Homeಎಲೆಮರೆಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

ಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

- Advertisement -
- Advertisement -

ಕಾರಟಗಿಯಲ್ಲಿ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಬಿ.ಪೀರಬಾಷ ಮತ್ತು ಗೆಳೆಯರು ಸೇರಿ ಕುವೆಂಪು ಕುರಿತಂತೆ ಕಮ್ಮಟವನ್ನು ಏರ್ಪಡಿಸಿದ್ದರು. ರಾಮಲಿಂಗಪ್ಪ ಟಿ. ಬೇಗೂರು ಮತ್ತು ನಾನು ಕಮ್ಮಟವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದೆವು. ಆಗ ಕೊಪ್ಪಳ ಸಿಂಧನೂರು ಗಂಗಾವತಿ ಭಾಗದ ಶಿಕ್ಷಕರು ಶಿಬಿರಾರ್ಥಿಗಳಾಗಿ ಬಂದಿದ್ದರು. ಬಿಡುವಿನ ವೇಳೆಯಲ್ಲಿ ಶಿಕ್ಷಕ ಬಿ.ಕೊಟ್ರೇಶ್ ತಾನು ಶಾಲೆಯಿಂದ ತರುತ್ತಿರುವ ಪತ್ರಿಕೆಯೊಂದನ್ನು ಕೈಗೆ ಕೊಟ್ಟರು. ಸುಮ್ಮನೆ ಕಣ್ಣಾಡಿಸಿದರೆ ಆ ಪತ್ರಿಕೆಯ ವೈವಿಧ್ಯ, ಹರವು, ದೃಷ್ಟಿಕೋನ ಅಚ್ಚರಿ ಹುಟ್ಟಿಸಿತು. ಶಾಲಾ ಮಕ್ಕಳೆ ಪ್ರಕಟಿಸುತ್ತಾರೆಂದಾಗ ನಂಬಲಾಗಲಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಪತ್ರಿಕೆ ತರುವುದಾಗಿಯೂ, ಪತ್ರಿಕೆಯನ್ನು ಶಾಲಾಮಕ್ಕಳೇ ಸಂಪಾದಿಸುತ್ತಿದ್ದು, ಅವರೇ ಬರೆದು, ಅವರೇ ಹಂಚುತ್ತಾರೆ ಎಂದು ಮತ್ತಷ್ಟು ವಿವರಿಸಿದರು. ಇದನ್ನು ಕೇಳಿ ಪೇಸ್‍ಬುಕ್‍ನಲ್ಲಿ ಮೆಚ್ಚುಗೆಯ ಪೋಸ್ಟ್ ಹಾಕಿ ಸುಮ್ಮನಾಗಿದ್ದೆ. ಇದೀಗ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪೆನ್ಸಿಲ್ ಪತ್ರಿಕೆಯ ಬಗ್ಗೆ ವಿಶೇಷ ಸುದ್ದಿಗಳು ಪ್ರಕಟವಾಗಿ ಗಮನ ಸೆಳೆಯುತ್ತಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬೆಳಗುರ್ಕಿ ಒಂದು ಪುಟ್ಟ ಹಳ್ಳಿ. ಐದು ಸಾವಿರದಷ್ಟು ಜನಸಂಖ್ಯೆ ಇರುವ ಬೆಳಗುರ್ಕಿಯ ಶಾಲೆಯಲ್ಲಿ 310 ರಷ್ಟು ವಿದ್ಯಾರ್ಥಿಗಳಿದ್ದು, ಎಂಟು ಜನ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಆ ಹಳ್ಳಿಗೆ ಈಗಲೂ ದಿನಪತ್ರಿಕೆಗಳು ಬರುವುದಿಲ್ಲ. ಆದರೆ ಈ ಊರಿನ ಹಿರಿಯರಿಗೆ ತಮ್ಮೂರಿನ ಶಾಲಾಮಕ್ಕಳ ಪೆನ್ಸಿಲ್ ಪತ್ರಿಕೆ ಅಚ್ಚುಮೆಚ್ಚು. ಹರಟೆಕಟ್ಟೆಗಳೀಗ `ಪೆನ್ಸಿಲ್ ಪತ್ರಿಕಾ’ ಕಟ್ಟೆಗಳಾಗಿ ಬದಲಾಗಿವೆ. ಈ ಪತ್ರಿಕೆಯ ಪ್ರಭಾವಕ್ಕೆ ಒಳಗಾಗಿ ಕೆಲವು ದಿನಪತ್ರಿಕೆಗಳೂ ಉಚಿತವಾಗಿ ಊರು ಸೇರುತ್ತಿವೆ. ಊರಲ್ಲೊಂದು ಓದುಗವರ್ಗ ಸೃಷ್ಠಿಯಾಗಿದೆ.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದರ ಉದ್ದೇಶದಿಂದ ಕೊಟ್ರೇಶ್ ಶಾಲಾ ಬಿಟ್ಟ ಮಕ್ಕಳ ಕತೆಯನ್ನು ಅವರದೆ ಫೋಟೋ ಹಾಕಿ ಆರಂಭಕ್ಕೆ ಗೋಡೆ ಪತ್ರಿಕೆಯಲ್ಲಿ ಪ್ರಕಟಿಸಲು ತೊಡಗುತ್ತಾರೆ. ಇದಕ್ಕೆ ಮಕ್ಕಳ ಪ್ರತಿಕ್ರಿಯೆ ಉತ್ಸಾಹ ಹೆಚ್ಚಾಗತೊಡಗುತ್ತದೆ. ಗೋಡೆ ಪತ್ರಿಕೆಯನ್ನೆ ಯಾಕೆ ಸ್ವತಂತ್ರ ಪತ್ರಿಕೆ ಮಾಡಬಾರದು ಎನ್ನುವ ಯೋಚನೆಯಿಂದ `ಪೆನ್ಸಿಲ್’ ಪತ್ರಿಕೆ ಹುಟ್ಟುತ್ತದೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಕೊಟ್ರೇಶ್ ಅವರ ಸ್ನೇಹಿತ ಉಲ್ಲಾಸ್ ಎನ್ನುವವರು ಪುಟವಿನ್ಯಾಸ ಮಾಡುತ್ತಾರೆ. ಇದರಿಂದಾಗಿ ಯಾವುದೇ ದಿನಪತ್ರಿಕೆಗೂ ಕಡಿಮೆ ಇಲ್ಲದಂತೆ `ಪೆನ್ಸಿಲ್’ ರೂಪು ಪಡೆಯುತ್ತದೆ. ದೂರದ ನಗರಗಳಲ್ಲಿ ಮುದ್ರಣವಾಗಿ ಬರುವ ಪತ್ರಿಕೆಗಳ ಬಗೆಗೆ ಜನರಿಗಿದ್ದ ಸಹಜ ಕುತೂಹಲ `ನಮ್ಮೂರಿನ ಶಾಲೆಯೂ ಒಂದು ಪತ್ರಿಕೆ ತರುತ್ತಿದೆ’ ಎನ್ನುವ ಬೆರಗು ಮೂಡಿಸುತ್ತದೆ. ಈ ಬೆರಗಿನಿಂದಲೇ ಶಾಲಾಪತ್ರಿಕೆಯನ್ನು ಊರಿನ ಜನ ಓದಲು ತೊಡಗುತ್ತಾರೆ.

2013 ರ ಸೆಪ್ಟೆಂಬರ್ ತಿಂಗಳಲ್ಲಿ ಪೆನ್ಸಿಲ್‍ನ ಮೊದಲ ಮುದ್ರಿತ ಸಂಚಿಕೆ ಬರುತ್ತದೆ. 2016 ರ ತನಕ ಪೆನ್ಸಿಲ್ ಪತ್ರಿಕೆ ತಿಂಗಳ ಪತ್ರಿಕೆಯಾಗಿ ಪ್ರಕಟವಾಗುತ್ತಾ ಗಮನ ಸೆಳೆಯಿತು. 2016 ರಲ್ಲಿ ಪತ್ರಿಕೆ ರೂಪಿಸುವ ಹೊಣೆಹೊತ್ತ ಶಿಕ್ಷಕ ಕೊಟ್ರೇಶ್ ಅವರು ಬಿಇಓ ಕಚೇರಿಯ ಸಿಆರ್‍ಪಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಕೆಲಕಾಲ ಪತ್ರಿಕೆ ನಿಲ್ಲುತ್ತದೆ. ನಂತರ ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್‍ನಲ್ಲಿ ಕೊಟ್ರೇಶ್ ತಮ್ಮ ಪತ್ರಿಕೆಗೆ ಆರ್ಥಿಕ ನೆರವು ಕೇಳಿದಾಗ ಫೌಂಡೇಷನ್ ಒಂದು ವರ್ಷದ ಪತ್ರಿಕೆ ವೆಚ್ಚವನ್ನು ಪ್ರಾಯೋಜಿಸುತ್ತಾರೆ. ಹೀಗಾಗಿ ಮತ್ತಷ್ಟು ಉತ್ಸಾಹದೊಂದಿಗೆ ಪತ್ರಿಕೆ ದ್ವೈಮಾಸಿಕ ಸಂಚಿಕೆಯಾಗಿ ಮುದ್ರಿತವಾಗುತ್ತದೆ. ಇದೀಗ ಊರಿನವರೆ ಒಂದೊಂದು ಸಂಚಿಕೆಯ ವೆಚ್ಚವನ್ನು ಪ್ರಾಯೋಜಿಸಲು ಮುಂದೆ ಬರುವಷ್ಟು ಪತ್ರಿಕೆ ಬೇರುಬಿಟ್ಟಿದೆ. ಮುಂದೆ ಹಣದ ಕೊರತೆಯಿಂದ ಪತ್ರಿಕೆ ನಿಂತರೆ ಹೇಗೆ ಎಂದು ಕೊಟ್ರೇಶ್ ಮಕ್ಕಳನ್ನು ಕೇಳಿದರೆ, ನಾವೇ ಸೇವಿಂಗ್ಸ್ ಬ್ಯಾಂಕ್ ಮೂಲಕ ಹಣ ಉಳಿಸಿ ಪ್ರಕಟಿಸೋಣ ಸರ್ ಎಂದು ಮಕ್ಕಳೆ ಕೊಟ್ರೇಶರಿಗೆ ದೈರ್ಯ ತುಂಬುತ್ತಾರೆ.

ಕರ್ನಾಟಕದ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರು ಶಾಲಾಪತ್ರಿಕೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಪೆನ್ಸಿಲ್ ಪತ್ರಿಕೆಗೂ ಅವುಗಳಿಗೂ ಫರಕಿದೆ. ಮೊದಲನೆಯದಾಗಿ ಬಹುಪಾಲು ಶಿಕ್ಷಕರು ಮಕ್ಕಳಿಗಾಗಿ ಬರೆದ ಅಥವಾ ಸಂಗ್ರಹಿಸಿದ ಬರಹಗಳಿರುತ್ತವೆ. ಆದರೆ ಪೆನ್ಸಿಲ್ ಪತ್ರಿಕೆಯಲ್ಲಿ ಶಿಕ್ಷಕರ ಸಂಪಾದಕೀಯ ಹೊರತುಪಡಿಸಿದರೆ ಇಡೀ ಪತ್ರಿಕೆ ತುಂಬಾ ಶಾಲೆಯ ಮಕ್ಕಳೇ ಬರೆಯುತ್ತಾರೆ. ಮುಖ್ಯವಾಗಿ ಬೇರೆ ಪತ್ರಿಕೆಗಳು ಆಯಾ ಶಾಲೆ, ಶಾಲೆಯ ಮಕ್ಕಳಿಗೆ ಸೀಮಿತವಾಗಿದ್ದರೆ, ಪೆನ್ಸಿಲ್ ಪತ್ರಿಕೆ ಊರಿನ ಮನೆಮನೆಗೆ ಹಂಚಲ್ಪಡುತ್ತದೆ. ಹಾಗಾಗಿ ಪತ್ರಿಕೆ ಜನಸಮುದಾಯಕ್ಕೆ ವಿಸ್ತರಿಸಿದೆ. ಶಾಲಾಮಕ್ಕಳು ತಮ್ಮದೇ ಊರಿನ ಕಲಾವಿದರು, ಹಿರಿಯರು, ಸಾಧಕರನ್ನು ಸಂದರ್ಶನ ಮಾಡುತ್ತಾರೆ. ತಮ್ಮ ಊರಿನ ಹಬ್ಬ ಜಾತ್ರೆಗಳ ಬಗ್ಗೆಯೂ, ಶಾಲಾ ಕಾರ್ಯಕ್ರಮಗಳ ಬಗ್ಗೆಯೂ ವರದಿ ಮಾಡುತ್ತಾರೆ. ಹೀಗಾಗಿಯೇ ಶಾಲಾಮಕ್ಕಳನ್ನು ಸಮೀಪದ ಪತ್ರಿಕಾ ಕಚೇರಿಗಳಿಗೂ ಭೇಟಿಮಾಡಿಸಲಾಗುತ್ತದೆ. ಪತ್ರಕರ್ತರೊಂದಿಗೆ ಮಕ್ಕಳ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಶಾಲಾ ಮಕ್ಕಳು ಏಕಕಾಲದಲ್ಲಿ ಪತ್ರಕರ್ತರಂತೆಯೂ, ಪತ್ರಿಕೆ ರೂಪುಗೊಳ್ಳುವ ಸಮಯಕ್ಕೆ ಶಾಲೆಯೇ ಪತ್ರಿಕಾ ಕಚೇರಿಯಂತೆಯೂ ಬದಲಾಗುತ್ತದೆ.

