ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಕ್ಷರ ಹಾಗೂ ಜನ ಸಂಗಮದ ಬೃಹತ್ ಜಾತ್ರೆ. ಮಕ್ಕಳಿಂದ ಹಿಡಿದು ಇಳಿಗಾಲದ ಹಿರಿಯರವರೆಗೂ ಸಮ್ಮೇಳನದ ಕುರಿತು ಅತೀವ ಕುತೂಹಲ. ಅದರಲ್ಲೂ ಹಾವೇರಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಸಮ್ಮೇಳನದ ಆತಿಥ್ಯ ದೊರೆತಿರುವುದರಿಂದ ಜಿಲ್ಲೆಯ ಶ್ರೀಸಾಮಾನ್ಯರು ಸಾಗರೋಪಾದಿಯಲ್ಲಿ ಕನ್ನಡ ಜಾತ್ರೆಗೆ ಆಗಮಿಸುತ್ತಿದ್ದಾರೆ.
ರಾಜ್ಯದ ಮೂಲೆಮೂಲೆಯಿಂದ ಬಂದ ಜನರ ಜೊತೆಗೆ ಹಾವೇರಿ ಜಿಲ್ಲೆಯ ಜನತೆ ತೀವ್ರ ಕುತೂಹಲಗೊಂಡು ಸಮ್ಮೇಳನಕ್ಕೆ ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಂಥದೊಂದು ಕಾರ್ಯಕ್ರಮ ನಡೆಯುತ್ತಿರುವ ಖುಷಿ ಅನೇಕರಿಗೆ.
“ರಾಯಚೂರು, ಚಿತ್ರದುರ್ಗ ಎಲ್ಲ ಕಡೆ ಸಾಹಿತ್ಯ ಸಮ್ಮೇಳನ ಆಗೇವ. ಹಾವೇರಿ ಜಿಲ್ಲೆಯೊಳಗೆ ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರ ಏನಂತಾನೇ ಗೊತ್ತಿರಲಿಲ್ಲ. ಇದೇ ಮೊದಲ ಸಲ ಸಮ್ಮೇಳನ ನೋಡಿ ಖುಷಿಯಾಗೈತೆ’’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ಬಂಕಾಪುರದ ನೇಕಾರರಾದ ಶಿಲ್ಪಾ.
ಮುಂದುವರಿದು, “ಮಕ್ಕಳಿಗೆ ಕನ್ನಡ ಅಂದ್ರೆ ಏನಂತ ಗೊತ್ತಿಲ್ಲ. ಅರಣ್ಯ ಅಂದ್ರೆ ಏನಂತ ಗೊತ್ತಿಲ್ಲ. ಅದನ್ನೆಲ್ಲ ತಿಳಿಸುವ ಕೆಲಸ ಮಾಡಿದ್ದಾರೆ. ತಾಯಿ ಭುವನೇಶ್ವರಿ ನಮ್ ಊರಿನೊಳಗ ಬಂದೌಳ ಅನ್ನೋ ಅಭಿಮಾನ. ಕನ್ನಡದೊಳಗ ಹುಟ್ಟಿದಕ್ಕೂ ನಮ್ ಜೀವನ ಸಾರ್ಥಕವಾಯ್ತು’’ ಎಂಬುದು ಅವರ ಧನ್ಯತಾ ಭಾವ.
ಬಂಕಾಪುರದ ಲೀಲಾವತಿಯವರು ಮಾತನಾಡಿ, “ತುಂಬಾ ಚೆನ್ನಾಗೈತೆ. ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ಇದೇ ಫಸ್ಟ್ ಟೈಮ್ ಸಮ್ಮೇಳನ ನೋಡ್ತಾ ಇದ್ದೇವೆ. ಮಕ್ಕಳು ತಿಳಿದುಕೊಳ್ತಾವೊ. ಸಾಹಿತ್ಯ ಸಮ್ಮೇಳನ ಅಂದ್ರೆ ಎನಂಥ ಗೊತ್ತಿರಲಿಲ್ಲ. ನೋಡಲೇಬೇಕು ಅಂತ ಬಂದಿದ್ದೇವೆ’’ ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದಾಪುರದಿಂದ ಆಗಮಿಸಿದ್ದ ಕಲಾವಿದ ಬಸವರಾಜು ಮಾತನಾಡಿ, ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನನಗೂ ಅವಕಾಶ ನೀಡಿದ್ದಾರೆ. ಪುಟ್ಟರಾಜ ಗವಾಯಿ, ಹಾನಗಲ್ ಕುಮಾರಸ್ವಾಮಿಯಂತಹ ರತ್ನಗಳಿದ್ದ ಯಾಲಕ್ಕಿ ನಾಡಿದು’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ತಮ್ಮನಗೌಡ ಪಾಟೀಲ ಅವರು ಮಾತನಾಡಿ, “ಇತರೆ ಸಮ್ಮೇಳನಕ್ಕಿಂತ ಹಾವೇರಿ ಸಮ್ಮೇಳನ ಭಿನ್ನವಾಗಿದೆ. ಎಲ್ಲರ ಅಭಿರುಚಿಗೆ ತಕ್ಕಂತೆ ಪುಸ್ತಕಗಳಿವೆ. ಕಡಿಮೆ ದರದಲ್ಲಿ ಪುಸ್ತಕಗಳು ನಡೆಯುತ್ತಿವೆ. ನಾನು ನೋಡಿರುವ ಸಮ್ಮೇಳನದಲ್ಲಿ ವಿಶಿಷ್ಟ ಸಮ್ಮೇಳನ ಇದಾಗಿದೆ. ಧಾರವಾಡ ಸಮ್ಮೇಳಕ್ಕೆ ಹೋಗಿದ್ದೆ. ಅಲ್ಲಿ ಸ್ಥಳ ಬಹಳ ಇಕ್ಕಟ್ಟಿನಿಂದ ಕೂಡಿತ್ತು’’ ಎಂದು ಸ್ಮರಿಸಿದರು.
ಹಾವೇರಿಯ ಸ್ಥಳೀಯ ಯುವಕ ಅನಂತ ಪ್ರತಿಕ್ರಿಯಿಸಿ, “ಜನರು ಶಾಂತ ರೀತಿಯಿಂದ ವರ್ತಿಸಬೇಕು. ಸ್ಪಚ್ಛತೆ ಕಾಪಾಡಬೇಕು. ಹಳ್ಳಿಗಳ ನಾಡು, ಜನಪದ ಕಲೆಗಳ ಬೀಡು, ಸರ್ವಜ್ಞ ನಡೆದಾಡಿದ ನೆಲ ಹಾವೇರಿ. ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಬಹಳ ಖುಷಿಯನ್ನು ತಂದಿದೆ’’ ಎಂದರು.
ಜಗದೀಶ ಸೋಮನಾಥಪುರ ಎಂಬವರು ಸಂತಸ ವ್ಯಕ್ತಪಡಿಸುತ್ತಾ, “ಸಮುದ್ರ ಚೆನ್ನಾಗೈತೆ. ವ್ಯವಸ್ಥೆ ಚೆನ್ನಾಗೈತೆ, ಒಟ್ಟು ಒಂಬತ್ತು ಮಂದಿ ಬಂದಿದ್ದೇವೆ. ಊಟ ಮಾಡಿದ್ವಿ, ಕಾರ್ಯಕ್ರಮ ನೋಡಿದ್ವಿ’’ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದರು.
ಭುವನೇಶ್ವರಿ ವೇಷಭೂಷಣ ಧರಿಸಿ ಗಮನ ಸೆಳೆಯುತ್ತಿದ್ದ ಬೆಂಗಳೂರಿನ ಶೋಭಾ ಮಾತನಾಡಿ, “ಅನ್ಯಭಾಷೆಗಳಿಗಿಂತ ಕನ್ನಡವೇ ಮೇಲು. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಪ್ರಧಾನ, ಉಳಿದೆಲ್ಲ ಭಾಷೆಗಳು ನಿಧಾನ’’ ಎಂದರು.
“ಇದೇ ರೀತಿಯ ವೇಷಭೂಷಣದಲ್ಲಿ ಹಲವು ಸಾಹಿತ್ಯ ಸಮ್ಮೇಳನಗಳಿಗೆ ಹೋಗಿಬಂದಿದ್ದೇನೆ. ವಿಭಿನ್ನ ವೇಷ ಭೂಷಣ ಹಾಕಿದರೆ, ಜನ ಗಮನಿಸುತ್ತಾರೆ. ಈ ಮೂಲಕ ಇಂದಿನ ಯುವ ಸಮುದಾಯದಲ್ಲಿ ಕನ್ನಡಾಭಿಮಾನ ಮೂಡಿಸಲು ಯತ್ನಿಸುತ್ತಿದ್ದೇನೆ’’ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯವರಾದ ಎಂ.ಸುಬ್ರಮಣಿಯವರು `ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಳೆದ ಹದಿನೈದು ವರ್ಷಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಮಹೇಶ್ ಜೋಶಿಯವರು ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಆರೋಪಗಳು ಇದ್ದೇ ಇರುತ್ತವೆ. ಬಂದಿರುವ ಆರೋಪಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ಸಮ್ಮೇಳನದಲ್ಲಿ ಸರಿಪಡಿಸಿಕೊಳ್ಳಬೇಕು’’ ಎಂದು ಆಶಿಸಿದರು.
ಎಲ್ಲಾ ಸಮ್ಮೇಳನದಲ್ಲಿ ಗಂಭೀರ ಸಂಗತಿಗಳು ಪ್ರಸ್ತಾಪವಾಗುತ್ತವೆ. ಎಲ್ಲ ನಿರ್ಣಯಗಳು ಮಂಡಿಸುತ್ತಾರೆ. ಅದರಲ್ಲಿ ಸ್ವಲ್ಪನಾದರೂ ಆಗಬೇಕು. ಗಡಿ ವಿವಾದ ಬಗೆಹರಿಯುತ್ತಿಲ್ಲ. ಇದು ಮುಂದಿನ ದಿನಗಳಲ್ಲಾದರೂ ಸರಿಯಾಗಬೇಕು’ ಎಂದು ಒತ್ತಾಯಿಸಿದರು.
ಮುಂಜಾನೆಯೇ `ನಾನುಗೌರಿ.ಕಾಂ’ಗೆ ಮಾತಿಗೆ ಸಿಕ್ಕ ಗೋಕಾಕಿನ ವೃದ್ಧ ಸಿ.ಎ.ಪಾಟೀಲ್, “ರಾಯಚೂರು ಒಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳು ಛಲೋ ಆಗಿದ್ದವಾ. ಟೈಮ್ಗೆ ಕಿಮ್ಮತ್ತು ಕೊಡೋರಂತೂ ಯಾರೂ ಇಲ್ಲ. ಒಂಬತ್ತೂವರೆಗೆ ಟೈಮ್ ಕೊಟ್ಟಿದ್ದಾರ, ಒಬ್ಬರಾದ್ರೂ ವಿಐಪಿಗಳು ಬರೋರಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