ಸದನದಲ್ಲಿ ಸಂವಿಧಾನದ ಕುರಿತಾದ ಚರ್ಚೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಾ, ಮಹಾಭಾರತವನ್ನು ಬರೆದಿದ್ದು ವಾಲ್ಮೀಕಿ ಎಂದು ತಪ್ಪಾಗಿ ಹೇಳಿದ್ದಾರೆ.
ಅಂಬೇಡ್ಕರ್ ಭಾಷಣವನ್ನು ಉಲ್ಲೇಖ ಮಾಡುತ್ತಾ ಸದನದಲ್ಲಿ ಮಾತನಾಡಿದ ಬಸನಗೌಡ ಪಾಟಿಲ ಯತ್ನಾಳ್ “ಹಿಂದೂಗಳಿಗೆ ವೇದಗಳು ಬೇಕಾಗಿದ್ದವು ಆಗ ಅವರು ಕೆಳಜಾತಿಯವನಾದ ವ್ಯಾಸನನ್ನು ಕರೆದರು. ಅವರಿಗೊಂದು ಮಹಾ ಕಾವ್ಯ ಮಹಾಭಾರತ ಬೇಕಾಗಿತ್ತು, ಆವಾಗ ಅಸ್ಪೃಶ್ಯನಾದ ವಾಲ್ಮಿಕಿ ಬೇಕಾದ. ಇದೀಗ ಅವರಿಗೆ ಸಂವಿಧಾನದ ಅಗತ್ಯವಿದೆ ಅದಕ್ಕಾಗಿ ನನ್ನನ್ನು ಕರೆದರು” ಎಂದು ಅಂಬೇಡ್ಕರ್ ಮಾತನ್ನು ತಪ್ಪಾಗಿ ಹೇಳಿದರು. ಕೂಡಲೇ ಮಧ್ಯಪ್ರವೇಶ ಮಾಡಿದ ಇತರ ಸದಸ್ಯರು ಯತ್ನಾಳ್ ತಪ್ಪಾಗಿ ಉಲ್ಲೇಖ ಮಾಡಿದ್ದನ್ನು ಗಮನಕ್ಕೆ ತಂದರು. ಮಹಾಭಾರತವನ್ನು ಬರೆದದ್ದು ವ್ಯಾಸ ಮಹರ್ಷಿ ಹಾಗೂ ರಾಮಾಯಣ ಬರೆದಿದ್ದು ವಾಲ್ಮೀಕಿ ಎಂದು ತಪ್ಪನ್ನು ತಿದ್ದಿದರು.
ಈ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರನ್ನು ‘ಪಾಕ್ ಏಜೆಂಟ್” ಎಂದು ಕರೆಯುವ ಮೂಲಕ ಸುದ್ದಿಯಾಗಿದ್ದರು. ಪ್ರತಿಪಕ್ಷಗಳು ಯತ್ನಾಳ್ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದವು.