ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ವ್ಯಾಪಕ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಇದನ್ನು ಮತ್ತಷ್ಟು ಪ್ರಬಲಗೊಳಿಸಲು, ದೇಶ ಮತ್ತು ಸರ್ಕಾರದ ಗಮನ ಸೆಳೆಯಲು ಜನವರಿ 26 ರ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸಲಾಗುತ್ತಿದೆ.
ಇದನ್ನು ಬೆಂಬಲಿಸಿ ರಾಜ್ಯದಾದ್ಯಂತ ಇರುವ ರೈತ ಸಂಘಟನೆಗಳು ಜನವರಿ 26 ರಂದು ಬೆಂಗಳೂರಿನಲ್ಲಿಯೂ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಕರೆ ನೀಡಿವೆ. ಈ ನಿಟ್ಟಿನಲ್ಲಿ ರೈತ ಹೋರಾಟಗಳು ವಿಕೇಂದ್ರೀಕರಣಗೊಳ್ಳಬೇಕು ಎಂದಿರುವ ಕೃಷಿಕರು ಮತ್ತು ಲೇಖಕರಾದ ಹರಿಪ್ರಸಾದ್ ಕೆ.ಆರ್, “ರಾಜ್ಯದಾದ್ಯಂತ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: NIAಯಿಂದ ಸಮನ್ಸ್ ಪಡೆದಿದ್ದ ‘ಖಾಲ್ಸಾ ಏಡ್’ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ!
“ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕೇಂದ್ರ ಬಿಂದು ಆಗಿರುವುದರಿಂದ, ಟ್ರ್ಯಾಕ್ಟರ್ ರ್ಯಾಲಿಯನ್ನು ಡಿಸಿ ಆಫೀಸ್ಗೆ ಹತ್ತಿರವಿರುವ ಮುಖ್ಯ ಸ್ಥಳದಿಂದ ಡಿಸಿ ಆಫೀಸ್ ತನಕ ಕೊಂಡೊಯ್ದು ಮನವಿ ಸಲ್ಲಿಸುವುದು ಮುಖ್ಯ ಎಂದು ನನಗನ್ನಿಸುತ್ತದೆ. ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಹೀಗೆ ಮಾಡಬಹುದು. ನಾವು ನಮ್ಮ ಹಳ್ಳಿಯ ಮಟ್ಟದಲ್ಲಿ 25 ಟ್ರಾಕ್ಟರ್ಗಳನ್ನು ಇಡೀ ಹಳ್ಳಿಯಲ್ಲಿ ಎರಡು ರೌಂಡ್ ಓಡಿಸುವ ಯೋಚನೆ ಮಾಡಿದ್ದೇವೆ. ಎಲ್ಲರೂ ಇದನ್ನೇ ಮಾಡಬೇಕೆಂದು ಒತ್ತಾಯವೇನಿಲ್ಲ. ಇದಕ್ಕೆ ಹೊಸ ಅಂಶಗಳನ್ನು ಸೇರಿಸಿಕೊಂಡು ಚಳವಳಿ ಕಟ್ಟಬಹುದು. ಒಟ್ಟಾರೆ ದೇಶಾದ್ಯಂತ ರೈತ ಚಳವಳಿಯನ್ನು ಜೀವಂತವಾಗಿಡುವುದು ನಮ್ಮ ಕರ್ತವ್ಯ” ಎಂದು ತುಮಕೂರಿನ ತುರುವೇಕರೆ ತಾಲ್ಲೂಕಿನ ತಂಡಗ ಗ್ರಾಮದ ಹರಿಪ್ರಸಾದ್ ಹೇಳುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರೈತ ಮುಖಂಡರು ಮತ್ತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ, “ಹೌದು ನಮ್ಮ ಹೋರಾಟವನ್ನು ವಿಕೇಂದ್ರೀಕರಣಗೊಳಿಸುವುದು ಮುಖ್ಯ. ಇದರ ಭಾಗವಾಗಿಯೇ ದೆಹಲಿಗೆ ಹೋಗಲು ಸಾಧ್ಯವಾಗದವರು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆ. ಆದರೆ ಹಳ್ಳಿ-ಹಳ್ಳಿಯಲ್ಲೂ ಈ ಹೋರಾಟ ನಡೆಯಬೇಕು ಎನ್ನುವುದನ್ನು ಒಪ್ಪುತ್ತಲೇ, ಇದಕ್ಕಿರುವ ಮಿತಿಯನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಹೋರಾಟವು ಸರ್ಕಾರ ಮತ್ತು ಹೆಚ್ಚು-ಹೆಚ್ಚು ಜನರನ್ನು ತಲುಪುವುದು ಮುಖ್ಯ. ಹಾಗಾಗಿ ನಾವು ಮಾಡುವ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಇಂದಿನ ಮಾಧ್ಯಮಗಳು ಹಳ್ಳಿಗಳಲ್ಲಿ ನಡೆಯುವ ಹೋರಾಟವನ್ನು ದಾಖಲಿಸುತ್ತದೆಯೇ ಎನ್ನುವುದನ್ನು ಯೋಚಿಸಬೇಕಾಗಿದೆ. ಹಾಗಾಗಿ ಜಿಲ್ಲಾ, ತಾಲ್ಲೂಕು ಮತ್ತು ಹಳ್ಳಿಗಳ ಮಟ್ಟದಲ್ಲಿ ಹೋರಾಟ ಮಾಡಿದರೆ, ಅದು ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರ ಮತ್ತು ರಾಜ್ಯದ ಜನತೆಯನ್ನು ತಲುಪುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಆಶಯ ವ್ಯರ್ಥವಾಗುತ್ತದೆ. ರೈತರ ಕೂಗಿಗೆ ರಾಜ್ಯದ ಜನತೆ ದನಿಗೂಡಿಸಬೇಕು ಎನ್ನುವುದೇ ನಮ್ಮ ಆಶಯ. ಹಾಗಾಗಿ ಈ ಯೋಚನೆಗೆ ಒಂದು ತಾರ್ಕಿಕ ಅಂತ್ಯ ನೀಡಬೇಕಾಗಿರುವುದು ನಮ್ಮ ಕರ್ತವ್ಯವೂ ಆಗಬೇಕು” ಎಂದು ಹೇಳಿದರು.
ಭಾರತದ ಇತಿಹಾಸದಲ್ಲಿ ಸ್ಥಾನ ಪಡೆಯಲಿರುವ ಜನವರಿ 26 ರ ಟ್ರ್ಯಾಕ್ಟರ್ ರ್ಯಾಲಿ ಯಶಸ್ವಿಯಾಗಬೇಕು ಮತ್ತು ಇದರಿಂದ ರೈತರ ಶಕ್ತಿ ಸರ್ಕಾರಕ್ಕೆ ತಿಳಿಯಬೇಕು. ಈ ಮೂಲಕ ಇನ್ನಷ್ಟು ರೈತರು ಮತ್ತು ಸಾರ್ವಜನಿಕರು ಈ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಸೇರಿಕೊಳ್ಳಬೇಕು.
ಇದನ್ನೂ ಓದಿ: ರೈತಹೋರಾಟ: ರೈತರ ಮೀಸೆ, ದಾಡಿ ಚೆಂದಗೊಳಿಸಲು ಕುಂಡಲ್ ಸೇವೆಗೆ ಮುಂದಾದ ಗುರ್ಜಾನ್ ಸಿಂಗ್..!
ರೈತರ ಹೋರಾಟ ಮತ್ತು ಟ್ರ್ಯಾಕ್ಟರ್ ರ್ಯಾಲಿಯನ್ನು ತಡೆಯಲು ಸರ್ಕಾರ ಎಲ್ಲಾ ಕುತಂತ್ರಗಳನ್ನೂ ಬಳಸುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಇದನ್ನು ತಡೆಹಿಡಿಯಬೇಕು ಎಂದು ಕೋರಿದೆ. ರೈತ ಹೋರಾಟದಲ್ಲಿ ಭಯೋತ್ಪಾದಕರಿದ್ದಾರೆ ಎಂದು ಎನ್ಐಎ ನೋಟಿಸ್ ನೀಡಿದೆ. ಹೋರಾಟದಲ್ಲಿರುವವರು ನಿಜವಾದ ರೈತರಲ್ಲ, ಅವರು ಖಾಲಿಸ್ತಾನಿಗಳು, ನಕ್ಸಲೈಟರು, ಭಯೋತ್ಪಾದಕರು, ದೇಶ ದ್ರೋಹಿಗಳು ಎಂದು ದೇಶದಾದ್ಯಂತ ಹಸಿ ಸುಳ್ಳುಗಳನ್ನು ಹರಡಲಾಗುತ್ತಿದೆ. ಜೊತೆಗೆ ದೈಹಿಕವಾಗಿ ಹಿಂಸಿಸಿ, ಅಶ್ರುವಾಯು, ಜಲಫಿರಂಗಿಗಳನ್ನು ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಬಳಸಲಾಗುತ್ತಿದೆ.
ಆದರೆ ಇಷ್ಟೆಲ್ಲಾ ತೊಂದರೆಗಳನ್ನು ಎದುರಿಸಿ ರೈತರು ಸರ್ಕಾರದ ದರ್ಪಕ್ಕೆ, ಪೊಲೀಸರ ಲಾಟಿಗೆ ಎದೆಗೊಟ್ಟು ನಿಂತು ದಿಟ್ಟ ಉತ್ತರ ನೀಡುತ್ತಿದ್ದಾರೆ. ಹಾಗಾಗಿ ರೈತರ ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಬಗೆಹರಿಸಬೇಕು ಎನ್ನುವುದು ಎಲ್ಲರ ಒಕ್ಕೊರಲ ದನಿಯಾಗಬೇಕು.
ಇದನ್ನೂ ಓದಿ: ಕೆಎಫ್ಸಿ ಎಂದರೆ ಏನು ಗೊತ್ತಾ…? ನಮ್ಮ ರೈತರು ಹೇಳುತ್ತಾರೆ ಕೇಳಿ..!