Homeಅಂಕಣಗಳುಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

- Advertisement -
- Advertisement -

ದಕ್ಷರು, ಪ್ರಾಮಾಣಿಕ ಜನಾನುರಾಗಿ ಮತ್ತು ಬಿಜೆಪಿಯ ಅನರ್ಘ್ಯ ರತ್ನದಂತಿದ್ದ ಈಶ್ವರಪ್ಪನವರು, ತುಂಡುಗುತ್ತಿಗೆ ಕಂಟ್ರಾಕ್ಟರ್ ಒಬ್ಬರು ನಲವತ್ತು ಪರಸೆಂಟು ಲಂಚಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದು ಕೇಳಿದ ಶಿವಮೊಗ್ಗದ ಈಶ್ವರಪ್ಪನ ಕಡೆಯ ಅಭಿಮಾನಿಗಳು, ಸಂತೋಷ್ ಪಾಟೀಲ್ ಕುಟುಂಬದವರಿಗಿಂತಲೂ ಜೋರಾಗಿ ಅಳುತ್ತಾ, “ಅಯ್ಯೋ ಈಸ್ವುರಪ್ಪಾ, ಇನ್ಯಾರಪ್ಪ ನಮ್ಮನ್ನ ಟೂರಿಗೆ ಕರಕೊಂಡೋಗೋರು, ಪುಣ್ಯಕ್ಷೇತ್ರ ತೋರ್‍ಸೋರು, ಗೌರಿ ಹಬ್ಬಕ್ಕೆ ಬಾಗೀನ ಕೊಡತಿದ್ದಲ್ಲ ಇನ್ಯಾರಪ್ಪ ಕೊಡೋರು” ಎಂದು ಮುಗಿಲು ಮುಟ್ಟುವಂತೆ ರೋದಿಸಿದರಂತಲ್ಲಾ. ಇದನ್ನ ನೋಡಲಾಗದ ಈಶ್ವರಪ್ಪನೂ ಬಿಕ್ಕಳಿಸುತ್ತ “ಹೆದರಬೇಡಿ ಮಂತ್ರಿಗಿರಿ ಹೋದರೇನಾಯ್ತು, ನಾನಿನ್ನೂ ಶಾಸಕ, ರೈಲಲ್ಲಿ ಕರಕಂಡೋಗಿ ಕಾಶಿ ಅಯೋಧ್ಯೆ ವಾರಣಾಸಿ ತೋರಿಸಿಕೊಂಡು ವಾಪಸ್ಸು ಬತ್ತಿನಿ” ಎಂದರಂತಲ್ಲಾ. ಈಶ್ವರಪ್ಪನ ಸ್ಥಿತಿ ಕಂಡು ಎಡೂರಪ್ಪನ ಕಡೆಯ ಎಡಗರು ಮುಸಿಮುಸಿ ನಗುತ್ತಿರಬೇಕಾದರೆ ಅತ್ತ ಎಂಟು ಜನ ಸ್ವಾಮೀಜಿಗಳಾದ ಚೌಕಿ ಮಠದ ನೀಲಕಂಠಸ್ವಾಮಿ, ಪ್ರಭುಕುಮಾರ ಸ್ವಾಮೀಜಿ, ಚೆನ್ನಬಸವಸ್ವಾಮಿ, ಗುತ್ತಲ ಕಲ್ಮಟದ ಪ್ರಭುಸ್ವಾಮಿ, ಹೀರೇಮಠದ ಮಹಂತ ಶಿವಾಚಾರ್ಯಸ್ವಾಮಿ, ಜಡೆ ಸಂಸ್ಥಾನದ ಯೋಗಾಚಾರ್ಯ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯಸ್ವಾಮಿ, ಮೂಲೆಗದ್ದೆ ಚನ್ನಬಸವಸ್ವಾಮಿ ಅಷ್ಟ ದಿಕ್ಕಿನಿಂದ ಅಳುತ್ತಾ ಬಂದು ಈಶ್ವರಪ್ಪನ ಮನೆ ತಲುಪಿದರಂತಲ್ಲಾ. ಥೂತ್ತೆರಿ.

*****

ಇದ್ದಕ್ಕಿದ್ದಂತೆ ಈಶ್ವರಪ್ಪನ ಮನೆಯ ಮುಂದಿನ ಆವರಣ ಕೇಸರಿಮಯವಾದುದಲ್ಲದೆ ಆ ಪ್ರಭೆ ತುಂಗಾನದಿಗೂ ಪಸರಿಸಲಾಗಿ ಬೆದರಿದ ಈಶ್ವರಪ್ಪ ಹೊರಗೋಡಿ ಬಂದು ನೋಡಿದರೆ ಅಷ್ಟಮಠಗಳ ಯತಿಗಳು ಈಶ್ವರಪ್ಪನ ಬೀಳ್ಕೊಡುಗೆಗೆ ಬಂದವರಂತೆ ಪ್ರಸನ್ನವಾಗಿ ನಗುತ್ತಿದ್ದರಂತಲ್ಲಾ. ರೋಮಾಂಚನಗೊಂಡ ಈಶ್ವರಪ್ಪ ನಾನು ರಾಜೀನಾಮೆ ಕೊಟ್ಟದ್ದು ಒಳ್ಳೆಯದೇ ಆಯ್ತು, ಕೊಡದೇ ಇದ್ದರೆ ನೀವು ಇಷ್ಟು ಸುಲಭವಾಗಿ ನನ್ನ ಮನೆ ಬಾಗಿಲಿಗೆ ಬರುತ್ತಿರಲಿಲ್ಲ, ಅನಾಯಾಸವಾಗಿ ನಾನು ನಿಮ್ಮ ಮುಖ ನೋಡಲಾಗುತ್ತಿರಲಿಲ್ಲ ಎಂದು ಅಡ್ಡಬೀಳುವಾಗ, ಈ ಹೃದಯ ವಿದ್ರಾವಕ ದೃಶ್ಯ ಶಿಶುನಾಳ ಶರೀಪರ ತತ್ವಪದವನ್ನ ಜ್ಞಾಪಕಕ್ಕೆ ತಂದಿತಲ್ಲಾ. ಅದೇನೆಂದರೆ:

’ಎಂಟು ಮಂದಿ ನಂಟರು ಕೂಡೀ ಗಂಟು ಬಿದ್ದಾಗಾ
ಪಂಟು ಹೊಡೆದು ಹೋಗುವಂತ ಸೊಂಟಾ ಮುರದ ಮುದಕಿಯ ಕಂಡು
ಎಂಥಾ ನಗಿಯು ಬಂತೋ, ನಮಗೆ ನಡ ಮುರಕಿಯ ಕಂಡೂ
ಎಂಥಾ ನಗಿಯೂ ಬಂತೋ ನಮಗಾ’

ಎನ್ನುವ ತತ್ವಪದಕ್ಕೆ ಸಾಬರನ್ನ ಕಂಡರಾಗದ ಈಶ್ವರಪ್ಪ ಅರ್ಥ ಕಲ್ಪಿಸಿದ್ದು ವಿಪರ್ಯಾಸವಲ್ಲವೆ. ಅದಿರಲಿ ಮದುವೆಯಾಗಿ ಮೂರು ವರ್ಷಕ್ಕೆ ಸಂತೋಷರನ್ನು ಕಳೆದುಕೊಂಡ ಮಹಿಳೆಯನ್ನು ನೋಡಲು ಈ ಅಷ್ಟಸ್ವಾಮಿಗಳು ಇನ್ನು ಹೋಗಿಲ್ಲವಂತೆ. ಯಾಕೆಂದರೆ ನಲವತ್ತು ಪರಸೆಂಟು ಕಮಿಷನ್‌ಗೆ ಬಲಿಯಾದ ಜಾಗಕ್ಕಿಂತ ವಸೂಲಾದ ಜಾಗವೇ ಲಾಭದಾಯಕವಲ್ಲವೆ ಜೈಜಗದ್ಗುರು. ಥೂತ್ತೇರಿ.

ಸಂತೋಷ್ ಪಾಟೀಲ್

*****

ಎರಡು ಬಾರಿ ಮಂತ್ರಿಯಾದುದಕ್ಕೇ ಈಶ್ವರಪ್ಪನ ಆಸ್ತಿ ತುಂಗಾನದಿ ದಡದ ನೀಲಗಿರಿ ಮರದಂತೆ ಬೆಳೆದಿದೆಯಂತಲ್ಲಾ. ಒಬ್ಬನೇ ಮಗ, ಊರ ತುಂಬ ಆಸ್ತಿಯಿದ್ದರೂ ನಲವತ್ತು ಪರಸೆಂಟಿಗೆ ಹಠ ಹಿಡಿದು ಗುತ್ತಿಗೆದಾರನ ಸಾವಿಗೆ ಕಾರಣರಾದರು ಎಂಬ ಆರೋಪದಲ್ಲಿ ಈಶ್ವರಪ್ಪನವರ ಅಪರಾಧವಷ್ಟೇ ಅಲ್ಲ, ಆತನ ಅಕ್ರಮ ದುಡಿಮೆಗೆ ಕೈಚಾಚುತ್ತಿದ್ದ ಅಷ್ಟಮಠದ ಸ್ವಾಮಿಗಳ ಪಾತ್ರವೂ ಇದೆ ಎಂದು ಸಾಮಾನ್ಯರು ಗುಮಾನಿಸುತ್ತಿದ್ದಾರಂತಲ್ಲಾ. ಈಶ್ವರಪ್ಪನವರ ಅಥವಾ ಬಿಜೆಪಿಯ ಬಿಸ್ಕತ್ತಿಗೆ ಒಗ್ಗಿಹೋಗಿರುವ ಕೆಲ ಮಾಧ್ಯಮದವರು ಈ ಸಮಯದಲ್ಲಿ ನಾವು ಈಶ್ವರಪ್ಪನವರಿಗೆ ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸುತ್ತ, ಕಡೆಗೆ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರದೇಶಕ್ಕೆ ಆತನ ಗೆಳೆಯರೂ ಹೋಗಿದ್ದಾರೆಂದು ಸಂಗತಿಯನ್ನ ಪತ್ತೆಹಚ್ಚಿದರಂತಲ್ಲಾ. ಸಂತೋಷನ ಜೊತೆಯಿದ್ದವರು ಏನು ಮಾಡುತ್ತಿದ್ದರು, ಆತನ ಚಲನವಲನ, ಮನಸ್ಥಿತಿ ಏನು ಎನ್ನುವುದನ್ನ ತಿಳಿದುಕೊಳ್ಳಬೇಕಿತ್ತು, ಆತನನ್ನು ಕಾಯಬೇಕಿತ್ತು, ಒಂದೇ ರೂಮಿನಲ್ಲಿ ಅವನನ್ನ ಬಿಡಬಾರದಿತ್ತು ಎಂಬ ಪ್ರಶ್ನೆಗಳನ್ನೆತ್ತಿ, ಅತ್ತ ಈಶ್ವರಪ್ಪನೂ ಬಚಾವಾಗಬೇಕು, ಬಿಜೆಪಿಗೂ ಕಳಂಕ ಬರಬಾರದು ಮತ್ತು ಒಟ್ಟು ನಡೆದಿರುವುದಕ್ಕೆಲ್ಲಾ ಸಂತೋಷ್ ಮತ್ತವನ ಗೆಳೆಯರೇ ಕಾರಣವೆಂಬಂತೆ ಬಿಂಬಿಸುತ್ತಿವೆಯಂತಲ್ಲಾ. ಎಂಜಲು ರುಣ ಎಂದರೆ ಇದೆ ಅಲ್ಲವೆ. ಥೂತ್ತೇರಿ.

*******

ಈಶ್ವರಪ್ಪನಂತಹ ಈಶ್ವರಪ್ಪನೇ ರಾಜೀನಾಮೆ ಕೊಡಲು ತಯಾರಾದಾಗ, ಅತ್ತ ಜೆಡಿಎಸ್ ದಂಡನಾಯಕರಾದ ಕುಮಾರಣ್ಣನವರು ಈಶ್ವರಪ್ಪ ಯಾಕ್ರಿ ರಾಜೀನಾಮೆ ಕೊಡಬೇಕು, ಚಿಕ್ಕಮಗಳೂರ ಪೊಲೀಸ್ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ರ, ಆದ್ರಿಂದ ಈಶ್ವರಪ್ಪನ ರಾಜೀನಾಮೆ ಕೇಳೊ ಹಕ್ಕು ಅವರಿಗಿಲ್ಲಾ ಎಂದುಬಿಟ್ಟರಲ್ಲಾ. ಸದರಿ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ಶಾಕ್ ಆದರೆ ಈಶ್ವರಪ್ಪನ ಅಭಿಮಾನಿಗಳು ಕುಮಾರಣ್ಣನಿಗೆ ಜೈ ಎಂದರಲ್ಲಾ. ಜೆಡಿಎಸ್ ಕಾರ್ಯಕರ್ತರ ಪ್ರಕಾರ ಚಿಕ್ಕಮಗಳೂರ ಬಡ ಪೊಲೀಸ್ ಹುಡುಗ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು ಇಲಾಖೆಯವರ ಷ್ಯಡ್ಯಂತ್ರದಿಂದ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಈಶ್ವರಪ್ಪನಿಗೆ ನಲವತ್ತು ಪರಸೆಂಟು ಕೊಡಲಾಗದೆ ಇರುವುದರಿಂದ ಎಂದು ಆರೋಪಿಸಲಾಗಿದೆ. ಇಂತಹ ಸಾಮಾನ್ಯರ ಮಾತುಗಳನ್ನ ಕೇಳಿಸಿಕೊಳ್ಳದೆ ಮಾತನಾಡುವ ಕುಮಾರಣ್ಣ ವಾರದ ಹಿಂದೆ ಬಿಜೆಪಿಗಳ ವಿರುದ್ಧ ತೊಡೆತಟ್ಟಿ ಈಗ ಬಿಜೆಪಿಗಳ ಭುಜ ತಟ್ಟಿದರಲಾ, ನಾವೀ ಪಾರ್ಟಿಯಲ್ಲಿ ಹೇಗಿರುವುದು ಎಂದು ಚಿಂತಾಕ್ರಾಂತರಾಗಿರುವಾಗಲೇ ಶಿರಹಟ್ಟಿ ಜಗದ್ಗುರುಗಳಾದ ಫಕೀರ ದಿಂಗಾಲೇಶ್ವರ ಸ್ವಾಮಿಜೀಯವರು ಸರಕಾರದ ಕಾಮಗಾರಿಗೆ ನಲವತ್ತು ಪರಸೆಂಟ್ ನಿಗದಿ ಮಾಡಿದ್ದರೆ, ಮಠಗಳಿಗೆ ಕೊಡುವ ಅನುದಾನದಲ್ಲಿ ಮುವತ್ತು ಪರಸೆಂಟ್ ತೆಗೆದುಕೊಳ್ಳುತ್ತಿದೆ ಸರ್ಕಾರ, ಮಠಗಳಿಂದಲೇ ವಸೂಲು ಮಾಡುವ ಈ ಸರ್ಕಾರಕ್ಕೆ ಇನ್ನ ಜನಸಾಮಾನ್ಯರು ಯಾವ ಲೆಕ್ಕ ಎಂದು ಬಹಿರಂಗವಾಗೇ ಹೇಳಿದರಂತಲ್ಲಾ. ಥೂತ್ತೇರಿ.

