ಅಯೋಧ್ಯೆಯಲ್ಲಿ ಡಿಸೆಂಬರ್ 6ನ್ನು ಬಾಬ್ರಿ ಮಸೀದಿ ಧ್ವಂಸದ ದಿನದ ನೆನಪಿನಲ್ಲಿ ಪ್ರತಿವರ್ಷ ಕೆಲ ಹಿಂದೂ ಸಂಘಟನೆಗಳು ಆಚರಿಸುತ್ತಿದ್ದ ಶೌರ್ಯ ದಿನವನ್ನು ಈ ವರ್ಷ ಆಚರಿಸಿಲ್ಲ. ಇತ್ತೀಚೆಗೆ ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಮತ್ತು ಆ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. 1992ರಲ್ಲಿ ಬಾಬ್ರಿ ಮಸೀದಿಯನ್ನು ಕರ ಸೇವಕರು ಧ್ವಂಸಗಳಿಸಿದ್ದರು.
ಹಿಂದೂಗಳ ಶೌರ್ಯ ದಿನ ಆಚರಣೆಗೆ ಪ್ರತಿಯಾಗಿ ಅಯೋಧ್ಯೆಯ ಮುಸ್ಲಿಮರು ಕಪ್ಪು ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಮಸೀದಿ ಧ್ವಂಸ ದಿನ (ದುಃಖದ ದಿನ) ಎಂದು ಆಚರಿಸುತ್ತಿದ್ದರು. ಆದರೆ ಈ ಬಾರಿ ಆ ಆಚರಣೆ ಕೂಡ ನಡೆಸುತ್ತಿಲ್ಲ.
ಶ್ರೀ ರಾಮ್ ಜನ್ಮಭೂಮಿ ತೀರ್ತ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾಗಿರುವ ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಭಾನುವಾರ “ಶೌರ್ಯ ದಿವಾಸ್” ಆಚರಿಸದಂತೆ ಹಿಂದೂಗಳಿಗೆ ಮನವಿ ಮಾಡಿದ್ದಾರೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿ ಪೂಜೆಯು ನೆರವೇರಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ಮೀರಿದ ಸಿಬಿಐ ನ್ಯಾಯಾಲಯದ ಬಾಬ್ರಿ ತೀರ್ಪು
“ಸುಪ್ರೀಂ ಕೋರ್ಟ್ ರಾಮ ಮಂದಿರ ಪರವಾಗಿ ತೀರ್ಪು ನೀಡಿರುವಾಗ, ಶೌರ್ಯ ದಿವಾಸ್ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈಗ, ರಾಮ್ ಮಂದಿರದ ಭೂಮಿ ಪೂಜೆ ಸಹ ನಡೆದಿದೆ ಮತ್ತು ರಾಮ್ ಮಂದಿರದ ಅಡಿಪಾಯದ ಕೆಲಸಗಳು ನಡೆಯುತ್ತಿವೆ ”ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಯ ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.
“ಆದ್ದರಿಂದ, ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಎಲ್ಲವನ್ನು ಮರೆತು ಮುಂದುವರಿಯಬೇಕು” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಮಸೀದಿ ಧ್ವಂಸ ದಿನವನ್ನು ಆಚರಿಸಲು ರಾಮ್ ಮಂದಿರ-ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ದಾವೆ ಹೂಡುವವರಲ್ಲಿ ಒಬ್ಬರಾದ ಹಾಜಿ ಮೆಹಬೂಬ್ ಅವರ ನಿವಾಸದಲ್ಲಿ ಒಂದು ದೊಡ್ಡ ಸಭೆ ಸೇರುತ್ತಿದ್ದರು. ಆದರೆ ಈ ಬಾರಿ ಯಾವುದೇ ಸಾಂಕೇತಿಕ ಪ್ರತಿಭಟನೆಗಳು ಕೂಡ ಅಯೋಧ್ಯೆಯಲ್ಲಿ ನಡೆದಿಲ್ಲ.
ಮತ್ತೊಂದೆಡೆ, ವಿಎಚ್ಪಿ ನೇತೃತ್ವದ ಸಂಸ್ಥೆಗಳು ಈ ದಿನವನ್ನು ಶೌರ್ಯ ದಿನ ಎಂದು ಆಚರಿಸುತ್ತಿದ್ದವು. ಆದರೆ, ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ ರಾಮ್ ಮಂದಿರದ ಭೂಮಿ ಪೂಜೆ ನಂತರ ಅದು ನಿಂತಿದೆ.
ಇದನ್ನೂ ಓದಿ: ಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ ಕಾಕತಾಳೀಯವೆ?
“ಈ ವರ್ಷ ದುಖಃದ ದಿನ ಇರುವುದಿಲ್ಲ. ಯಾವುದೇ ಕಪ್ಪು ಧ್ವಜಗಳನ್ನು ಹಾರಿಸಲಾಗುವುದಿಲ್ಲ ಮತ್ತು ಮುಸ್ಲಿಮರು ಡಿಸೆಂಬರ್ 6 ರಂದು ತಮ್ಮ ಅಂಗಡಿಗಳನ್ನು ತೆರೆಯುತ್ತಾರೆ ”ಎಂದು ಹಾಜಿ ಮೆಹಬೂಬ್ ಹೇಳಿದರು. “ಡಿಸೆಂಬರ್ 6, 1992 ರಂದು ಹಿಂಸಾಚಾರದಲ್ಲಿ ಬಲಿಯಾದವರಿಗೆ ಟೆಡಿ ಬಜಾರ್ ಮಸೀದಿಯಲ್ಲಿ ಕುರಾನ್ ಪಠಣ ಮಾತ್ರ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ನಾವು ಹಿಂದಿನದನ್ನು ಮರೆತು ಮುಂದೆ ಸಾಗಲು ನಿರ್ಧರಿಸಿದ್ದೇವೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಭೂತಕಾಲವನ್ನು ಮರೆಯಲು ದೇಶದಾದ್ಯಂತದ ಮುಸ್ಲಿಂ ಸಮುದಾಯಕ್ಕೆ ಸಂದೇಶವನ್ನು ತಲುಪಿಸಲು ನಿರ್ಧರಿಸಿದ್ದೇವೆ” ಎಂದು ಮೆಹಬೂಬ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ದಶಕಗಳ ಹಳೆಯ ರಾಮ್ ಮಂದಿರ-ಬಾಬರಿ ಮಸೀದಿ ಪ್ರಕರಣವನ್ನು ರಾಮ್ ಮಂದಿರದ ಪರವಾಗಿ ತೀರ್ಪು ನೀಡುವ ಮೂಲಕ ಕೊನೆಗೊಳಿಸಿತು.
ಮತ್ತೆ, ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿಯ ಧ್ವಂಸಕ್ಕೆ ಕಾರಣವಾದ ಕ್ರಿಮಿನಲ್ ಸಂಚು ಹೂಡಿದ ಆರೋಪ ಹೊತ್ತಿದ್ದ ಎಲ್ಲಾ 32 ಮಂದಿಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಆರೋಪ ಮುಕ್ತಗೊಳಿಸಿತು.