Homeಅಂಕಣಗಳುಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

- Advertisement -
- Advertisement -

ದಕ್ಷರು, ಪ್ರಾಮಾಣಿಕ ಜನಾನುರಾಗಿ ಮತ್ತು ಬಿಜೆಪಿಯ ಅನರ್ಘ್ಯ ರತ್ನದಂತಿದ್ದ ಈಶ್ವರಪ್ಪನವರು, ತುಂಡುಗುತ್ತಿಗೆ ಕಂಟ್ರಾಕ್ಟರ್ ಒಬ್ಬರು ನಲವತ್ತು ಪರಸೆಂಟು ಲಂಚಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದು ಕೇಳಿದ ಶಿವಮೊಗ್ಗದ ಈಶ್ವರಪ್ಪನ ಕಡೆಯ ಅಭಿಮಾನಿಗಳು, ಸಂತೋಷ್ ಪಾಟೀಲ್ ಕುಟುಂಬದವರಿಗಿಂತಲೂ ಜೋರಾಗಿ ಅಳುತ್ತಾ, “ಅಯ್ಯೋ ಈಸ್ವುರಪ್ಪಾ, ಇನ್ಯಾರಪ್ಪ ನಮ್ಮನ್ನ ಟೂರಿಗೆ ಕರಕೊಂಡೋಗೋರು, ಪುಣ್ಯಕ್ಷೇತ್ರ ತೋರ್‍ಸೋರು, ಗೌರಿ ಹಬ್ಬಕ್ಕೆ ಬಾಗೀನ ಕೊಡತಿದ್ದಲ್ಲ ಇನ್ಯಾರಪ್ಪ ಕೊಡೋರು” ಎಂದು ಮುಗಿಲು ಮುಟ್ಟುವಂತೆ ರೋದಿಸಿದರಂತಲ್ಲಾ. ಇದನ್ನ ನೋಡಲಾಗದ ಈಶ್ವರಪ್ಪನೂ ಬಿಕ್ಕಳಿಸುತ್ತ “ಹೆದರಬೇಡಿ ಮಂತ್ರಿಗಿರಿ ಹೋದರೇನಾಯ್ತು, ನಾನಿನ್ನೂ ಶಾಸಕ, ರೈಲಲ್ಲಿ ಕರಕಂಡೋಗಿ ಕಾಶಿ ಅಯೋಧ್ಯೆ ವಾರಣಾಸಿ ತೋರಿಸಿಕೊಂಡು ವಾಪಸ್ಸು ಬತ್ತಿನಿ” ಎಂದರಂತಲ್ಲಾ. ಈಶ್ವರಪ್ಪನ ಸ್ಥಿತಿ ಕಂಡು ಎಡೂರಪ್ಪನ ಕಡೆಯ ಎಡಗರು ಮುಸಿಮುಸಿ ನಗುತ್ತಿರಬೇಕಾದರೆ ಅತ್ತ ಎಂಟು ಜನ ಸ್ವಾಮೀಜಿಗಳಾದ ಚೌಕಿ ಮಠದ ನೀಲಕಂಠಸ್ವಾಮಿ, ಪ್ರಭುಕುಮಾರ ಸ್ವಾಮೀಜಿ, ಚೆನ್ನಬಸವಸ್ವಾಮಿ, ಗುತ್ತಲ ಕಲ್ಮಟದ ಪ್ರಭುಸ್ವಾಮಿ, ಹೀರೇಮಠದ ಮಹಂತ ಶಿವಾಚಾರ್ಯಸ್ವಾಮಿ, ಜಡೆ ಸಂಸ್ಥಾನದ ಯೋಗಾಚಾರ್ಯ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯಸ್ವಾಮಿ, ಮೂಲೆಗದ್ದೆ ಚನ್ನಬಸವಸ್ವಾಮಿ ಅಷ್ಟ ದಿಕ್ಕಿನಿಂದ ಅಳುತ್ತಾ ಬಂದು ಈಶ್ವರಪ್ಪನ ಮನೆ ತಲುಪಿದರಂತಲ್ಲಾ. ಥೂತ್ತೆರಿ.

*****

ಇದ್ದಕ್ಕಿದ್ದಂತೆ ಈಶ್ವರಪ್ಪನ ಮನೆಯ ಮುಂದಿನ ಆವರಣ ಕೇಸರಿಮಯವಾದುದಲ್ಲದೆ ಆ ಪ್ರಭೆ ತುಂಗಾನದಿಗೂ ಪಸರಿಸಲಾಗಿ ಬೆದರಿದ ಈಶ್ವರಪ್ಪ ಹೊರಗೋಡಿ ಬಂದು ನೋಡಿದರೆ ಅಷ್ಟಮಠಗಳ ಯತಿಗಳು ಈಶ್ವರಪ್ಪನ ಬೀಳ್ಕೊಡುಗೆಗೆ ಬಂದವರಂತೆ ಪ್ರಸನ್ನವಾಗಿ ನಗುತ್ತಿದ್ದರಂತಲ್ಲಾ. ರೋಮಾಂಚನಗೊಂಡ ಈಶ್ವರಪ್ಪ ನಾನು ರಾಜೀನಾಮೆ ಕೊಟ್ಟದ್ದು ಒಳ್ಳೆಯದೇ ಆಯ್ತು, ಕೊಡದೇ ಇದ್ದರೆ ನೀವು ಇಷ್ಟು ಸುಲಭವಾಗಿ ನನ್ನ ಮನೆ ಬಾಗಿಲಿಗೆ ಬರುತ್ತಿರಲಿಲ್ಲ, ಅನಾಯಾಸವಾಗಿ ನಾನು ನಿಮ್ಮ ಮುಖ ನೋಡಲಾಗುತ್ತಿರಲಿಲ್ಲ ಎಂದು ಅಡ್ಡಬೀಳುವಾಗ, ಈ ಹೃದಯ ವಿದ್ರಾವಕ ದೃಶ್ಯ ಶಿಶುನಾಳ ಶರೀಪರ ತತ್ವಪದವನ್ನ ಜ್ಞಾಪಕಕ್ಕೆ ತಂದಿತಲ್ಲಾ. ಅದೇನೆಂದರೆ:

’ಎಂಟು ಮಂದಿ ನಂಟರು ಕೂಡೀ ಗಂಟು ಬಿದ್ದಾಗಾ
ಪಂಟು ಹೊಡೆದು ಹೋಗುವಂತ ಸೊಂಟಾ ಮುರದ ಮುದಕಿಯ ಕಂಡು
ಎಂಥಾ ನಗಿಯು ಬಂತೋ, ನಮಗೆ ನಡ ಮುರಕಿಯ ಕಂಡೂ
ಎಂಥಾ ನಗಿಯೂ ಬಂತೋ ನಮಗಾ’

ಎನ್ನುವ ತತ್ವಪದಕ್ಕೆ ಸಾಬರನ್ನ ಕಂಡರಾಗದ ಈಶ್ವರಪ್ಪ ಅರ್ಥ ಕಲ್ಪಿಸಿದ್ದು ವಿಪರ್ಯಾಸವಲ್ಲವೆ. ಅದಿರಲಿ ಮದುವೆಯಾಗಿ ಮೂರು ವರ್ಷಕ್ಕೆ ಸಂತೋಷರನ್ನು ಕಳೆದುಕೊಂಡ ಮಹಿಳೆಯನ್ನು ನೋಡಲು ಈ ಅಷ್ಟಸ್ವಾಮಿಗಳು ಇನ್ನು ಹೋಗಿಲ್ಲವಂತೆ. ಯಾಕೆಂದರೆ ನಲವತ್ತು ಪರಸೆಂಟು ಕಮಿಷನ್‌ಗೆ ಬಲಿಯಾದ ಜಾಗಕ್ಕಿಂತ ವಸೂಲಾದ ಜಾಗವೇ ಲಾಭದಾಯಕವಲ್ಲವೆ ಜೈಜಗದ್ಗುರು. ಥೂತ್ತೇರಿ.

ಸಂತೋಷ್ ಪಾಟೀಲ್

*****

ಎರಡು ಬಾರಿ ಮಂತ್ರಿಯಾದುದಕ್ಕೇ ಈಶ್ವರಪ್ಪನ ಆಸ್ತಿ ತುಂಗಾನದಿ ದಡದ ನೀಲಗಿರಿ ಮರದಂತೆ ಬೆಳೆದಿದೆಯಂತಲ್ಲಾ. ಒಬ್ಬನೇ ಮಗ, ಊರ ತುಂಬ ಆಸ್ತಿಯಿದ್ದರೂ ನಲವತ್ತು ಪರಸೆಂಟಿಗೆ ಹಠ ಹಿಡಿದು ಗುತ್ತಿಗೆದಾರನ ಸಾವಿಗೆ ಕಾರಣರಾದರು ಎಂಬ ಆರೋಪದಲ್ಲಿ ಈಶ್ವರಪ್ಪನವರ ಅಪರಾಧವಷ್ಟೇ ಅಲ್ಲ, ಆತನ ಅಕ್ರಮ ದುಡಿಮೆಗೆ ಕೈಚಾಚುತ್ತಿದ್ದ ಅಷ್ಟಮಠದ ಸ್ವಾಮಿಗಳ ಪಾತ್ರವೂ ಇದೆ ಎಂದು ಸಾಮಾನ್ಯರು ಗುಮಾನಿಸುತ್ತಿದ್ದಾರಂತಲ್ಲಾ. ಈಶ್ವರಪ್ಪನವರ ಅಥವಾ ಬಿಜೆಪಿಯ ಬಿಸ್ಕತ್ತಿಗೆ ಒಗ್ಗಿಹೋಗಿರುವ ಕೆಲ ಮಾಧ್ಯಮದವರು ಈ ಸಮಯದಲ್ಲಿ ನಾವು ಈಶ್ವರಪ್ಪನವರಿಗೆ ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸುತ್ತ, ಕಡೆಗೆ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರದೇಶಕ್ಕೆ ಆತನ ಗೆಳೆಯರೂ ಹೋಗಿದ್ದಾರೆಂದು ಸಂಗತಿಯನ್ನ ಪತ್ತೆಹಚ್ಚಿದರಂತಲ್ಲಾ. ಸಂತೋಷನ ಜೊತೆಯಿದ್ದವರು ಏನು ಮಾಡುತ್ತಿದ್ದರು, ಆತನ ಚಲನವಲನ, ಮನಸ್ಥಿತಿ ಏನು ಎನ್ನುವುದನ್ನ ತಿಳಿದುಕೊಳ್ಳಬೇಕಿತ್ತು, ಆತನನ್ನು ಕಾಯಬೇಕಿತ್ತು, ಒಂದೇ ರೂಮಿನಲ್ಲಿ ಅವನನ್ನ ಬಿಡಬಾರದಿತ್ತು ಎಂಬ ಪ್ರಶ್ನೆಗಳನ್ನೆತ್ತಿ, ಅತ್ತ ಈಶ್ವರಪ್ಪನೂ ಬಚಾವಾಗಬೇಕು, ಬಿಜೆಪಿಗೂ ಕಳಂಕ ಬರಬಾರದು ಮತ್ತು ಒಟ್ಟು ನಡೆದಿರುವುದಕ್ಕೆಲ್ಲಾ ಸಂತೋಷ್ ಮತ್ತವನ ಗೆಳೆಯರೇ ಕಾರಣವೆಂಬಂತೆ ಬಿಂಬಿಸುತ್ತಿವೆಯಂತಲ್ಲಾ. ಎಂಜಲು ರುಣ ಎಂದರೆ ಇದೆ ಅಲ್ಲವೆ. ಥೂತ್ತೇರಿ.

