Homeಮುಖಪುಟಜೋಶಿಮಠ ಕುಸಿತ ಬಿಕ್ಕಟ್ಟು: ಸ್ಥಳೀಯರಿಂದ ಹೆಚ್ಚುತ್ತಿದೆ ‘ಎನ್‌ಟಿಪಿಸಿ ಗೋಬ್ಯಾಕ್‌’ ಘೋಷಣೆ

ಜೋಶಿಮಠ ಕುಸಿತ ಬಿಕ್ಕಟ್ಟು: ಸ್ಥಳೀಯರಿಂದ ಹೆಚ್ಚುತ್ತಿದೆ ‘ಎನ್‌ಟಿಪಿಸಿ ಗೋಬ್ಯಾಕ್‌’ ಘೋಷಣೆ

- Advertisement -
- Advertisement -

ಹಾನಿಗೊಳಗಾದ ಮನೆಗಳನ್ನು ಬಿಟ್ಟು ಬರಬೇಕಾದ ಪರಿಸ್ಥಿತಿ ಇಲ್ಲಿನ ಜನಗಳದ್ದು. ಹೀಗಾಗಿ ಉತ್ತರಾಖಂಡದ ಜೋಶಿಮಠದ ನಿವಾಸಿಗಳು ಈಗ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಇಂಧನ ದೈತ್ಯ ಕಂಪನಿಯ ಯೋಜನೆಯು ಈ ಪ್ರದೇಶದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂಬ ಆರೋಪ ಎದುರಾಗಿದೆ.

“ಎನ್‌ಟಿಪಿಸಿ ಗೋ ಬ್ಯಾಕ್” ಎಂಬ ಘೋಷಣೆಯೊಂದಿಗೆ ಹಲವಾರು ಪೋಸ್ಟರ್‌ಗಳು ಕಳೆದ ಕೆಲವು ದಿನಗಳಿಂದ ಪಟ್ಟಣದಾದ್ಯಂತ ರಾರಾಜಿಸುತ್ತಿವೆ. 520 ಮೆಗಾವ್ಯಾಟ್ ತಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಗಾಗಿ 12 ಕಿಮೀ ಸುರಂಗವನ್ನು ತೋಡುತ್ತಿರುವುದರಿಂದ ಈ ಪ್ರದೇಶದಲ್ಲಿ ಕುಸಿತ ಉಲ್ಬಣಗೊಂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಜೋಶಿಮಠದಲ್ಲಿ ಉಂಟಾಗಿರುವ ಭೂಮಿ ಕುಸಿತದ ಕಾರಣಗಳನ್ನು ಪತ್ತೆ ಹಚ್ಚಲು ಎಂಟು ಸಂಸ್ಥೆಗಳು ತನಿಖೆ ಮಾಡುತ್ತವೆ. ಎನ್‌ಟಿಪಿಸಿ ಪಾತ್ರದ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮದ ವರದಿಗಳು ಹೇಳುತ್ತಿವೆ.

ಇಂಧನ ದೈತ್ಯ ಸಂಸ್ಥೆ ಎದುರಿಸುತ್ತಿರುವ ಆರೋಪಗಳ ಬಗ್ಗೆ ಚಮೋಲಿ ಡಿಎಂ ಹಿಮಾಂಶು ಖುರಾನಾ ‘ನ್ಯೂಸ್‌ಲಾಂಡ್ರಿ’ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ. “ಇದೀಗ (ಎನ್‌ಟಿಪಿಸಿ) ಸ್ಥಾವರದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಈ ಸ್ಥಾವರದಿಂದ ಹಾನಿಯಾಗಿದೆ ಎಂಬ ಆರೋಪವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ತಜ್ಞರು ಇದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ತಿಳಿದಿದೆ. ನಾವು ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತೇವೆ. ಆ ಮುಖೇನ ಆದಷ್ಟು ಬೇಗ ಕ್ರಮಕೈಗೊಳ್ಳಬಹುದು” ಎಂದಿದ್ದಾರೆ.

ಇದನ್ನೂ ಓದಿರಿ: ಉತ್ತರಖಾಂಡ್‌ನ ಜೋಶಿಮಠ ಪಟ್ಟಣ ಕುಸಿಯುತ್ತಿರುವುದೇಕೆ?

ಎನ್‌ಟಿಪಿಸಿಯನ್ನು ನಿಯಂತ್ರಿಸುವ ಕೇಂದ್ರ ವಿದ್ಯುತ್ ಸಚಿವಾಲಯವು ಜನವರಿ 10ರಂದು ಜೋಶಿಮಠ ಸಮಸ್ಯೆಯನ್ನು ಚರ್ಚಿಸಲು ಸಭೆ ಕರೆದಿತ್ತು. ಕಂಪನಿಯ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.

ಆದರೆ ಎನ್‌ಟಿಪಿಸಿ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ತಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಗೆ ಸಂಪರ್ಕ ಕಲ್ಪಿಸುವ ಸುರಂಗವು ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ನೆಲದಡಿಯಲ್ಲಿದೆ ಮತ್ತು ಜೋಶಿಮಠಕ್ಕಿಂತ ಕೆಳಭಾಗದಿಲ್ಲ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಪೋವನ ಯೋಜನೆಯ ಮುಖ್ಯಸ್ಥ ಆರ್‌ಪಿ ಅಹಿರ್ವಾರ್ ಅವರನ್ನು ಈ ವಿಷಯದ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದಾಗ್ಯೂ, ದುರಂತದ ಹಿಂದೆ ಇಂಧನ ದೈತ್ಯ ಸಂಸ್ಥೆಯ ಯಾವುದೇ ಪಾತ್ರವಿಲ್ಲ ಎಂದು ವಾದಿಸಲು ಎನ್‌ಟಿಪಿಸಿ ಕಡೆಯಿಂದ ಪ್ರೆಸೆಂಟೇಷನ್‌ ಬಿಡುಗಡೆ ಮಾಡಲಾಗಿದೆ. ಪವರ್ ಹೌಸ್ ಮತ್ತು ಬ್ಯಾರೇಜ್ ಸೈಟ್ ಎರಡೂ ಜೋಶಿಮಠ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿದೆ ಎಂದು ಎನ್‌ಟಿಪಿಸಿ ಹೇಳುತ್ತಿದೆ.

ಬಿಕ್ಕಟ್ಟಿನ ಆರಂಭದಲ್ಲಿ ಜೋಶಿಮಠದಲ್ಲಿ ಸುಮಾರು 50 ಮನೆಗಳು ಬಿರುಕು ಬಿಟ್ಟಿದ್ದವು. ಸ್ಥಳೀಯರ ಪ್ರಕಾರ ಈ ಸಂಖ್ಯೆ ಕ್ರಮೇಣ 700ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಎರಡು ಹೊಟೇಲ್‌ಗಳನ್ನು ನೆಲಸಮಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಡಿಎಂ ಖುರಾನಾ ಅವರು ‘ನ್ಯೂಸ್‌ಲಾಂಡ್ರಿ’ ಜೊತೆ ಮಾತನಾಡಿ, “ಮುಳುಗುತ್ತಿರುವ ಪ್ರದೇಶಗಳನ್ನೂ ಒಳಗೊಂಡ ಅಪಾಯಗಳ ಮೌಲ್ಯಮಾಪನದ ಪ್ರಕಾರ ‘ಕೋರ್ ಮತ್ತು ಬಫರ್ ವಲಯಗಳು’ ಎಂದು ವಿಂಗಡಿಸಲಾಗಿದೆ. ಇಲ್ಲಿಯವರೆಗೆ, ನಾವು 169 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

ಬದರಿನಾಥದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಈ ಪಟ್ಟಣವು ಚಮೋಲಿ ಜಿಲ್ಲೆಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು 6,000 ಅಡಿ ಎತ್ತರದಲ್ಲಿದೆ. ಇದು ಬಹುಮಹಡಿ ಕಟ್ಟಡಗಳು ಮತ್ತು ಹೋಟೆಲ್‌ಗಳಿಗೆ, ಚಾರ್‌ಧಾಮ್ ಯಾತ್ರಾ ಮಾರ್ಗದಂತಹ ಬೃಹತ್ ಯೋಜನೆಗಳಿಗೆ ನೆಲೆಯಾಗಿದೆ.

ಇದನ್ನೂ ಓದಿರಿ: ಜೋಶಿಮಠದಲ್ಲಿನ ಭೂಕುಸಿತದ ಬಗ್ಗೆ ಸರ್ಕಾರಿ ಸಂಸ್ಥೆಗಳು ಅಂಕಿ-ಅಂಶ ಹಂಚಿಕೊಳ್ಳಬಾರದು: ವಿಪತ್ತು ಪ್ರಾಧಿಕಾರ ಸೂಚನೆ

ಜೋಶಿಮಠದಲ್ಲಿ ಸಮಸ್ಯೆ ಹೊಸದೇನಲ್ಲ. ಸುಮಾರು 50 ವರ್ಷಗಳ ಹಿಂದೆ ಗರ್ವಾಲ್‌ನ ಆಗಿನ ಕಮಿಷನರ್ ನೇತೃತ್ವದ ಸಮಿತಿಯು ಮುಂಬರುವ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿತ್ತು. ಪರ್ವತದ ಉದ್ದಕ್ಕೂ ಅಗೆಯಬೇಡಿ ಮತ್ತು ಸ್ಫೋಟಿಸಬೇಡಿ ಅಥವಾ ಭಾರವಾದ ಕಲ್ಲುಗಳನ್ನು ತೆಗೆಯಬೇಡಿ ಎಂದು ಸಮಿತಿಯು ಆಡಳಿತಕ್ಕೆ ಎಚ್ಚರಿಕೆ ನೀಡಿತ್ತು.

ಈ ಪ್ರದೇಶ ಮುಳುಗುತ್ತಿರುವ ತ್ವರಿತ ಗತಿಯನ್ನು ಸೂಚಿಸುವ ಇಸ್ರೋ ವರದಿಯನ್ನು ಸಂಸ್ಥೆಯ ವೆಬ್‌ಸೈಟ್‌ನಿಂದ ಶುಕ್ರವಾರ ತೆಗೆದುಹಾಕಲಾಗಿದೆ. ಈ ವಿಷಯದ ತನಿಖೆ ನಡೆಸುತ್ತಿರುವ ತಜ್ಞರ ಗುಂಪು ತನ್ನ ವರದಿಯನ್ನು ಬಿಡುಗಡೆ ಮಾಡುವವರೆಗೆ ಮಾಧ್ಯಮಗಳೊಂದಿಗೆ ಅಥವಾ ಸಾಮಾಜಿಕ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳದಂತೆ ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.

ವರದಿ ಕೃಪೆ: ನ್ಯೂಸ್‌ಲಾಂಡ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...