Homeಮುಖಪುಟ2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

- Advertisement -
- Advertisement -

ರವಿವಾರ ಬಂಗಾಳದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರು ಮಮತಾ ಸರ್ಕಾರದ ವಿರುದ್ಧ ಪದಪುಂಜಗಳ ವಾಗ್ದಾಳಿ ನಡೆಸಿದರು. ಆದರೆ ಬಂಗಾಳ ನೆಲದಲ್ಲಿ 2014ರಿಂದ ಮೋದಿ ಮಾಡಿದ ಭಾಷಣಗಳ ಹೂರಣವೇನು? ಆಗ ದೀದಿ ಪರ ಧ್ವನಿ ಎತ್ತುತ್ತಿದ್ದ ಮೋದಿ ಈಗ ದೀದಿ ವಿರುದ್ಧ ನೆರ ದಾಳಿ ಮಾಡುತ್ತಿದ್ದಾರೆ…

‘ತೃಣಮೂಲ ಕಾಂಗ್ರೆಸ್ ಆಟ ಮುಗಿದಿದೆ (“ಖೇಲಾ ಶೇಷ್”)’ ಎಂದು ರವಿವಾರ ಭವಿಷ್ಯ ನುಡಿದ ಪ್ರಧಾನಿ, 2014ರಲ್ಲಿ ‘ದೆಹಲಿಯಲ್ಲಿ ನರೇಂದ್ರ ಮೋದಿ ಮತ್ತು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ’ಯವರನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದರು!

“ಆಪ್ಕೆ ದೋನೊ ಹಾಥ್ ಮೇ ಲಡ್ಡು”(ನಿಮ್ಮೆರಡೂ ಕೈಗಳಲ್ಲಿ ಲಡ್ಡು ಉಂಡೆ) ಎಂದು ಅವರು 2014 ರಲ್ಲಿ ಅದೇ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದ್ದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದ್ದರು.

ಎರಡು ವರ್ಷಗಳ ನಂತರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ, ಶಾರದಾ ಹಗರಣದ ಬಗ್ಗೆ ಮೋದಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ “ಸಿಂಡಿಕೇಟ್ ಸಂಸ್ಕೃತಿ” ತಲೆಯೆತ್ತಿದೆ ಎಂದು ಆಕ್ರಮಣ ಮಾಡಿದ್ದರು.

2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪುಲ್ವಾಮಾ-ಬಾಲಕೋಟ್ ಬಗ್ಗೆ ಪ್ರಸ್ತಾಪಿಸುತ್ತ, “ದೀದಿ ಮತ್ತು ಅವರ ಸ್ನೇಹಿತರು ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಮೋದಿ ಆರೋಪಿಸಿದರು.

ಅಭಿವೃದ್ಧಿಯ ಭರವಸೆ ಮತ್ತು “ಸೋನಾರ್ ಬಾಂಗ್ಲಾ” (ಚಿನ್ನದ ಬಂಗಾಳ) ಎಂಬುದು 2014 ರಿಂದ 2019 ರವರೆಗೆ ಮೋದಿಯವರ ಭಾಷಣಗಳಲ್ಲಿ ನಿರಂತರ ವಿಷಯವಾಗಿ ಉಳಿದಿದೆ. ಅವರು ಭಾನುವಾರ “ಅಸೋಲ್ ಪೊರಿಬೊರ್ತನ್” (ನೈಜ ಅಭಿವೃದ್ಧಿ) ಕುರಿತು ಮಾತನಾಡಿದರು.

ಈ ಹಿಂದೆ ಮೋದಿ ಇದೇ ಮೈದಾನದಲ್ಲಿ, “ನಾನು ಬಂಗಾಳದ ಜನರೊಂದಿಗೆ ನೇರವಾಗಿ ಮಾತನಾಡಲು ಬಯಸುತ್ತೇನೆ” ಎಂದು ಮೋದಿ ಫೆಬ್ರವರಿ 5, 2014 ರಂದು ಬ್ರಿಗೇಡ್‌ನಲ್ಲಿ ಜನಚೇತನ ಸಭೆಗೆ ತಿಳಿಸಿದರು. “ಈ ಬಾರಿ ಎಲ್ಲಾ [ಲೋಕಸಭಾ] ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿ. ನೀವು ಬಂಗಾಳದಲ್ಲಿ 34 ವರ್ಷಗಳ ಎಡ ಆಡಳಿತವನ್ನು ಕೊನೆಗೊಳಿಸಿದ್ದೀರಿ. ನೀವು ಇಲ್ಲಿ ಹೊಸ ಸರ್ಕಾರವನ್ನು ಹೊಂದಿದ್ದೀರಿ. ಮಮತಾ ಬ್ಯಾನರ್ಜಿ ನಿಮಗಾಗಿ ಇಲ್ಲಿ ಕೆಲಸ ಮಾಡಲಿ. ಫಲಿತಾಂಶಗಳ ಬಗ್ಗೆ ಅವರನ್ನು ಪ್ರಶ್ನಿಸಿ. ನನಗೆ ಬಂಗಾಳದಿಂದ ಎಲ್ಲಾ ಸ್ಥಾನಗಳನ್ನು ನೀಡಿ, ದೇಶದಲ್ಲಿ ಪೊರಿಬೋರ್ತನ್ ತರಲು. ನಾವು ದೆಹಲಿಯಲ್ಲಿ ಏನು ಮಾಡುತ್ತೇವೆ ಎಂಬ ಕುರಿತು ನನ್ನನ್ನು ಪ್ರಶ್ನಿಸಿ. ಆಪ್ಕೆ ದೋನೊ ಹಾಥ್ ಮೇ ಲಡ್ಡು……’ ಎಂದಿದ್ದರು.

“ಬಂಗಾಳದ ಭವಿಷ್ಯವನ್ನು ಬದಲಾಯಿಸಲು ರಾಜ್ಯ ಸರ್ಕಾರದ ಉತ್ತಮ ಕೆಲಸಗಳು ಮಾತ್ರ ಸಾಕಾಗುವುದಿಲ್ಲ” ಎಂದು ಮೋದಿ ಹೇಳಿದ್ದರು. “ದೆಹಲಿಯ ಸರ್ಕಾರವು ಬಂಗಾಳಕ್ಕೂ ಕೆಲಸ ಮಾಡಬೇಕು. ನೀವು ಬದಲಾವಣೆಯನ್ನು ತಂದರೆ (ದೆಹಲಿಯಲ್ಲಿ) ನಾವು ಸೋನಾರ್ ಬಾಂಗ್ಲಾವನ್ನು ಮರಳಿ ತರುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ”

2014 ರಲ್ಲಿ ಬಂಗಾಳದಿಂದ ಎರಡು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಏಪ್ರಿಲ್ 17, 2016 ರಂದು ವಿಧಾನಸಭಾ ಚುನಾವಣೆಗೆ ಮುನ್ನ ಮೋದಿ ಕೋಲ್ಕತಾ ಮೈದಾನದ ಸಾಹಿದ್ ಮಿನಾರ್ ಮೈದಾನದಲ್ಲಿ ಮಾತನಾಡಿದರು. “ವಿವೇಕಾನಂದ ಸೇತುವೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡ 27 ಮುಗ್ಧ ಜನರ ಅಪರಾಧವೇನು” ಎಂದು ಅವರು ಕೇಳಿದರು. “ಶಾರದ (ಹಗರಣ) ದಲ್ಲಿ ಕಂಡುಬರುವ ಅದೇ ಜನರನ್ನು ಶಾರದಾ (ಚಿಟ್ ಫಂಡ್ ಹಗರಣ) ಮತ್ತು ವಿವೇಕಾನಂದ ಸೇತುವೆ ದುರಂತದಲ್ಲೂ ಕಾಣಬಹುದು. ಈ ಜನರು ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಿಂಡಿಕೇಟ್ ಸಂಸ್ಕೃತಿಯನ್ನು ಮುಂದುವರಿಸಲು ಅನುಮತಿಸಬೇಕೇ? ಈ ಸಂಸ್ಕೃತಿ ಮುಂದುವರಿದರೆ ಬಂಗಾಳ ಉಳಿಯುತ್ತದೆಯೇ? ಎಡಪಂಥೀಯರು ಬಿಟ್ಟುಹೋದ ಎಲ್ಲಾ ತೊಂದರೆಗಳನ್ನು ದೀದಿ ಹೆಚ್ಚಿಸಿದ್ದಾರೆ… ”

“ಪೂರ್ವ ಭಾರತವನ್ನು ಅಭಿವೃದ್ಧಿಪಡಿಸುವುದು” ತನ್ನ ಕನಸು ಎಂದು ಮೋದಿ ಹೇಳಿದ್ದರು. “ನನ್ನ ಮೊದಲ ಕಾರ್ಯಸೂಚಿ ಅಭಿವೃದ್ಧಿ. ನನ್ನ ಎರಡನೇ ಕಾರ್ಯಸೂಚಿ ಅಭಿವೃದ್ಧಿಯ ವೇಗ… ನನ್ನ ಮೂರನೇ ಕಾರ್ಯಸೂಚಿ ಅಭಿವೃದ್ಧಿಯಲ್ಲಿಯೇ ಎಲ್ಲ” ಎಂದು ಹೇಳಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನಗಳನ್ನು ಗೆದ್ದಿತ್ತು; ಅದರ ಮಿತ್ರ ಜಿಜೆಎಂ ಡಾರ್ಜಿಲಿಂಗ್ ಹಿಲ್ಸ್‌ನಲ್ಲಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಏಪ್ರಿಲ್ 3, 2019 ರಂದು ಪ್ರಧಾನಿ ಮತ್ತೆ ಬ್ರಿಗೇಡ್‌ನಲ್ಲಿ ಮಾತನಾಡಿದರು. ಪುಲ್ವಾಮ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 46 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಬಾಲಕೋಟ್ ವಾಯುದಾಳಿಗಳನ್ನು ಪ್ರಶ್ನಿಸಿದ್ದಕ್ಕಾಗಿ ಅವರು, ಮಮತಾ ಮತ್ತು ಉಳಿದ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

“ನಾವು ಸ್ವಾಮಿ ವಿವೇಕಾನಂದರು ಕಲ್ಪಿಸಿಕೊಂಡ ಭಾರತದತ್ತ ಸಾಗುತ್ತಿರುವ ಸಮಯದಲ್ಲಿ, ಮೋದಿಯನ್ನು ವಿರೋಧಿಸುವ ಸಲುವಾಗಿ ಮಾ ಭಾರತಿ ವಿರುದ್ಧ ಮಾತನಾಡುತ್ತಿರುವ ಕೆಲವರು ಇದ್ದಾರೆ… ದೀದಿ ಮತ್ತು ಅವರ ಸ್ನೇಹಿತರು ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾರಣ ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದರು.

ಜನವರಿ 19, 2019 ರಂದು ಬ್ರಿಗೇಡ್‌ನಲ್ಲಿ ಮಮತಾ ಅವರು ಕರೆದಿದ್ದ ‘ಯುನೈಟೆಡ್ ಇಂಡಿಯಾ’ ರ‍್ಯಾಲಿಯನ್ನು ಉಲ್ಲೇಖಿಸಿ ಮೋದಿ ಹೀಗೆ ಹೇಳಿದ್ದರು: “ದೇಶದ ವಿವಿಧ ಭಾಗಗಳ ರಾಜಕೀಯ ಮುಖಂಡರು ಇಲ್ಲಿ ಜಮಾಯಿಸಿ ಕೈ ಎತ್ತಿ ‘ಮೋದಿ ಹಠಾವೊ, ಮೋದಿ ಹಠಾವೊ’ ಎಂದರು. ಏಕೆ? ಮೋದಿಯವರು ಯಾವ ಅಪರಾಧ ಮಾಡಿದ್ದಾರೆ? ಮನೆಗಳಿಗೆ ಶೌಚಾಲಯ ನೀಡುವುದು ಅಪರಾಧವೇ? ಬಡವರಿಗೆ ಮನೆ ಕೊಡುವುದು ಅಪರಾಧವೇ? ಮನೆಗಳಲ್ಲಿ ವಿದ್ಯುತ್ ನೀಡುವುದು ಅಪರಾಧವೇ? ”

2019 ರ ಲೋಕಸಭಾ ಚುನಾವಣೆಯಲ್ಲಿ 42 ರಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಆದರೆ, ಈ ಸಲವು ವಿಧಾನಸಭೆ ಚುನಾವಣೆಯಲ್ಲಿ ಮಮತಾ ಪಕ್ಷವೇ ಫೆವರಿಟ್ ಆಗಿದೆ. ಈಗ ಮತ್ತೆ ಮೋದಿ ಖೇಲ್ ಖತಂ ಅಂತಹ ಪದಪುಂಜ ಬಳಸುತ್ತಿದ್ದಾರೆ. ಮಮತಾ ಗ್ಯಾಸ್ ದರ ಏರಿಕೆ, ನಿರುದ್ಯೋಗ, ಆರ್ಥಿಕ ದಿವಾಳಿತನದಂತಹ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ, ‘ದಂಗಾಬಾಜ್’ಗಳ ವಿರುದ್ಧ ‘ಖೇಲಾ ಹೋಬೆ’ ಎಂದು ಘರ್ಜಿಸುತ್ತಿದ್ದಾರೆ….ಸದ್ಯದಲ್ಲೇ ಅಲ್ಲಿ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತ ನಾಯಕರು ಬಿಜೆಪಿ ವಿರುದ್ಧ ಮಹಾ ಪಂಚಾಯತ್ ನಡೆಸಲಿದ್ದಾರೆ… ಖೇಲಾ ಹೋಬೆ…, ಆಟ ಶುರು…

-ಪಿ.ಕೆ ಮಲ್ಲನಗೌಡರ್
(ಮಾಹಿತಿ: ಇಂಡಿಯನ್ ಎಕ್ಸ್‌ಪ್ರೆಸ್)


ಇದನ್ನೂ ಓದಿ: ‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...