*******

ಈಶ್ವರಪ್ಪನಂತಹ ಈಶ್ವರಪ್ಪನೇ ರಾಜೀನಾಮೆ ಕೊಡಲು ತಯಾರಾದಾಗ, ಅತ್ತ ಜೆಡಿಎಸ್ ದಂಡನಾಯಕರಾದ ಕುಮಾರಣ್ಣನವರು ಈಶ್ವರಪ್ಪ ಯಾಕ್ರಿ ರಾಜೀನಾಮೆ ಕೊಡಬೇಕು, ಚಿಕ್ಕಮಗಳೂರ ಪೊಲೀಸ್ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ರ, ಆದ್ರಿಂದ ಈಶ್ವರಪ್ಪನ ರಾಜೀನಾಮೆ ಕೇಳೊ ಹಕ್ಕು ಅವರಿಗಿಲ್ಲಾ ಎಂದುಬಿಟ್ಟರಲ್ಲಾ. ಸದರಿ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ಶಾಕ್ ಆದರೆ ಈಶ್ವರಪ್ಪನ ಅಭಿಮಾನಿಗಳು ಕುಮಾರಣ್ಣನಿಗೆ ಜೈ ಎಂದರಲ್ಲಾ. ಜೆಡಿಎಸ್ ಕಾರ್ಯಕರ್ತರ ಪ್ರಕಾರ ಚಿಕ್ಕಮಗಳೂರ ಬಡ ಪೊಲೀಸ್ ಹುಡುಗ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು ಇಲಾಖೆಯವರ ಷ್ಯಡ್ಯಂತ್ರದಿಂದ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಈಶ್ವರಪ್ಪನಿಗೆ ನಲವತ್ತು ಪರಸೆಂಟು ಕೊಡಲಾಗದೆ ಇರುವುದರಿಂದ ಎಂದು ಆರೋಪಿಸಲಾಗಿದೆ. ಇಂತಹ ಸಾಮಾನ್ಯರ ಮಾತುಗಳನ್ನ ಕೇಳಿಸಿಕೊಳ್ಳದೆ ಮಾತನಾಡುವ ಕುಮಾರಣ್ಣ ವಾರದ ಹಿಂದೆ ಬಿಜೆಪಿಗಳ ವಿರುದ್ಧ ತೊಡೆತಟ್ಟಿ ಈಗ ಬಿಜೆಪಿಗಳ ಭುಜ ತಟ್ಟಿದರಲಾ, ನಾವೀ ಪಾರ್ಟಿಯಲ್ಲಿ ಹೇಗಿರುವುದು ಎಂದು ಚಿಂತಾಕ್ರಾಂತರಾಗಿರುವಾಗಲೇ ಶಿರಹಟ್ಟಿ ಜಗದ್ಗುರುಗಳಾದ ಫಕೀರ ದಿಂಗಾಲೇಶ್ವರ ಸ್ವಾಮಿಜೀಯವರು ಸರಕಾರದ ಕಾಮಗಾರಿಗೆ ನಲವತ್ತು ಪರಸೆಂಟ್ ನಿಗದಿ ಮಾಡಿದ್ದರೆ, ಮಠಗಳಿಗೆ ಕೊಡುವ ಅನುದಾನದಲ್ಲಿ ಮುವತ್ತು ಪರಸೆಂಟ್ ತೆಗೆದುಕೊಳ್ಳುತ್ತಿದೆ ಸರ್ಕಾರ, ಮಠಗಳಿಂದಲೇ ವಸೂಲು ಮಾಡುವ ಈ ಸರ್ಕಾರಕ್ಕೆ ಇನ್ನ ಜನಸಾಮಾನ್ಯರು ಯಾವ ಲೆಕ್ಕ ಎಂದು ಬಹಿರಂಗವಾಗೇ ಹೇಳಿದರಂತಲ್ಲಾ. ಥೂತ್ತೇರಿ.

ಸಿಎಂ ಇಬ್ರಾಹಿಂ

******

ಮನರಂಜನೆಯಿಲ್ಲದೆ ನರಳುತ್ತಿದ್ದ ಜೆಡಿಎಸ್ ಪಕ್ಷಕ್ಕೆ ತುಸು ಮನರಂಜನೆಯೊದಗಿಸಲು ದೇವೇಗೌಡರು ಸಿಎಂ ಇಬ್ರಾಹಿಂ ಎಂಬ ಮಾತಿನ ಮಲ್ಲನನ್ನ ಅಧ್ಯಕ್ಷರನ್ನಾಗಿಸಿದರಲ್ಲಾ. ಎರಡು ರಾಷ್ಟ್ರೀಯ ಪಕ್ಷಗಳನ್ನು ನಿಯಂತ್ರಣದಲ್ಲಿ ಇಡಲು ಮೂರನೇ ಪಾರ್ಟಿಯ ಅಗತ್ಯವಿದೆ, ಆದರೆ ಇಬ್ರಾಹಿಂರವರಿಂದ ಜನಕ್ಕೆ ಮನರಂಜನೆ ದೊರಕಬಹುದೇ ಹೊರತು ಮತ ಬರಲಾರವು. ಸ್ವತಹ ಆತನೇ ಭದ್ರಾವತಿಯಲ್ಲಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದವರು. ಆದರೇನು ದೇವೇಗೌಡರ ಒಳಮರ್ಮ ತಿಳಿಯಲು ತಡವಾಗಬಹುದು. ಸದ್ಯಕ್ಕೆ ಅವರು ನಾಗಮಂಗಲಕ್ಕೆ ಹೋಗಿ ಮೂರು ವರ್ಷದ ಹಿಂದೆಯೇ ಉದ್ಘಾಟನೆಗೊಂಡ ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಿದ್ದಾರೆ, ಕಾರಣ ಆ ಪ್ರದೇಶದ ಮಾಜಿ ಮಂತ್ರಿ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ತಿರುಗುತ್ತ ಮಾತನಾಡುತ್ತಿರುವುದು. ಮಾನ್ಯ ದೇವೇಗೌಡರ ಅರವತ್ತು ವರ್ಷದ ರಾಜಕಾರಣದಲ್ಲಿ ಯಾವ ಒಕ್ಕಲಿಗ ನಾಯಕನು ಬೆಳೆಯದಂತೆ ನೋಡಿಕೊಂಡಿದ್ದಲ್ಲದೆ ಭಕ್ತ ಕುಂಬಾರನಂತೆ ತುಳಿದು ಮಣ್ಣು ಸೇರಿಸಿದ್ದಾರೆ. ಅಲ್ಲದೆ ಜನಾಂಗದ ಹೆಮ್ಮೆಯ ಚುಂಚನಗಿರಿ ಮಠಕ್ಕೆ ಕೊಡಬಾರದ ತೊಂದರೆ ಕೊಟ್ಟು ಸ್ವಾಮಿ ಕಣ್ಣಲ್ಲಿ ನೀರು ತರಿಸಿದ್ದರು ಎಂಬ ಚೆಲುವರಾಯಸ್ವಾಮಿ ಮಾತಿನಿಂದ ಕೆರಳಿರುವ ಗೌಡರು ಮಾತನಾಡಲಾಗದಿದ್ದರೂ, ನಡೆಯಲಾಗದಿದ್ದರೂ ನಾಗಮಂಗಲಕ್ಕೆ ಬಂದು ಈಗಾಗಲೇ ದಲಿತರು, ಕಾಂಗ್ರೆಸ್ಸಿಗರು ಹಾಗೂ ಶಿವರಾಮೇಗೌಡರ ಹಾರಗಳಿಂದ ಮುಚ್ಚಿಹೋಗಿದ್ದ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದಾಗ ನೋಡಿದ ಜನಸ್ತೋಮ ’ಸೇಡು ಅಂದರೆ ಇದಪ್ಪ’ ಎಂದು ಉದ್ಘಾರ ತೆಗೆದರಂತಲ್ಲಾ. ಥೂತ್ತೇರಿ.


ಇದನ್ನೂ ಓದಿ: ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...