ಕನ್ನಡ ಚಿತ್ರ ನಟ ಚಿರಂಜೀವಿ ಸರ್ಜಾ(39) ಇಂದು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ವೇಳೆಗೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಅಲ್ಲದೆ, ವಿಪರೀತ ಎದೆನೋವು ಸಹ ಕಾಣಿಸಿಕೊಂಡ ಪರಿಣಾಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ತೀವ್ರ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.
ಚಿರಂಜೀವಿ ಸರ್ಜಾ, ನಟ-ನಿರ್ದೇಶಕ ಅರ್ಜುನ್ ಸರ್ಜಾ ಅವರ ಸೋದರ ಅಳಿಯ ಮತ್ತು ಕನ್ನಡದ ಖ್ಯಾತ ನಟ ಧ್ರುವ ಸರ್ಜಾ ಅವರ ಸಹೋದರ. ಚಿರು ಸರ್ಜಾ ಇತ್ತೀಚೆಗೆ ನಟಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು.
ಇದನ್ನೂ ಓದಿ: ಕನ್ನಡಿಗರ ಮನಸೆಳೆದಿದ್ದ ಚಿರಂಜೀವಿ ಸರ್ಜಾ ನಟನೆಯ ’ಅಮ್ಮಾ ಐ ಲವ್ ಯೂ’
ಅವರು ಸಾವಿಗೆ ಇದೀಗ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಅನೇಕ ನಟ-ನಟಿಯರು ವಿಷಾಧ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಸೀಜರ್, ಸಿಂಗಾ, ದಂಡಂ ದಶಗುಣಂ, ವರದ ನಾಯಕ, ಆಟಗಾರ, ಅಮ್ಮಾ ಐ ಲವ್ ಯು ಸೇರಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಅವರ ಕೊನೆಯ ಸಿನಿಮಾ ಶಿವಾರ್ಜುನ.
ಇದನ್ನೂ ಓದಿ: ಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978