ಕಳೆದ ನಾಲ್ಕು ತಿಂಗಳಿನಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾನುನೂಗಳನ್ನು ರದ್ದುಗಿಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು (ಮಾರ್ಚ್ 28) ಹೋಲಿಕಾ ದಹನದಲ್ಲಿ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು ಹೋಳಿ ಹಬ್ಬ ಆಚರಿಸಲಿದ್ದಾರೆ.
ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಲು ಹೋಲಿಕಾ ದಹನದ ವೇಳೆ ಈ ಮೂರು ವಿವಾದಿತ ಕೃಷಿ ಕಾನೂನುಗಳನ್ನು ಸುಡಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಸಿದೆ.
ದುಷ್ಟರ ಮೇಲೆ ನಡೆದ ಒಳ್ಳೆತನದ ರೂಪಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಹೋಲಿಕಾ ದಹನವೆಂದು ಕರೆದರೆ, ದಕ್ಷಿಣ ಭಾರತದಲ್ಲಿ ಇದನ್ನು ಕಾಮ ದಹನವೆಂದು ಕರೆಯಲಾಗುತ್ತದೆ. ಹಾಗಾಗಿ ಇಂದು ಕೃಷಿ ಕಾನೂನುಗಳನ್ನು ಬೆಂಕಿಗೆ ಹಾಕಿ ಅವುಗಳ ವಿರುದ್ಧ ವಿಜಯವನ್ನು ಸೂಚಿಸುವ ಮೂಲಕ ಹಬ್ಬ ಆಚರಿಸಲಾಗುತ್ತದೆ ಎಂದು ರೈತರು ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ಆಂಧ್ರಪ್ರದೇಶ, ಪಂಜಾಬ್ ಪೂರ್ಣ ಸ್ತಬ್ದ – ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ
Today, farmers will burn copies of the 3 Farm Laws to 'demonstrate their anger against the government’s refusal to accept their legitimate demands'; as a part of Holika Dahan –
a pyre lighting ritual depicting the victory of good over evil. #BurnFarmLawsOnHoli— Kisan Ekta Morcha (@Kisanektamorcha) March 28, 2021
ಈ ಕುರಿತು ಕಿಸಾನ್ ಏಕ್ತಾ ಮೋರ್ಚಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಕಳೆದ ಬಾರಿ ಲೋಹ್ರಿ (ಸಂಕ್ರಾಂತಿ) ಹಬ್ಬದಲ್ಲೂ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು ಹೋರಾಟನಿರತ ರೈತರು ಆಕ್ರೋಶ ಹೊರಹಾಕಿದ್ದರು.
ಕಳೆದ ನಾಲ್ಕು ತಿಂಗಳಿನಿಂದ ಪಂಜಾಬ್, ಹರಿಯಾಣ ಮೂಲದ ರೈತರು ಎಲ್ಲಾ ಹಬ್ಬ, ಹರಿದಿನಗಳನ್ನು ಪ್ರತಿಭಟನಾ ಸ್ಥಳಗಳಲ್ಲಿಯೇ ಆಚರಿಸುತ್ತಿದ್ದಾರೆ. ಎಲ್ಲಾ ಹಬ್ಬಗಳಲ್ಲೂ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮೂಲಕ ಎಷ್ಟೇ ತಿಂಗಳುಗಳಾದರೂ ಕಾಯ್ದೆಗಳು ರದ್ದಾಗುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂಮ ಸಂದೇಶ ರವಾನಿಸುತ್ತಿದ್ದಾರೆ.
ಕನಿಷ್ಟ ಬೆಂಬಲೆ ಬೆಲೆ ನಿಗದಿಗೊಳಿಸುವಂತೆ ಮತ್ತು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುವಂತೆ ದೇಶದಾದ್ಯಂತ ರೈತರು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 2020ರ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲೆ ಲೋಹ್ರಿ (ಸಂಕ್ರಾಂತಿ) ಆಚರಿಸಿ, ಕೇಂದ್ರಕ್ಕೆ ತಲೆ ಬಾಗುವುದಿಲ್ಲವೆಂದ ರೈತರು