ಅರಣ್ಯ ಇಲಾಖೆಯ ಕರ್ತವ್ಯನಿಷ್ಟ ಮಹಿಳಾ ಅಧಿಕಾರಿಯನ್ನು ಬೀದರ್ಗೆ ವರ್ಗಾಯಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಭಾರಿ ಮುಖಭಂಗ ಉಂಟಾಗಿದೆ. ಬೀದರ್ಗೆ ವರ್ಗಾವಣೆ ಮಾಡಿ ಆದೇಶಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕೆ.ಎ.ಟಿ ತಡೆ ನೀಡಿದೆ.
ಅರಣ್ಯ ಸಂಚಾರಿ ದಳದ ಅಧಿಕಾರಿಯಾಗಿದ್ದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ಅವರನ್ನ ವರ್ಗಾವಣೆ ಮಾಡಿಸಿದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಸಂಧ್ಯಾ ಅವರು ಮೊದಲಿದ್ದ ಹುದ್ದೆಯಲ್ಲೇ ಮರು ನೇಮಕಗೊಳಿಸಿ ಆದೇಶಿಸಿದೆ.
ಸರ್ಕಾರದ ಆದೇಶದ ವಿರುದ್ಧ ಅಧಿಕಾರಿ ಸಂಧ್ಯಾ ಸಚಿನ್ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಪೀಠ)ಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಇದು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ, ವರ್ಗಾವಣೆ ಮಾಡಬೇಕಾದರೇ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು
ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳನ್ನು ಬಿಜೆಪಿ ನಾಯಕ ಎನ್ನಲಾದ ಪಂಚಮುಖಿ ಬಾಲಕೃಷ್ಣ ಶೆಟ್ಟಿ ಎಂಬುವವರು ಕಡೆಸಿದ್ದರು. ಸ್ಥಳೀಯರ ದೂರಿನ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ್ದ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಬೆಲೆ ಬಾಳುವ ಮರಗಳ ಜೊತೆಗೆ ಬಾಲಕೃಷ್ಣ ಶೆಟ್ಟಿಗೆ ಸೇರಿದ ಲಾರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.
ಇದರಿಂದ ಅರಣ್ಯ ಸಂಚಾರಿ ದಳದಲ್ಲಿ ನಿಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಅರಣ್ಯ ಅಧಿಕಾರಿ ಸಂಧ್ಯಾ ಸಚಿನ್ರನ್ನು ಬೀದರ್ಗೆ ವರ್ಗಾಯಿಸುವಂತೆ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಮತ್ತು ವರ್ಗಾಯಿಸುವುದು ಎಂದು ಬರೆದು ಸಿಎಂ ಸಹಿ ಹಾಕಿರುವ ಪತ್ರ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಜತೆಗೆ ಅರಣ್ಯಾಧಿಕಾರಿ ಸಂಧ್ಯಾ ಮರಗಳ್ಳರ ಮೇಲೆ ತಾನು ನಿಷ್ಟುರ ಕ್ರಮಕೈಗೊಂಡಿದ್ದಕ್ಕೆ ಸೇಡಿನಿಂದ ವರ್ಗಾ ಮಾಡಲಾಗಿದೆ ಎಂದು ಬರೆದ ಪತ್ರವೂ ವೈರಲ್ ಆಗಿತ್ತು. ಈಗ ನ್ಯಾಯಾಲಯ ಹರೀಶ್ ಪೂಂಜಾಗೆ ಛೀಮಾರಿ ಹಾಕಿ, ರಾಜಕೀಯ ದುರದ್ದೇಶದಿಂದ ವರ್ಗಾವಣೆ ಮಾಡಿಸಲಾಗಿದೆ ಎಂದು ಆದೇಶ ನೀಡಿದೆ.
ನ್ಯಾಯಾಲಯದ ಆದೇಶ ಪ್ರತಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು: ಸಚಿವ ಸುಧಾಕರ್ ಹೇಳಿಕೆಗೆ ಆಕ್ಷೇಪ