ಚಿತ್ರದರ್ಗದ ಮುರುಘಾ ಮಠದ ಪೀಠಾಧೀಶ ಶಿವಮೂರ್ತಿ ಮುರುಘಾ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ‘ನ್ಯಾಯ’ ದೊರಕಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಸಿರೋಯ ಅವರು ಸೋಮವಾರ ಹೇಳಿದ್ದಾರೆ. “ಹೆಣ್ಣುಮಕ್ಕಳು ನ್ಯಾಯಕ್ಕೆ ಅರ್ಹರಾಗಿದ್ದಾರೆ” ಎಂದು ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಅವರು ಹೇಳಿದ್ದಾರೆ.
ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಿವಮೂರ್ತಿ ಮುರುಘಾ ಅವರ ವಿರುದ್ಧದ ಆರೋಪ ‘ಸುಳ್ಳು’ ಎಂದು ಪ್ರತಿಪಾದಿಸಿ, ಆರೋಪಿಗೆ ಬೆಂಬಲ ನೀಡಿದ್ದರು. ಇದಾಗಿ ಒಂದು ದಿನದ ನಂತರ ಲೆಹರ್ ಸಿಂಗ್ ಬಾಲಕಿಯರ ಪರವಾಗಿ ಹೇಳಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಲೆಹರ್ ಸಿಂಗ್ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಇದು ಅತ್ಯಂತ ಆಘಾತಕಾರಿ ಮತ್ತು ದುಃಖದ ಬೆಳವಣಿಗೆಯಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೆಲದ ಕಾನೂನು ಗೌರವಿಸುತ್ತೇನೆ: ಮಠಕ್ಕೆ ಮರಳಿದ ಬಳಿಕ ಮುರುಘಾ ಪ್ರತಿಕ್ರಿಯೆ
“ಪ್ರತಿ ಬಾರಿ ಈ ರೀತಿಯ ಏನಾದರೂ ಸಂಭವಿಸಿದಾಗ ಅದು ನಮ್ಮ ಸುತ್ತಮುತ್ತಲಿನ ಮತ್ತು ನಮ್ಮ ಜನರ ವಿಶ್ವಾಸವನ್ನು ಅಲುಗಾಡಿಸುತ್ತದೆ. ಈ ಆರೋಪಗಳನ್ನು ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಮಾಜವಾಗಿ ನಾವು ನಮಗೆ ಋಣಿಯಾಗಿದ್ದೇವೆ” ಎಂದು ಲೆಹರ್ ಸಿಂಗ್ ತಿಳಿಸಿದ್ದಾರೆ.
“ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳು ಮತ್ತು ರಾಜಕೀಯ ಹಸ್ತಕ್ಷೇಪಗಳಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಣ್ಣುಮಕ್ಕಳು ನ್ಯಾಯಕ್ಕೆ ಅರ್ಹರಾಗಿದ್ದಾರೆ. ಈ ಪ್ರಕರಣ ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯ ಸಿಗುತ್ತದೆ ಎಂದಿದ್ದರೆ ಅದನ್ನು ಕೂಡಾ ಪರಿಗಣಿಸಬೇಕು” ಎಂದು ಅವರು ಹೇಳಿದ್ದಾರೆ.
Rajya sabha MP from Karnataka & senior @BJP4India leader Lahar Singh Siroya demands justice for minor girls in the Murugha Matha POCSO case. "The girls deserve nothing but justice," he says.
Comes a day after @BSYBJP backed the seer accused of sexual abuse & said case was "false" pic.twitter.com/K9ffj5QdIq— Anusha Ravi Sood (@anusharavi10) August 29, 2022
“ಈ ಸಂದರ್ಭದಲ್ಲಿ ಗ್ರಹಿಕೆಗಳು ಮಾತ್ರ ಮುಖ್ಯವಲ್ಲ. ನಮ್ಮ ಸಮಾಜದ ಆರೋಗ್ಯದ ವಿಶ್ವಾಸವನ್ನು ಪುನಃಸ್ಥಾಪಿಸುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ನಿರ್ಣಾಯಕ ಪಾತ್ರವಿದೆ” ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ: ದಲಿತರ ಆಗ್ರಹ
ದಿನದ ಹಿಂದೆಯಷ್ಟೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೂರ್ತಿ ಮುರುಘಾ ವಿರುದ್ಧದ ಆರೋಪ ಸುಳ್ಳು ಎಂದು ಆರೋಪಿಯ ಬೆಂಬಲಕ್ಕೆ ನಿಂತಿದ್ದರು.
ಸೋಮವಾರ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಆರೋಪಿ ಶಿವಮೂರ್ತಿ ಮುರುಘಾರನ್ನು ವಶಕ್ಕೆ ಪಡೆದಿದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಮಠಕ್ಕೆ ವಾಪಾಸ್ಸು ಕಳುಹಿಸಿದ್ದಾರೆ. ಮಠದಲ್ಲಿ ಜಮಾಯಿಸಿದ್ದ ಭಕ್ತರೊಂದಿಗೆ ಮಾತನಾಡಿದ ಆರೋಪಿ, ‘ಕಾನೂನನ್ನು ಗೌರವಿಸುತ್ತೇನೆ ಹಾಗೂ ತನಿಖೆಗೆ ಸಹಕರಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಮುರುಘಾ ಮಠದ ಶಿವಮೂರ್ತಿ ವಿರುದ್ಧ ಇಬ್ಬರು ಬಾಲಕಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಮಠದ ಹಾಸ್ಟೆಲ್ನ ವಾರ್ಡನ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಲಕಿಯರು ಮೈಸೂರಿನಲ್ಲಿರುವ ‘ಒಡನಾಡಿ ಸೇವಾ ಸಂಸ್ಥೆ’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೌನ್ಸೆಲಿಂಗ್ ವೇಳೆ ತಮಗೆ ಆಗಿರುವ ದೌರ್ಜನ್ಯವನ್ನು ವಿವರಿಸಿ, ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ನಂತರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.