ತೆಲಂಗಾಣದಲ್ಲಿ ಆಸ್ಪತ್ರೆಗೆ ಸಾಗಿಸಲು ರಸ್ತೆ ಸಂಪರ್ಕವಿಲ್ಲದೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಸಾಗಿಸಿರುವ ದಯಾನೀಯ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಕೊಕ್ಕಡಪಾಡು ಗ್ರಾಮದ ಬುಡಕಟ್ಟು ಸಮುದಾಯದ ಗರ್ಭಿಣಿ ಮಹಿಳೆ ಕೂಸಿ ಹೆರಿಗೆ ನೋವಿನಿಂದ ಬಳಲುವಾಗ, ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಇದರಂದಾಗಿ ಮಹಿಳೆಯನ್ನು ಕುಟುಂಬಸ್ಥರು ಸ್ಟ್ರೆಚರ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕುಟುಂಬಸ್ಥರು ಸುಮಾರು 20 ಕಿಲೋಮೀಟರ್ವರೆಗೆ ಹೆಗಲ ಮೇಲೆ ಹೊತ್ತುಕೊಂಡು ಸತ್ಯನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಮೂಲಭೂತ ಅವಶ್ಯಕತೆಗಳನ್ನು ಬುಡಕಟ್ಟು ನಿವಾಸಿಗಳಿಗೆ ಒದಗಿಸಿಕೊಟ್ಟಿಲ್ಲ ಎಂದು ನೆಟಿಜನ್ ಗಳು ಟೀಕಿಸಿದ್ದಾರೆ.
ಸತ್ಯನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಭದ್ರಚಾಲಂ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಮಹಿಳೆಗೆ ಹೆರಿಗೆ ನಡೆದಿದೆ. ಮಗು ಮತ್ತು ತಾಯಿಯು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಇದನ್ನು ಓದಿ: ಗಾಯಗೊಂಡ ಬಾಲಕನನ್ನು ಸ್ಟ್ರೆಚರ್ನಲ್ಲಿ ಹೊತ್ತುಕೊಂಡು 1300 ಕಿ.ಮಿ. ಹೊರಟ ವಲಸೆ ಕಾರ್ಮಿಕರು