ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ ಮೈತ್ರಿ ಸರ್ಕಾರದ ಆಡಳಿತ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು, ಕಳೆದ ವಾರ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ನಾಲ್ಕು ರೈತರ ಹತ್ಯೆಯನ್ನು ವಿರೋಧಿಸಿ ಸೋಮವಾರ ಬಂದ್ ಆಚರಣೆಗೆ ಕರೆ ನೀಡಿದೆ. ಈ ನಿರ್ಧಾರವನ್ನು ಮೂರು ಪಕ್ಷಗಳು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿವೆ.
ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, ತಮ್ಮ ಪಕ್ಷವು ಮಹಾರಾಷ್ಟ್ರದಲ್ಲಿ ಅಕ್ಟೋಬರ್ 11 ರ ಬಂದ್ನಲ್ಲಿ ಪೂರ್ಣ ಬಲದಿಂದ ಭಾಗವಹಿಸಲಿದೆ ಎಂದು ಹೇಳಿದ್ದಾರೆ. ಒಕ್ಕೂಟ ಸರ್ಕಾರದ “ರೈತ ವಿರೋಧಿ” ನೀತಿಗಳ ವಿರುದ್ಧ ಜನರನ್ನು ಎಚ್ಚರಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಮಹಾರಾಷ್ಟ್ರದ ವ್ಯಾಪಾರಿಗಳ ಒಕ್ಕೂಟವು ಈ ಬಂದ್ ಕರೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಬಂದ್ಗೆ ಬೆಂಬಲಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ
“ಯುಪಿಯ ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಯನ್ನು ನಾವು ವಿರೋಧಿಸುತ್ತೇವೆ. ಹತ್ಯೆಗೆ ಕಾರಣರಾದವರು ಶಿಕ್ಷೆಗೊಳಗಾಗಬೇಕು. ಆದರೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಪಕ್ಷಗಳು ಕರೆ ನೀಡಿದ ಯಾವುದೇ ಬಂದ್ಗೆ ಬೆಂಬಲಿಸುವುದಿಲ್ಲ. ಲಾಕ್ಡೌನ್ನಿಂದಾಗಿ ನಾವು ಕಳೆದ 18 ತಿಂಗಳುಗಳಿಂದ ಭಾರೀ ನಷ್ಟವನ್ನು ಅನುಭವಿಸಿದ್ದೇವೆ” ಎಂದು ಒಕ್ಕೂಟ ಹೇಳಿದೆ.
“ನಮ್ಮ ವ್ಯಾಪಾರ ಇದೀಗ ನಿಧಾನವಾಗಿ ಹೆಚ್ಚುತ್ತಿದೆ. ಹಬ್ಬದ ಸಮಯದಲ್ಲಿ ಗ್ರಾಹಕರು ಶಾಪಿಂಗ್ ಮಾಡಲು ಹೊರಟಿದ್ದು, ನಾವು ಶಾಂತಿಯುತವಾಗಿ ನಮ್ಮ ವ್ಯಾಪಾರವನ್ನು ಮಾಡೋಣ. ಚಿಲ್ಲರೆ ವ್ಯಾಪಾರಗಳು ಮುಕ್ತವಾಗಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಅಂಗಡಿಯವರು ಯಾವುದೆ ಕಿರುಕುಳಕ್ಕೆ ಒಳಗಾಗುವುದಿಲ್ಲ ನಾವು ಭಾವಿಸುತ್ತೇವೆ” ಎಂದು ಅದು ಹೇಳಿದೆ.
ಈ ಮಧ್ಯೆ, ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಬೈ ಪೊಲೀಸರು ಸೋಮವಾರ ಗರಿಷ್ಠ ಶಕ್ತಿಯನ್ನು ಬೀದಿಗಳಲ್ಲಿ ನಿಯೋಜಿಸಲಿದೆ. ಗಸ್ತು ತೀವ್ರಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು