Homeಪುಸ್ತಕ ವಿಮರ್ಶೆಅರಿತರೆ ಒಳಗಿರುವವನೆ ದೇವ; ತೀರ್ಥಯಾತ್ರೆ ದೂರದ ಹುಲ್ಲಿನ ಹಸಿರ ಪ್ರೀತಿಸಿದಂತೆ; ಎಲ್ಲ ಎಲ್ಲೆ ಮೀರಿ ಪ್ರಸ್ತಾವನೆಯಿಂದ...

ಅರಿತರೆ ಒಳಗಿರುವವನೆ ದೇವ; ತೀರ್ಥಯಾತ್ರೆ ದೂರದ ಹುಲ್ಲಿನ ಹಸಿರ ಪ್ರೀತಿಸಿದಂತೆ; ಎಲ್ಲ ಎಲ್ಲೆ ಮೀರಿ ಪ್ರಸ್ತಾವನೆಯಿಂದ ಆಯ್ದ ಭಾಗ

- Advertisement -
- Advertisement -

(ಇತ್ತೀಚೆಗೆ ಬಿಡುಗಡೆಯಾದ ಸಂಗಾತ ಪುಸ್ತಕ ಪ್ರಕಟಿಸಿರುವ “ಎಲ್ಲ ಎಲ್ಲೆ ಮೀರಿ: ಕಾಶ್ಮೀರಿ ಸಾಹಿತ್ಯದ ಮೊದಲ ಕವಿ ಲಾಲ್ ದೇಡ ಕವಿತೆಗಳು” ಪುಸ್ತಕದ ಪ್ರಸ್ತಾವನೆಯಿಂದ ಒಂದು ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.)

ಲಾಲ್ ದೇಡ ಕಾಶ್ಮೀರದ ಒಬ್ಬ ಅಪರೂಪದ ಅನುಭಾವಿ ಕವಿಯಾಗಿದ್ದಾಳೆ. ಲೋಕದ ಹಂಗು ತೊರೆದು ಅನುಭಾವದ ಮಾರ್ಗದಲ್ಲಿ ನಡೆದು ಸಿದ್ಧಿಯನ್ನು ಸಾಧಿಸಿದ ಸಂತಳಾಕೆ. ದೈವತ್ವದ ಹುಡುಕಾಟವನ್ನು, ಭಕ್ತಿಯ ಪರವಶತೆಯನ್ನು ತನ್ನ ಕವಿತೆಗಳಲ್ಲಿ ಕಟ್ಟಿಕೊಡುತ್ತಾಳೆ. ಬಾಹ್ಯದ ಆಚರಣೆಗಳಿಗಿಂತ ಅಂತರಂಗದ ಅರಿವಿಗೆ ಮಹತ್ವ ನೀಡುವ ಲಾಲ್ ದೇಡ ಕಾಶ್ಮೀರದಲ್ಲಿ ಮನೆಮಾತಾಗಿದ್ದಾಳೆ. ಹಿಂದೂಗಳಿರಲಿ, ಮುಸ್ಲಿಮರಿರಲಿ, ಲಾಲ್ ದೇಡಳ ಕವಿತೆಗಳು ಕಾಶ್ಮೀರದ ಜನರ ನೆನಪಿನಲ್ಲಿ ಇಂದಿಗೂ ಹಸಿರಾಗಿವೆ. ಅವಳ ಕವಿತೆಗಳ ಪ್ರಥಮ ಸಂಪಾದಕರಾದ ಗ್ರಿಯರಸನ್ ಮತ್ತು ಬಾರ್ನೆಟ್ ತಮ್ಮ ಪ್ರಸ್ತಾವನೆಯಲ್ಲಿ, “ಲಾಲ್ ದೇಡಳನ್ನು ಗೌರವದಿಂದ ಸ್ಮರಿಸದ, ಅವಳ ಕೆಲವಾದರೂ ಸಾಲುಗಳು ನಾಲಿಗೆಯ ತುದಿಯಲ್ಲಿರದ ಒಬ್ಬ ಕಾಶ್ಮೀರಿ ಹಿಂದೂ ಅಥವಾ ಮುಸ್ಲಿಂನಿಲ್ಲ” ಎನ್ನುತ್ತಾರೆ (ಲಲ್ಲಾ ವಾಖ್ಯಾನಿ, ಪುಟ 1). ಗಾದೆಮಾತುಗಳ ರೂಪದಲ್ಲಿ ಅವು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಸಂಸಾರದ ಜಂಜಡಗಳ ದಾಟಿ ಆತ್ಮದ ಅನುಸಂಧಾನಕ್ಕೆ ಹಾತೊರೆಯುವ ಲಾಲ್ ದೇಡ ಹಿರಿಯ ಅನುಭಾವಿಗಳ ಸಾಲಿನಲ್ಲಿ ನಿಲ್ಲುತ್ತಾಳೆ.

ಅವಳು ಹದಿನಾಲ್ಕನೆ ಶತಮಾನಕ್ಕೆ ಸೇರಿದವಳೆಂದು ಹೇಳಲಾಗಿದ್ದು ಅನೇಕ ಸಂತ ಪುರಾಣಗಳಲ್ಲಿ, ಸಂತರ ಚರಿತ್ರೆಗಳಲ್ಲಿ ಆಕೆಯ ಬಗ್ಗೆ ಉಲ್ಲೇಖಗಳಿದ್ದರೂ, ಅವಳ ಜನನ ಹಾಗೂ ಮರಣಗಳ ಕುರಿತು ನಿಖರವಾದ ಐತಿಹಾಸಿಕ ದಾಖಲೆಗಳು ಸಿಗುವುದಿಲ್ಲ. ಅವಳು ಶ್ರೀನಗರದ ಹತ್ತಿರದ ಪಾಂದ್ರೆಂಥಾನ ಎಂಬ ಹಳ್ಳಿಯಲ್ಲಿ ಜನಿಸಿದ್ದು, 1373ರ ಸುಮಾರಿಗೆ ಮರಣಹೊಂದಿರಬಹುದೆಂದು ನಂಬಲಾಗಿದೆ. ಖ್ವಾಜಾ ಮಹಮ್ಮದ ಅಜಮ್ ದೇದಾಮಾರಿ ಎನ್ನುವವರು ತಮ್ಮ 1746ರ ಗ್ರಂಥವೊಂದರಲ್ಲಿ ಹೀಗೆ ಬರೆಯುತ್ತಾರೆ: “ಲಲ್ಲಾ ಆರಿಫಾ ಎನ್ನುವ ಅತ್ಯಂತ ಉನ್ನತ ಮಟ್ಟದ ಅನುಭಾವಿಯಾದ ಸಂತಳು ಸುಲ್ತಾನ ಅಲ್ಲಾವುದ್ದೀನನ ಕಾಲದಲ್ಲಿ (1344-55) ಜೀವಿಸಿದ್ದಳು. ತನ್ನ ಜೀವನದ ಪೂರ್ವ ಭಾಗದಲ್ಲಿ ವಿವಾಹದ ಬಂಧನದಲ್ಲಿದ್ದು, ಕೌಟುಂಬಿಕ ಮನೆಗೆಲಸಗಳಲ್ಲಿ ಬಂಧಿಯಾಗಿದ್ದರೂ, ದೈವದ ಹಂಬಲ ಆಕೆಯಲ್ಲಿ ತುಂಬಿತ್ತು.

ಸಾಂಸಾರಿಕ ಜಂಜಡಗಳಿಂದ ನಿವೃತ್ತಿ, ನಿರ್ಲಿಪ್ತತೆಗಳನ್ನು ಸಾಧಿಸಿ, ಜನರಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಆಕೆ ಸುಲ್ತಾನ ಶಿಹಾಬುದ್ದೀನನ ಆಳ್ವಿಕೆಯ ಕಾಲದಲ್ಲಿ (1355-73) ತೀರಿಕೊಂಡಳು.” (ಜಯಲಾಲ ಕೌಲ, ಪು. 4) ಗ್ರಿಯರಸನ್ ಮತ್ತು ಬಾರ್ನೆಟ್‌ರು, ಹೆಚ್ಚಿನ ಉಲ್ಲೇಖಗಳೆಲ್ಲ ಅವಳು, ಕಾಶ್ಮೀರದಲ್ಲಿ ಇಸ್ಲಾಮಿನ ಪ್ರಸಾರಕನಾದ ಪ್ರಸಿದ್ಧ ಸಂತ ಸಯ್ಯದ್ ಅಲಿ ಹಮದಾನಿಯ ಸಮಕಾಲೀನಳೆಂದು ಪ್ರತಿಪಾದಿಸುತ್ತವೆ ಎನ್ನುತ್ತಾರೆ. (ಲಲ್ಲಾ ವಾಖ್ಯಾನಿ, ಪು. ಬಿ) ಲಾಲ್ ದಡಳನ್ನು ಹಿಂದೂಗಳು ಲಲ್ಲಾ ಯೋಗೇಶ್ವರಿ, ಲಲ್ಲೇಶ್ವರಿ ಅಥವಾ ಲಲ್ಲಾ ಯೋಗಿಣಿ ಎಂದು ಗುರುತಿಸಿದರೆ, ಮುಸ್ಲಿಂರಿಗೆ ಆಕೆ ಲಲ್ಲಾ ಆರಿಫಾ ಎಂದು ಹೆಸರಾಗಿದ್ದಳು. ಆಕೆಯ ಇಂದಿನ ಬಹು ಪ್ರಚಲಿತ ಹೆಸರು ಲಾಲ್ ದೇಡ, ಅಂದರೆ ಕಾಶ್ಮೀರಿಯಲ್ಲಿ ’ಲಾಲ್ ಅಜ್ಜಿ’ ಎಂದಾಗುತ್ತದೆ. ತನ್ನ ಕೆಲವು ಪದ್ಯಗಳಲ್ಲಿ ಆಕೆ ತನ್ನನ್ನು ’ಲಲ್ಲಾ ಎಂದು ಕರೆದುಕೊಳ್ಳುತ್ತಾಳೆ.

ಅವಳ ಪದ್ಯಗಳನ್ನು ’ವಾಖ್’ಗಳೆಂದು ಕರೆಯಲಾಗಿದೆ. ’ವಾಖ್’ ಪದವು ಸಂಸ್ಕೃತದ ’ವಾಕ್’ ಅಥವಾ ’ವಾಕ್ಯ’ಕ್ಕೆ ಹತ್ತಿರವಿರುವುದಲ್ಲದೆ ಕನ್ನಡದ ಶಿವಶರಣರು ರಚಿಸಿದ ’ವಚನ’ವನ್ನು ಹೋಲುತ್ತದೆ. ’ವಾಖ್’ ಪದವನ್ನು ನುಡಿ ಅಥವಾ ಉಕ್ತಿ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಲಾಲ್ ದೇಡಳ ವಾಖ್‌ಗಳನ್ನು ಕಾಶ್ಮೀರಿ ಭಾಷೆಯ ಮೊದಲ ಸಾಹಿತ್ಯಿಕ ರೂಪಗಳೆಂದು ಪ್ರತಿಪಾದಿಸಲಾಗಿದೆ. ಹಿಂದೆ ಪ್ರಾಕೃತವು ಪ್ರಚಲಿತವಿದ್ದ ಈ ಭಾಗದಲ್ಲಿ ಅದರ ಪ್ರಭಾವದಿಂದ ಹೊರಬಂದು ಕಾಶ್ಮೀರಿ ಭಾಷೆ ಆಧುನಿಕ ಭಾಷೆಯಾಗಿ ಬೆಳೆಯಲು ಪ್ರಾರಂಭಿಸಿದ ಕಾಲಘಟ್ಟವನ್ನು ಅವು ಸೂಚಿಸುತ್ತವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಕಾಶ್ಮೀರಿ ಸಾಹಿತ್ಯದ ಮೂಲ ರೂಪಗಳೆಂದು ಇವು ಹೆಸರಾಗಿವೆಯಲ್ಲದೆ, ಕಾಶ್ಮೀರಿಗರ ಜನಮಾನಸದಲ್ಲಿ ಹದಿನಾಲ್ಕನೆ ಶತಮಾನದಿಂದ ಇಂದಿನ ತನಕ ಹಾಡು, ಪ್ರಾರ್ಥನೆ ಹಾಗೂ ಗಾದೆಮಾತುಗಳ ರೂಪದಲ್ಲಿ ಲಾಲ್ ದೇಡಳ ವಾಖ್‌ಗಳು ಜೀವಂತ ಇವೆ.

ಮೌಖಿಕ ರೂಪದಲ್ಲಿ ಕಾಲದಿಂದ ಕಾಲಕ್ಕೆ ರವಾನೆಯಾಗಿರುವ ಈ ವಾಖ್‌ಗಳು ಮುಂದಿನ ಬೇರೆ ಬೇರೆ ಕಾಲಘಟ್ಟಗಳಲ್ಲಿ ಭಾಷಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಗೆ ಒಳಗಾಗಿರುವುದಲ್ಲದೆ, ಅನೇಕ ಪ್ರಕ್ಷಿಪ್ತ ಭಾಗಗಳು ಸೇರಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ವಾಖ್‌ಗಳು ಮೊದಲ ಬಾರಿಗೆ ಪ್ರಕಟಣೆಗೆ ಒಳಪಟ್ಟಿದ್ದು ಇಪ್ಪತ್ತನೆಯ ಶತಮಾನದಲ್ಲಿ. ಲಾಲ್ ದೇಡ ವಾಖ್‌ಗಳ ಮೊದಲ ಇಂಗ್ಲಿಷ್ ಅನುವಾದವನ್ನು ಮಾಡಿದವರು ಬ್ರಿಟಿಷ್ ವಿದ್ವಾಂಸರಾದ ಗ್ರಿಯರಸನ್ ಮತ್ತು ಬಾರ್ನೆಟ್. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯ ಭಾಷೆಗಳ ಸಮೀಕ್ಷಾ ಅಧಿಕಾರಿಯಾಗಿದ್ದ ಗ್ರಿಯರಸನ್ ಒಂದು ಸಲ ಹಿಂದೆ ತನ್ನ ಸಹೋದ್ಯೋಗಿಯಾಗಿದ್ದ ಮುಕುಂದ ರಾಮ ಶಾಸ್ತ್ರಿಯನ್ನು ಲಾಲ್ ದೇಡಳ ಪದ್ಯಗಳ ಕೈಬರಹದ ಪ್ರತಿಯೊಂದನ್ನು ಹುಡುಕಿಕೊಡಲು ಕೇಳಿಕೊಂಡನಂತೆ.

ಎಷ್ಟು ಪ್ರಯತ್ನಿಸಿದರೂ ಅಂಥ ಪ್ರತಿ ಸಿಗದೇ ಹೋದಾಗ ಮುಕುಂದ ರಾಮ ಶಾಸ್ತ್ರಿಯು ತನ್ನ ಪರಿಚಯದ ಧರ್ಮದಾಸ ದರವೇಷ ಎಂಬ ಮುಪ್ಪಿನ ಕತೆಗಾರ ಮತ್ತು ಹಾಡುಗಾರನನ್ನು ವಿಚಾರಿಸಿದನಂತೆ. ಆಗ ದರವೇಷನು 109 ಲಲ್ಲೇಶ್ವರಿಯ ಪದ್ಯಗಳನ್ನು ತಾನೇ ಕಂಠಪಾಠದಿಂದ ಹೇಳಿದಾಗ ಶಾಸ್ತ್ರಿಯು ಅವುಗಳನ್ನು ಬರೆದುಕೊಂಡ. ತಾನು ಬರೆದಿಟ್ಟ ಪ್ರತಿಯ ಜೊತೆಗೆ ತನ್ನ ವ್ಯಾಖ್ಯಾನದೊಂದಿಗೆ ಗ್ರಿಯರಸನನಿಗೆ ಕಳಿಸಿಕೊಟ್ಟ. ಇದಕ್ಕಿಂತ ಪೂರ್ವದಲ್ಲಿ ಒರೆಲ್ ಸ್ಟೈನ ಎಂಬ ವಿದ್ವಾಂಸನು ಸಂಗ್ರಹಿಸಿದ ಎರಡು ಪ್ರತಿಗಳಿದ್ದವು. ಅವನ್ನು ಸ್ಟೈನ ’ಎ’ ಪ್ರತಿ ಮತ್ತು ಸ್ಟೈನ ’ಬಿ’ ಪ್ರತಿ ಎಂದು ಗುರುತಿಸಲಾಗಿತ್ತು. ’ಎ’ ಪ್ರತಿಯಲ್ಲಿ ನಲವತ್ಮೂರು ಪದ್ಯಗಳಿದ್ದು, ಪಂಡಿತ ರಾಜಾನಕ ಭಾಸ್ಕರನು ಮಾಡಿರುವ ಪದ್ಯಗಳ ಸಂಸ್ಕೃತ ಅನುವಾದಗಳನ್ನು ಹೊಂದಿದೆ. ’ಬಿ’ ಪ್ರತಿಯಲ್ಲಿ ನಲವತ್ತೊಂಬತ್ತು ಲಲ್ಲಾ ಪದ್ಯಗಳ ಜೊತೆಗೆ ಬೇರೆ ಬೇರೆ ಪಾಠಾಂತರಗಳು ಕೂಡಾ ಇವೆ.

ಗ್ರಿಯರಸನ್‌ನು ಮತ್ತೊಬ್ಬ ಹಿಂಟನ್ ನೋಲ್ಸ ಎಂಬ ಜಾನಪದ ವಿದ್ವಾಂಸ ಸಂಪಾದಿಸಿದ್ದ “ಡಿಕ್ಷನರಿ ಆಫ್ ಕಾಶ್ಮೀರಿ ಪ್ರೋವರ್ಬ್ಸ್ ಅಂಡ್ ಸೇಯಿಂಗ್ಸ್”(1885) ಕೃತಿಯಲ್ಲಿ ಲಲ್ಲಾಳ ಅನೇಕ ಹೇಳಿಕೆಗಳಿರುವುದನ್ನು ಗುರುತಿಸಿದ್ದ. ಇವೆಲ್ಲವುಗಳನ್ನು ಅಭ್ಯಸಿಸಿ, ಹೋಲಿಸಿ ನೋಡಿ, ತಮ್ಮ ಟಿಪ್ಪಣಿಗಳು, ಭಾಷೆ, ಛಂದಸ್ಸು, ಯೋಗ ಮೊದಲಾದ ವಿಷಯಗಳ ಮೇಲೆ ಲೇಖನಗಳೊಂದಿಗೆ ಗ್ರಿಯರಸನ ಮತ್ತು ಬಾರ್ನೆಟ್ “ಲಲ್ಲಾ ವಾಖ್ಯಾನಿ: ಕಾಶ್ಮೀರದ ಅನುಭಾವಿ ಕವಿಲಾಲ್ ದೇಡಳ ವಿವೇಕಪೂರ್ಣ ನುಡಿಗಳು” ಎನ್ನುವ ಶೀರ್ಷಿಕೆಯೊಂದಿಗೆ ಒಂದು ವಿದ್ವತ್‌ಪೂರ್ಣ ಆವೃತ್ತಿಯನ್ನು 1920ರಲ್ಲಿ ಪ್ರಕಟಿಸಿದರು. ಇದೇ ಲಾಲ್ ದೇಡಳ ಮೊದಲ ಪ್ರಕಟಿತ ಸಂಕಲನ ಎಂದು ಪ್ರಸಿದ್ಧಿ ಪಡೆದಿದೆ. ಈ ಆವೃತ್ತಿಯ ನಂತರ ಅನೇಕ ಭಾರತೀಯ ಹಾಗೂ ಪಾಶ್ಚಿಮಾತ್ಯ ವಿದ್ವಾಂಸರು ಲಾಲ್ ದೇಡ ಪದ್ಯಗಳ ಅನುವಾದಗಳನ್ನು ಪ್ರಕಟಿಸಿದ್ದಾರೆ.

ಎಲ್ಲ ಸಂತರ ಜೀವನದ ಸುತ್ತ ದಂತಕತೆಗಳು ಹುಟ್ಟಿಕೊಳ್ಳುವಂತೆ ಲಾಲ್ ದೇಡ ಕುರಿತು ಸಾಕಷ್ಟು ಪುರಾಣ ಕತೆಗಳು, ಪವಾಡ ಕತೆಗಳು ಹುಟ್ಟಿಕೊಂಡಿವೆ. ಬ್ರಾಹ್ಮಣ ಕುಟುಂಬವೊಂದರಲ್ಲಿ ಹುಟ್ಟಿದ ಅವಳ ಬಾಲ್ಯ ಧಾರ್ಮಿಕ ಶ್ರದ್ಧೆಯ ಪರಿಸರದಲ್ಲಿ ಕಳೆಯಿತು. ಅವಳಿಗೆ ತಕ್ಕಮಟ್ಟಿನ ಶಿಕ್ಷಣ ದೊರೆತಿತ್ತಲ್ಲದೆ, ಮುಂದೆ ಗುರು ಸಿದ್ಧ ಶ್ರೀಕಾಂತರ ಪ್ರಭಾವ ಅವಳ ಮೇಲೆ ಆಯಿತು. ಅಂದಿನ ಸಂಪ್ರದಾಯದ ಪ್ರಕಾರ ಅವಳ ಹನ್ನೆರಡನೆಯ ವಯಸ್ಸಿಗೆ ಅವಳನ್ನು ಪಾಂಪೋರ ಎಂಬ ಊರಿನ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಅವಳ ಅತ್ತೆ ಮತ್ತು ಗಂಡ ಅವಳನ್ನು ಅತಿ ಕ್ರೂರವಾಗಿ ನಡೆಸಿಕೊಂಡರೆನ್ನುವುದಕ್ಕೆ ಅನೇಕ ಉಲ್ಲೇಖಗಳಿವೆ. ಅವಳ ಅತ್ತೆ ಅವಳನ್ನು ಉಪವಾಸವಿಟ್ಟರೆ, ಅವಳ ಗಂಡ ಅವಳ ಅಧ್ಯಾತ್ಮದ ಒಲವನ್ನು ಅರ್ಥಮಾಡಿಕೊಳ್ಳದೆ, ಸಂಶಯದ ಕಾರಣದಿಂದ ಹಿಂಸಿಸುತ್ತಿದ್ದ. ಬಹು ಜನಪ್ರಿಯ ಕಾಶ್ಮೀರಿ ಗಾದೆ ಮಾತಾದ “ಅವರು ಟಗರು ಕೊಲ್ಲಲಿ, ಕುರಿ ಕೊಲ್ಲಲಿ, ಲಲ್ಲಾಳಿಗೆ ಊಟಕ್ಕೆ ಕಲ್ಲು ಮಾತ್ರ” ಎನ್ನುವುದು ಇದೇ ಸಂಗತಿಯನ್ನು ಉಲ್ಲೇಖಿಸುತ್ತದೆ. ಅವಳ ಅತ್ತೆ ಅವಳ ಊಟದ ತಟ್ಟೆಯಲ್ಲಿ ಒಂದು ಕಲ್ಲು ಗುಂಡು ಇಟ್ಟು, ಅದರ ಮೇಲೆ ಅನ್ನ ಬಡಿಸಿ, ನೋಡುವವರಿಗೆ ತಟ್ಟೆ ತುಂಬ ಅನ್ನ ಕಾಣುವಂತೆ ಮಾಡುತ್ತಿದ್ದಳಂತೆ. ಅತ್ತೆ ಮತ್ತು ಗಂಡನ ಕ್ರೌರ್ಯಕ್ಕೆ ಒಳಗಾದರೂ ಲಾಲ್ ದೇಡ ತನ್ನ ಭಕ್ತಿಯನ್ನು ಬಿಡಲಿಲ್ಲ.

ಒಂದು ಪ್ರಚಲಿತ ಪುರಾಣ ಕತೆಯ ಪ್ರಕಾರ ಪ್ರತಿ ದಿನ ಅವಳು ನೀರು ತರಲು ನದಿಗೆ ಕೊಡ ತೆಗೆದುಕೊಂಡು ಹೋಗುತ್ತಿದ್ದಳು. ಹಾಗೆ ಹೋದಾಗ ಅವಳು ನದಿ ದಾಟಿ ನದಿಯಾಚೆಯ ನಟಕೇಶವ ಭೈರವ ಮಂದಿರದ ಶಾಂತ ಪರಿಸರದಲ್ಲಿ ತನ್ನ ಧ್ಯಾನ ಮುಗಿಸಿ ನಂತರ ನೀರಿನ ಕೊಡದೊಂದಿಗೆ ಮನೆಗೆ ಮರಳುತ್ತಿದ್ದಳು. ದಿನವೂ ತಡವಾಗಿ ಬರುವ ಅವಳ ಮೇಲೆ ಕ್ರೋಧಿತನಾದ ಅವಳ ಗಂಡ ಒಂದು ದಿನ ಅವಳು ತಲೆ ಮೇಲೆ ನೀರಿನ ಕೊಡದೊಂದಿಗೆ ಮರಳಿದಾಗ ಕೋಲಿನಿಂದ ಅವಳ ತಲೆಯ ಮೇಲಿನ ಕೊಡವನ್ನು ಒಡೆದ. ಮಣ್ಣಿನ ಕೊಡ ಪುಡಿ ಪುಡಿಯಾಗಿ ಬಿದ್ದರೂ ಅವಳ ತಲೆ ಮೇಲೆ ನೀರು ಮಾತ್ರ ಮಂಜಿನ ಗಡ್ಡೆಯ ರೂಪದಲ್ಲಿ ಹಾಗೆಯೇ ಉಳಿದಿತ್ತು. ಅದರಿಂದ ಲಾಲ್ ದೇಡ ಮನೆಯ ಪಾತ್ರೆಗಳಲ್ಲಿ ನೀರು ತುಂಬಿ ಉಳಿದ ನೀರನ್ನು ಹೊರಗೆ ಚೆಲ್ಲಿದಳು. ಹಾಗೆ ಚೆಲ್ಲಿದಾಗ, ನೀರು ಬಿದ್ದ ಆ ಸ್ಥಳದಲ್ಲಿ ದೊಡ್ಡ ಕೊಳವೊಂದು ನಿರ್ಮಾಣವಾಯಿತೆನ್ನುವ ಪ್ರತೀತಿಯಿದೆ.

ಪಂಡಿತ ಆನಂದ ಕೌಲ 1930ರ ದಶಕದಲ್ಲಿ ಬರೆದ “ಲಲ್ಲಾ ಯೋಗೇಶ್ವರಿ” ಎಂಬ ಗ್ರಂಥದಲ್ಲಿ, “ಈ ಕೊಳವು ಇವತ್ತಿಗೂ ಅಸ್ತಿತ್ವದಲ್ಲಿದ್ದು, ಅದನ್ನು ’ಲಾಲ್ ತ್ರಾಗ್’ ಎಂದು ಕರೆಯಲಾಗಿದೆ” ಎನ್ನುತ್ತಾರೆ. (ಜಯಲಾಲ ಕೌಲ, ಪು.11) ಸುಮಾರು ಇಪ್ಪತ್ತಾರನೆಯ ವಯಸ್ಸಿಗೆ ಗಂಡನ ಮನೆಯನ್ನು ತ್ಯಜಿಸಿ ಹೋದ ಲಲ್ಲೇಶ್ವರಿಯು ಶೈವ ಸಂತರಾದ ಸಿದ್ಧ ಶ್ರೀಕಾಂತರಲ್ಲಿ ಶಿಷ್ಯಳಾಗಿ, ಅವರಿಂದ ಅಧ್ಯಾತ್ಮ ಸಾಧನೆಯ ಮಾರ್ಗದರ್ಶನ ಪಡೆದುಕೊಂಡಳು. ನಂತರ ಅವಳು ಒಂದು ಸ್ಥಳದಲ್ಲಿ ನಿಲ್ಲದ ಪರಿವ್ರಾಜಕಳಾಗಿ ಜನರ ನಿಂದನೆ, ಹೀಯಾಳಿಕೆಗಳಿಗೆ ಗಮನವೀಯದೆ, ಎಲ್ಲ ಕಷ್ಟ-ನೋವುಗಳನ್ನು ಸಹಿಸುತ್ತ ತನ್ನ ಸಾಧನೆಯನ್ನು ಮುಂದುವರೆಸಿದಳು. ಹದಿನಾಲ್ಕನೆ ಶತಮಾನದಲ್ಲಿ ಹರೆಯದ ಹೆಂಗಸೊಬ್ಬಳು ಗಂಡನ ಮನೆ ಬಿಟ್ಟು, ಪರಿವ್ರಾಜಕಳಾಗಿರುವುದು ಸುಲಭದ ಮಾತಾಗಿರಲಿಲ್ಲ ಎನ್ನುವ ಸಂಗತಿಯನ್ನು ಅವಳ ವಾಖ್‌ವೊಂದರಲ್ಲಿ ಕಾಣುತ್ತೇವೆ:

ಸಾವಿರ ನಿಂದನೆಗಳ ಮಾಡಿದರೂ ಅವರು
ನನಗದರಿಂದ ನೋವಿಲ್ಲ ಶಿವನಿಗೊಲಿದವಳು ನಾನು
ಬೂದಿ ಬಿತ್ತೆಂದು
ಕನ್ನಡಿ ಕೆಡುವುದೆ?
ಬೂದಿಯಿಂದಲೆ ಅಲ್ಲವೆ
ಕನ್ನಡಿ ಶುಭ್ರ?

ಯಾವ ಅಡೆತಡೆಗಳಿಂದಲೂ ವಿಚಲಿತಳಾಗದೆ, ಅನುಭಾವದ ಪಕ್ವತೆಯನ್ನು ಸಾಧಿಸುವ ಮಾರ್ಗದಲ್ಲಿ ನಿಜವಾದ ಅನ್ವೇಷಕಳಾಗಿ ಕಾಣಿಸುವ ಲಾಲ್ ದೇಡಳಿಗೆ ನಿಂದಿಸುವ ಜನರಾಗಲಿ, ರೂಢಿಗತ ಪರಂಪರೆಯ ಪದ್ಧತಿಗಳಾಗಲಿ ಮುಖ್ಯವಾಗಲಿಲ್ಲ. ಆಕೆಯ ವಾಖ್‌ಗಳು ಅನುಭಾವದ ದಾರಿಯಲ್ಲಿ ಅವಳು ಬೆಳೆದ ಬಗೆಯ ಚಿತ್ರಣ ನೀಡುತ್ತವೆ.

ವಿಜಯಾ ಗುತ್ತಲ
ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಜಯಾ ಅವರು ಗ್ರೀಕ್ ಭಾಷೆ ಮತ್ತು ಸಾಹಿತ್ಯದ ಮೇಲೆ ಆಳವಾದ ಅಧ್ಯಯನ ಮಾಡಿದ್ದಾರೆ. ಹಲವು ಅನುವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ಒರೆಸ್ತಿಯಾ’ ನಾಟಕ ತ್ರಿವಳಿಯನ್ನೂ ಕನ್ನಡಕ್ಕೆ ತಂದಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...