ಬೆಂಗಳೂರು (ಜನವರಿ 23); ಜೆಡಿಎಸ್ ಅಧಿಕಾರದಲ್ಲಿರುವಾಗ ಪೊಲೀಸರು ಹೀರೋ ರೀತಿ ಕಂಡರು. ಆದರೆ, ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆಯೇ? ಎಂದು ಸಚಿವ ಆರ್. ಅಶೋಕ್ ಕುಮಾರ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಅನ್ನು ಪೊಲೀಸರು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು. ಆದರೆ, ಪೊಲೀಸರ ಈ ಕಾರ್ಯಾಚರಣೆಯನ್ನು ಹೆಚ್.ಡಿ. ಕುಮಾರಸ್ವಾಮಿ ಅಣಕು ಪ್ರದರ್ಶನ ಎಂದು ಕುಹಕವಾಡಿದ್ದರು. ಅಲ್ಲದೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ವಿರುದ್ಧ ಕಿಡಿಕಾರಿದ್ದರು.
ಕುಮಾರಸ್ವಾಮಿ ಅವರ ಈ ಹೇಳಿಕೆ ಇಂದು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಸಚಿವ ಆರ್. ಆಶೋಕ್, “ಹೆಚ್ಡಿಕೆ ಅಧಿಕಾರದಲ್ಲಿದ್ದಾಗ ಅವರಿಗೆ ಪೊಲೀಸರು ಬೇಕಿತ್ತು. ಅವರನ್ನು ಹೀರೋ ರೀತಿ ಬಿಂಬಿಸುತ್ತಿದ್ದರು. ಆದರೆ, ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ.
ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹರಿದು ಹೋಗುತ್ತವೆ ಎಂಬ ಭಯ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಹೀಗಾಗಿ ಆ ಸಮುದಾಯದ ಮತಗಳನ್ನು ಸೆಳೆಯೋ ಕಾರಣಕ್ಕೆ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.