ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕಗಳ ಪ್ರಕಟಣೆ, ಪ್ರಸಾರ ಮತ್ತು ಮಾರಾಟವನ್ನು ತಡೆಯಿಡಿಯಲು ಸಾಧ್ಯವಿಲ್ಲ ಎಂದಿರುವ ದೆಹಲಿ ಕೋರ್ಟ್ ಈ ಕುರಿತು ಹಿಂದುತ್ವವಾದಿ ನಾಯಕನೊಬ್ಬ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದೆ.
ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತ ಎಂಬುವವರು ಹಿಂದೂ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಸಲ್ಮಾನ್ ಖುರ್ಷಿದ್ ಅವರ “ಸನ್ರೈಸ್ ಓವರ್ ಅಯೋಧ್ಯಾ: ನೇಷನ್ವುಡ್ ಇನ್ ಅವರ್ ಟೈಂ” ಪುಸ್ತಕ ಪ್ರಕಟಣೆ ಮತ್ತು ಮಾರಾಟವನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪುಸ್ತಕ ಬಿಡುಗಡೆ ಮಾಡಿರುವುದು ರಾಜ್ಯದ ಅಲ್ಪಸಂಖ್ಯಾತರ ಮತಗಳನ್ನು ಧ್ರುವೀಕರಣಗೊಳಿಸುವ ಮತ್ತು ಗಳಿಸುವ ಗುರಿಯನ್ನು ಹೊಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಕರಣವನ್ನು ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರೀತಿ ಪರೇವಾರವರು, “ಅರ್ಜಿದಾರರ ವಾದದಂತೆ ಪ್ರಾಥಮಿಕ ಸಾಕ್ಷಿಯಾಗಲಿ ಇತರ ಸಾಕ್ಷಿಗಳು ಪೂರಕವಾಗಿಲ್ಲ. ಹಾಗಾಗಿ ಪುಸ್ತಕಕ್ಕೆ ತಡೆಯಾಜ್ಞೆ ಸಾಧ್ಯವಿಲ್ಲ. ಅದು ಪ್ರಕಾಶಕರಿಗೆ ಹಣಕಾಸಿನ ತೊಂದರೆಗೆ ಕಾರಣವಾಗುತ್ತದೆ ಮತ್ತು ಲೇಖಕರ ಭಾಷಣ ಮತ್ತು ಅಭಿವ್ಯಕ್ತಿಯ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದಿದ್ದಾರೆ.
ಸಲ್ಮಾನ್ ಖುರ್ಷಿದ್ ರವರು ತಮ್ಮ “ಸನ್ರೈಸ್ ಓವರ್ ಅಯೋಧ್ಯಾ: ನೇಷನ್ವುಡ್ ಇನ್ ಅವರ್ ಟೈಂ” ಎಂಬ ಪುಸ್ತಕವನ್ನು ನವೆಂಬರ್ 10 ರಂದು ಬಿಡುಗಡೆ ಮಾಡಿದ್ದರು. ಈ ಪುಸ್ತಕದ ಬಗ್ಗೆ ಬಿಜೆಪಿ ಪಕ್ಷವು ಅಪಸ್ವರವೆತ್ತಿತ್ತು. ಇದು ಹಿಂದುತ್ವಕ್ಕೆ ಮಾಡುವ ಅವಮಾನ ಎಂದು ಟೀಕಿಸಿತ್ತು. ಈ ಕುರಿತು ಖುರ್ಷಿದ್ ವಿರುದ್ಧ ದೂರು ಸಹ ದಾಖಲಾಗಿತ್ತು.
ಖುರ್ಷಿದ್ ತಮ್ಮ ಪುಸ್ತಕದಲ್ಲಿ “ಹಿಂದಿನ ಋಷಿಗಳು, ಸಂತರು ಹೇಳಿದ್ದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂ ಧರ್ಮವಾದವನ್ನು ಇಂದಿನ ಉಗ್ರ ಹಿಂದುತ್ವವು ಪಕ್ಕಕ್ಕೆ ತಳ್ಳಿದೆ. ಹಿಂದುತ್ವವೆಂಬುದು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಮಾನದಂಡಗಳಲ್ಲಿಯೂ ISIS ಮತ್ತು ಬೊಕೊ ಹರಾಮ್ನಂತಹ ಜಿಹಾದಿಸ್ಟ್ ಇಸ್ಲಾಂ ಗುಂಪುಗಳನ್ನು ಹೋಲುವ ರಾಜಕೀಯ ಆವೃತ್ತಿಯಾಗಿದೆ” ಎಂದು ಬರೆದಿದ್ದರು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣಕ್ಕಾಗಿಯೇ ಹಲವು ಹಿಂದುತ್ವವಾದಿಗಳು ಸಲ್ಮಾನ್ ಖುರ್ಷಿದ್ರವರ ನೈನಿತಾಲ್ನಲ್ಲಿನ ಮನೆಗೆ ಬೆಂಕಿ ಹಚ್ಚಿದ್ದರು.
ಪ್ರಕರಣದ ಕುರಿತು ರಾಕೇಶ್ ಕಪಿಲ್ ಸೇರಿ 20 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಐ (ಕುಮೌನ್) ನೀಲೇಶ್ ಆನಂದ್ ಹೇಳಿದ್ದಾರೆ.
ಅರ್ಜಿ ಕುರಿತು ನ್ಯಾಯಾಧೀಶರು “ಅರ್ಜಿದಾರರು ಯಾವಾಗಲೂ ಪುಸ್ತಕದ ವಿರುದ್ಧ ಪ್ರಚಾರ ಮಾಡಬಹುದು ಮತ್ತು ಅವರ ಭಾವನೆಗಳಗೆ ಘಾಸಿಗೊಳಿಸಿರುವ ಆಪಾದಿತ ಪ್ಯಾರಾಗಳಿಗೆ ಖಂಡನೆಯನ್ನು ಸಹ ಪ್ರಕಟಿಸಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯಾ ಪುಸ್ತಕ ಬಿಡುಗಡೆ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ.