Homeಮುಖಪುಟಇದು ಇಂಡಿಯಾವೂ ಹೌದು, ಭಾರತವೂ ಹೌದು

ಇದು ಇಂಡಿಯಾವೂ ಹೌದು, ಭಾರತವೂ ಹೌದು

- Advertisement -
- Advertisement -

ಜುಲೈ 17-18ರಂದು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟ ಸಭೆಯಲ್ಲಿ, ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆ ಒಕ್ಕೂಟ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿತು. ಕಾಂಗ್ರೆಸ್ ಸೇರಿದಂತೆ ಒಟ್ಟು 26 ಪಕ್ಷಗಳು ಒಂದಾದ ಈ ಮೈತ್ರಿಕೂಟಕ್ಕೆ ಹೊಸ ಹೆಸರನ್ನು ಇಟ್ಟಿದ್ದು ವಿರೋಧ ಪಕ್ಷಗಳಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದ್ದಂತೂ ನಿಜ. ಹಿಂದಿನ ’ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್’ (ಯುಪಿಎ) ಬದಲಿಗೆ ’ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್’ (I.N.D.I.A.) ಎಂದು ಮರುನಾಮಕರಣ ಮಾಡಿಕೊಂಡಿದ್ದು ಗೋಧಿ ಮಾಧ್ಯಮಗಳಲ್ಲೂ ಸೇರಿದಂತೆ ದೊಡ್ಡಮಟ್ಟದಲ್ಲಿ ಕವರ್ ಆಯಿತು. ’ಇಂಡಿಯಾ’ ಎಂದು ಕರೆಯಲ್ಪಟ್ಟ ಈ ಮೈತ್ರಿಕೂಟದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಡಿದ ಮಾತುಗಳು ಹೀಗಿದ್ದವು: “ಇಂಡಿಯಾ ಎಂಬ ಪರಿಕಲ್ಪನೆ ಇಂದು ಅಪಾಯದಲ್ಲಿದೆ. ದೇಶವನ್ನು ಕೆಲವೇ ಕೆಲವು ಉದ್ಯಮಿಗಳ ಕೈಗೆ ನೀಡಲಾಗುತ್ತಿದೆ. ನಿರುದ್ಯೋಗ ಹೆಚ್ಚಿದೆ, ಬೆಲೆ ಏರಿಕೆಯಾಗಿದೆ. ಮುಂಬರುವ ಚುನಾವಣೆ ಯಾರ ನಡುವಿನ ಯುದ್ಧ? ಎರಡು ರಾಜಕೀಯ ಬಣಗಳ ನಡುವಿನ ಸಮರ ಇದಲ್ಲ. ಇಂಡಿಯಾ ಎಂಬ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವ ಸಮರವಿದು- ಹೀಗಾಗಿ ನಾವು ಈ ಹೆಸರಿನಿಂದ ಹೋರಾಟಕ್ಕಿಳಿದಿದ್ದೇವೆ. ನಾವು ಈ ಇಂಡಿಯಾದ ಜನರ ದನಿಯನ್ನು ರಕ್ಷಿಸುತ್ತೇವೆ. ಇಂಡಿಯಾ ಎಂಬ ಪರಿಕಲ್ಪನೆಯನ್ನು ರಕ್ಷಿಸುತ್ತೇವೆ. ಈ ಸಮರ ಇಂಡಿಯಾ ಮತ್ತು ಬಿಜೆಪಿಯ ನಡುವಿನದ್ದಾಗಿದೆ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದಾಗಿದೆ.”

ರಾಷ್ಟ್ರೀಯತೆ, ದೇಶ ರಕ್ಷಣೆಯ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುವ ರಾಜಕಾರಣಕ್ಕೆ ವಿರೋಧಿ ಮೈತ್ರಿಕೂಟ ಇಟ್ಟುಕೊಂಡಿರುವ ’ಇಂಡಿಯಾ’ ಎಂಬ ಹೆಸರೇ ನುಂಗಲಾರದ ತುತ್ತಿನಂತೆ ಭಾಸವಾಗಿದೆ. ತನ್ನನ್ನು ಮಾತ್ರ ’ಭಾರತೀಯ’ ಎಂದು ಬಿಂಬಿಸಿಕೊಳ್ಳುವ ’ಭಾರತೀಯ ಜನತಾ ಪಾರ್ಟಿ’ (ಬಿಜೆಪಿ)ಗೆ ಪ್ರತಿಪಕ್ಷಗಳ ಈ ಪ್ರಯೋಗ ಇಕ್ಕಟ್ಟಿಗೆ ಸಿಲುಕಿಸಿದೆ. ವಿರೋಧ ಪಕ್ಷಗಳು ’ಇಂಡಿಯಾ’ ಎಂಬ ಹೆಸರನ್ನು ಇಟ್ಟುಕೊಂಡ ಬಳಿಕ ಸಂಘಪರಿವಾರ ’ಭಾರತ’ ಎಂಬ ಹೆಸರನ್ನಷ್ಟೇ ಬಳಸುವ ಮೂಲಕ ’ಇಂಡಿಯಾ’ ಬೇರೆ, ’ಭಾರತ’ ಬೇರೆ ಎಂಬ ಚರ್ಚೆಯನ್ನು ಹುಟ್ಟು ಹಾಕುತ್ತಿದೆ.

ಜಿ20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿದ್ದು ಹೊಸ ಸಂಪ್ರದಾಯಕ್ಕೆ ನಾಂದಿ ಆಡಿತು. ಸಾಮಾನ್ಯವಾಗಿ ’ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂದು ಬಳಸುವುದು ಈವರೆಗಿನ ರೂಢಿಯಾಗಿತ್ತು. ’ಇಂಡಿಯಾ’ ಬದಲು ’ಭಾರತ್’ ಎಂದು ನಮೂದಿಸಿದ್ದು, ದೇಶದ ಹೆಸರು ಬದಲಿಸುವ ಕಸರತ್ತಿನಂತೆ ಕಾಣತೊಡಗಿದೆ. ಬಿಜೆಪಿ ಬೆಂಬಲಿಗರು, ಸಂಘಪರಿವಾರದ ಮೂಲದವರು ’ಭಾರತ್’ ಎಂಬ ಹೆಸರನ್ನೇ ಹೆಚ್ಚಾಗಿ ಬಳಸತೊಡಗಿದ್ದಾರೆ; ಮತ್ತು ಈ ಬದಲಾವಣೆ ಆಗಿಯೇ ತೀರಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

“ದೇಶದ ಹೆಸರು ಇಂಡಿಯಾ ಬದಲು, ಭಾರತ ಎಂದು ಬದಲಾಗಬೇಕೆ? ಬೇರೆ ದೇಶಗಳು ಕೂಡ ಒಂದೇ ಹೆಸರನ್ನು ಹೊಂದಿವೆ. ಹಲವು ದೇಶಗಳು ತಮ್ಮ ಹೆಸರನ್ನು ಬದಲಿಸಿಕೊಂಡ ಉದಾಹರಣೆಗಳಿವೆ, ಇಂಡಿಯಾ ಎಂಬುದು ವಸಾಹತುಶಾಹಿ ಬ್ರಿಟಿಷರು ನೀಡಿದ ಹೆಸರಾಗಿದ್ದರಿಂದ ನಾವ್ಯಾಕೆ ಇಂಡಿಯಾ ಎಂದು ಬಳಸಬೇಕು?” ಎಂಬಿತ್ಯಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರ ಇಂಡೋನೇಷ್ಯಾ ಪ್ರತಿನಿಧಿಗಳ ಭೇಟಿಯ ಕುರಿತು ಪೋಸ್ಟರ್‌ಒಂದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ’ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ’ ಎಂಬುದನ್ನು ’ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಬಳಸಲಾಗಿತ್ತು. ನಿಧಾನಕ್ಕೆ  ‘ಇಂಡಿಯಾ’ ಎಂದು ಬಳಸುವಲ್ಲೆಲ್ಲಾ ’ಭಾರತ್’ ಎಂಬುದನ್ನು ಹೆಚ್ಚಾಗಿ ಪ್ರಯೋಗಿಸುವ ಬೆಳವಣಿಗೆ ನಿಚ್ಚಳವಾಗಿ ಕಾಣುತ್ತಿದೆ. ಇದು ದೇಶದ ಹೆಸರನ್ನು ’ಭಾರತ್’ ಎಂದಾಗಿ ಬದಲಿಸುವ ಕಾರ್ಯಸೂಚಿಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಈ ನಡುವೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, “ಭಾರತದ ಹೆಸರನ್ನು ಇಂಡಿಯಾವಾಗಿ ಬದಲಿಸುತ್ತಾರೆಂಬುದು ಕೇವಲ ವದಂತಿಯಷ್ಟೇ” ಎಂದಿದ್ದಾರೆ. ಆದರೆ ಬಿಜೆಪಿ ಈವರೆಗಿನ ಸಂಪ್ರದಾಯವನ್ನು ಮುರಿದು ’ಇಂಡಿಯಾ’ ಎಂದು ಬಳಸುತ್ತಿದ್ದಲೆಲ್ಲ ’ಭಾರತ್’ ಎಂದು ನಮೂದಿಸುತ್ತಿರುವ ಉದ್ದೇಶವಾದರೂ ಏನು? ವಿರೋಧ ಪಕ್ಷಗಳು ತಮ್ಮ ಕೂಟಕ್ಕೆ ’ಇಂಡಿಯಾ’ (I.N.D.I.A) ಎಂದು ಇಟ್ಟುಕೊಂಡಿದ್ದೇ ಇದಕ್ಕೆ ಕಾರಣವಾ?

ಹಾಗೆ ನೋಡಿದರೆ ’ಇಂಡಿಯಾ ಮತ್ತು ಭಾರತ’ ಎರಡೂ ಕೂಡ ನಮ್ಮ ಸಂವಿಧಾನದಲ್ಲಿ ಮಾನ್ಯವಾಗಿವೆ. ನಮ್ಮ ಸಂವಿಧಾನದ ಮೊದಲ ವಿಧಿ, “India, that is Bharat, shall be a Union of States” (ಇಂಡಿಯಾ ಅಂದರೆ ಭಾರತ- ರಾಜ್ಯಗಳ ಒಕ್ಕೂಟವಾಗಿದೆ) ಎಂದು ಹೇಳುತ್ತದೆ. ಹೀಗಾಗಿ ’ಇಂಡಿಯಾ’ ಎಂದರೂ ಅಷ್ಟೇ, ’ಭಾರತ’ ಎಂದರೂ ಅಷ್ಟೇ.

ದೇಶದ ಹೆಸರು ಏನಾಗಿರಬೇಕು ಎಂಬುದರ ಕುರಿತು ನಮ್ಮ ಸಂವಿಧಾನ ರಚನಾಕಾರರು ಸುದೀರ್ಘ ಚರ್ಚೆಗಳನ್ನು ನಡೆಸಿದ್ದರು. ಸೆಪ್ಟೆಂಬರ್ 17, 1949ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ’ಭಾರತ್’ ಮತ್ತು ’ಇಂಡಿಯಾ’ ಎರಡನ್ನೂ ಒಳಗೊಂಡಿರುವ ನಿಬಂಧನೆಯ ಅಂತಿಮ ಆವೃತ್ತಿಯನ್ನು ಸದನಕ್ಕೆ ಪ್ರಸ್ತುತಪಡಿಸಿದರು. ಮಾರನೇ ದಿನ ಈ ಕುರಿತು ವಿಶೇಷ ಚರ್ಚೆ ನಡೆಯುತ್ತದೆ. ’ಇಂಡಿಯಾ’ ಎಂಬುದು ವಸಾಹತುಶಾಹಿಯನ್ನು ನೆನಪಿಸುತ್ತದೆ ಎಂದು ಸದನದ ಹಲವಾರು ಸದಸ್ಯರು ಅಭಿಪ್ರಾಯಪಡುತ್ತಾರೆ.

ಜಬಲ್ಪುರದ ಸೇಠ್ ಗೋವಿಂದ್ ದಾಸ್ ಅವರು ’ಇಂಡಿಯಾ’ ಎಂಬುದಕ್ಕಿಂತ ’ಭಾರತ’ಕ್ಕೆ ಆದ್ಯತೆ ನೀಡಿ ಎನ್ನುತ್ತಾರೆ. ’ಭಾರತ್’ ಎಂಬುದಕ್ಕೆ ಇಂಗ್ಲಿಷ್‌ನಲ್ಲಿ ’ಇಂಡಿಯಾ’ ಹೆಸರನ್ನು ಪರ್ಯಾಯವಾಗಿ ಬಳಸುವಂತೆ ಅನೇಕರು ಒತ್ತಾಯಿಸುತ್ತಾರೆ.

“ಇಂಡಿಯಾ, ಅಂದರೆ ಭಾರತ- ಎಂಬುದು ದೇಶದ ಹೆಸರಿಗೆ ಸುಂದರವಾದ ಪದಗಳಲ್ಲ. ’ವಿದೇಶಗಳಲ್ಲಿ ಇಂಡಿಯಾ ಎಂದು ಕರೆಯಲ್ಪಡುವ ಭಾರತ’ ಎಂಬುದಾಗಿ ನಮೂದಿಸಬೇಕಿತ್ತು” ಎನ್ನುತ್ತಾರೆ ಗೋವಿಂದ ದಾಸ್. ಹರಿವಿಷ್ಣು ಕಾಮತ್ ಅವರು, “ಇಂಡಿಯಾ ಎಂಬ ಪದವು ಕೇವಲ ಭಾರತದ ಅನುವಾದ” ಎಂದು ವಾದಿಸುತ್ತಾರೆ.

ಗುಡ್ಡಗಾಡು ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಯುನೈಟೆಡ್ ಪ್ರಾವಿನ್ಸ್‌ನ ಹರಗೋವಿಂದ್ ಪಂತ್, “ಉತ್ತರ ಭಾರತದ ಜನರು ಭರತವರ್ಷ ಎಂಬುದನ್ನು ಬಯಸುತ್ತಾರೆ. ಈ ನೆಲದ ಶ್ರೀಮಂತಿಕೆಯ ಬಗ್ಗೆ ತಿಳಿದಿರುವ ವಿದೇಶಿಗರು ಈ (ಇಂಡಿಯಾ) ಹೆಸರನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದು ನಾವು ತಿಳಿದಿರಬೇಕು. ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಲು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡರು. ’ಇಂಡಿಯಾ’ ಎಂಬ ಪದಕ್ಕೆ ಅಂಟಿಕೊಂಡರೆ, ಹೊರಗಿನ ಸಾಮ್ರಾಜ್ಯ ನಮ್ಮ ಮೇಲೆ ಹೇರಿರುವ ಈ ಅವಮಾನಕರ ಪದವನ್ನು ಉಳಿಸಿಕೊಳ್ಳಲು ನಾವು ನಾಚಿಕೆಪಡುವುದಿಲ್ಲ ಎಂದು ತೋರಿಸುತ್ತದೆ” ಎಂದು ಅಭಿಪ್ರಾಯ ತಾಳುತ್ತಾರೆ.

ವಿಷ್ಣು ಪುರಾಣ ಮತ್ತು ಬ್ರಹ್ಮ ಪುರಾಣವು ’ಭಾರತ’ವನ್ನು ಉಲ್ಲೇಖಿಸುತ್ತದೆ ಎಂದು ದಾಸ್ ವಾದಿಸುತ್ತಾರೆ. ಏಳನೇ ಶತಮಾನದ ಚೀನೀ ಪ್ರವಾಸಿ ಹ್ಯೂಯೆನ್ ತ್ಸಾಂಗ್ ಈ ದೇಶವನ್ನು ಭಾರತ ಎಂದು ಉಲ್ಲೇಖಿಸಿದ್ದಾನೆ ಎಂದು ಇತರರು ಹೇಳುತ್ತಾರೆ. ಭಾರತ, ಭರತವರ್ಷ ಅಥವಾ ಭರತಭೂಮಿ ಎಂಬ ಪದಗಳನ್ನು ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಪ್ರಸ್ತಾಪಿಸುತ್ತಾರೆ.

ಡಾ.ಬಿ.ಆರ್.ಅಂಬೇಡ್ಕರ್

“ಇತಿಹಾಸಕಾರರು ಮತ್ತು ಭಾಷಾಶಾಸ್ತ್ರಜ್ಞರು ಈ ದೇಶದ ಹೆಸರಿನ ಕುರಿತು ವಿಶೇಷವಾಗಿ ಭಾರತ್ ಎಂಬ ಹೆಸರಿನ ಸಂಬಂಧ ಆಳವಾಗಿ ಪರಿಶೀಲಿಸಿದ್ದಾರೆ. ಎಲ್ಲರೂ ಭಾರತ್ ಎಂಬ ಹೆಸರಿನ ಮೂಲವನ್ನು ಒಪ್ಪುವುದಿಲ್ಲ. ಈ ಹೆಸರು ದುಶ್ಯಂತ ಮತ್ತು ಶಕುಂತಲಾ ಅವರ ಪುತ್ರ ಭರತನಿಂದಾಗಿ ಬಂತೆಂದು ಕೆಲವರು ಹೇಳುತ್ತಾರೆ. ಆತ ಪ್ರಾಚೀನ ಭಾರತದಲ್ಲಿ ದಿಗ್ವಿಜಯ ಸಾಧಿಸಿದವನು. ಅವನ ನಂತರ ಈ ಭೂಮಿ ಭಾರತ ಎಂದು ಕರೆಯಲ್ಪಟ್ಟಿತು” ಎನ್ನುತ್ತಾರೆ ದಾಸ್.

ಮತ್ತೊಂದೆಡೆ, ಪಂಡಿತ್ ಠಾಕೂರ್ ದಾಸ್ ಭಾರ್ಗವ ಅವರಂತಹ ಸದಸ್ಯರು ದೇಶಕ್ಕೆ ’ಇಂಡಿಯಾ’ ಎಂದು ಹೆಸರಿಸುವುದನ್ನು ಬೆಂಬಲಿಸುತ್ತಾರೆ. “ನನಗೆ ಇದರ ಬಗ್ಗೆ ಯಾವುದೇ ಗಂಭೀರ ಆಕ್ಷೇಪವಿಲ್ಲ. ಪ್ರಪಂಚದ ಇತರ ಭಾಗಗಳಿಂದ ನಾವು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಸತ್ಯ; ನಾವು ಇಂಗ್ಲೆಂಡ್ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ಶತಮಾನಗಳಿಂದಲೂ ಒಡನಾಟ ಹೊಂದಿದ್ದೇವೆ. ಇಂಡಿಯಾ ಎಂಬ ಹೆಸರಿನಿಂದ ಜಗತ್ತು ನಮ್ಮನ್ನು ಯಾವಾಗಲೂ ಗುರುತಿಸುತ್ತದೆ. ಆದರೆ ನಮ್ಮ ಹೃದಯ ಮತ್ತು ಆತ್ಮಗಳಲ್ಲಿ ನಮ್ಮ ದೇಶವು ಯಾವಾಗಲೂ ಭಾರತವಾಗಿ ಉಳಿಯುತ್ತದೆ” ಎನ್ನುತ್ತಾರೆ.

ಈ ಚರ್ಚೆಗಳನ್ನು ಗಮನಿಸಿ, ’ಭಾರತ- ಇಂಡಿಯಾ’ ಎರಡನ್ನೂ ಒಳಗೊಳ್ಳುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, “ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ” ಎನ್ನುತ್ತಾರೆ.

ಆದಾಗ್ಯೂ, ಅಂದಿನ ಭಾರತದ ರಾಷ್ಟ್ರಪತಿಗಳು ತಿದ್ದುಪಡಿಗಳನ್ನು ಮತಕ್ಕೆ ಹಾಕಿದಾಗ, ಸಂವಿಧಾನದ 1 ನೇ ವಿಧಿಯಲ್ಲಿ “ಇಂಡಿಯಾ, ಅಂದರೆ ಭಾರತ” (India, That is Bharat) ಎಂಬುದು ಅಧಿಕೃತವಾಗುತ್ತದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟ್‌ ಹಂಚಿಕೆ ಬಗ್ಗೆ ಚರ್ಚೆ

’ಇಂಡಿಯಾ, ದಟ್ ಇಸ್ ಭಾರತ್: ಒನ್ ಕಂಟ್ರಿ, ಟು ನೇಮ್’ ಎಂಬ ಸಂಶೋಧನಾ ಪ್ರಬಂಧವನ್ನು ಬರೆದಿರುವ ಕ್ಯಾಥರೀನ್ ಕ್ಲೆಮೆಂಟೈನ್-ಓಜಾ ಅವರು ದೇಶದ ಹೆಸರಿನ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ವಿ.ಸುಂದರಂ ಹೇಳಿರುವ ಅಭಿಪ್ರಾಯವನ್ನು ದಾಖಲಿಸಿದ್ದಾರೆ: “ಭಾರತ ಎಂಬುದು ಹಿಂದೂ ಧಾರ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಆದರೆ ಈ ದೇಶ ಹಿಂದೂಕರಣವಾಗುವುದಿಲ್ಲ ಎಂಬ ಭರವಸೆಯನ್ನು ಅಲ್ಪಸಂಖ್ಯಾತರಿಗೆ ಸಂವಿಧಾನ ರಚನಕಾರರು ನೀಡಬಯಸಿದರು. ಹೀಗಾಗಿ ಇಂಡಿಯಾ ಎಂಬುದನ್ನು ಬಳಸುತ್ತಾರೆ. ಸಂವಿಧಾನ ರಚನೆಯಾದ ಕಾಲಘಟ್ಟದಲ್ಲಿನ ರಾಜಕೀಯ ಸನ್ನಿವೇಶಗಳನ್ನು ನೋಡಿದರೆ ಇದು ಮಹತ್ವವನ್ನು ಪಡೆಯುತ್ತದೆ. ಭಾರತ ಸಂವಿಧಾನ ರಚನೆಯಾಗಿದ್ದು ದೇಶ ವಿಭಜನೆಯ ನಂತರದಲ್ಲಿ. ಆ ಸಂದರ್ಭದಲ್ಲಿ ದೇಶ ಹಲವು ಸಾವು, ನೋವು, ರಕ್ತಪಾತವನ್ನು ಕಂಡಿತ್ತು” ಎನ್ನುತ್ತಾರೆ ಸುಂದರಂ. ಇದು ನಮ್ಮ ಸಂವಿಧಾನ ರಚನೆಯ ಇತಿಹಾಸ. ಅಷ್ಟೇ ಅಲ್ಲ 2015ರಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವೇ ಹೆಸರು ಬದಲಿಸುವ ಚರ್ಚೆಯನ್ನು ವಿರೋಧಿಸಿತ್ತು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭಾರತವೆಂದೇ ಅಧಿಕೃತವಾಗಿ ಬಳಸಬೇಕು, ಇಂಡಿಯಾ ಬಳಕೆ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತ್ತು. “ಭಾರತವನ್ನಾದರೂ ಬಳಸಿ, ಇಂಡಿಯಾವನ್ನಾದರೂ ಬಳಸಿ. ಅದು ನಾಗರಿಕರ ಸ್ವಾತಂತ್ರ್ಯಕ್ಕೆ ಬಿಟ್ಟದ್ದು” ಎಂದು ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ಯು.ಯು.ಲಲಿತ್ ಸ್ಪಷ್ಟಪಡಿಸಿದ್ದರು.
“ಇಂಡಿಯಾಗೆ ಬದಲಾಗಿ ಭಾರತವೆಂದು ಕರೆಯುವ ಅಗತ್ಯವಿಲ್ಲ. ಸಂವಿಧಾನದ ಪ್ರಥಮ ಅನುಚ್ಛೇದವನ್ನು ಬದಲಾಯಿಸಬೇಕಾದ ಯಾವುದೇ ಪರಿಸ್ಥಿತಿಗಳು ಉದ್ಭವಿಸಿಲ್ಲ” ಎಂದು ಕೇಂದ್ರ ಗೃಹ ಮಂತ್ರಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣ ವಚನ ಸಲ್ಲಿಸಿತ್ತು.

ಎಚ್.ಎನ್.ನಾಗಮೋಹನ ದಾಸ್

’ಇಂಡಿಯಾ’ ಅಥವಾ ’ಭಾರತ’ ವಿವಾದ ಸಂಬಂಧ ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, “ಇಂಡಿಯಾ ಎಂಬುದನ್ನು ತೆಗೆದುಹಾಕಿ ಕೇವಲ ಭಾರತ ಎಂದು ಉಳಿಸಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನು? ಕೇವಲ ಹೆಸರು ಬದಲಿಸುವುದರಿಂದ ಬದುಕು ಬದಲಾಗಲ್ಲ. ಇಂದು ಜನರಿಗೆ ಬೇಕಾಗಿರುವುದು ಬದುಕಿನ ಬದಲಾವಣೆ. ದೇಶದಲ್ಲಿ ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಕೈಗಾರಿಕಾ ಬಿಕ್ಕಟ್ಟು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಸಾಮಾಜಿಕ ಆರ್ಥಿಕ ಅಸಮಾನತೆ ದಿನೇದಿನೇ ಬೆಳೆಯುತ್ತಲೇ ಇವೆ. ಈ ಪರಿಸ್ಥಿತಿಗಳು ಬದಲಾಗುವ ನಿಟ್ಟಿನಲ್ಲಿ ಸರ್ಕಾರ ತನ್ನ ನೀತಿಗಳನ್ನು ರೂಪಿಸಬೇಕಾಗಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಆಧುನಿಕ ವಿಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕಾಗಿದೆ. ಆ ಕೆಲಸ ಮಾಡುವ ಬದಲು ಹೆಸರು ಬದಲಿಸಿದರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

“ಈ ಹಿಂದೆ ರಸ್ತೆ, ನಗರ, ಸರ್ಕಲ್‌ಗಳ ಹೆಸರು ಬದಲಾಯಿಸುವುದನ್ನು ನೋಡಿದೆವು. ಇದೆಲ್ಲದರ ಫಲವಾಗಿ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಸಾಧ್ಯವಾಯಿತಾ? ಬದುಕನ್ನು ಬದಲಿಸುವ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡಬೇಕಿದೆ. ಇಂಡಿಯಾ ಮತ್ತು ಭಾರತ- ಎರಡು ಕೂಡ ಸಂವಿಧಾನದಲ್ಲಿ ತಿಳಿಯಪಡಿಸಿದಂತೆ ಮುಂದುವರಿಯಲಿ. ಅನಗತ್ಯ ವಿವಾದ ಎಬ್ಬಿಸಬೇಡಿ” ಎಂದು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ ಪ್ರತಿಕ್ರಿಯಿಸಿ, “ಭಾರತ ಮತ್ತು ಇಂಡಿಯಾ ಎರಡು ಕೂಡ ಸಹಜವಾಗಿ ಜನರಲ್ಲಿ ಬೆರೆತುಹೋಗಿವೆ. ಇಂಡಿಯಾ ಎಂಬ ಹೆಸರಲ್ಲೇ (ಖೇಲೋ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯ, ಸೈನ್ ಇಂಡಿಯ, ಸ್ಕಿಲ್ ಇಂಡಿಯ, ಡಿಜಿಟಲ್ ಇಂಡಿಯಾ) ಬಿಜೆಪಿಯವರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿದ್ದಾರೆ. ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಗಳು ಭಾರತ್ ಹೆಸರಲ್ಲಿ ಸಂಸ್ಥೆಗಳನ್ನು (ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಭಾರತ್ ಸಂಚಾರ ನಿಗಮ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತೀಯ ಉಕ್ಕು ಮತ್ತು ಕಬ್ಬಿಣ ನಿಗಮ) ಕಟ್ಟಿವೆ. ಇವುಗಳನ್ನೆಲ್ಲ ಬಿಜೆಪಿಯವರು ಹೇಗೆ ಬದಲಿಸುತ್ತಾರೆ?” ಎಂದು ಕೇಳಿದರು.

ಸಿ.ಎಸ್.ದ್ವಾರಕನಾಥ್

“ರಚನಾತ್ಮಕ ಕೆಲಸಗಳ ಕುರಿತು ಬಿಜೆಪಿ ಯಾವತ್ತೂ ಕೆಲಸ ಮಾಡಿಲ್ಲ. ಇಂತಹ ವಿವಾದಗಳನ್ನು ತಂದು ಜನರನ್ನು ದಿಕ್ಕುತಪ್ಪಿಸುತ್ತದೆ” ಎಂದು ವಿಷಾದಿಸಿದರು.

ಚುನಾವಣೆ ಹತ್ತಿರ ಬಂದಂತೆ ಭಾವನಾತ್ಮಕ ವಿಚಾರಗಳನ್ನು ಬಿಜೆಪಿ ಮುನ್ನೆಲೆಗೆ ತರುತ್ತಿರುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಮುಂದಿನ ಲೋಕಸಭಾ ಚುನಾವಣೆ ವಿಷಯಾಧಾರಿತವಾಗಿ, ದೇಶದ ನೈಜ ಸಮಸ್ಯೆಗಳನ್ನು ಆಧರಿಸಿ ನಡೆಯಲಿ ಎಂಬುದು ಪ್ರಜ್ಞಾವಂತರ ಆಶಯ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...