Homeಅಂಕಣಗಳುಅಧಿಕಾರಕ್ಕೆ ಸತ್ಯ ನುಡಿದ ಚಿಂತಕರಿಗೆ ಸೆನ್ಸಾರ್ - ಅವರ ಚಿಂತನೆಗಳನ್ನು ಹುರುಪಿನಿಂದ ಪ್ರಚಾರ ಮಾಡುವುದೇ ದಾರಿ

ಅಧಿಕಾರಕ್ಕೆ ಸತ್ಯ ನುಡಿದ ಚಿಂತಕರಿಗೆ ಸೆನ್ಸಾರ್ – ಅವರ ಚಿಂತನೆಗಳನ್ನು ಹುರುಪಿನಿಂದ ಪ್ರಚಾರ ಮಾಡುವುದೇ ದಾರಿ

- Advertisement -
- Advertisement -

ವಿಶ್ವಯುದ್ಧದ ನಂತರದ ಜಗತ್ತಿನ ಹೊಸ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಅತಿಹೆಚ್ಚು ಸಹಾಯ ಮಾಡಿರುವ ಚಿಂತಕರಲ್ಲಿ (ಇಂಟಲೆಕ್ಚುಯಲ್ಸ್) ಪ್ರಮುಖರಾದವರು ನೋಮ್ ಚಾಮ್‍ಸ್ಕಿ. ಬಲಿಷ್ಟ ರಾಷ್ಟ್ರಗಳು ಅದರಲ್ಲ್ಲೂ ನಿರ್ದಿಷ್ಟವಾಗಿ ಯುಎಸ್ ಮಾಡಿದ ಯುದ್ಧಗಳ ಬಗ್ಗೆ, ಮಾಧ್ಯಮಗಳ ಬಗ್ಗೆ, ಅನಾರ್ಕಿಸಂ ಬಗ್ಗೆ ಈಗಾಗಲೇ ಇದ್ದ ಪ್ರಚಾರದ ಸರಕಿನ ಸಂಗತಿಗಳು ಮತ್ತು ವ್ಯಾಖ್ಯಾನಗಳಿಗೆ ಬದಲಿ ವ್ಯಾಖ್ಯಾನಗಳನ್ನು ಮತ್ತು ಚಿಂತನೆಗಳನ್ನು ನೀಡಿದವರು ಅವರು. ಅನಾರ್ಕಿಸಂ ಎಂದರೆ ‘ಬಾಂಬ್ ಎಸೆಯುವುದು’ ಎಂಬ ಜನಪ್ರಿಯ ಸಾಮಾನ್ಯ ನಂಬಿಕೆಯನ್ನು ಬದಲಿಸಿ, ಅಲ್ಲ, ಅದು ಪ್ರತಿ ಅಧಿಕಾರ ಕೇಂದ್ರಗಳ ಬಗ್ಗೆ ಅಪನಂಬಿಕೆ ಉಳಿಸಿಕೊಂಡು ಅವುಗಳ ಅಧಿಕಾರವನ್ನು ಸದಾ ಪ್ರಶ್ನಿಸುವುದು ಅನಾರ್ಕಿಸಂ ಎಂದು ಪ್ರತಿಪಾದಿಸಿ ಜನಪ್ರಿಯಗೊಳಿಸಿದವರು. ತಮ್ಮದೇ ದೇಶವಾದ ಅಮೆರಿಕ ಹೇಗೆ ತನ್ನ ಹಿತಾಸಕ್ತಿಗೋಸ್ಕರ ವಿಶ್ವದಲ್ಲಿ ಯುದ್ಧಗಳನ್ನು ಮಾಡುತ್ತಿದೆ, ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಹೇಗೆ ಹಲವು ದೇಶಗಳಲ್ಲಿ ಸರ್ಕಾರಗಳನ್ನು ಬದಲಿಸುವ ಕ್ಷಿಪ್ರಕ್ರಾಂತಿಯನ್ನು ಮಾಡುತ್ತದೆ, ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಒಂದೇ ಧ್ಯೇಯದಿಂದ ಹೇಗೆ ಉಳಿದೆಲ್ಲ ಆರ್ಥಿಕ ವ್ಯವಸ್ಥೆಗಳ ಬಗ್ಗೆ ಅಪಪ್ರಚಾರ ಮಾಡುವುದರಿಂದ ಹಿಡಿದು, ಸಿಐಎನಂತಹ ಸಂಸ್ಥೆಯನ್ನು ಹುಟ್ಟುಹಾಕಿ ಜಗತ್ತಿನಾದ್ಯಂತ ಅಸಮತೋಲನ ಸೃಷ್ಟಿಸಲು ಅವಿರತ ಪ್ರಯತ್ನಿಸುತ್ತಿದೆ ಎಂಬಂತಹ ಕಹಿಸತ್ಯಗಳನ್ನು ತಮಗೆ ಲಭ್ಯವಿದ್ದ ಎಲ್ಲ ವೇದಿಕೆಗಳಲ್ಲಿಯೂ ನಿರ್ಭಿಡೆಯಿಂದ ನುಡಿದವರು. ಆ ನಿಟ್ಟಿನಲ್ಲಿ ‘ಅಧಿಕಾರಕ್ಕೆ – ಪ್ರಭುತ್ವಕ್ಕೆ ಸತ್ಯ ನುಡಿಯಬಲ್ಲ’ ದಿಟ ಚಿಂತಕ ನೋಮ್ ಚಾಮ್‍ಸ್ಕಿ. ಭಾಷೆಯ ಬಗೆಗಂತೂ ಚಾಮ್‍ಸ್ಕಿಯವರ ಸಂಶೋಧನೆಗಳು ಭಾಷಾಶಾಸ್ತ್ರದ ದಿಕ್ಕನ್ನೇ ಬದಲಿಸಿದೆ.

ಚೈನಾದಲ್ಲಿ ಪ್ರಭುತ್ವದ ಬಗ್ಗೆ ಒಂದು ಹಳೆಯ ದೃಷ್ಟಾಂತ ಕಥೆಯಿದೆ. ಒಮ್ಮೆ ಕನ್ಫ್ಯೂಶಿಯಸ್ ಮತ್ತು ಶಿಷ್ಯರು ಕಾಡೊಂದರ ಮೂಲಕ ಹಾದುಹೋಗುವಾಗ, ಅಲ್ಲಿ ಮಹಿಳೆಯೊಬ್ಬಳು ರೋದಿಸುತ್ತಿದ್ದನ್ನು ಕಂಡರಂತೆ. ಶಿಷ್ಯರು ವಿಚಾರಿಸಲು ಆಕೆ, ಈ ಕಾಡಿನಲ್ಲಿ ಒಂದು ಹುಲಿ ಇದೆ ಅದು ಕಳೆದ ವರ್ಷ ನನ್ನ ಮಗನನ್ನು ಹಿಡಿದು ತಿಂದು ಸಾಯಿಸಿತು, ಈಗ ನನ್ನ ಗಂಡನನ್ನು ಹಿಡಿದು ಕೊಂದಿತು ಎಂದು ನುಡಿದು ದುಃಖಿಸಿದಳಂತೆ. ಅದಕ್ಕೆ ಕನ್ಫ್ಯೂಶಿಯಸ್, ಅಲ್ಲಮ್ಮ ಹಾಗಾದರೆ ನೀನು ಈ ಕಾಡಿನಲ್ಲಿ ವಾಸ ಮಾಡುವುದಕ್ಕಿಂತ ನಾಡಿಗೆ ಬರಬಾರದೇಕೆ ಎಂದು ಪ್ರಶ್ನಿಸಿದ್ದಕ್ಕೆ ಅಯ್ಯೋ ಅಲ್ಲಿ ಸರ್ಕಾರ (ಪ್ರಭುತ್ವ) ಇದೆ ಎಂದು ಹೇಳಿ ಬೆಚ್ಚಿಬಿದ್ದಳಂತೆ. ಕೊಲ್ಲುವ ಹುಲಿಗಿಂತಲೂ ಕ್ರೂರ ಪ್ರಭುತ್ವ ಎಂಬ ಪ್ರಾಚೀನವಾದ ನಂಬಿಕೆಯನ್ನು ಇಂದಿಗೂ ಪ್ರಭುತ್ವಗಳು ಉಳಿಸಿಕೊಂಡು ಬಂದಿವೆ. ಪ್ರಜಾಪ್ರಭುತ್ವಗಳೂ ಅದಕ್ಕೆ ಹೊರತಲ್ಲ. ಜಗತ್ತಿನ ಪ್ರಾಚೀನ ಪ್ರಜಾಪ್ರಭುತ್ವಗಳಲ್ಲಿ ಒಂದಾದ ಅಮೆರಿಕದ ದೌರ್ಜನ್ಯಗಳನ್ನು ಜಗತ್ತಿಗೆ ಧೈರ್ಯವಾಗಿ ಹೇಳಿದ ಕೆಲವೇ ವ್ಯಕ್ತಿಗಳಲ್ಲಿ ನೋಮ್ ಚಾಮ್‍ಸ್ಕಿ ಪ್ರಮುಖರು.

