“ರಾಜ್ಯದ ಸಚಿವರಿಗೆ ಹಿಂದಿ ಗೊತ್ತಿಲ್ಲ; ಅನೇಕರಿಗೆ ಇಂಗ್ಲಿಷ್ ಕೂಡ ಗೊತ್ತಿಲ್ಲ” ಎಂದು ಕೇಂದ್ರದ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಮಿಜೋರಾಂ ಮುಖ್ಯಮಂತ್ರಿ ಪು ಜೋರಮ್ತಂಗ ಅವರು, ರಾಜ್ಯ ಮುಖ್ಯ ಕಾರ್ಯದರ್ಶಿ (ಸಿಎಸ್) ರೇಣು ಶರ್ಮಾ ಅವರನ್ನು ಬದಲಾಯಿಸಲು ಒತ್ತಾಯಿಸಿದ್ದಾರೆ.
ರೇಣು ಶರ್ಮಾ ಅವರ ಬದಲಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಸಿ.ರಾಮತಂಗ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿಯವರು ಕೇಂದ್ರದ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
“ಗುಜರಾತ್ ಕೇಡರ್ನ ನನ್ನ ಮುಖ್ಯ ಕಾರ್ಯದರ್ಶಿ ಲಾಲ್ನುನ್ಮಾವಿಯಾ ಚುವಾಗೊ ಅವರು ನಿವೃತ್ತರಾದ ನಂತರ ನನ್ನ ಈಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆಸಿ ರಾಮತಂಗ (ಮಣಿಪುರ ಕೇಡರ್) ಅವರನ್ನು ಮುಂದಿನ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಲು ನಾನು ವಿನಂತಿಸಿದೆ. ಆದರೆ ಗೃಹ ಸಚಿವಾಲಯವು ರೇಣು ಶರ್ಮಾ ಅವರನ್ನು ಹೊಸ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ” ಎಂದು ಅಕ್ಟೋಬರ್ 29ರಂದು ಬರೆದ ಪತ್ರದಲ್ಲಿ ಮಿಜೋರಾಂ ಸಿಎಂ ಹೇಳಿದ್ದು, ಈ ಪತ್ರವು ತಮಗೆ ಲಭ್ಯವಾಗಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
1988ರ ಬ್ಯಾಚ್ನ AGMUT ಕೇಡರ್ ಐಎಎಸ್ ಅಧಿಕಾರಿಯಾಗಿರುವ ರೇಣು ಶರ್ಮಾ ಅವರನ್ನು ನವೆಂಬರ್ 1ರಿಂದ ಮಿಜೋರಾಂನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಅಕ್ಟೋಬರ್ 28 ರಂದು ಕೇಂದ್ರವು ನೇಮಿಸಿತು.
ಇದನ್ನೂ ಓದಿರಿ: ಒರಿಸ್ಸಾ: ದಲಿತರ ಗುಡಿಸಲುಗಳಿಗೆ ಬೆಂಕಿ; ಹತ್ತು ಮಂದಿಗೆ ಗಾಯ
ಅದೇ ದಿನ, ಮಿಜೋರಾಂ ಸರ್ಕಾರವು ಜೆಸಿ ರಾಮತಂಗ ಅವರಿಗೆ ನವೆಂಬರ್ 1ರಿಂದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಆದೇಶಿಸಿತು. ಹೀಗಾಗಿ ಮಿಜೋರಾಂ ಈಗ ಇಬ್ಬರು ಮುಖ್ಯ ಕಾರ್ಯದರ್ಶಿಗಳನ್ನು ಹೊಂದಿದೆ.
“ಮಿಜೋ ಭಾಷಿಗರಿಗೆ ಹಿಂದಿ ಅರ್ಥವಾಗುವುದಿಲ್ಲ. ನನ್ನ ಕ್ಯಾಬಿನೆಟ್ ಮಂತ್ರಿಗಳಲ್ಲಿ ಯಾರಿಗೂ ಹಿಂದಿ ಬರುವುದಿಲ್ಲ. ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಭಾಷೆಯ ಸಮಸ್ಯೆಯೂ ಇದೆ. ಅಂತಹ ಪರಿಸ್ಥಿತಿಯಲ್ಲಿ ಮಿಜೋ ಭಾಷೆಯ ಜ್ಞಾನವಿಲ್ಲದ ಮುಖ್ಯ ಕಾರ್ಯದರ್ಶಿಯವರು ಎಂದಿಗೂ ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದು” ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ಈ ಕಾರಣದಿಂದಾಗಿ ಮಿಜೋರಾಂ ರಾಜ್ಯ ರಚನೆಯಾದಾಗಿನಿಂದಲೂ ಮಿಜೋ ಭಾಷೆಯನ್ನು ತಿಳಿದಿಲ್ಲದ ಮುಖ್ಯ ಕಾರ್ಯದರ್ಶಿಯನ್ನು ಭಾರತ ಸರ್ಕಾರವು ಎಂದಿಗೂ ನೇಮಿಸಲಿಲ್ಲ. ಅದು ಯುಪಿಎ ಸರ್ಕಾರವಾಗಲಿ ಅಥವಾ ಎನ್ಡಿಎ ಸರ್ಕಾರವಾಗಲಿ ಮಿಜೋರಾಂ ರಾಜ್ಯ ರಚನೆಯಾದಾಗಿನಿಂದ ಈ ಪದ್ಧತಿ ನಡೆದುಬಂದಿದೆ. ಭಾರತದ ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ತಿಳಿಯದವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ” ಎಂದು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
“ನಾನು ಮೊದಲಿನಿಂದಲೂ ಈ ಸಮಯದವರೆಗೆ ಈಶಾನ್ಯ ರಾಜ್ಯಗಳಲ್ಲಿ ಎನ್ಡಿಎಯ ನಿಷ್ಠಾವಂತ ಪಾಲುದಾರನಾಗಿದ್ದೇನೆ. ಎನ್ಡಿಎ ಜೊತೆಗಿನ ಈ ನಿಷ್ಠಾವಂತ ಸ್ನೇಹದಿಂದಾಗಿ ವಿಶೇಷವಾದ ಒಲವು ಮತ್ತು ಪರಿಗಣನೆಗೆ ಅರ್ಹನಾಗಿದ್ದೇನೆ ಎಂದು ನಾನು ನಂಬುತ್ತೇನೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
“ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಯವರು ಕೇಳಿದಾಗ ನಿರಾಕರಿಸಲಿಲ್ಲ. ಮುಖ್ಯ ಕಾರ್ಯದರ್ಶಿಯ ಪ್ರಸ್ತಾಪವನ್ನು ನನಗೆ ನಿರಾಕರಿಸಿದರೆ, ಕಾಂಗ್ರೆಸ್ ಪಕ್ಷ ಮತ್ತು ಇತರ ಎಲ್ಲಾ ವಿರೋಧ ಪಕ್ಷಗಳು ಎನ್ಡಿಎ ಪಾಲುದಾರಿಕೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ನನ್ನನ್ನು ಅಪಹಾಸ್ಯ ಮಾಡುತ್ತವೆ. ಆದ್ದರಿಂದ ಆದೇಶವನ್ನು ಬದಲಾಯಿಸಬೇಕು, ನನ್ನ ಪ್ರಸ್ತಾವನೆಯನ್ನು ದಯವಿಟ್ಟು ಸ್ವೀಕರಿಸಬೇಕು ಎಂದು ನಿಮ್ಮಲ್ಲಿ ಮನಃಪೂರ್ವಕವಾಗಿ ವಿನಂತಿಸುತ್ತೇನೆ” ಎಂದು ಜೊರಾಮ್ತಂಗಾ ಕೋರಿದ್ದಾರೆ.
ಇದನ್ನೂ ಓದಿರಿ: ಹಿಂದಿ ಹೇರಿಕೆಗೆ ಕಪಾಳ ಮೋಕ್ಷ: ’ಜೈ ಭೀಮ್’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