ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿರುವ ಅಸ್ಸಾಂನಲ್ಲಿ ಬಿಜೆಪಿ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಕಾರ್ಯತಂತ್ರ ಆರಂಭಿಸಿದೆ. ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಎಐಯುಡಿಎಫ್ ಪಕ್ಷಗಳು ಮೊಘಲರಿದ್ದಂತೆ ಎಂದಿದ್ದಾರೆ.
ಅಸ್ಸಾಂನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಎರಡು ಪಕ್ಷಗಳನ್ನು ಸೋಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ವಿರುದ್ಧ ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮತ್ತು ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.
ಇದನ್ನೂ ಓದಿ: ಪ್ರಧಾನಿಯನ್ನು ಪ್ರೀತಿ, ಅಹಿಂಸೆಯಿಂದ ಸೋಲಿಸುತ್ತೇವೆ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ
“ಕಾಂಗ್ರೆಸ್ ಬದ್ರುದ್ದೀನ್ ಅಜ್ಮಲ್ ಅವರ ಅನುಯಾಯಿಗಳಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಮತ್ತು ಎಐಯುಡಿಎಫ್ ಅಸ್ಸಾಂ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ಇಂದು ಕಾಂಗ್ರೆಸ್ ಅಥವಾ ಬದ್ರುದ್ದೀನ್ ಅವರ ಪಕ್ಷವು ಮೊಘಲರನ್ನು ಮಾತ್ರ ಪ್ರತಿನಿಧಿಸುತ್ತದೆ. ಅವರು ನಮ್ಮನ್ನು ಪ್ರತಿನಿಧಿಸುವುದಿಲ್ಲ” ಎಂದು ಯುವಮೋರ್ಚಾ ಸಭೆಯಲ್ಲಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಅಸ್ಸಾಂನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಮತ್ತು ಹಿಂದುತ್ವದ ಸ್ತಂಭವನ್ನು ಬಲಪಡಿಸಲು ನಾವು ಈ ಎಲ್ಲ ಮೊಘಲರನ್ನು ಸೋಲಿಸಬೇಕಾಗಿದೆ” ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು 2016 ರ ವಿಧಾನಸಭಾ ಚುನಾವಣೆಯನ್ನು “ಸಾರೈಘಾಟ್ನ (Saraighat) ಕೊನೆಯ ಯುದ್ಧ” ಎಂದು ಬಿಜೆಪಿ ಬಣ್ಣಿಸಿತ್ತು. 1671 ರಲ್ಲಿ ನಡೆದ ಸಾರೈಘಾಟ್ ಕದನದಲ್ಲಿ, ಅಹೋಮ್ ಜನರಲ್ ಲಚಿತ್ ಬೊರ್ಫುಕನ್, 1 ನೇ ರಾಜಾ ರಾಮ್ಸಿಂಗ್ ನೇತೃತ್ವದ ಮೊಘಲ್ ಪಡೆಗಳನ್ನು ಸೋಲಿಸಿದ್ದರು.
ಅಸ್ಸಾಂ ರಾಜ್ಯದ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ರಕ್ಷಿಸಲು ಕಾಂಗ್ರೆಸ್ ಈ ಕ್ಷಣದಲ್ಲಿ ಯಾವುದೇ ನೀತಿಯನ್ನು ಹೊಂದಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ಚುನಾವಣೆಗೆ ಮತದಾನ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಕುರಿತು ಎಬಿಪಿ-ಸಿ- ಓಟರ್ ಸಮೀಕ್ಷೆ ಹೇಳಿದ್ದೇನು…ಇಲ್ಲಿದೆ ವಿವರ