ಸಿಎಂ ಇಬ್ರಾಹಿಂ

******

ಮನರಂಜನೆಯಿಲ್ಲದೆ ನರಳುತ್ತಿದ್ದ ಜೆಡಿಎಸ್ ಪಕ್ಷಕ್ಕೆ ತುಸು ಮನರಂಜನೆಯೊದಗಿಸಲು ದೇವೇಗೌಡರು ಸಿಎಂ ಇಬ್ರಾಹಿಂ ಎಂಬ ಮಾತಿನ ಮಲ್ಲನನ್ನ ಅಧ್ಯಕ್ಷರನ್ನಾಗಿಸಿದರಲ್ಲಾ. ಎರಡು ರಾಷ್ಟ್ರೀಯ ಪಕ್ಷಗಳನ್ನು ನಿಯಂತ್ರಣದಲ್ಲಿ ಇಡಲು ಮೂರನೇ ಪಾರ್ಟಿಯ ಅಗತ್ಯವಿದೆ, ಆದರೆ ಇಬ್ರಾಹಿಂರವರಿಂದ ಜನಕ್ಕೆ ಮನರಂಜನೆ ದೊರಕಬಹುದೇ ಹೊರತು ಮತ ಬರಲಾರವು. ಸ್ವತಹ ಆತನೇ ಭದ್ರಾವತಿಯಲ್ಲಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದವರು. ಆದರೇನು ದೇವೇಗೌಡರ ಒಳಮರ್ಮ ತಿಳಿಯಲು ತಡವಾಗಬಹುದು. ಸದ್ಯಕ್ಕೆ ಅವರು ನಾಗಮಂಗಲಕ್ಕೆ ಹೋಗಿ ಮೂರು ವರ್ಷದ ಹಿಂದೆಯೇ ಉದ್ಘಾಟನೆಗೊಂಡ ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಿದ್ದಾರೆ, ಕಾರಣ ಆ ಪ್ರದೇಶದ ಮಾಜಿ ಮಂತ್ರಿ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ತಿರುಗುತ್ತ ಮಾತನಾಡುತ್ತಿರುವುದು. ಮಾನ್ಯ ದೇವೇಗೌಡರ ಅರವತ್ತು ವರ್ಷದ ರಾಜಕಾರಣದಲ್ಲಿ ಯಾವ ಒಕ್ಕಲಿಗ ನಾಯಕನು ಬೆಳೆಯದಂತೆ ನೋಡಿಕೊಂಡಿದ್ದಲ್ಲದೆ ಭಕ್ತ ಕುಂಬಾರನಂತೆ ತುಳಿದು ಮಣ್ಣು ಸೇರಿಸಿದ್ದಾರೆ. ಅಲ್ಲದೆ ಜನಾಂಗದ ಹೆಮ್ಮೆಯ ಚುಂಚನಗಿರಿ ಮಠಕ್ಕೆ ಕೊಡಬಾರದ ತೊಂದರೆ ಕೊಟ್ಟು ಸ್ವಾಮಿ ಕಣ್ಣಲ್ಲಿ ನೀರು ತರಿಸಿದ್ದರು ಎಂಬ ಚೆಲುವರಾಯಸ್ವಾಮಿ ಮಾತಿನಿಂದ ಕೆರಳಿರುವ ಗೌಡರು ಮಾತನಾಡಲಾಗದಿದ್ದರೂ, ನಡೆಯಲಾಗದಿದ್ದರೂ ನಾಗಮಂಗಲಕ್ಕೆ ಬಂದು ಈಗಾಗಲೇ ದಲಿತರು, ಕಾಂಗ್ರೆಸ್ಸಿಗರು ಹಾಗೂ ಶಿವರಾಮೇಗೌಡರ ಹಾರಗಳಿಂದ ಮುಚ್ಚಿಹೋಗಿದ್ದ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದಾಗ ನೋಡಿದ ಜನಸ್ತೋಮ ’ಸೇಡು ಅಂದರೆ ಇದಪ್ಪ’ ಎಂದು ಉದ್ಘಾರ ತೆಗೆದರಂತಲ್ಲಾ. ಥೂತ್ತೇರಿ.


ಇದನ್ನೂ ಓದಿ: ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...