ಗಣರಾಜ್ಯೋತ್ಸದ ದಿನ ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿರುವಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಗಣತಂತ್ರ ಪರೇಡ್, ಟ್ರಾಕ್ಟರ್ ಪರೇಡ್ ಹೆಸರಿನಲ್ಲಿ ರೈತರ ಬೃಹತ್ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಘಟಿಸಲಾಗುತ್ತಿರುವ ಈ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಅಭಿನಂದಿಸಿದೆ.
ಸೋಮವಾರ ದಕ್ಷಿಣ ಭಾರತದ ರೈತ ಹೋರಾಟಗಾರರನ್ನು ಉದ್ದೇಶಿಸಿ ಸಂಯುಕ್ತ ಕಿಸಾನ್ ಮೋರ್ಚಾ ವಿಡಿಯೋ ಸಂದೇಶವನ್ನು ಕಳಿಸಿದ್ದು, “ನಾಳೆ ನಾವು ದೆಹಲಿಯಲ್ಲಿ ರೈತ-ಟ್ರಾಕ್ಟರ್ ಪರೇಡ್ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ಎರಡು ತಿಂಗಳುಗಳಿಂದ, ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಸುತ್ತಲೂ ಆರು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಲಕ್ಷಾಂತರ ಜನರು ದೆಹಲಿಯನ್ನು ತಲುಪಿದ್ದಾರೆ. ಒಂದೂವರೆ ಲಕ್ಷ ಟ್ರಾಕ್ಟರ್ಗಳು ದೆಹಲಿ ತಲುಪಿವೆ. ಇನ್ನೂ ಬರಲಿವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!
“ದಕ್ಷಿಣ ರಾಜ್ಯಗಳಾದ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲೂ ನಮ್ಮೊಂದಿಗೆ ಜೊತೆಯಾಗಿದ್ದಾರೆ. ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಬೆಂಬಲಿಸುತ್ತಿದ್ದಾರೆ. ರೈತ ಮಹಿಳೆಯರ ದಿನ, ಸುಭಾಷ್ಚಂದ್ರಬೋಸ್ ಜನ್ಮದಿನ, ಈಗ ಗಣರಾಜ್ಯೋತ್ಸವದಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂಬೈ, ಹೈದರಾಬಾದ್ ಸೇರಿದಂತೆ ಹಲವೆಡೆ ಯಶಸ್ವಿಯಾಗಿ ಹೋರಾಟ ನಡೆಯುತ್ತಿವೆ. ಎಲ್ಲೆಡೆಯಿಂದ ಒಗ್ಗಟ್ಟು ವ್ಯಕ್ತವಾಗುತ್ತಿದ್ದೆ. ಇದಕ್ಕೆ ನಾವು ಕೃತಜ್ಞರಾಗಿದ್ದೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ದರ್ಶನ್ ಪಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
“ಉತ್ತರ ಭಾರತದಲ್ಲಿ ಅತಿ ಉತ್ಸಾಹದಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ದಕ್ಷಿಣ ಭಾರತದಲ್ಲೂ ಹೋರಾಟ ಸಂಘಟಿತವಾಗಿದೆ. ಇದು ನಮ್ಮದಷ್ಟೇ ಅಲ್ಲ, ನಿಮ್ಮ ಹೋರಾಟ ಕೂಡ. ಕೃಷಿ ಕಾಯ್ದೆಗಳ ಹಿಂಪಡೆಯುವವರೆಗೆ ಹೋರಾಟ ನಡೆಸೋಣ” ಎಂದು ಕರೆಕೊಟ್ಟರು.
ಇದನ್ನೂ ಓದಿ: ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ
