ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಬೆಳಗ್ಗೆ 9ರಿಂದ ಸಾಯಂಕಾಲದವರೆಗೆ ಬ್ಲಾಕ್ ಡೆವಲಪ್ ಮೆಂಡ್ ಕೌನ್ಸಿಲ್ ಎಲೆಕ್ಷನ್ ನಡೆಯಲಿದೆ. ಅದೇ ದಿನ 3 ಗಂಟೆಗೆ ಕೌಂಟಿಂಗ್ ಕೂಡ ನಡೆಯಲಿದೆ. ಆದರೆ ಇದಕ್ಕೆ ಜೆಎನ್ಯು ಕಾಲೇಜಿನ ಮಾಜಿ ವಿದ್ಯಾರ್ಥಿನಿ ಹಾಗೂ ಹೋರಾಟಗಾರ್ತಿ ಶೆಹ್ಲಾ ರಷೀದ್ ವಿರೋಧ ವ್ಯಕ್ತಪಡಿಸಿದ್ದು, ಕಾಶ್ಮೀರದಲ್ಲಿ ಚುನಾವಣಾ ರಾಜಕೀಯ ತೊರೆಯುವುದಾಗಿ ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಮಾಜಿ ಐಎಎಸ್ ಅಧಿಕಾರಿ ಶಾಹ್ ಫಸಲ್, ಮಾರ್ಚ್ ನಲ್ಲಿ ರಚಿಸಿದ್ದ ಪೀಪಲ್ಸ್ ಪಾರ್ಟಿಗೆ ಸೇರ್ಪಡೆಯಾಗಿದ್ದ ಶೆಹ್ಲಾ ರಷೀದ್, ಈಗ ಪಕ್ಷ ತೊರೆಯುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅಕ್ಟೋಬರ್ 24ರಂದು ಕಾಶ್ಮೀರದಲ್ಲಿ ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಚುನಾವಣೆ ನಿಗದಿಪಡಿಸಿದೆ. ಆದರೆ ಕಾಶ್ಮೀರದಲ್ಲಿ 65 ದಿನಗಳಿಂದ ಜನತೆಗೆ ಸರಿಯಾಗಿ ರಕ್ಷಣೆ ನೀಡಲಾಗುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗಿದೆ. ಅಲ್ಲದೇ ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಕೇಂದ್ರ ಸರ್ಕಾರ ಚುನಾವಣೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ರಾಜಕೀಯಕ್ಕಾಗಿ ರಾಜಿ ಮಾಡಿಕೊಳ್ಳುವ ಸಂದಿಗ್ಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೋರಾಟಗಾರ್ತಿಯಾಗಿ ಕೆಲಸ ಮುಂದುವರೆಸುವುದಾಗಿ ಶೆಹ್ಲಾ ತಿಳಿಸಿದ್ದಾರೆ. ಅಲ್ಲದೇ ಕಾಶ್ಮೀರದಲ್ಲಿ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಜನತೆ ಮುನ್ನೆಲೆಗೆ ಬರಲು ಭಯಪಡುತ್ತಿದ್ದಾರೆ. ಆರ್ಟಿಕಲ್ 370 ಮತ್ತು ವಿಭಜನೆ ಬಗ್ಗೆ ಮಾತನಾಡದಂತೆ ತಡೆಯಲಾಗಿದೆ. ಕೆಲ ಕಾಯಿದೆ ಮೂಲಕ ಜನತೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ದೂರಿದ್ದಾರೆ.
ಇತ್ತ ಕಾಂಗ್ರೆಸ್ ಕೂಡ ಕಾಶ್ಮೀರದಲ್ಲಿ ನಡೆಯಲಿರುವ ಬಿಡಿಸಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ. ಪ್ರದೇಶ್ ಕಾಂಗ್ರೆಸ್ ಕಮಿಟಿ ಮುಖ್ಯ ವಕ್ತಾರ ರವೀಂದ್ರ ಶರ್ಮಾ ಮಾತನಾಡಿ, ಸರ್ಕಾರ ರಾಜ್ಯದಲ್ಲಿ ಮೀಸಲಾತಿ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ಕೇಳಿದಾಗಲೂ ಯಾವುದೇ ಸಹಕಾರ ನೀಡುತ್ತಿಲ್ಲ ಎಂದಿದ್ದಾರೆ. ಇನ್ನು ಕೆಲ ರಾಜಕೀಯ ನಾಯಕರನ್ನು ಗೃಹಬಂಧನದಿಂದ ಮುಕ್ತಗೊಳಿಸಿಲ್ಲ. ಪ್ರಭಾವಿ ನಾಯಕರ ಮೇಲೆ ನಿಷೇಧ ಹೇರಲಾಗಿದೆ ಹಾಗಾಗಿ ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರ ಪಕ್ಷಗಳು ಬಿಡಿಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿವೆ. ಆದರೂ ಸಹ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರವೀಂದ್ರ ಹೇಳಿದ್ದು, ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.