ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೇನು ಘೋಷಣೆಯಾಗಬೇಕಿದೆ. ಈ ಸಂದರ್ಭದಲ್ಲಿ ಹಲವಾರು ಬಿಜೆಪಿ ಸಚಿವರು, ಮುಖಂಡರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ರೇಷ್ಮೆ ಮತ್ತು ಯುವಜನ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ, ವಸತಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ನಿಂದ ಗ್ರೀನ್ ಸಿಗ್ನಲ್ ಸಿಗುವ ಮೊದಲೇ ಕೈ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ಕಾಂಗ್ರೆಸ್ ಸೇರಿದ್ದರು. ಈ ತಿಂಗಳು ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ಮುಖಂಡ ಜಿ.ಎನ್ ನಂಜುಂಡಸ್ವಾಮಿಯವರು ಬಿಜೆಪಿ ಪಕ್ಷ ತೊರದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಇನ್ನು ಸಚಿವ ಕೆ.ಸಿ ನಾರಾಯಣಗೌಡರವರು ಕೆ.ಆರ್ ಪೇಟೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಕಾಂಗ್ರೆಸ್ ಸೇರಿ ಮರು ಆಯ್ಕೆಯಾಗಲು ನಿರ್ಧರಿಸಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೆ.ಆರ್ ಪೇಟೆ ನಗರಕ್ಕೆ ಆಗಮಿಸಿದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ರವರ ಕಾರಿಗೆ ಮೊಟ್ಟೆ ಎಸೆದು ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಗೌಡ ಪಕ್ಷ ಸೇರ್ಪಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#Congress workers gherao district president at party office in KR Pete #Mandya demanding to name the candidate of the party. Amid rumours that turn coat BJP minister Narayan Gowda is joining congress. #Eggs were thrown at PP and they abused him. #Karnataka #KarnatakaEletion2023 pic.twitter.com/PqAXVzCX8L
— Imran Khan (@KeypadGuerilla) March 6, 2023
ಎರಡು ಅವಧಿಗೆ ಮೂರು ಬಾರಿ ಶಾಸಕರಾಗಿರುವ, ಹಾಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಹಾಗೂ ಕಾರ್ಯಕ್ರಮ ಸಂಯೋಜನೆ ಸಾಂಖ್ಯಿಕ ಇಲಾಖೆ ಸಚಿವರೂ ಆಗಿರುವ ಕೆ.ಸಿ ನಾರಾಯಣಗೌಡರಿಗೆ ಕೆ.ಆರ್ ಪೇಟೆಯಲ್ಲಿ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಈ ಹಿಂದೆ ಪೌರಾಡಳಿತ ಸಚಿವರಾಗಿದ್ದರೂ ಸಹ ಕೆ.ಆರ್ ಪೇಟೆ ನಗರದ, ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತೂ ಗಮನ ವಹಿಸಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.
ರಸ್ತೆಗಳನ್ನು ಮಾಡಿಸಿಲ್ಲ, ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಮಾಡಿಸಿಲ್ಲ, ಚಿರತೆ ಹಾವಳಿ ತಡೆಗೆ ಸ್ಪಂದಿಸಿಲ್ಲ, ಅತಿವೃಷ್ಟಿ ನಿರ್ವಹಣೆಗೆ ತಲೆ ಕೆಡಿಸಿಕೊಂಡಿಲ್ಲ, ಸದಾ ಬೆಂಗಳೂರಿನಲ್ಲಿ ವಾಸಿಸುತ್ತಾ ಜನರ ಕೈಗೆ ಸಿಗುತ್ತಿಲ್ಲ, ಸ್ಟೇಡಿಯಂ ಒಳಗೆ ಒಳಾಂಗಣಾ ಕ್ರೀಡಾಂಗಣ ನಿರ್ಮಿಸಿ ಸ್ಟೇಡಿಯಂ ಇಲ್ಲದಂತೆ ಮಾಡಿದರು ಇತ್ಯಾದಿ ದೂರುಗಳು ಅವರ ಮೇಲಿವೆ.
ಕೆ.ಆರ್ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಸೋತರೂ ಸಹ ಪಕ್ಷದ ಟಿಕೆಟ್ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಅಧಿಕೃತವಾಗಿ 6 ಜನ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಮತ್ತಿಬ್ಬರು ಅರ್ಜಿ ಸಲ್ಲಿಸದೇ ಲಾಬಿ ಮಾಡುತ್ತಿದ್ದಾರೆ. ಸತತ ಮೂರು ಬಾರಿ ಸೋತಿದ್ದ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ತನಗೆ ಚುನಾವಣೆ ಸಾಕು ಎಂಬ ಮಾತುಗಳನ್ನು ಆಡುತ್ತಿದ್ದವರು ಮತ್ತೀಗ ಸಕ್ರಿಯರಾಗಿದ್ದು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಉದ್ಯಮಿ ವಿಜಯ್ ರಾಮೇಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಎಂ.ಡಿ ಕೃಷ್ಣಮೂರ್ತಿ ಮತ್ತು ಕುರುಬ ಸಮುದಾಯದ ಬಿ.ನಾಗೇಂದ್ರ ಕುಮಾರ್ ಅರ್ಜಿ ಸಲ್ಲಿಸಿದ ಇತರರಾಗಿದ್ದಾರೆ.
ನಾರಾಯಣಗೌಡರ ನಡೆಯೇನು?
ಕ್ಷೇತ್ರದಲ್ಲಿ ತನ್ನ ಕುರಿತು ಹಬ್ಬಿರುವ ವಿರೋಧಿ ಅಲೆಯಿಂದಾಗಿ ಸಚಿವ ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಅವರು ನನಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಬೇಡ, ಶಿವಮೊಗ್ಗವೇ ಇರಲಿ ಎಂದು ಸ್ಪಷ್ಟಪಡಿಸಿರುವುದು ಬಿಜೆಪಿ ಬಿಡುತ್ತಾರೆ ಎನ್ನುವುದಕ್ಕೆ ಪುಷ್ಠಿ ಕೊಡುವಂತಿದೆ. ಆಡಳಿತ ವಿರೋಧಿ ಅಲೆ ಇರುವ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕರ್ತರಿಲ್ಲದ ಬಿಜೆಪಿಯಿಂದ ನಿಂತು ಗೆಲ್ಲುವುದು ಕಷ್ಟ ಎಂಬುದು ಅವರ ಅರಿವಿಗೆ ಬಂದಿದೆ. 2019ರ ಉಪಚುನಾವಣೆಯಲ್ಲಿ ಇಡೀ ಮಂತ್ರಿಮಂಡಲ ಅವರ ಪರ ಪ್ರಚಾರಕ್ಕಿಳಿದಿತ್ತು. ಆದರೆ ಈಗಿನ ಚುನಾವಣೆಗೆ ಅವರ್ಯಾರು ಬರುವುದಿಲ್ಲ. ಕಾಂಗ್ರೆಸ್ ಸೇರಿದರೆ, ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಲೆ ಇರುವುದರಿಂದ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಮತ್ತು ಕುರುಬ ಸಮುದಾಯ ಸೇರಿದಂತೆ ಒಬಿಸಿ ಮತಗಳು ತನ್ನನ್ನು ಗೆಲುವಿನ ದಡ ಸೇರಿಸುತ್ತವೆ ಎಂದು ಅವರು ನಂಬಿದ್ದಾರೆ. ಬಿಎಸ್ಪಿ, ಜೆಡಿಎಸ್ ಮತ್ತು ಬಿಜೆಪಿ ನೋಡಿರುವ ಅವರು ಕೊನೆ ಆಟವಾಗಿ ಕಾಂಗ್ರೆಸ್ನತ್ತ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಈಗಾಗಲೇ ಟಿಕೆಟ್ಗಾಗಿ ಪೈಪೋಟಿಯಿದ್ದು, ನಾರಾಯಣಗೌಡರನ್ನು ಸೇರಿಸಿಕೊಂಡರೆ ಬಂಡಾಯ ಮತ್ತು ಒಳೇಟು ಕೊಡುವ ಸಾಧ್ಯತೆಗಳಿವೆ.
ಸಚಿವ ಸೋಮಣ್ಣ ಕಾಂಗ್ರೆಸ್ ಸೇರುವರೆ?
ವಸತಿ ಸಚಿವ ವಿ. ಸೋಮಣ್ಣನವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ. ಸದ್ಯ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗ ಒಂದಷ್ಟು ಕಾಲ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಆದರೆ ಅವರನ್ನು ಏಕಾಏಕಿ ಉಸ್ತುವಾರಿಯಿಂದ ತೆಗೆದುಹಾಕಲಾಗಿತ್ತು. ಆನಂತರ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಿಸಲಾಗಿದೆ. ಪಕ್ಷದಲ್ಲಿ ತನಗೇ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ವಿ.ಸೋಮಣ್ಣನವರು ಗೋವಿಂದರಾಜ ನಗರದ ಬದಲು ಹನೂರು ಕ್ಷೇತ್ರದಿಂದ ಮುಂಬರುವ ಚುನಾವಣೆ ಎದುರಿಸುವಂತೆ ಬಿಜೆಪಿ ಸೂಚಿಸಿತ್ತು ಎನ್ನಲಾಗಿದೆ. ಅದಕ್ಕೆ ಸೋಮಣ್ಣನವರು ಒಪ್ಪಿರಲಿಲ್ಲ. ಅಲ್ಲದೆ ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸೋಮಣ್ಣ ಗೈರಾಗಿದ್ದರು. ಹಾಗಾಗಿ ಜಿಲ್ಲೆಯ ಚುನಾವಣೆಯ ಉಸ್ತುವಾರಿ ಜವಾಬ್ದಾರಿಯನ್ನು ಕೆ.ಎಸ್ ಈಶ್ವರಪ್ಪನವರಿಗೆ ನೀಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಅವರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಭಾನುವಾರ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ಸೋಮಣ್ಣ ಮತ್ತು ಆರ್ ಅಶೋಕ್ ನಡವೆ ಮಾತಿನ ಚಕಮಕಿ ನಡೆದು ಸೋಮಣ್ಣ ಅರ್ಧದಲ್ಲಿಯೇ ರ್ಯಾಲಿ ತೊರೆದು ಹೊರನಡೆದಿದ್ದಾರೆ. ಇವೆಲ್ಲವೂ ಅವರು ಪಕ್ಷ ಬಿಡುವ ಸೂಚನೆಗಳು ಎನ್ನಲಾಗಿದೆ.
ಆದರೆ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಾ ಕೃಷ್ಣರವರು ಸೋಮಣ್ಣ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಪ್ರಹ್ಲಾದ್ ಜೋಶಿಯವರು ಸೋಮಣ್ಣನವರು ಬಿಜೆಪಿ ತೊರೆಯುವುದಿಲ್ಲ ಎಂದಿದ್ದಾರೆ.
ವಿಜಯನಗರದ ಸಚಿವ ಆನಂದ್ ಸಿಂಗ್ ಸಿಂಗ್ ಸೇರಿದಂತೆ ಹಲವರು ಸಹ ಬಿಜೆಪಿ ತೊರೆಯುತ್ತಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಚುನಾವಣೆಗೂ ಮುನ್ನವೇ ಸಾಕಷ್ಟು ಪಕ್ಷಾಂತರಗಳು ನಡೆಯುವ ಸಾಧ್ಯತೆಯಂತೂ ಇದ್ದೇ ಇದೆ.