ಈಗ 91 ವಯಸ್ಸಿನ ನೋಮ್ ಚಾಮ್‍ಸ್ಕಿ ಅವರನ್ನು ಕಳೆದ ವಾರ ನಡೆಯುತ್ತಿದ್ದ ಟಾಟಾ ಲಿಟ್ ಲೈವ್ ಎಂಬ ಸಾಹಿತ್ಯದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ನೋಮ್ ಚಾಮ್‍ಸ್ಕಿ ಅವರ ಇತ್ತೀಚಿನ ಪುಸ್ತಕ ‘ಇಂಟರ್‌ನ್ಯಾಷನಲಿಸಂ ಆರ್ ಎಕ್ಸ್ಟಿನ್ಶನ್’ ಬಗ್ಗೆ ಅವರು ಟ್ರೈಕಾಂಟಿನೆಂಟಲ್ ಸಾಮಾಜಿಕ ಸಂಶೋಧನಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ವಿಜಯ್ ಪ್ರಶಾದ್ ಜೊತೆಗೆ ಚರ್ಚೆ ನಡೆಸಬೇಕಿತ್ತು. ಆದರೆ ಚರ್ಚೆ ಆರಂಭವಾಗಬೇಕಿದ್ದ ಕೆಲವೇ ಗಂಟೆಗಳ ಮೊದಲು ‘ಅನಿರೀಕ್ಷಿತ ಸನ್ನಿವೇಶಗಳಿಂದ’ ಗೋಷ್ಠಿ ರದ್ದಾಗಿರುವುದರ ಬಗ್ಗೆ ಅವರಿಬ್ಬರಿಗೂ ಈಮೇಲ್ ಕಳುಹಿಸಲಾಯಿತು. ಚಿಂತಕರ ಮೇಲೆ ಸೆನ್ಸಾರ್ ಭೂತ ದಾಳಿ ಮಾಡಿತ್ತು. ಅದಕ್ಕೂ ಮುಂಚೆ ನಡೆದಿದ್ದ ಚರ್ಚೆಗಳೂ ಇಲ್ಲಿ ಮುಖ್ಯ.

ಟಾಟಾ ಲಿಟ್ ಲೈವ್‍ನಲ್ಲಿ ಚಾಮ್‍ಸ್ಕಿ ಭಾಗವಹಿಸುವುದರ ಬಗ್ಗೆ ತಿಳಿದ ಮೇಲೆ, ಆ ವೇದಿಕೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿ ಹಲವು ಸಾಮಾಜಿಕ ಕಾರ್ಯಕರ್ತರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಹೇಗೆ ಟಾಟಾ ಸಮೂಹದ ಸಂಸ್ಥೆಗಳು ಪ್ರಭುತ್ವದ ಸಹಾಯ ಪಡೆದು, ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಆದಿವಾಸಿ ಮತ್ತು ದಲಿತರ ಹಕ್ಕುಗಳ ಮೇಲೆ ಪ್ರಹಾರ ಮಾಡಿವೆ ಮತ್ತು ತನ್ನ ‘ಇಮೇಜ್’ಅನ್ನು ಉಳಿಸಿಕೊಳ್ಳಲು ಹಲವು ಮಾಧ್ಯಮಗಳ ಮೂಲಕ, ಹಲವು ಚಾರಿಟಿ ಸಂಸ್ಥೆಗಳ ಮೂಲಕ ‘ಸಮ್ಮತಿಯ ಉತ್ಪಾದನೆ’ ಮಾಡುತ್ತಿವೆ ಎಂಬ ಅಂಶವನ್ನು ಆ ಪತ್ರದಲ್ಲಿ ವಿಶದಪಡಿಸಲಾಗಿತ್ತು. ಯಾವುದಾದರೂ ಸ್ವತಂತ್ರ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ನೀವು ಮಾತನಾಡುವುದಾದರೆ ನಮ್ಮ ಅಭ್ಯಂತರವಿಲ್ಲ ಆದರೆ ಟಾಟಾ ಪ್ರಾಯೋಜಿತ ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ಹಿಂದೆಸರಿಯುವುದಕ್ಕೆ ಕೇಳಿಕೊಂಡು ಬರೆದ ಪತ್ರ ‘ಕೌಂಟರ್‌ಕರೆಂಟ್ಸ್’ನಲ್ಲೂ ಪ್ರಕಟವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಾಮ್‍ಸ್ಕಿ ಮತ್ತು ವಿಜಯ ಪ್ರಶಾದ್, ತಾವು ಕಾರ್ಯಕ್ರಮದಲ್ಲಿ ಮುಂದುವರೆಯುವುದಾಗಿಯೂ, ಮತ್ತು ತಮ್ಮ ಗೋಷ್ಠಿಯನ್ನು ಇಂತಹ ಕಾರ್ಪೊರೆಟ್‍ಗಳ ಮತ್ತು ನಿರ್ದಿಷ್ಟವಾಗಿ ಟಾಟಾದಂತಹ ಸಂಸ್ಥೆಗಳ ಬಗ್ಗೆ ಅವರು ಬರೆಯುವ ಹೇಳಿಕೆಯನ್ನು ಓದುವುದರೊಂದಿಗೆ ಪ್ರಾರಂಭಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಹೀಗೆ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿದ್ದ ಚಾಮ್‍ಸ್ಕಿ ಮತ್ತು ವಿಜಯ ಪ್ರಶಾದ್ ಅವರುಗಳ ಗೋಷ್ಠಿಯನ್ನು ರದ್ದುಗೊಳಿಸಿದ್ದರ ಬಗ್ಗೆ ತಡವಾಗಿ ಆ ಉತ್ಸವದ ಸಂಸ್ಥಾಪಕ ಮತ್ತು ನಿರ್ದೇಶಕರಾದ ಅನಿಲ್ ಧಾರ್ಕರ್ ಪ್ರತಿಕ್ರಿಯಿಸಿದ್ದಾರೆ. ‘ಈ ಸಾಹಿತ್ಯ ಉತ್ಸವದ ಸಮಗ್ರತೆಯನ್ನು ರಕ್ಷಿಸಲು’ ಹೀಗೆ ಮಾಡಬೇಕಾಯಿತು ಅಂದರಲ್ಲದೇ, ಆ ಗೋಷ್ಠಿಯ ಚರ್ಚೆಯ ಉದ್ದೇಶ ಟಾಟಾ ಸಂಸ್ಥೆಯ ಬಗ್ಗೆ ಚರ್ಚಿಸುವುದು ಆಗಿರಲಿಲ್ಲವಾದ್ದರಿಂದ ಹೀಗೆ ಮಾಡಬೇಕಾಯಿತು ಎಂಬ ಸ್ಪಷ್ಟೀಕರಣ ನೀಡಿದ್ದಾರೆ.

ಪ್ರಭುತ್ವಗಳ ಬಗ್ಗೆ – ದೌರ್ಜನ್ಯ ನಡೆಸುವ, ಯುದ್ಧಗಳನ್ನು ಉತ್ಪಾದಿಸುವ ದೈತ್ಯ ಕಾರ್ಪೊರೆಟ್ ಸಂಸ್ಥೆಗಳ ಬಗ್ಗೆ ತಮ್ಮ ವಿರೋಧವನ್ನು ಸದಾ ಜಾರಿಯಲ್ಲಿಟ್ಟುಕೊಂಡು ಬಂದಿರುವ ಚಿಂತಕ ಚಾಮ್‍ಸ್ಕಿ ಅವರಿಗೆ ತೋರಿರುವ ಈ ಅಗೌರವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಇಂತದ್ದಕ್ಕೆ ಆ ಸಾಹಿತ್ಯ ಉತ್ಸವದವರು ಅಧಿಕೃತತೆಯನ್ನು ಕೂಡ ದೊರಕಿಸಿಕೊಳ್ಳುವಷ್ಟು ಶಕ್ತರೇ! ಅದನ್ನೇ ಅಲ್ಲವೇ ಚಾಮ್‍ಸ್ಕಿ ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್ ಅಂದದ್ದು. ಅದರ ಬಗ್ಗೆ ಜಾಗ್ರತೆ ವಹಿಸುವಂತಲೇ ಅವರು ನಮ್ಮನ್ನೆಲ್ಲಾ ಎಚ್ಚರಿಸುತ್ತಾ ಬಂದಿದ್ದಾರೆ. ಅಂದರೆ ಈ ವಿದ್ಯಮಾನ ಎಚ್ಚರಿಕೆಯ ಗಂಟೆಯಾಗಬೇಕಲ್ಲವೇ? ಇಂತಹ ಕಾರ್ಪೊರೆಟ್ ಪ್ರಾಯೋಜಿತ ಕಾರ್ಯಕ್ರಮಗಳು ಒಂದು ಪ್ರಜಾಸತ್ತಾತ್ಮಕವಾದ ಪ್ರತಿರೋಧವನ್ನು ಸಹಿಸಿಕೊಳ್ಳುವುದಿಲ್ಲ ಎಂದಾದರೆ ಪ್ರಭುತ್ವಗಳ ಆಟಾಟೋಪಗಳು ಎಂತಹದ್ದಾಗಿರುತ್ತವೆ ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ. ಆ ಉತ್ಸವದಲ್ಲಿ ಈ ಗೋಷ್ಠಿ ರದ್ದಾದ ನಂತರದಲ್ಲಿ ನಡೆದ ಗೋಷ್ಠಿಗಳಲ್ಲಿ ಉಳಿದವರಾರೂ ಈ ವಿದ್ಯಮಾನದ ಬಗ್ಗೆ ಧ್ವನಿ ಎತ್ತಿದ ಬಗ್ಗೆ ಯಾವುದೇ ವರದಿಗಳು ಇಲ್ಲ. ಸದಾ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಚಾಮ್‍ಸ್ಕಿ ಅವರ ತಿಳಿವಳಿಕೆ ಇಂದಿನ ಬರಹಗಾರರ, ಕವಿಗಳ, ಚಿಂತಕರ ಬರಹಗಳಲ್ಲಿ-ಮಾತುಗಳಲ್ಲಿ ಪ್ರತಿಫಲಿಸದಿದ್ದಾಗ ಅದು ಕಾಲಧರ್ಮವನ್ನು ಪ್ರತಿಫಲಿಸುತ್ತಿದೆ ಎಂದೇ ತಿಳಿಯಬೇಕಿದೆ. ಆ ಕಾಲಧರ್ಮ ಸರ್ವಾಧಿಕಾರಿತನವನ್ನು ಪ್ರತಿನಿಧಿಸುತ್ತಿದೆ ಎಂದು ಮತ್ತೆ ನೆನಪಿಸಬೇಕಿಲ್ಲ ಅಲ್ಲವೇ?

ನೈಜೀರಿಯನ್ ಕವಿ ಮತ್ತು ಕಾದಂಬರಿಕಾರ ಬೆನ್ ಓಕ್ರಿ ‘ಫೇಬಲ್ಸ್ ಆರ್ ಮೇಡ್ ಆಫ್ ದಿಸ್’ ಎನ್ನುವ ಪ್ರಬಂಧದಲ್ಲಿ ಹೀಗೆನ್ನುತ್ತಾನೆ: ‘ಬರಹಗಾರ ಮುಚ್ಚಳವನ್ನು ಒಡೆಯುತ್ತಾನೆ. ತೈಲ ಸಂಸ್ಥೆಗಳು ಭೂಮಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ; ನಾಡನ್ನು ನಾಶ ಮಾಡುತ್ತಿರುವ ಬಗ್ಗೆ ಧ್ವನಿಯೆತ್ತುತ್ತಾನೆ. ಬೀಳಿಸಿಕೊಂಡು ಮೇಲೆ ಹರಿದು ಹೋಗುವ ಮತ್ತು ಈಗ ಬೀದಿಗಳು ಮತ್ತು ಓಣಿಗಳಲ್ಲಿ ಪ್ರವಾಹದಂತೆ ಬಿದ್ದು ಹರಿಯುವ ಅನ್ಯಾಯಗಳ ಬಗ್ಗೆ ಧ್ವನಿಯೆತ್ತುತ್ತಾನೆ; ಫ್ರಜಾಪ್ರಭುತ್ವದ ಸಾವಿನ ಬಗ್ಗೆ, ವಿಘಟನೆಯ ಮತ್ತು ನಾಗರಿಕ ಯುದ್ಧದ ಪ್ರಾರಂಭದ ಬಗ್ಗೆ ಗಟ್ಟಿಯಾಗಿ ಕಿರುಚಿ ಹೇಳುತ್ತಾನೆ. ತನಗೊದಗುವ ದೈತ್ಯ ಹತಾಶೆಗೆ ಬರಹಗಾರ ಕೆಲವೊಮ್ಮೆ ಪೆನ್ನನ್ನೂ ಬದಿಗಿಟ್ಟು, ಒಪ್ಪಿಕೊಳ್ಳಬಾರದ ಸಂಗತಿಗಳ ಬಗ್ಗೆ ಗಮನ ಸೆಳೆಯಲು ಮತ್ತು ಎಚ್ಚರ ಮೂಡಿಸಲು ಅನ್ಯ ಮಾರ್ಗಗಳನ್ನು ಹಿಡಿಯುತ್ತಾನೆ – ಅವರು ಸಾಮಾಜಿಕ ಕಾರ್ಯಕರ್ತರಾಗುತ್ತಾರೆ, ಅವರು ಯೋಧರಾಗುತ್ತಾರೆ, ಅಥವಾ ತಮ್ಮ ಆಕ್ರೋಶದ ವಿಸ್ತರಣೆಯಂತೆ ರಾಜಕೀಯವನ್ನು ಅರಸುತ್ತಾರೆ’.

ಓಕ್ರಿ ಇದನ್ನು ಮತ್ತೊಬ್ಬ ನೈಜೀರಿಯನ್ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಕೆನ್ ಸಾರೋ-ವೈವಾ ಅವರಿಗಾಗಿ ಬರೆದಿದ್ದರೂ ಭಾರತದ ಚಿಂತಕಿ-ಲೇಖಕಿ ಅರುಂಧತಿ ರಾಯ್ ಅವರಿಗೂ ಇದು ಅನ್ವಯಿಸುತ್ತದೆ. ಚಾಮ್‍ಸ್ಕಿ ಅಮೆರಿಕ ಪ್ರಭುತ್ವವನ್ನು ಬಯಲಿಗೆಳೆದಂತೆಯೇ, ಭಾರತ ಪ್ರಭುತ್ವವನ್ನು ಸದಾ ಪ್ರಶ್ನಿಸುವ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಲೇಖಕಿ ರಾಯ್. ಅವರ ರಾಜಕೀಯ ಪ್ರಬಂಧಗಳಲ್ಲಿ ನಿಖರತೆ ಮತ್ತು ಪ್ರಖರತೆಯ ಜೊತೆಗೆ ಅವರ ಸೃಜನಶೀಲ ಸಾಹಿತ್ಯದಲ್ಲಿ ಕಾಣುವ ಲಿರಿಕಲ್ ಗುಣವೂ ಸೇರಿದೆ. ತಮ್ಮ ಹಲವು ಪ್ರಬಂಧಗಳ ಮೂಲಕ ದಮನಿತರ, ದುರ್ಬಲ ಸಮುದಾಯಗಳ ನೋವು ಮತ್ತು ಹೋರಾಟಗಳನ್ನು ಮುಖ್ಯ ವೇದಿಕೆಗೆ ತಂದವರು ಮತ್ತು ಪರಿಚಯಿಸಿದವರು ರಾಯ್. ಅಂತಹುದೇ ಒಂದು ಪ್ರಬಂಧ ‘ವಾಕಿಂಗ್ ವಿತ್ ಕಾಮ್ರೇಡ್’. ಛತ್ತೀಸ್‍ಘಡದ ದಾಂತೇವಾಡ ಕಾಡಿನಲ್ಲಿ ಮಾವೋವಾದಿಗಳನ್ನು ಸಂದರ್ಶಿಸಿ, ಅವರ ಹೋರಾಟಗಳ ಬಗ್ಗೆ ಬರೆದ ಪ್ರತ್ಯಕ್ಷ ವರದಿ-ಪ್ರಬಂಧ ಅದಾಗಿತ್ತು. ಆದಿವಾಸಿಗಳ ನಾಡಿನಲ್ಲಿ ಗಣಿಗಾರಿಕೆ ಸಂಸ್ಥೆಗಳು ನಡೆಸುವ ದೌರ್ಜನ್ಯ, ಮತ್ತು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪ್ರಭುತ್ವದ ಜತೆಗೂಡಿ ಸೃಷ್ಟಿಸಿಕೊಂಡಿದ್ದ ಅನಧಿಕೃತ ಪಡೆ ಸಲ್ವಾ ಜುಡಾಮ್ ಇತ್ಯಾದಿಗಳ ಬಗ್ಗೆ ಜನಸಾಮಾನ್ಯರಿಗೆ ಮನದಟ್ಟು ಮಾಡಿದವರು ಅವರು.

ತಮಿಳುನಾಡಿನ ತಿರುನೆಲ್ವೇಲಿಯ ಮನೋನ್ಮಣಿಯನ್ ಸುಂದರನಾರ ವಿಶ್ವವಿದ್ಯಾಲಯದಲ್ಲಿ, ಆರ್‌ಎಸ್‍ಎಸ್‍ನ ವಿದ್ಯಾರ್ಥಿ ಸಂಸ್ಥೆ ಎಬಿವಿಪಿಯ ಹುಚ್ಚಾಟಗಳಿಗೆ ಸೊಪ್ಪು ಹಾಕಿ, ದೇಶದ್ರೋಹಿ ಸಾಹಿತ್ಯ ಎಂಬ ತಥಾಕಥಿತ ಆರೋಪದ ಮೇಲೆ ಹಲವು ವರ್ಷಗಳಿಂದ ಸ್ನಾತಕೋತ್ತರ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದ ‘ವಾಕಿಂಗ್ ವಿತ್ ಕಾಮ್ರೇಡ್’ ಅನ್ನು ತೆಗೆದುಹಾಕಲಾಗಿದೆ. ಬಹುಸಂಖ್ಯಾತರ ಹುಸಿ ರಾಷ್ಟ್ರೀಯತೆ ಮತ್ತೆ ಗಹಗಹಿಸಿ ನಕ್ಕಿದೆ.

ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸಲು ಪ್ರೇರೇಪಿಸಿದವರನ್ನು ಬಹುತೇಕ ಸಮಯಗಳಲ್ಲಿ ಭೌತಿಕವಾಗಿ ಹಳಿಯುವುದು, ಅದು ಸಾಧ್ಯವಾಗದೇ ಇದ್ದಾಗ ಅವರ ಚಿಂತನೆಗಳ ಮೇಲೆ ಪ್ರಹಾರ ನಡೆಸುವುದು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ಇಂತಹ ಚಿಂತಕರ ಚಿಂತನೆಗಳನ್ನು ಹೆಚ್ಚು ಪ್ರಚಾರ ಮಾಡುವುದು, ಯುವ ಸಮೂಹಕ್ಕೆ ತಲುಪುವಂತೆ ನೋಡಿಕೊಳ್ಳುವ ಕೆಲಸವನ್ನು ಇನ್ನಷ್ಟು ಹುರುಪು, ಚೈತನ್ಯ ಮತ್ತು ಕ್ರಿಯಾಶೀಲತೆಯಿಂದ ಮಾಡಬೇಕಿದೆ.

ಸಂಬಂಧಿತ ವಿಡಿಯೋ ನೋಡಿ.

ಗುರುಪ್ರಸಾದ್ ಡಿ. ಎನ್

ಕಾರ್ಯನಿರ್ವಾಹಕ ಸಂಪಾದಕ


ಇದನ್ನೂ ಓದಿ: ಭರದಿಂದ ಸಾಗಿದ ತಯಾರಿಗಳು: ನವೆಂಬರ್ 26-27ಕ್ಕೆ ದೆಹಲಿ ಚಲೋ ನಿಶ್ಚಿತ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...

ಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬ ಹತ್ತಿರ ಬರುತ್ತಿದ್ದಂತೆ, ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ವ್ಯಾಪಾರಿಗಳು,...

ಪ.ಬಂಗಾಳ: ಮಮತಾ ಸರ್ಕಾರ ಜಾರಿ ಮಾಡಿದ್ದ OBC ಮೀಸಲಾತಿಯನ್ನು ಕಿತ್ತೆಸೆದ ಸುವೇಂದು ನೇತೃತ್ವದ ಬಿಜೆಪಿ ಸರ್ಕಾರ

ಪಶ್ಚಿಮ ಬಂಗಾಳದ ಒಬಿಸಿ (ಇತರ ಹಿಂದುಳಿದ ವರ್ಗಗಳು) ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯಗಳನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹಿಂದೆ...

ಸಾಮಾಜಿಕ ಹೋರಾಟಗಾರ ‘ಫರಿದುಲ್ ಇಸ್ಲಾಂ’ರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದ ಕೋಲ್ಕತ್ತಾ ಪೊಲೀಸರು

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಹತ್ತು ದಿನಗಳು ಕಳೆಯುವಷ್ಟರಲ್ಲೇ, ಸರ್ಕಾರದ ಆಡಳಿತವನ್ನು ಪ್ರಶ್ನಿಸುವವರ ಹಾಗೂ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ ಎಂಬ...

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...