Homeಅಂಕಣಗಳುಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

- Advertisement -
- Advertisement -

ಗೋವು ತಿಂದು ಗೋವಿನಂತಾದವನು
ನಿಮ್ಮಂತೆ ಮನುಷ್ಯರನ್ನು ಕೊಂದು
ಮನುಷ್ಯನಾಗಲಾರೆ

ಇದು ಕವಿ ಎನ್. ಕೆ. ಹನುಮಂತಯ್ಯನವರ ಕವಿತೆಯೊಂದರ ಸಾಲುಗಳು. ಈ ಸಾಲುಗಳು 2002ರಲ್ಲಿ ಹರ್‍ಯಾಣದ ಜಜ್ಜಾರಿನಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಪ್ರತಿರೋಧವಾಗಿ ಕಾಣುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ದಲಿತರಿಗೆ ಒಪ್ಪಿಸಿ ಅಸ್ಪೃಶ್ಯತೆಗೊಂದು ಕಾರಣ ಹುಡುಕಿಕೊಂಡ ಹಿಂದೂ ಮೇಲ್ಜಾತಿಗಳು ಮುಸ್ಲಿಮರನ್ನು ಗುರಿ ಮಾಡಿಕೊಳ್ಳುವ ಮುಂಚೆ ದಲಿತರನ್ನು ಗುರಿಯಾಗಿಸಿಕೊಂಡಿದ್ದರು. ಅಂತಹ ಲಿಂಚಿಂಗ್ ಪ್ರಕರಣಕ್ಕೆ ಉದಾಹರಣೆ ’ಜಜ್ಜಾರ್ ಫೈಲ್’ ಆಗಿದೆ.

ಅದು 2002ನೇ ಇಸವಿಯ ಅಕ್ಟೋಬರ್ 15, ದಸರಾ ನಡೆಯುತ್ತಿದ್ದ ದಿನವದು. ಹರ್‍ಯಾಣದ ಜಜ್ಜಾರ್‌ನಲ್ಲಿಯೂ ಅಂದು ಸಂಜೆ ದಸರಾ ಮೆರವಣಿಗೆಯನ್ನು ಮುಗಿಸಿಕೊಂಡು ಮರಳುತ್ತಿದ್ದ ಒಂದಷ್ಟು ’ವಿಶ್ವ ಹಿಂದೂ ಪರಿಷತ್’ ಕಾರ್ಯಕರ್ತರು ಏಕಾಏಕಿ ಪೊಲೀಸ್ ಠಾಣೆಗೆ ಐವರು ದಲಿತರನ್ನು ಕರೆದುತಂದರು. ಆ ಐವರ ಮೇಲೆ ಅವರು ಹೊರಿಸಿದ ಆರೋಪ, ಜೀವಂತ ದನವನ್ನು ಕೊಂದು ಅದರ ಚರ್ಮವನ್ನು ರಸ್ತೆ ಪಕ್ಕದಲ್ಲಿಯೇ ಸುಲಿಯುತ್ತಿದ್ದರು ಎಂಬುದಾಗಿದೆ. ಹೀಗೆ ಠಾಣೆಗೆ ಕರೆದುಕೊಂಡು ಬಂದ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಗುಂಪು ಆ ಐವರ ಮೇಲೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಅಲ್ಲಿಂದ ಆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿ ಹಿಂದೂ ಸಂಘಟನೆಯವರು ಮನೆಗೆ ಮರಳಿದ್ದರೆ ಇಂದು ಈ ಲೇಖನವನ್ನು ಬರೆಯಬೇಕಾಗಿಯೇ ಬರುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆ ಐವರು ದಲಿತರನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದುಕೊಂಡು ಬಂದ ಗುಂಪು ಥಳಿಸಿ, ಕ್ರೂರವಾಗಿ ಹಿಂಸಿಸಿ ಕೊಂದುಹಾಕಿತು.

ಆ ಐವರು ದಲಿತ ಯುವಕರಿಗೆ ಇನ್ನೂ 20 ತುಂಬಿರಲಿಲ್ಲ. ವೀರೆಂದರ್, ದಯಾನಂದ್, ತೋಟ ರಾಮ್, ರಾಜು ಮತ್ತು ಕೈಲಾಶ್ ಇವರೇ ಆ ನತದೃಷ್ಟ ದಲಿತ ಯುವಕರು. ಈ ಐವರ ಕೆಲಸ ಕಸಾಯಿ ಖಾನೆಯ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸುವುದು ಹಾಗೂ ಸತ್ತ ಪ್ರಾಣಿಗಳ ಚರ್ಮ ಸುಲಿದು ವ್ಯಾಪಾರ ಮಾಡುವುದು. ಈ ಕಾಯಕವನ್ನು ಸೊಹ್ನಾ ಪಂಚಾಯತ್ ಸಮಿತಿ ಹಾಗೂ ಆದರ್ಶ ಗೋಶಾಲೆಯು ಇವರಿಗೆ ಲೈಸೆನ್ಸ್ ನೀಡಿ ನಡೆಸುತ್ತಿತ್ತು. ಈ ಐವರು 35,000 ಹಣ ನೀಡಿ ಲೈಸೆನ್ಸ್ ಪಡೆದಿದ್ದರು. ಈ ಕಾಯಕವನ್ನು ಅವರ ಕುಟುಂಬ ಕಳೆದ 35 ವರ್ಷಗಳಿಂದ ಮಾಡಿಕೊಂಡು ಬರುತ್ತಿತ್ತು.

ಎಲ್ಲರಿಗೂ ತಿಳಿದಿರುವ ಸತ್ಯವೆಂದರೆ, ಸತ್ತ ಗೋವುಗಳ ಚರ್ಮವನ್ನು ದೂರದ ಕಾಡಿನಲ್ಲಿಯೋ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿಯೋ ಸುಲಿಯುತ್ತಾರೆ ಎಂಬುದು. ಆದರೆ ಅಕ್ಟೋಬರ್ 15ರ ಸಂಜೆ 6 ಗಂಟೆ ಸಮಯದಲ್ಲಿ ವ್ಯಾನ್ ಮೂಲಕ ಚರ್ಮವನ್ನು ಹೊತ್ತೊಯ್ಯುತ್ತಿದ್ದ ದಲಿತರನ್ನು ಅಡ್ಡಗಟ್ಟಿದ ವಿಹೆಚ್‌ಪಿಯವರಿಗೆ ದನದ ಚರ್ಮ ಇರುವುದು ಕಂಡುಬಂದಿದೆ. ಇದೇನು ಹೊಸ ಸುದ್ದಿಯಲ್ಲದಿದ್ದರೂ, ಉನ್ಮಾದದಲ್ಲಿದ್ದ ಗುಂಪಿಗೆ ಗಲಾಟೆ ಮಾಡಲು ಅಥವಾ ಗೋರಕ್ಷಕರಂತೆ ಪೋಸು ಕೊಡಲು ಅದಷ್ಟು ಸಾಕಾಗಿದೆ. ಥಳಿತದಲ್ಲಿ ಒಬ್ಬ ದಲಿತ ಅಲ್ಲಿಯೇ ಅಸುನೀಗಿದ್ದಾನೆ. ಆಗ ಈ ಪ್ರಕರಣಕ್ಕೆ ಗೋವನ್ನು ಕೊಂದು ಬಹಿರಂಗವಾಗಿ ಚರ್ಮ ಸುಲಿಯುತ್ತಿದ್ದವರನ್ನು ಥಳಿಸಲಾಗಿದೆ ಎಂಬ ಬಣ್ಣ ಹಚ್ಚಲಾಗಿದೆ. ನಂತರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಸಹ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹಲವು ಪತ್ರಿಕೆಗಳು ಸಾಕ್ಷಿ ಸಮೇತ ಸಾಬೀತುಮಾಡಿವೆ. ಪೊಲೀಸರು, ಬಹುದೊಡ್ಡ ಗುಂಪು ಬಂದು ಆ ಐವರನ್ನು ಎಳೆದೊಯ್ದಿತು; ನಾವು ಏನು ಮಾಡಲಾಗಲಿಲ್ಲ ಎಂದು ಕೋರ್ಟಿನಲ್ಲಿ ಉತ್ತರಿಸಿದ್ದಾರಾದರೂ ಪೊಲೀಸ್ ಸ್ಟೇಷನ್ನಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಂದೂಕುಗಳಿರಲಿಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅತ್ಯಂತ ನೋವು ತರುವ ಹಾಗೂ ಕಣ್ಣು ಕೆಂಪಗಾಗಿಸುವ ವಿಚಾರವೇನೆಂದರೆ ದಲಿತರನ್ನು ವಿಹೆಚ್‌ಪಿಯವರು ಥಳಿಸುವಾಗ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರೊಂದಿಗೆ ಡೆಪ್ಯೂಟಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಹ ಅಲ್ಲಿದ್ದರು! ಅವರೆಲ್ಲರ ಸಮ್ಮುಖದಲ್ಲಿಯೇ ಐವರು ದಲಿತರನ್ನು ಥಳಿಸಿದರು. ಅದೆಷ್ಟರ ಮಟ್ಟಿಗೆ ಥಳಿಸಿದರೆಂದರೆ ನೆಲದ ಮೇಲೆ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಮಾಯವಾಗಲು ವಾರಗಳೇ ಬೇಕಾದವಂತೆ. ಇಬ್ಬರ ಕಣ್ಣು ಕಿತ್ತರು. ಇಬ್ಬರ ಮುಖದ ಮೇಲೆ ಪೆಟ್ರೋಲ್ ಸುರಿದು ಸುಡುತ್ತಾ ಕೇಕೆ ಹಾಕಿದರು. ಈ ಹತ್ಯಾಕಾಂಡ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದರೂ, ಅವರು ದಲಿತ ಯುವಕರ ಕುಟುಂಬಗಳಿಗೆ ತಿಳಿಸಿದ್ದು ಆಕ್ಸಿಡೆಂಟ್ ಆಗಿದೆ ಎಂದು. ಇಷ್ಟರಲ್ಲಿಯೇ ದಲಿತ ಕುಟುಂಬಗಳಿಗೆ ಅರ್ಥವಾಗಿ ಹೋಯಿತು. ತಮ್ಮ ಮಕ್ಕಳ ಹತ್ಯೆಯಲ್ಲಿ ಪೊಲೀಸರ ಪಾತ್ರವೂ ಸಹ ಇದೆ ಎಂಬುದು. ಇದನ್ನು ಕುಟುಂಬದವರು ಒಪ್ಪದಿದ್ದಾಗ ’ನಿಮ್ಮ ಮಕ್ಕಳನ್ನು ಮುಸ್ಲಿಮರೆಂದು ಭಾವಿಸಿ ಕೊಂದಿದ್ದಾರೆ’ ಎಂಬ ಸಬೂಬನ್ನೂ ನೀಡಿದರು. ಆದರೆ ದಲಿತ ಕುಟುಂಬಗಳು ಅದಕ್ಕೆ ಒಪ್ಪಲಿಲ್ಲ. ’ಮುಸ್ಲಿಮರೂ ನಮ್ಮಂತೆ ಮನುಷ್ಯರಲ್ಲವೇ’ ಎಂದು ಪೊಲೀಸರನ್ನೇ ಪ್ರಶ್ನಿಸಿದವು.

ಇದಾದ ಮಾರನೇ ದಿನ ಅಂದರೆ ಅಕ್ಟೋಬರ್ 16ರಂದು ಜಜ್ಜಾರ್‌ನ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಭಜರಂಗ ದಳದ ಕಾರ್ಯಕರ್ತರು ದಿಗ್ವಿಜಯದ ಮೆರವಣಿಗೆ ನಡೆಸಿದರು. ಅವರೆಲ್ಲರೂ ಬಹಿರಂಗವಾಗಿಯೇ ಐವರು ದಲಿತ ಯುವಕರ ಕೊಲೆಯನ್ನು ಸಮರ್ಥಿಸಿಕೊಂಡರು. ದೆಹಲಿಯ ವಿಹೆಚ್‌ಪಿಯ ಪ್ರಮುಖ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ ’ನಮಗೆ ದಲಿತರ ಜೀವಕ್ಕಿಂತ ಗೋವಿನ ಜೀವ ದೊಡ್ಡದು’ ಎಂದು ಬಹಿರಂಗವಾಗಿ ಹೇಳಿದ.

ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಯಿತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾಗಲಿಲ್ಲ. ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡರು. ಕೋರ್ಟುಗಳಿಗೆ ಸಾಕ್ಷಿ ಬೇಕು. ಆರೋಪಿಗಳು ಬೇಕು. ಆದರೆ ಪೊಲೀಸರೇ ದೊಂಬಿ ಎಂದ ಮೇಲೆ ಆರೋಪಿಗಳನ್ನು ಹಿಡಿದು ಕೊಡುವವರಾರು?


ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...