ಕೊಟ್ರೇಶ್ ಮಾತನಾಡುತ್ತಾ `ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಪರಮೇಶ್ ಚಿಂತಮಾನದೊಡ್ಡಿ, ಶಿಕ್ಷಕರಾದ ಪುಟ್ಟಸ್ವಾಮಿ, ಮಲ್ಲೇಶ್ ಕರಿಗಾರ, ತಿಮ್ಮಾರೆಡ್ಡಿ, ಸುನೀಲ್, ಶಿಕ್ಷಕಿಯರಾದ ಮೀನಾಕ್ಷಿ, ಬಸಿರಾ ಬೇಗಂ ಎಲ್ಲರ ಶ್ರಮದಿಂದಾಗಿ ಪೆನ್ಸಿಲ್ ಪತ್ರಿಕೆ ರೂಪುಗೊಳ್ಳುತ್ತಿದೆ. ಅಂತೆಯೇ ಬೆಳಗುರ್ಕಿಯ ಗ್ರಾಮಸ್ಥರು, ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಧ್ಯಮದ ಸ್ನೇಹಿತರು ತುಂಬಾ ಸಹಕಾರ ಕೊಡುತ್ತಿದ್ದಾರೆ. ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್(ಕಲಿ-ಕಲಿಸು) ಕಲಾ ಅಂತರ್ಗತ ಯೋಜನೆಗೆ ನಮ್ಮ ಶಾಲೆಯನ್ನು ಆಯ್ದುಕೊಂಡಿದ್ದಾರೆ. ಈ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕರಾದ ಕೃಷ್ಣಮೂರ್ತಿ ಹಾಗೂ ರಾಧಿಕಾ ಭಾರದ್ವಾಜ್ ಅವರುಗಳು ಪತ್ರಿಕೆಗೆ ಮಾರ್ಗದರ್ಶನ ಮಾಡುತ್ತಾರೆ. ನಾನು ಪತ್ರಿಕೆಯ ಜವಾಬ್ದಾರಿ ನಿರ್ವಹಿಸಿದರೂ, ಅದರ ಹಿಂದೆ ಈ ಎಲ್ಲರ ಸಹಕಾರ ಮತ್ತು ಪ್ರೀತಿಯೇ ಪೆನ್ಸಿಲ್ ಪತ್ರಿಕೆಯನ್ನು ಗಮನ ಸೆಳೆಯುವಂತೆ ಮಾಡಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ’ ಎನ್ನುತ್ತಾರೆ.

ಇದೀಗ ಬೆಳಗುರ್ಕಿ ಶಾಲೆಯ ಮಕ್ಕಳು ಮಕ್ಕಳ ಗ್ರಾಮಸಭೆಗೆ ಹಾಜರಾಗಿ ಜಬರ್ದಸ್ತ್ ಪ್ರಶ್ನೆ ಮಾಡಿ ಗ್ರಾಮಪಂಚಾಯ್ತಿಯಿಂದ ಶಾಲೆಗೆ ಬರಬೇಕಾದ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗಾಗಲೆ ಮಕ್ಕಳೆಲ್ಲಾ ಸೇರಿ ನಮ್ಮೂರಲ್ಲಿ ಸಾರಾಯಿ ಅಂಗಡಿಯನ್ನು ಏಕೆ ನಿಲ್ಲಿಸಬಾರದು? ನಾವು ನಮ್ಮ ಪತ್ರಿಕೆಗೆ ಈಗಿನ ಶಿಕ್ಷಣ ಮಂತ್ರಿಯನ್ನೇಕೆ ಸಂದರ್ಶನ ಮಾಡಬಾರದು ಎಂದೆಲ್ಲಾ ಯೋಚನೆ ಮಾಡಲು ಶುರು ಮಾಡಿದ್ದಾರೆ. ಹೀಗೆ ಸದ್ದಿಲ್ಲದಂತೆ ಪೆನ್ಸಿಲ್ ಪತ್ರಿಕೆ ಶಾಲಾಮಕ್ಕಳನ್ನು ಜಾಗೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರೇರೇಪಿಸುತ್ತಿದೆ. ಕೊಟ್ರೇಶ್‍ನಂತಹ ಶಿಕ್ಷಕರೂ, ಪೆನ್ಸಿಲ್‍ನಂತಹ ಪತ್ರಿಕೆಗಳು ಎಲ್ಲಾ ಸರಕಾರಿ ಶಾಲೆಗಳಲ್ಲೂ ಜೀವ ತಳೆಯಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

0
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕವನ್ನು ಮತ್ತು ಕರ್ನಾಟಕದ ರೈತರನ್ನು ದ್ವೇಷಿಸುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದರೂ, ಇದುವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ....