೈಡ್ರೋಜನ್ ಪರಮಾಣುಗಳನ್ನು ಹೀಲಿಯಂ ಪರಮಾಣುವಾಗಿ ಪರಿವರ್ತಿಸುತ್ತದೆ. ಈ ಕ್ರಿಯೆಯೇ ಸೂರ್ಯನ ತಿರುಳಲ್ಲಿ ಅಗಾಧ ಪ್ರಮಾಣದ ಶಕ್ತಿ ಉತ್ಪತ್ತಿಗೆ ಕಾರಣವಾಗಿದೆ. ಈ ಶಕ್ತಿಯೇ ಸೂರ್ಯನನ್ನು ಬೆಂಕಿ ಉಂಡೆಯಂತೆ ಹೊಳೆಯುವ ಹಾಗೆ ಮಾಡಿರುವುದು. ಈ ಕಾರಣದಿಂದ ಸೂರ್ಯನ ತಿರುಳಲ್ಲಿ ನಮ್ಮ ಕಲ್ಪನೆಗೂ ನಿಲುಕದ 15 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು. ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಲ್ಲಾ ನಕ್ಷತ್ರಗಳ ತಿರುಳಲ್ಲೂ ನಡೆಯುವ ಸಾಮನ್ಯ ಕ್ರಿಯೆ.

ಸೂರ್ಯನ ಬಗ್ಗೆ ಏನೋ ತಿಳಿದೆವು. ಹಾಗಾದರೆ ಚೈನಾದಲ್ಲಿ ವಿನ್ಯಾಸ ಮಾಡಿದ ಕೃತಕ ಸೂರ್ಯನ ಕತೆ ಏನು? ಈ ಸೂರ್ಯನನ್ನು ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್. ಅಂದರೆ, ಸೂರ್ಯನ ತಿರುಳಲ್ಲಿರುವ ತಾಪಮಾನಕ್ಕಿಂತಲೂ 8 ಪಟ್ಟು ಹೆಚ್ಚು!

ಕೃತಕ ಸೂರ್ಯನ ಸೃಷ್ಟಿ

International Thermonuclear Experimental Reactor- ITER ಅಂದರೆ, ಅಂತರಾಷ್ಟ್ರೀಯ ಉಷ್ಣ ಭೈಜಿಕ ಪ್ರಯೋಗ ಅಣು ಕೇಂದ್ರ. ಇದು ಪ್ರಪಂಚದ ಹಲವು ದೇಶಗಳು (ಪ್ರಮುಖವಾಗಿ 8 ದೇಶಗಳು ಯೂರೋಪ್, ಅಮೆರಿಕ, ಭಾರತ, ಜಪಾನ್, ರಷ್ಯ, ಸೌತ್ ಕೊರಿಯಾ ಮತ್ತು ಚೈನಾ) ಸೇರಿ ನಡೆಸುತ್ತಿರುವ ಮಹಾ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಭೂಮಿಯಲ್ಲಿ ನಿಯಂತ್ರಿತವಾಗಿ ಸೃಷ್ಟಿಸಿ, ಅದರಿಂದ ಬರುವ ಅಪಾರ ಪ್ರಮಾಣದ ‘ಶುದ್ಧ’ ಶಕ್ತಿಯನ್ನು ಪ್ರಪಂಚದಾದ್ಯಂತ ಮಾನವನ ಬಳಕೆಗೆ ಉಪಯೋಗಿಸುವುದು. ಈ ಮಹಾ ಯೋಜನೆಗೆ ಸಂಬಂಧಿಸಿದಂತೆ, ಹಲವು ದೇಶಗಳಲ್ಲಿ ನಿಯಂತ್ರಿತವಾಗಿ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ನಡೆಸಲು ಅನುಕೂಲವಾಗುವಂತೆ ಅಣು ಕೇಂದ್ರವನ್ನು ತೆರೆಯಲಾಗಿದೆ. ಅದರಲ್ಲಿ ಒಂದು ಚೈನಾ ದೇಶದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ಸ್‌ನ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಎಕ್ಸ್‌ಪರಿಮೆಂಟಲ್ ಅಡ್ವಾನ್ಸ್ ಸೂಪರ್‌ಕಂಡಕ್ಟಿಂಗ್ ಟೊಕಾಮಾಕ್ (Experimental Advance Superconducting Tokamak- EAST) ಎಂಬ ವಿನೂತನವಾದ ರಿಯಾಕ್ಟರ್‌ಅನ್ನು ಸ್ಥಾಪಿಸಲಾಗಿದೆ. ಈ ರಿಯಾಕ್ಟರ್ ಒಳಗೆ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಸೃಷ್ಟಿಸಬಹುದಾಗಿದೆ. ಈ ರಿಯಾಕ್ಟರ್‌ಅನ್ನೇ ‘ಕೃತಕ ಸೂರ್ಯ’ ಎಂದು ಕರೆದಿರುವುದು.

ಈ ಜೂನ್ ತಿಂಗಳ ಪ್ರಾರಂಭದಲ್ಲಿ, ಈ ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ನಿಯಂತ್ರಿತವಾಗಿ ಸೃಷ್ಟಿಸಲಾಗಿತ್ತು. ಇದಕ್ಕೆ ಭೂಮಿಯಲ್ಲಿ ಹೇರಳವಾಗಿ ಸಿಗುವ ಹೈಡ್ರೋಜನ್‌ನ ಐಸೋಟೋಪ್ ಆದ ಡ್ಯೂಟೋರಿಯಮ್‌ಅನ್ನು ಬಳಸಲಾಗಿತ್ತು. ಈ ಕ್ರಿಯೆಯ ಸಮಯದಲ್ಲಿ ರಿಯಾಕ್ಟರ್ ಒಳಗಿನ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿತ್ತು. ಈ ಸಂಶೋಧನೆಯು ಇನ್ನೂ ಪ್ರಯೋಗದ ಹಂತದಲ್ಲಿಯೇ ಇದೆ. ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳೂ ನಡೆದಿದ್ದರೂ, ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆಯು ಸಕ್ರಿಯವಾಗಿರುವುದು ಇದೇ ಮೊದಲು!

ಈ ಸಂಶೋಧನೆಗೆ ಬಹಳ ದೊಡ್ಡ ಮಟ್ಟದ ಧನಸಹಾಯವೂ ಬೇಕು ಮತ್ತು ಕಾಲವು ಬೇಕು, ಹಾಗೂ ಇಂದು ಒಂದು ದೇಶದಿಂದ ಮಾತ್ರ ಆಗುವ ಕೆಲಸವಂತೂ ಅಲ್ಲ. ಹೀಗಾಗಿ, ಹಲವು ದೇಶಗಳು ITER ಯೋಜನೆಗೆ ಕೈಜೊಡಿಸಿ, ಇಂತಹ ಹಲವು ‘ಕೃತಕ ಸೂರ್ಯ’ಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಲು ಕಾರ್ಯಸೂಚಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇಲ್ಲಿಯವರೆಗೂ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಅತ್ಯಂತ ಕಡಿಮೆ ಸಮಯದವರೆಗೆ (ಅಂದರೆ, ಸೆಕೆಂಡುಗಳ ಕಾಲದವರೆಗೆ) ಮಾತ್ರ ಇಂತಹ ರಿಯಾಕ್ಟರ್‌ನಲ್ಲಿ ಸೃಷ್ಟಿಸಲು ಸಾಧ್ಯವಾಗಿದ್ದು, ಹೆಚ್ಚಿನ ಸಮಯದವರೆಗೆ ಈ ಕ್ರಿಯೆಯನ್ನು ಸಕ್ರಿಯವಾಗಿರುವಂತೆ ಮಾಡುವುದಕ್ಕೆ ಇನ್ನೂ ಸಂಶೋಧನೆಗಳೂ ನಡೆಯುತ್ತಿವೆ. ಭಾರತ ಕೂಡ ಈ ಮಹಾ ಯೋಜನೆಗೆ ಕೈಜೊಡಿಸಿದ್ದು, ಇಂತಹ ರಿಯಾಕ್ಟರ್‌ಗಳ ಸ್ಥಾಪನೆಗೆ ಹಲವು ಉಪಕರಣಗಳನ್ನು ತಯಾರಿಸಿ ನೀಡುತ್ತಿದೆ.

ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಿಂದ ಬರುವ ಶಕ್ತಿ ಶುದ್ಧ ಶಕ್ತಿ ಹೇಗೆ?

21ನೇ ಶತಮಾನದ ಆಧುನಿಕ ಪ್ರಪಂಚಲ್ಲಿ ಮಾನವ ವಿವಿಧ ಮೂಲಗಳಿಂದ ಉತ್ಪಾದಿಸುವ ಶಕ್ತಿಯನ್ನು (ವಿದ್ಯುತ್ ಶಕ್ತಿ, ಇಂಧನ ಶಕ್ತಿ ಮತ್ತು ಇತರೆ ಶಕ್ತಿಯ ರೂಪಗಳು) ತೀವ್ರ ಗತಿಯಲ್ಲಿ ವಿನಿಯೋಗಿಸುತ್ತಿದ್ದೇವೆ. ವಿದ್ಯುತ್ ಶಕ್ತಿ ಇಂದು ಅತಿ ಹೆಚ್ಚು ಬಳಕೆಯಲಿದೆ. ಇಂಧನ ಶಕ್ತಿಯಿಂದ ಚಾಲು ಇರುತ್ತಿದ್ದ ಹಲವು ಕೆಲಸಗಳು ಇಂದು ವಿದ್ಯುತ್ ಶಕ್ತಿಯಿಂದ ಚಾಲು ಆಗುತ್ತಿವೆ. ಹೀಗಿರುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಮತ್ತು ಪೂರೈಕೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹಾಗಾಗಿ ವಿದ್ಯುತ್ ಶಕ್ತಿಯನ್ನು ಅತಿ ವೇಗವಾಗಿ ಉತ್ಪಾದಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇಂದಿಗೆ ಈ ಸವಾಲು ಅಷ್ಟು ದೊಡ್ಡದಲ್ಲದಿದ್ದರೂ, ಈಗ ಸರಿಯಾದ ಕ್ರಮವಹಿಸದಿದ್ದರೆ, ಮುಂದಿನ ದಶಕದಲ್ಲಿ ಇದು ಬಹು ದೊಡ್ಡ ಸಮಸ್ಯೆಯನ್ನು ಒಡ್ಡಬಲ್ಲದು.

ಈಗ ವಿದ್ಯುತ್ ಶಕ್ತಿ ಉತ್ಪಾದನೆಗೆ ಜಲ ವಿದ್ಯುತ್, ಉಷ್ಣ ವಿದ್ಯುತ್ ಮತ್ತು ಅಣು ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ (ಸೌರ ವಿದ್ಯುತ್, ಪವನ ವಿದ್ಯುತ್ ಮತ್ತು ಇತರೆ ಸ್ಥಾವರಗಳು ಅಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಅಗತ್ಯತೆಯನ್ನು ಇನ್ನೂ ಪೂರೈಸುತ್ತಿಲ್ಲ). ಆದರೆ, ಈ ಕೇಂದ್ರಗಳ ಸ್ಥಾಪನೆಯಿಂಚ ಹಿಡಿದು, ಅವಗಳ ಕಾರ್ಯಾಚಾರಣೆಯವರೆಗೂ ವಿವಿಧ ರೀತಿಯಲ್ಲಿ ನಿಸರ್ಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿರುತ್ತದೆ.

ಈ ಕೇಂದ್ರಗಳಿಂದ ನಮ್ಮ ಅಗತ್ಯತೆ ತಕ್ಕಂತೆ ವಿದ್ಯುತ್ ಶಕ್ತಿ ಪಡೆಯಬಹುದಾದರೂ, ಅಷ್ಟೇ ಪ್ರಮಾಣದ ಹಾನಿಯನ್ನು ಈ ಕೇಂದ್ರಗಳು ನಿಸರ್ಗಕ್ಕೆ ಮಾಡುತ್ತಿರುತ್ತವೆ. ಜಲ ವಿದ್ಯುತ್ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡುಗಳ ನಾಶ, ನದಿಗಳ ನೈಸರ್ಗಿಕ ಹರಿವನ್ನು ತಡೆಯುವುದು, ಬದಲಿಸುವುದು; ಉಷ್ಣ ವಿದ್ಯುತ್ ಸ್ಥಾವರದಲ್ಲಿನ ಕಲ್ಲಿದ್ದಲು ಬಳಕೆಗಾಗಿ ಕಲ್ಲದ್ದಲು ಗಣಿಗಳನ್ನು ಹೆಚ್ಚಿಸುವುದು, ಮತ್ತು ಸ್ಥಾವರದ ಪ್ರದೇಶದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಉಂಟಾಗುವುದು; ಅಣು ವಿದ್ಯುತ್ ಸ್ಥಾವರಗಳಲ್ಲಿ ವಿಕಿರಣಶೀಲ ವಸ್ತುಗಳನ್ನು ಉಪಯೋಗಿಸುವುದರಿಂದ, ಸ್ಥಾವರಗಳು ಅನಿಯಂತ್ರಿತವಾದರೆ ಅತಿ ಹೆಚ್ಚು ದುಷ್ಪರಿಣಾಮ ಮಾನವನ ಮೇಲೆ ಮತ್ತು ನಿಸರ್ಗದ ಮೇಲೆ ಉಂಟಾಗುತ್ತದಲ್ಲದೆ, ಈ ಸ್ಥಾವರಗಳ ವಿಷ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ.

ಸದ್ಯದ ಪರಿಸ್ಥಿತಿ ಹೀಗಿರುವಾಗ, ವಿದ್ಯುತ್ ಶಕ್ತಿಯ ಅಗತ್ಯತೆಗೆ ತಕ್ಕಂತೆ ಇಂತಹ ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಹೆಚ್ಚಾದರೆ, ನಿಸರ್ಗಕ್ಕೆ ಮತ್ತೆ ಸರಿಪಡಿಸಲಾಗದ ಬಹು ದೊಡ್ಡ ಪ್ರಮಾಣದ ಹಾನಿ ಉಂಟಾಗುವುದಂತೂ ಸತ್ಯ. ಈ ಕಾರಣದಿಂದ ಈ ಶಕ್ತಿಯು ನಮಗೆ ಉಪಯೋಗವಾದರು, ಇದರ ಅಡ್ಡ ಪರಿಣಾಮಗಳೂ ಅತಿ ಹೆಚ್ಚಾಗಿರುತ್ತದೆ. ಆದುದರಿಂದಲೇ, ವಿದ್ಯುತ್ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅತಿ ವೇಗವಾಗಿ ಉತ್ಪತ್ತಿಮಾಡಲು ಇರುವ ಮತ್ತೊಂದು ವಿಧಾನವನ್ನು ಹುಡುಕಲು ಹೊರಟಾಗ ಸಿಕ್ಕ ಉತ್ತರ ನಮ್ಮ ಸೂರ್ಯ!

ಹೌದು ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಅತ್ಯಂತ ಅಗಾಧವಾದ ಶಕ್ತಿಯನ್ನು ನೀಡುತ್ತದೆ. ಭೂಮಿಯಲ್ಲಿ ನಿಯಂತ್ರಿತವಾಗಿ ಇಂತಹ ಕ್ರಿಯೆಯನ್ನು ಸೃಷ್ಟಿಸಲು ಒಂದು ರಿಯಾಕ್ಟರ್‌ಅನ್ನು ವಿನ್ಯಾಸ ಮಾಡಿದರೆ, ಅದರ ಸಹಾಯದಿಂದ, ಹೇಗೆ ಅಣು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆಯೋ, ಹಾಗೆಯೇ ಈ ರಿಯಾಕ್ಟರ್‌ನಲ್ಲಿ ದೊರಕುವ ಅಪಾರ ಪ್ರಮಾಣದ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಬಹುದು. ಈ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಲ್ಲಿ ಯಾವ ವಿಕಿರಣಶೀಲ ವಸ್ತುಗಳೂ ಬಿಡುಗಡೆಯಾಗುವುದಿಲ್ಲ ಮತ್ತು ಇದರಿಂದ ಅತ್ಯಂತ ಕಡಿಮೆ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು, ನಿಸರ್ಗಕ್ಕೆ ದೊಡ್ಡಮಟ್ಟದ ಹಾನಿ ಉಂಟುಮಾಡಲಾರದು ಎನ್ನವುದು ಸದ್ಯದ ತಿಳುವಳಿಕೆ. ಆದುದರಿಂದ, ಇದನ್ನು ಶುದ್ಧ ಶಕ್ತಿ (Clean Energy) ಎಂದೂ ಕರೆಯುವುದುಂಟು. ಹಾಗಾಗಿ, ಹಲವು ದೇಶಗಳು ಒಟ್ಟುಗೂಡಿ ಮುಂದಿನ ಒಂದು ದಶಕದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವ ‘ಕೃತಕ ಸೂರ್ಯ’ ರಿಯಾಕ್ಟರ್‌ಅನ್ನು ತಯಾರಿಸಲು ಹೊರಟಿರುವುದು.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ನೀವು ಕಂಡಿರೇ ನೀವೂ ಕಂಡಿರೇ ಬಣ್ಣದುಂಗುರವಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...