| ನಾನುಗೌರಿ ಡೆಸ್ಕ್ |
ಜಮ್ಮು ಮತ್ತು ಕಾಶ್ಮೀರದ ಲೆಹ್ ಪ್ರಾಂತದಲ್ಲಿ ನಡೆಯಿತೆಂದು ಹೇಳಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಬಿಜೆಪಿಯ ರಾಜ್ಯ ಅಧ್ಯಕ್ಷ ರವಿಂದರ್ ರೈನಾ ಮತ್ತು ಎಂಎಲ್ಸಿ ವಿಕ್ರಮ್ ರಂಧ್ವಾನಾ ಅವರ ಮೇಲೆ 7 ಪತ್ರಕರ್ತರು ಕಳೆದ ವಾರ ದೂರನ್ನು ನೀಡಿದ್ದರು. ಮೇ 2ರಂದು ಇವರಿಬ್ಬರು ನಡೆಸಿದ ಪತ್ರಿಕಾಗೋಷ್ಟಿಯ ನಂತರ ಹಣವಿದ್ದ ಲಕೋಟೆಗಳನ್ನು ತಮಗೆ ನೀಡಲಾಗಿತ್ತೆಂದೂ, ಬಿಜೆಪಿಯ ಪರ ಸುದ್ದಿಗಳನ್ನು ಬರೆಯಬೇಕೆಂದು ಸೂಚಿಸಲಾಗಿತ್ತೆಂದೂ ಅವರು ದೂರಿದ್ದರು.
ಲಕೋಟೆ ತೆರೆದು ನೋಡಿದಾಗ ಹಣವಿದ್ದುದು ಕಂಡುಬಂದು, ಅಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಹಿಂತಿರುಗಿಸಿದ್ದಾಗಿಯೂ ಪತ್ರಕರ್ತರು ಹೇಳಿದ್ದಾರೆ. ಲೆಹ್ನ ಡಿಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಆವ್ನಿ ಲಾವಾಸಾ ಅವರು ಪೊಲೀಸರಿಗೆ ಈ ದೂರನ್ನು ರವಾನಿಸಿದ್ದರು. ಅದನ್ನು ಪೊಲೀಸರು ನ್ಯಾಯಾಲಯದ ಮುಂದೆ ಇರಿಸಿದ್ದರು. ನ್ಯಾಯಾಲಯವು ಮೊಕದ್ದಮೆ ದಾಖಲಿಸಿಕೊಳ್ಳಲು ಆದೇಶಿಸಿತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಮಧ್ಯೆ ಲಕೋಟೆಗಳನ್ನು ವಿತರಿಸಿದ ಸಿಸಿಟಿವಿ ಫೂಟೇಜ್ ಇರುವ ವಿಡಿಯೋವನ್ನು ಎನ್ಡಿಟಿವಿ ಪ್ರಸಾರ ಮಾಡಿತು. ಆದರೆ, ಈ ವಿಡಿಯೋನ ಅಧಿಕೃತತೆ ಬಗ್ಗೆ ಗೊತ್ತಿಲ್ಲ ಎಂದು ಅದು ಹೇಳಿದೆ. ಸದರಿ ವಿಡಿಯೋವನ್ನು ಒಮರ್ ಅಬ್ದುಲ್ಲಾ ಸಹಾ ಟ್ವೀಟ್ ಮಾಡಿದ್ದಾರೆ.
After Leh journalists' bribe claim, CCTV clip emerges. BJP says will sue https://t.co/fI2Inm1M7E
Disclaimer: NDTV cannot verify the authenticity of the 'bribe' video pic.twitter.com/sF9RrV4tk9
— NDTV (@ndtv) May 8, 2019
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಈ ಆಪಾದನೆಗಳನ್ನು ನಿರಾಕರಿಸಿದ್ದರು, ಪತ್ರಿಕಾಗೋಷ್ಠಿ ಆದ ನಂತರ ತಾನು ಕೂಡಲೇ ಆ ಜಾಗದಿಂದ ಹೊರನಡೆದಿದ್ದೆ ಎಂದು ಹೇಳಿದ್ದರು. ಅದಾದ ನಂತರ ಮಂಗಳವಾರ ವಿಡಿಯೋ ಹೊರಬಿದ್ದಿತು. ಅದರಲ್ಲಿ ಲಕೋಟೆ ಹಂಚುವುದರಲ್ಲಿ ಎಂಎಲ್ಸಿ ರಂಧ್ವಾನಾ ಅವರಿರುವುದನ್ನು ಮಾಧ್ಯಮಗಳು ಪತ್ತೆ ಹಚ್ಚಿದವು. ಈ ಕುರಿತು ರೈನಾ ಅವರನ್ನು ಪ್ರಶ್ನಿಸಿದಾಗ, ‘ಮೇ 4ರಂದು ಕಾಶ್ಮೀರಕ್ಕೆ ಬರುತ್ತಿದ್ದ ನಿರ್ಮಲಾ ಸೀತಾರಾಮನ್ ಅವರ ಬಹಿರಂಗ ಸಭೆಯ ಆಹ್ವಾನ ಪತ್ರಿಕಗಳಿದ್ದವು. ಈ ಕುರಿತು ಪಕ್ಷವು ಪರಿಶೀಲಿಸುತ್ತದೆ’ ಎಂದು ಹೇಳಿದ್ದಾರೆ.