ಎನ್ಸಿಬಿಯ ಮಾಜಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಅರ್ಜಿಯನ್ನು ನ್ಯಾಯಾಲಯದ ಅನುಮತಿಯಿಲ್ಲದೇ ವಿಚಾರಣೆಗೆ ಪಟ್ಟಿ ಮಾಡಿರುವ ಕುರಿತು ಬಾಂಬೆ ಹೈಕೋರ್ಟ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆಯನ್ನು ನಿರಾಕರಿಸಿದ್ದು, ಯಾವುದೇ ತುರ್ತು ವಿಚಾರಣೆ ಇಲ್ಲ ಎಂದು ತಿಳಿಸಿದೆ.
2008 ರ ಬ್ಯಾಚ್ನ ಐಆರ್ಎಸ್ ಅಧಿಕಾರಿ ವಾಂಖೆಡೆ ಅವರು ನವಿ ಮುಂಬೈನಲ್ಲಿರುವ ತಮ್ಮ ರೆಸ್ಟೋರೆಂಟ್ ಮತ್ತು ಬಾರ್ನ ಮದ್ಯದ ಪರವಾನಗಿಯನ್ನು ರದ್ದುಗೊಳಿಸಿ, ಥಾಣೆ ಅಬಕಾರಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸೋಮವಾರ ಅರ್ಜಿ ಸಲ್ಲಿಸಿದರು. ಜೊತೆಗೆ ರದ್ದುಪಡಿಸಿದ ಪರವಾನಗಿಯನ್ನು ವಾಪಸ್ ನೀಡುವಂತೆ ಕೋರಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸಿದ್ದ ಯುವತಿಗೆ ಬ್ಯಾಂಕ್ ಸೇವೆ ನಿರಾಕರಿಸಿದ ಸಿಬ್ಬಂದಿ
“ಈ ಅರ್ಜಿಯನ್ನು ಸೋಮವಾರ ನಮ್ಮ ಮುಂದೆ ಉಲ್ಲೇಖಿಸದಿರುವಾಗ ಇಂದು ಹೇಗೆ ಇದನ್ನು ಸೇರಿಸಲಾಗಿದೆ? ನಾವು ಅರ್ಜಿ ವಿಚಾರಣೆಗೆ ಅನುಮತಿ ನೀಡಿಲ್ಲ” ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.
ಸೋಮವಾರ ಈ ವಿಷಯವನ್ನು ಪ್ರಸ್ತಾಪಿಸಲು ಕಾಯುತ್ತಿದ್ದೇವು, ಆದರೆ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದ್ದರು ಎಂದು ವಾಂಖೆಡೆ ಪರ ವಕೀಲರಾದ ವೀಣಾ ಥದಾನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗ ಪೀಠವು ನ್ಯಾಯಾಲಯದ ಸಿಬ್ಬಂದಿಗೆ ಹಾಗೆ ಮಾಡದಂತೆ ಎಚ್ಚರಿಕೆ ನೀಡಿದೆ.
“ಬಡವರು ಅರ್ಜಿ ಸಲ್ಲಿಸುತ್ತಾರೆ. ಆದರೆ ಅವರ ಪ್ರಕರಣವನ್ನು ಎಂದಿಗೂ ತಕ್ಷಣ ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ. ಪ್ರಭಾವಿ ವ್ಯಕ್ತಿ ಅರ್ಜಿಯನ್ನು ಸಲ್ಲಿಸಿದಾಗ, ಅವರ ಮನವಿಯನ್ನು ತಕ್ಷಣವೇ ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ” ಎಂದು ನ್ಯಾಯಮೂರ್ತಿ ಜಾಮ್ದಾರ್ ಟೀಕಿಸಿದ್ದಾರೆ.
ನ್ಯಾಯಾಲಯವು ಅರ್ಜಿಯನ್ನು ಯಾವುದೇ ತುರ್ತು ವಿಚಾರಣೆ ಮಾಡಲು ಹೋಗುವುದಿಲ್ಲ. ಅದನ್ನು ಸೂಕ್ತ ಸಮಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
“ನನ್ನ ಕಕ್ಷಿದಾರ (ವಾಂಖೆಡೆ) ಡ್ರಗ್ಸ್ ಪ್ರಕರಣದಲ್ಲಿ ಸಚಿವ ನವಾಬ್ ಮಲಿಕ್ ಅವರ ಅಳಿಯನನ್ನು ಬಂಧಿಸಿದ ನಂತರ, ಸಚಿವರು ನವೆಂಬರ್ 2021 ರಲ್ಲಿ ಥಾಣೆ ಅಬಕಾರಿ ಕಲೆಕ್ಟರ್ಗೆ ಬಾರ್ ಪರವಾನಗಿ ಕುರಿತು ಪ್ರಶ್ನೆಗಳಿರುವ ಪತ್ರವನ್ನು ಬರೆದಿದ್ದಾರೆ. ಪತ್ರದ ಅನುಸಾರ, ವಿಚಾರಣೆಯನ್ನು ಪ್ರಾರಂಭಿಸಲಾಯಿತು. ವಾಂಖೆಡೆಗೆ ಮೂರು ಶೋಕಾಸ್ ನೋಟಿಸ್ಗಳನ್ನು ನೀಡಲಾಯಿತು. ನಂತರ ವಿಚಾರಣೆ ನಡೆಸಿ ಪರವಾನಗಿ ರದ್ದುಗೊಳಿಸಲಾಯಿತು. ಆದ್ದರಿಂದ, ಸಮೀರ್ ವಾಂಖೆಡೆ ರದ್ದತಿಯನ್ನು ಪ್ರಶ್ನಿಸಿ ಮತ್ತು ಪರವಾನಗಿಯನ್ನು ಮರಳಿ ನೀಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ” ಎಂದು ವಾಂಖೆಡೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ತಮ್ಮ ವಿರುದ್ಧದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ: ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮನವಿ