ರಾಜ್ಯದ ಶಾಲಾ-ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ ಅನ್ನು ನಿಷೇಧಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಅರ್ಜಿದಾರರಲ್ಲಿ ಒಬ್ಬರ ಕುಟುಂಬದವರ ಮೇಲೆ ಬಲಪಂಥೀಯ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಹಿಜಾಬ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾಗಿರುವ ಮಲ್ಪೆ ಮೂಲದ ಹಜ್ರಾ ಶಿಫಾ, ತನ್ನ ಸಹೋದರನ ಸೈಫ್ (20) ಮೇಲೆ ಸಂಘ ಪರಿವಾರಕ್ಕೆ ಸೇರಿರುವ ಗುಂಪೊಂದು ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮಲ್ಪೆ ಬಂದರಿನಲ್ಲಿರುವ ಬಿಸ್ಮಿಲ್ಲಾ ಹೋಟೆಲ್ನಲ್ಲಿ ಹಲ್ಲೆ ನಡೆಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಹಜ್ರಾ ಶಿಫಾ ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಾರೆ.
ಇದರ ಜೊತೆಗೆ ಬಿಸ್ಮಿಲ್ಲಾ ಹೋಟೆಲ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ರೆಸ್ಟೋರೆಂಟ್ನ ಕಿಟಕಿ ಗಾಜುಗಳು ಜಖಂಗೊಂಡಿವೆ. ಮಲ್ಪೆ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಹೆಸರು ಬಹಿರಂಗ
My brother was brutally attacked by a mob. Just because I continue to stand for My #Hijab which is MY RIGHT. Our property were ruined as well. Why?? Can't I demand my right? Who will be their next victim? I demand action to be taken against the Sangh Parivar goons. @UdupiPolice
— Hazra Shifa (@hazra_shifa) February 21, 2022
“ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ನಾನು ನನ್ನ ಹಕ್ಕಾದ ಹಿಜಾಬ್ಗಾಗಿ ನನ್ನ ಹೋರಾಟ ಮುಂದುವರೆಸುತ್ತಿರುವುದಕ್ಕಾಗಿ ಹೀಗೆ ಮಾಡಿದ್ದಾರೆ. ನಮ್ಮ ಆಸ್ತಿಯೂ ಹಾಳಾಗಿದೆ. ಯಾಕೆ..?? ನನ್ನ ಹಕ್ಕನ್ನು ನಾನು ಕೇಳಬಾರದೆ..? ಅವರ ಮುಂದಿನ ಬಲಿಪಶು ಯಾರು..? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಪೊಲೀಸರಲ್ಲಿ ನಾನು ಆಗ್ರಹಿಸುತ್ತೇನೆ” ಎಂದು ಹಜ್ರಾ ಶಿಫಾ ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿನಿ ಶಿಫಾ ಅವರ ಸಹೋದರ ಸೈಫ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ರಾತ್ರಿ ಹಿಜಾಬ್ ಅರ್ಜಿದಾರರ ಸಹೋದರನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದು ಸಿಎಫ್ಐ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನಾ ಹೇಳಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿರುವ ಎನ್ಡಿಟಿವಿ “ಸುಮಾರು 20 ರಿಂದ 30 ಜನರಿದ್ದರು. ಅವರಲ್ಲಿ ಹೆಚ್ಚಿನವರು ಸಂತ್ರಸ್ತರಿಗೆ (ಸೈಫ್) ಪರಿಚಿತರು, ಜೊತೆಗೆ ಅವರ ಸ್ನೇಹಿತರು. ಆರೋಪಿಗಳು ಆಗಾಗ್ಗೆ ಸೈಫ್ ತಂದೆಯ ಬಿಸ್ಮಿಲ್ಲಾ ಹೋಟೆಲ್ಗೆ ಭೇಟಿ ನೀಡುತ್ತಿದ್ದರು” ಎಂದಿದ್ದಾರೆ.
“ಗಲಾಟೆ ನಡೆಯಲು ಕಾರಣವೆಂದರೆ, ಸೈಫ್ ಅವರ ತಂದೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಬಗ್ಗೆ ಸ್ಥಳೀಯ ಕನ್ನಡ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆಗಳು ಮತ್ತು ಪದಗಳ ಆಯ್ಕೆಯು ಈ ಗುಂಪನ್ನು ಪ್ರಚೋದಿಸಿದೆ. ಬಳಿಕ ಹೋಟೆಲ್ಗೆ ಬಮದು ಕಲ್ಲು ತೂರಾಟ ನಡೆಸಿದ್ದಾರೆ. ಸೈಫ್ ಮೇಲೆ ಹ್ಲಲೆ ನಡೆಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ – ಮಧ್ಯಂತರ ಆದೇಶದ ಅತಿಕ್ರಮದ ಬಗ್ಗೆ ಕ್ರಮಕೈಗೊಳ್ಳುತ್ತೇವೆ: ಹೈಕೋರ್ಟ್ಗೆ ರಾಜ್ಯ ಸರ್ಕಾರ ಭರವಸೆ