ರಾಜಸ್ಥಾನದ ಕೋಟಾದ ಖಜೂರಿ ಗ್ರಾಮದ ಹೈಯರ್ ಸೀನಿಯರ್ ಸೆಕೆಂಡರಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಮೂವರು ಮುಸ್ಲಿಂ ಶಿಕ್ಷಕರನ್ನು ‘ಧಾರ್ಮಿಕ ಮತಾಂತರ ಮತ್ತು ಜಿಹಾದಿ ಚಟುವಟಿಕೆಗಳ ಆರೋಪದಲ್ಲಿ ವಜಾಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್ (SDM) ಕಚೇರಿಯ ಹೊರಗೆ ಜಮಾಯಿಸಿದ ವಿದ್ಯಾರ್ಥಿಗಳು ಮೂವರು ಮುಸ್ಲಿಂ ಶಿಕ್ಷಕರನ್ನು ತಮ್ಮ ಶಾಲೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಗ್ರಾಮದ ಸರಪಂಚ್ ಸೇರಿದಂತೆ 17 ಮಂದಿಯನ್ನು ಪಟ್ಟಿ ಮಾಡಿ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಇವರು ತಮ್ಮ ಶಿಕ್ಷಕರನ್ನು ‘ಧಾರ್ಮಿಕ ಮತಾಂತರ ಮತ್ತು ಜಿಹಾದಿ ಚಟುವಟಿಕೆಗಳ’ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳು ಸಹಿ ಮಾಡಿದ ಜ್ಞಾಪಕ ಪತ್ರವನ್ನು ತಹಸೀಲ್ದಾರ್ ಮತ್ತು ಎಸ್ಡಿಎಂ ಅವರಿಗೆ ಹಸ್ತಾಂತರಿಸಲಾಗಿದೆ. ಅಮಾನತುಗೊಂಡಿರುವ ಶಿಕ್ಷಕರ ಮೇಲಿನ ಎಲ್ಲಾ ಆರೋಪಗಳನ್ನು ರದ್ದುಪಡಿಸಿ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಖಜೂರಿನಲ್ಲಿರುವ ತಮ್ಮ ಹಳ್ಳಿಯ ಶಾಲೆಯಿಂದ ಸಂಗೋಡು ಪಟ್ಟಣದ ಎಸ್ಡಿಎಂ ಕಚೇರಿಗೆ ಹಲವಾರು ಕಿಲೋಮೀಟರ್ಗಳಷ್ಟು ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದಿದ್ದು, ಸುಳ್ಳು ಆರೋಪ ಮಾಡಿರುವ ಕೆಲ ವಿದ್ಯಾರ್ಥಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಗೋಡಿನ ಸೀನಿಯರ್ ಹೈಯರ್ ಸೆಕೆಂಡರಿ ಶಾಲೆಯ ಫಿರೋಜ್ ಖಾನ್, ಮಿರ್ಜಾ ಮುಜಾಹಿದ್ ಮತ್ತು ಶಬಾನಾ ಎಂಬ ಮೂವರು ಮುಸ್ಲಿಂ ಶಿಕ್ಷಕರು ಫೆಬ್ರವರಿ 21ರಂದು ಬುಧವಾರ ಶಿಕ್ಷಣ ಇಲಾಖೆಯಿಂದ ಅಮಾನತು ಆದೇಶವನ್ನು ಸ್ವೀಕರಿಸಿದ್ದಾರೆ. ಕೋಟಾದ ಜಿಲ್ಲಾ ಶಿಕ್ಷಣಾಧಿಕಾರಿ ಈ ಕುರಿತು ಆದೇಶವನ್ನು ಹೊರಡಿಸಿದ್ದರು.
ಈ ನಿರ್ಧಾರವು ಫೆಬ್ರವರಿ 20, ಮಂಗಳವಾರದಂದು ರಾಜ್ಯ ಶಿಕ್ಷಣ ಸಚಿವರ ಭೇಟಿಯ ಸಂದರ್ಭದಲ್ಲಿ ಕೋಟಾದಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳ ಸ್ಥಳೀಯ ಒಕ್ಕೂಟವಾದ ಸರ್ವ್ ಹಿಂದೂ ಸಮಾಜ (SHS) ಸಲ್ಲಿಸಿದ ಮನವಿ ಪತ್ರಕ್ಕೆ ಆಧರಿಸಿದೆ. ಇಸ್ಲಾಮಿಕ್ ಜಿಹಾದಿ ಚಟುವಟಿಕೆಗಳು, ಧಾರ್ಮಿಕ ಮತಾಂತರ ಮತ್ತು ಲವ್ ಜಿಹಾದ್ ಬಗ್ಗೆ ಶಿಕ್ಷಕರ ಬಗ್ಗೆ ಪತ್ರದಲ್ಲಿ ಆರೋಪಿಸಲಾಗಿತ್ತು.
2020ರಲ್ಲಿ ಮುಸ್ಲಿಂ ಹುಡುಗನನ್ನು ತನ್ನ ಸ್ವಂತ ಇಚ್ಛೆಯಿಂದ ಹಿಂದೂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯೋರ್ವಳು ವಿವಾಹವಾಗಿದ್ದಳು. ಇದಕ್ಕೆ ಮುಸ್ಲಿಮ್ ಪ್ರಾದ್ಯಾಪಕರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯ ಕುಟುಂಬವು ಆಕೆಯ ಅಂತರ್ಧರ್ಮೀಯ ವಿವಾಹದ ಹಿಂದೆ ಈ ಮೂವರು ಮುಸ್ಲಿಂ ಶಿಕ್ಷಕರ ಕೈವಾಡವಿದೆ ಮತ್ತು ಬಲವಂತದ ಮತಾಂತರ ಎಂದು ಆರೋಪಿಸಿದ್ದಾರೆ.
ಪ್ರಾಂಶುಪಾಲ ಕಮಲೇಶ್ ಕುಮಾರ್ ಬರ್ವಾ ಅವರು ಅಮಾನತು ಆದೇಶವನ್ನು ಸ್ವೀಕರಿಸಿದ ಅದೇ ದಿನದಲ್ಲಿ ಮೂವರನ್ನು ಬಿಡುಗಡೆ ಮಾಡಿದ್ದಾರೆ. ಹಂಗಾಮಿ ಪ್ರಾಂಶುಪಾಲರು ಮತ್ತು ಶಿಕ್ಷಕರುಗೆ ಸರ್ವ್ ಹಿಂದೂ ಸಮಾಜದ ಆರೋಪಗಳನ್ನು ನಿರಾಕರಿಸಿದ್ದಾರೆ.
ಶಾಲೆಯಲ್ಲಿನ 15 ಶಿಕ್ಷಕರಲ್ಲಿ 12 ಮಂದಿ ಹಿಂದೂಗಳಾಗಿದ್ದರು. ಅವರು ಜಿಲ್ಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಅಮಾನತುಗೊಂಡಿರುವ ಶಿಕ್ಷಕರು ‘ಧರ್ಮ ಪರಿವರ್ತನೆ,’ ‘ಲವ್ ಜಿಹಾದ್’ ಅಥವಾ ‘ನಮಾಜ್’ ನಂತಹ ಯಾವುದೇ ಚಟುವಟಿಕೆಯನ್ನು ಮಾಡಿಲ್ಲ ಎಂದು ಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕೇವಲ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಮತ್ತು ಯಾವುದೇ ‘ಧಾರ್ಮಿಕ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಶಿಕ್ಷಕರು ಒತ್ತಿ ಹೇಳಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ಕಮಲೇಶ್ ಸಿಂಗ್ ಬೆರ್ವಾ ಅವರು ಮಾತನಾಡಿದ್ದು, ಮೂವರೂ ಶಿಕ್ಷಕರು ಬಹಳ ದಕ್ಷರು, ಮುಜಾಹಿದ್ ಮಿರ್ಜಾ ಪಿಟಿ ಶಿಕ್ಷಕ, ಫಿರೋಜ್ ಖಾನ್ ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ಶಬಾನಾ ಮೇಡಮ್ ಅಕ್ಟೋಬರ್ನಲ್ಲಿ ಶಾಲೆಗೆ ಸೇರಿದವರು. ನಾನು 2021ರಲ್ಲಿ ಶಾಲೆಗೆ ಸೇರಿದ್ದೇನೆ ಮತ್ತು ಅಂದಿನಿಂದ ಅಮಾನತುಗೊಂಡ ಶಿಕ್ಷಕರು ಸೇರಿದಂತೆ ಯಾವುದೇ ಶಿಕ್ಷಕರ ಅಸಾಮಾನ್ಯ ನಡವಳಿಕೆ ಅಥವಾ ದುರ್ನಡತೆಯನ್ನು ನಾನು ಗಮನಿಸಿಲ್ಲ, ಅವರು ಶಿಕ್ಷಕರಾಗಿದ್ದು, ಯಾವುದೇ ಪಕ್ಷಪಾತವಿಲ್ಲದೆ ತಮ್ಮ ವಿಷಯಗಳನ್ನು ಚೆನ್ನಾಗಿ ಕಲಿಸುತ್ತಾರೆ. ಇದು ಅತ್ಯಂತ ದುರದೃಷ್ಟಕರ. ಈ ಶಿಕ್ಷಕರ ವಿರುದ್ಧ ಇಂತಹ ಆರೋಪಗಳ ಬಗ್ಗೆ ತಿಳಿದು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಫೆಬ್ರವರಿ 24ರಂದು ರಾಜಸ್ಥಾನದ ಕೋಟಾ ಜಿಲ್ಲೆಯ ಸಂಗೋಡ್ ಬ್ಲಾಕ್ನ ಖಜೂರಿ ಗ್ರಾಮದಲ್ಲಿ ತಮ್ಮ ಶಾಲೆಯ ಹೊರಗೆ ಮೂವರು ಮುಸ್ಲಿಂ ಶಿಕ್ಷಕರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ನಾವು ಸ್ವಇಚ್ಛೆಯಿಂದ ಇಲ್ಲಿದ್ದೇವೆ ಮತ್ತು ನಮ್ಮ ಶಿಕ್ಷಕರ ಅಮಾನತು ಆದೇಶಗಳನ್ನು ಹಿಂತೆಗೆದುಕೊಂಡ ನಂತರ ಮತ್ತೆ ತರಗತಿಗೆ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದರು.
Dozens of students at a government school in Rajasthan's Kota gathered outside the SDM office, demanding the revocation of the suspension of three Muslim teachers who were targeted by a Hindu group and falsely accused of conversion. pic.twitter.com/ujCFGoKJMv
— Maktoob (@MaktoobMedia) February 26, 2024
ಇದನ್ನು ಓದಿ: ‘ಸಂವಿಧಾನ, ಏಕತಾ ಸಮಾವೇಶ’ಕ್ಕೆ ಕರ್ನಾಟಕ ಸರಕಾರ ಆಹ್ವಾನಿಸಿದ್ದ UK ಪ್ರಾಧ್ಯಾಪಕಿಗೆ ಭಾರತಕ್ಕೆ ಪ್ರವೇಶ ನಿರಾಕರಣೆ