ರಾಜಸ್ಥಾನದ ನೂತನ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರು ಪ್ರಮಾಣ ವಚನ ಸ್ವೀಕರಿಸಿರುವುದನ್ನು ಪ್ರಶ್ನಿಸಿ ಶನಿವಾರ ರಾಜಸ್ಥಾನ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.
ವಕೀಲ ಓಂ ಪ್ರಕಾಶ್ ಸೋಲಂಕಿ ಎಂಬವರು ಉಪ ಮುಖ್ಯಮಂತ್ರಿಗಳ ನೇಮಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಈಗಾಗಲೇ ರಾಜಸ್ಥಾನದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕಗೊಳಿಸಿರುವುದನ್ನು ರದ್ದುಪಡಿಸುವಂತೆ ಕೋರಿದ್ದಾರೆ.
“ಸಂವಿಧಾನವು ಉಪಮುಖ್ಯಮಂತ್ರಿ ಹುದ್ದೆಗೆ ಮಾನ್ಯತೆ ನೀಡಿಲ್ಲ” ಎಂದು ಅರ್ಜಿದಾರ ಸೋಲಂಕಿ ಪ್ರತಿಪಾದಿಸಿದ್ದಾರೆ.
ಡಿಸೆಂಬರ್ 15 ಶುಕ್ರವಾರ, ಬಿಜೆಪಿ ನಾಯಕ ಭಜನ್ ಲಾಲ್ ಶರ್ಮಾ ರಾಜಸ್ಥಾನದ ನೂತನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿಗಳಾಗಿ ದಿಯಾ ಕುಮಾರಿ ಮತ್ತು ಬೈರ್ವಾ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕವೇ?
ಉಪ ಮುಖ್ಯಮಂತ್ರಿ ಹುದ್ದೆಗಾಗಲಿ, ಉಪಪ್ರಧಾನಿ ಹುದ್ದೆಗಾಗಲಿ ಸಾಂವಿಧಾನಿಕ ಮಾನ್ಯತೆಯೇ ಇಲ್ಲ. ಸಂವಿಧಾನದಲ್ಲಿ ಈ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಆರ್ಟಿಕಲ್ 163 ಪ್ರಕಾರ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಇದ್ದು, ಅದು ರಾಜ್ಯಪಾಲರಿಗೆ ಅವರ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆರ್ಟಿಕಲ್ 164ರ ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ. ಹಾಗೆಯೇ ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಇತರ ಸಚಿವರನ್ನೂ ಸಹ ರಾಜ್ಯಪಾಲರು ನೇಮಿಸುತ್ತಾರೆ. ಒಟ್ಟಾರೆ ಸಚಿವ ಸಂಪುಟವು ರಾಜ್ಯ ವಿಧಾನಸಭೆಗೆ ಉತ್ತರದಾಯಿತ್ವವಾಗಿರುತ್ತದೆ.
ಸಂವಿಧಾನ 3ನೇ ಶೆಡ್ಯೂಲ್ನಲ್ಲಿ ತಿಳಿಸಿರುವ ಹಾಗೆ ರಾಜ್ಯಪಾಲರು ಸಚಿವರಿಗೂ ಪ್ರತಿಜ್ಷಾವಿಧಿಯನ್ನು ಭೋದಿಸುತ್ತಾರೆ. ಇದನ್ನು ಗಮನಿಸಿದರೆ ಸಂವಿಧಾನದ ಪ್ರಕಾರ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಮಾತ್ರವೆ ಇರುತ್ತಾರೆ. ಮುಖ್ಯಮಂತ್ರಿಯನ್ನು ಬಿಟ್ಟು ಉಳಿದವ ಶಾಸಕರು ಯಾರೇ ಪ್ರಮಾಣವಚನ ಸ್ವೀಕರಿಸುವಾಗಲೂ ಸಚಿವರೆಂದು ಸ್ವೀಕರಿಸಬೇಕೆ ಹೊರತು, ಇಂಥ ಇಲಾಖೆಯ ಸಚಿವ ಎಂದಲ್ಲ. ಹಾಗಾಗಿ ಉಪಮುಖ್ಯಮಂತ್ರಿಯಾದವರಿಗೆ ಅಥವಾ ಉಪಪ್ರಧಾನಿಯಾದವರಿಗೆ ಸಂವಿಧಾನ ಬದ್ದವಾದ ಯಾವುದೇ ವಿಷೇಶವಾದ ಅಧಿಕಾರಗಳು ಇರುವುದಿಲ್ಲ.
ಇದನ್ನೂ ಓದಿ: ಮಧ್ಯಪ್ರದೇಶ: ಹಿಂದುಳಿದ ವರ್ಗದ ನಾಯಕ ಪಟ್ವಾರಿಗೆ ಕಾಂಗ್ರೆಸ್ ಸಾರಥ್ಯ