ಮೇಘಾಲಯ ವಿಧಾನಸಾಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖರು, ”ರಾಷ್ಟ್ರೀಯ ಪೀಪಲ್ಸ್ ಪಕ್ಷ(ಎನ್ಪಿಪಿ)ದ ನಾಯಕ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರನ್ನು ದೇಶದಲ್ಲಿ ‘ಅತ್ಯಂತ ಭ್ರಷ್ಟ’ ರಾಜ್ಯ ಸರ್ಕಾರವನ್ನು ನಡೆಸುತ್ತಿದ್ದಾರೆ” ಎಂದು ನಿರಂತರವಾಗಿ ಗುರಿಯಾಗಿಸಿ ವಾಗ್ಧಾಳಿ ನಡೆಸಿದ್ದರು.
ಭ್ರಷ್ಟಾಚಾರದ ವಿಷಯದಲ್ಲಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ವಿರುದ್ಧ ಪ್ರಚಾರ ನಡೆಸುತ್ತಿದ್ದ ಬಿಜೆಪಿ ನಾಯಕರು, ಇದೀಗ ಅದೇ ಎನ್ಪಿಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಸೋಮವಾರ ಬಿಜೆಪಿಯನ್ನು ಗುರಿಯಾಗಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿರುವ ಹಿಂದಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, ”ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ದೇಶದ ‘ಅತ್ಯಂತ ಭ್ರಷ್ಟ’ ರಾಜ್ಯ ಸರ್ಕಾರವನ್ನು ನಡೆಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೀಡಿಯೊದಲ್ಲಿ, ಪ್ರಧಾನಿ ಮೋದಿ ಅವರು ಮಾತನಾಡಿದ್ದು, ”ನಾನು ಜನರ ಮಾತುಗಳನ್ನು ಕೇಳಿದಾಗ ನನಗೆ ತುಂಬಾ ದುಃಖವಾಗುತ್ತದೆ. ಹಣ ಖರ್ಚು ಮಾಡಿಲ್ಲ, ರಸ್ತೆ ನಿರ್ಮಾಣ ಮಾಡಿಲ್ಲ, ಶಾಲೆ, ಕಾಲೇಜು, ಆಸ್ಪತ್ರೆ ನಿರ್ಮಾಣ ಮಾಡಿಲ್ಲ ಎಂದು ಜನ ಹೇಳುತ್ತಾರೆ. ಹಾಗಾದರೆ ಆ ಹಣ ಎಲ್ಲಿ ಹೋಯಿತು?” ಎಂದು ಅವರು ಹೇಳುವುದನ್ನು ನೋಡಬಹುದು.
ಇದನ್ನೂ ಓದಿ: ವಿಧಾನಸಭಾ ಫಲಿತಾಂಶ: ನಾಗಲ್ಯಾಂಡ್, ತ್ರಿಪುರದಲ್ಲಿ ಬಿಜೆಪಿ ಮುನ್ನಡೆ – ಮೇಘಾಲಯದಲ್ಲಿ NPP ಮುನ್ನಡೆ
ಹಿಂದಿನ ಅವಧಿಯಲ್ಲಿ ಬಿಜೆಪಿ ಮತ್ತು ಎನ್ಪಿಪಿ ಮೈತ್ರಿ ಸರ್ಕಾರ ರಚಿಸಿದ್ದರು. ಆದರೆ ಚುನಾವಣೆಗೆ ಮುಂಚೆಯೇ ಸಂಬಂಧವನ್ನು ಮುರಿದು, ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡಿದವು. 60 ಸದಸ್ಯ ಬಲದ ಮೇಘಾಲಯದ ವಿಧಾನಸಭೆಯ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿತ್ತು. ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯವಾದ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆ ಮಾಡಲು ಮೂವರು ಸದಸ್ಯರ ಕೊರತೆ ಎದುರಿಸುತ್ತಿದೆ. ಅದು ಈಗ ಬೇರೆ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕಿದೆ. ಇದೀಗ ಎನ್ಪಿಪಿ ಜೊತೆ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ.
ಜೈರಾಮ್ ರಮೇಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ”ಕೆಲವು ದಿನಗಳ ಹಿಂದೆ ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಸರ್ಕಾರವು ಪ್ರಧಾನಿ ಮತ್ತು ಗೃಹಸಚಿವರ ಪ್ರಕಾರ ದೇಶದ ಅತ್ಯಂತ ಭ್ರಷ್ಟವಾಗಿತ್ತು. ಈಗ ಸಹಜವಾಗಿಯೇ ಎಲ್ಲವನ್ನೂ ಮರೆತು ಬಿಜೆಪಿ ಅವರ ಜೊತೆ ಕೈ ಜೋಡಿಸುತ್ತಿದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
A few days back Conrad Sangma's Govt in Meghalaya was the MOST corrupt in the country according to both PM & HM. Now of course, BJP in a fit of amnesia I suppose, is joining hands with him. Meghalaya deserves better.
Just listen to G2👇 pic.twitter.com/Wjd3pHHiI1
— Jairam Ramesh (@Jairam_Ramesh) March 6, 2023
ಮತ್ತೊಂದು ಟ್ವೀಟ್ನಲ್ಲಿ, ”ಬಿಜೆಪಿ ವಾಷಿಂಗ್ ಮೆಷಿನ್ ಈಗ ಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಶುಕ್ರವಾರ ಸಂಗ್ಮಾ ಅವರು ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ”ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಶ್ಲಾಘನೀಯ ಸಾಧನೆಗಾಗಿ ನಾನು ಕಾನ್ರಾಡ್ ಸಂಗ್ಮಾ ಅವರನ್ನು ಅಭಿನಂದಿಸುತ್ತೇನೆ. ನನ್ನ ಸ್ನೇಹಿತ, ದಿವಂಗತ ಪಿಎ ಸಂಗ್ಮಾ ಜಿ ಅವರು ಇದ್ದಿದ್ದರೆ ತುಂಬಾ ಹೆಮ್ಮೆಪಡುತ್ತಿದ್ದರು. ಮೇಘಾಲಯದ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.