Homeರಾಷ್ಟ್ರೀಯರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ; ಕ್ಷಮೆಯಾಚಿಸಿ, ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಿದ್ದೇವೆಂದ ‘ಝೀ...

ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ; ಕ್ಷಮೆಯಾಚಿಸಿ, ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಿದ್ದೇವೆಂದ ‘ಝೀ ನ್ಯೂಸ್’

- Advertisement -
- Advertisement -

ರಾಜಸ್ಥಾನದ ಉದಯಪುರದಲ್ಲಿ ನಡೆದ ಹತ್ಯೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮಿಸಿದ್ದು, ಹಂತಕರನ್ನು ‘ಮಕ್ಕಳು’ ಎಂದು ಹೇಳಿದ್ದಾರೆ ಎಂದು ತಿರುಚಿದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದ ಹಿಂದಿ ಸುದ್ದಿ ಮಾಧ್ಯಮ ಝೀ ನ್ಯೂಸ್‌ ತಮ್ಮ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದು, ತಪ್ಪಿಗೆ ಕಾರಣರಾದ ಇಬ್ಬರು ಸಿಬ್ಬಂದಿಗಳನ್ನು ಹುದ್ದೆಯಿಂದ ವಜಾ ಮಾಡಿದ್ದೇವೆ ಎಂದು ಹೇಳಿದೆ.

ಝೀ ನ್ಯೂಸ್‌ನ ಡಿಎನ್‌ಎ ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕ ರೋಹಿತ್ ರಂಜನ್ ‘ರಾಹುಲ್ ಗಾಂಧಿಯ ಪೂರ್ವಗ್ರಹವನ್ನು ಮತ್ತೊಮ್ಮೆ ನೋಡಿ. ಉದಯಪುರದ ಆರೋಪಿಗಳನ್ನು ಅವರು ಮಕ್ಕಳು ಎಂದು ಕರೆದಿದ್ದಾರೆ. ಅವರು ಮಕ್ಕಳೊ ಅಥವಾ ಆತಂಕವಾದಿಗಳೊ’ ಎಂದು ಹೇಳಿ ದುರುದ್ದೇಶಪೂರಿತವಾಗಿ ಉದಯಪುರ ಸುದ್ದಿಯನ್ನು ಲಿಂಕ್ ಮಾಡಿ ಮಾಧ್ಯಮದಲ್ಲಿ ತಪ್ಪಾಗಿ ವರದಿ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಹುಲ್ ಗಾಂಧಿಯ ಕ್ಷೇತ್ರ ಕೇರಳದ ವಯನಾಡ್‌ನ ಅವರ ಕಚೇರಿಯಲ್ಲಿ ಜೂನ್ 24 ರಂದು ಎಸ್‌ಎಫ್‌ಐ ವಿದ್ಯಾರ್ಥಿಗಳು ದ್ವಂಸ ಮಾಡಿದ್ದರು. ಈ ಕುರಿತು ಪತ್ರಕರ್ತರು ಕೇಳೀದ್ದ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, “ಇದು ನನ್ನ ಕಚೇರಿ. ಆದರೆ ಅದಕ್ಕೂ ಮುನ್ನ ಇದು ವಯನಾಡಿನ ಜನರ ಕಚೇರಿ. ಇದು ವಯನಾಡಿನ ಜನರ ಧ್ವನಿ. ದುರಾದೃಷ್ಟವಶಾತ್ ಕೆಲವು ಜನರು ಹಿಂಸೆಗಿಳಿದಿದ್ದಾರೆ. ಆದರೆ ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಉದಯಪುರ ಹತ್ಯೆ ಆರೋಪಿಗಳನ್ನು ರಾಹುಲ್ ಗಾಂಧಿ ಕ್ಷಮಿಸಿದ್ದಾರೆ ಎಂದು ಸುಳ್ಳು ಹಬ್ಬಿಸಿದ ಝೀ ನ್ಯೂಸ್

“ಈ ರೀತಿ ಮಾಡಿದ ಮಕ್ಕಳು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಆದರೆ ಅವರ  ಮೇಲೆ ನನಗೆ ಯಾವುದೇ ಕೋಪ ಅಥವಾ ದ್ವೇಷವಿಲ್ಲ. ಅವರನ್ನು ಕ್ಷಮಿಸಿದ್ದೇನೆ’’ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಅವರ ಮಾತನ್ನು ಝೀ ನ್ಯೂಸ್ ಉದಯಪುರ ಹತ್ಯೆಯ ಬಗ್ಗೆ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಎಂಬಂತೆ ತಪ್ಪಾಗಿ ವರದಿ ಮಾಡಿತ್ತು. ರೋಹಿತ್ ರಂಜನ್ ನಿರೂಪಿಸಿದ್ದ, ಚಾನೆಲ್‌ನ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ಇದು ಪ್ರಸಾರವಾಗಿತ್ತು. ಭೀಕರ ಹತ್ಯೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ‘ಆಘಾತಕಾರಿ’ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವೀಕ್ಷಕರನ್ನು ತಪ್ಪುದಾರಿಗೆ ಎಳೆದಿದ್ದರು.

ಚಾನೆಲ್ ಪ್ರಸಾರ ಮಾಡಿದ್ದ ಈ ಸುದ್ದಿಯ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಹಲವಾರು ಜನರು ಇದನ್ನು ನಿಜವೆಂದೇ ನಂಬಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕೂಡಾ ಇದನ್ನು ಬಿರುಸಿನಿಂದ ಹಂಚಿಕೊಂಡಿತ್ತು. ಕನೌಜ್‌ನ ಬಿಜೆಪಿ ಸಂಸದ ಸುಬ್ರತಾ ಪಾಠಕ್, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜವರ್ಧನ್ ರಾಥೋಡ್, ಬಿಜ್ನೋರ್‌ನ ಚಂದ್‌ಪುರ ವಿಧಾನಸಭೆಯ ಶಾಸಕ ಕಮಲೇಶ್ ಸೈನಿ ಸೇರಿದಂತೆ ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ: BJP-RSS ಅಂಗಸಂಸ್ಥೆ ಎಂಆರ್‌ಎಂ ನಾಯಕನ ಸಂಪರ್ಕದಲ್ಲಿದ್ದ ಕೊಲೆ ಆರೋಪಿ?

ಇದರ ನಂತರ ಕಾಂಗ್ರೆಸ್‌ ಪಕ್ಷದ ನಾಯಕರು ಮತ್ತು ಸಮಾಜಿಕ ಮಾಧ್ಯಮಗಳ ಬಳಕೆದಾರರು ಝೀ ನ್ಯೂಸ್ ತಪ್ಪಾಗಿ ವರದಿ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೆ ಅಲ್ಲದೆ, ಛತ್ತೀಸ್‌ಗಡದ ರಾಯಪುರದಲ್ಲಿ ಝೀ ನ್ಯೂಸ್ ಮತ್ತು ನಿರೂಪಕ ರೋಹಿತ್ ರಂಜನ್ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಾಗಿತ್ತು.

ಇದರ ನಂತರ ಎಚ್ಚೆತ್ತ ಝೀ ನ್ಯೂಸ್ ಟ್ವಿಟರ್‌ನಲ್ಲಿ ಇರುವ ವಿಡಿಯೊವನ್ನು ಡಿಲೀಟ್ ಮಾಡಿದ್ದು, “ಮಾನವ ಸಹಜ ತಪ್ಪು” ಎಂದು ಹೇಳಿ ಕ್ಷಮೆಯಾಚಿಸಿದೆ. “ನಿನ್ನೆ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಯನ್ನು ನಮ್ಮ ಕಾರ್ಯಕ್ರಮ ಡಿಎನ್‌ಎನಲ್ಲಿ ತಪ್ಪಾಗಿ ಪ್ರಸಾರವಾಗಿದೆ. ಆ ಬಗ್ಗೆ ನಮಗೆ ವಿಷಾದವಿದೆ” ಎಂದು ಕ್ಷಮೆ ಯಾಚಿಸಿತ್ತು.

ಅದೇ ರೀತಿ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾದ ಡಿಎನ್‌ಎ ಕಾರ್ಯಕ್ರಮದಲ್ಲಿ ಸ್ವತಃ ನಿರೂಪಕ ರೋಹಿತ್ ರಂಜನ್ ಸುಳ್ಳು ಸುದ್ದಿ ಬಗ್ಗೆ ಕ್ಷಮೆಯಾಚಿಸಿದ್ದು, “ರಾಹುಲ್ ಗಾಂಧಿ ಅವರು ವಯನಾಡಿನ ಸನ್ಮಾನ್ಯ ಸಂಸದರಾಗಿದ್ದು, ಕಾಂಗ್ರೆಸ್ ನಾಯಕರು. ಅವರ ಘನತೆಗೆ ಧಕ್ಕೆ ತರುವ ಯಾವುದೇ ಚೇಷ್ಟೆ ಮಾಡಿಲ್ಲ. ಈ ಬಗ್ಗೆ ತಪ್ಪನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಡಿಎನ್‌ಎ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ತಪ್ಪಿಗೆ ಕಾರಣರಾದ ಇಬ್ಬರನ್ನು ಅವರ ಹುದ್ದೆಯಿಂದ ತೆಗೆದುಹಾಕಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ.

ಈ ನಡುವೆ ಸುಳ್ಳು ಸುದ್ದಿಯನ್ನು ಹಂಚಿದ ಬಿಜೆಪಿ ಬಗ್ಗೆಯೂ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಮೂಲಕ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದು, ತಿರುಚಿದ ವೀಡಿಯೋವನ್ನು ಹಂಚಿಕೊಂಡಿದ್ದರ ಸಂಬಂಧ ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ತೆಲಂಗಾಣಕ್ಕೆ ಮೋದಿ: ಬರಮಾಡಿಕೊಳ್ಳದ ಕೆಸಿಆರ್‌; ಧಮ್‌ ಬಿರಿಯಾನಿ ತಿಂದು ಹೋಗಿ ಎಂದ ಕೆಟಿಆರ್‌‌!

ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಇಡುಕ್ಕಿ, ವಯನಾಡ್, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಅರಣ್ಯ ಸುತ್ತಲಿನ ಬಫರ್ ಝೋನ್‌ಗಳ ಅಳವಡಿಕೆಗೆ ಸುಪ್ರೀಂ ಕೋರ್ಟ್ ಜೂನ್-03 ರಂದು ಆದೇಶ ಮಾಡಿತ್ತು. ಇದರಿಂದ ಲಕ್ಷಾಂತರ ಸಂಖ್ಯೆಯ ರೈತರ ಉಳುಮೆ ಭೂಮಿ ಮತ್ತು ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ ಎಂದು ಆರೋಪಿಸಿ ಕೇರಳದ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಹೋರಾಟ ತೀವ್ರಗೊಳಿಸಿತ್ತು.

ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಈ ಭಾಗದ ವಯನಾಡ್ ಸಂಸದರಾಗಿರುವ ರಾಹುಲ್ ಗಾಂಧಿಯವರು ಪ್ರತಿಕ್ರಿಯಿಸಿಲ್ಲ ಹಾಗೂ ಮಧ್ಯಪ್ರವೇಶಿಸಿಲ್ಲ ಎಂದು ಎಸ್‌ಎಫ್‌ಐ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ವೇಳೆ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯೂಐ ಕಾರ್ಯಕರ್ತರು ಮತ್ತು ಎಸ್ಎಫ್ಐನ ಪ್ರತಿಭಟನಾ ನಿರತರ ನಡುವೆ ವಾಗ್ವಾದ ಘರ್ಷಣೆ ನಡೆದಿತ್ತು. ವೇಳೆ ಎಸ್‌ಎಫ್‌ಐ ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರ ಕಚೇರಿಗೆ ಹಾನಿ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...