ಕೊರೊನಾ ವಿರುದ್ಧ ಗರಿಷ್ಠ ಸಂಖ್ಯೆಯ ಅರ್ಹ ಜನರಿಗೆ ಚುಚ್ಚುಮದ್ದು ಮಾಡುವ ಗುರಿಯನ್ನು ಹೊಂದಿರುವ ಟಿಕಾ ಉತ್ಸವ ಅಥವಾ ಲಸಿಕಾ ಉತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವಿಟರ್ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಕೊರೊನಾವು ದೇಶದಾದ್ಯಂತ ಹೆಚ್ಚುತ್ತಿರಬೇಕಾದರೆ ‘ಹಬ್ಬ’ ಆಚರಿಸುವಂತೆ ಪ್ರಧಾನಿ ಕರೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.
ಲಸಿಕಾ ಉತ್ಸವ ಆಚರಣೆಯ ಬಗ್ಗೆ ಪ್ರಧಾನಿ ಈ ಹಿಂದೆಯೆ ಹೇಳಿದ್ದರು, ಆದರೆ ಇಂದು ಟ್ವಿಟರ್ನಲ್ಲಿ ನಾಲ್ಕು ವಿನಂತಿಗಳನ್ನೂ ಮಾಡಿದ್ದಾರೆ. ಅವರು, “ಇಂದು, ನಾವು ದೇಶಾದ್ಯಂತ ಟಿಕಾ ಉತ್ಸವವನ್ನು ಪ್ರಾರಂಭಿಸುತ್ತಿದ್ದೇವೆ. ಕೊರೊನಾ ವಿರುದ್ಧದ ಈ ಸುತ್ತಿನ ಹೋರಾಟದಲ್ಲಿ, ನನಗೆ ನಾಲ್ಕು ವಿನಂತಿಗಳಿವೆ …” ಎಂದು ಹೇಳಿದ್ದಾರೆ. ಅವರು ತಮ್ಮ ವಿನಂತಿಗಳ ಪಟ್ಟಿಯ ಲಿಂಕ್ ಅನ್ನು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
आज से हम सभी, देशभर में टीका उत्सव की शुरुआत कर रहे हैं। कोरोना के खिलाफ लड़ाई के इस चरण में देशवासियों से मेरे चार आग्रह हैं… https://t.co/8zXZ0bqYgl
— Narendra Modi (@narendramodi) April 11, 2021
ಇದನ್ನೂ ಓದಿ: ಕೊರೊನಾ ಹಿನ್ನೆಲೆ ರೈತ ಹೋರಾಟ ಮುಂದೂಡಿ, ಮಾತುಕತೆಗೆ ಬನ್ನಿ ಎಂದ ಕೃಷಿ ಸಚಿವ
ಅವರು ಹಂಚಿಕೊಂಡಿರುವ ಲಿಂಕ್ನಲ್ಲಿ ಅವರ ವಿನಂತಿಗಳಿಗೆ.
ಅದರಲ್ಲಿ ಮೊದಲನೆಯದಾಗಿ, ಪ್ರತಿಯೊಬ್ಬರೂ ವ್ಯಾಕ್ಸಿನೇಟ್ ಮಾಡಿಕೊಳ್ಳಿ – ಅನಕ್ಷರಸ್ಥರು ಮತ್ತು ವೃದ್ಧರಂತಹ ಜನರಿಗೆ ವ್ಯಾಕ್ಸಿನೇಷನ್ಗೆ ತೆರಳಲು ಸಹಾಯ ಮಾಡಿ.
ಎರಡನೆಯದಾಗಿ, ಪ್ರತಿಯೊಬ್ಬರೂ ಇನ್ನೊಬ್ಬರನ್ನು ಆರೈಕೆ ಮಾಡಿ – ಅಂದರೆ ಕೊರೊನಾ ಚಿಕಿತ್ಸೆ ಪಡೆಯಲು ಸಂಪನ್ಮೂಲ ಇಲ್ಲದ, ಜ್ಞಾನವಿಲ್ಲದ ಜನರಿಗೆ ಸಹಾಯ ಮಾಡಿ.
ಮೂರನೆಯದಾಗಿ, ಪ್ರತಿಯೊಬ್ಬರೂ ಇನ್ನೊಬ್ಬರನ್ನು ಉಳಿಸಿ – ಅಂದರೆ ತಾನು ಮಾಸ್ಕ್ ಧರಿಸಿ, ತನ್ನೊಂದಿಗೆ ಇತರರನ್ನು ಉಳಿಸಿ.
ಅಂತಿಮವಾಗಿ, ಸಮಾಜ ಮತ್ತು ಜನರು ‘ಸೂಕ್ಷ್ಮ ಧಾರಕ ವಲಯಗಳನ್ನು’ ರಚಿಸುವಲ್ಲಿ ಮುಂದಾಗಬೇಕು. ಒಂದೇ ಒಂದು ಕೊರೊನಾ ಪ್ರಕರಣ ವರದಿಯಾದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಸಮುದಾಯದ ಸದಸ್ಯರು ‘ಮೈಕ್ರೋ ಕಂಟೈನ್ಮೆಂಟ್ ವಲಯ’ ರಚಿಸಬೇಕು. ಭಾರತದಂತಹ ಜನನಿಬಿಡ ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟದ ಪ್ರಮುಖ ಅಂಶವೆಂದರೆ ‘ಮೈಕ್ರೋ ಕಂಟೈನ್ಮೆಂಟ್ ವಲಯಗಳು’ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್ಆರ್ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!
“ಈ ಟೀಕಾ ಉತ್ಸವವು ಕೊರೊನಾ ವಿರುದ್ಧದ ಎರಡನೇ ದೊಡ್ಡ ಹೋರಾಟದ ಪ್ರಾರಂಭವಾಗಿದೆ. ವೈಯಕ್ತಿಕ ನೈರ್ಮಲ್ಯ ಮತ್ತು ಸಾಮಾಜಿಕ ನೈರ್ಮಲ್ಯಕ್ಕೆ ನಾವು ವಿಶೇಷ ಒತ್ತು ನೀಡಬೇಕಾಗಿದೆ” ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಆದರೆ ಪ್ರಧಾನಿ ಕರೆ ನೀಡಿರುವ ‘ಉತ್ಸವ’ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ದೇಶದಾದ್ಯಂತ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ತೀವ್ರ ರೀತಿಯಲ್ಲಿ ಹರಡುತ್ತಿದೆ. ಸೋಂಕಿನಿಂದಾಗಿ ಸಾವು ನೋವುಗಳು ಕೂಡಾ ಹೆಚ್ಚುತ್ತಿದೆ. ಈ ಹೊತ್ತಿನಲ್ಲಿ ಪ್ರಧಾನಿ ‘ಉತ್ಸವ’ ಆಚರಿಸಲು ಕರೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಅಷ್ಟೆ ಅಲ್ಲದೆ ಲಸಿಕೆ ಉತ್ಸವಕ್ಕೆ ಕರೆ ನೀಡಲಾಗಿದೆಯಾದರೂ, ಪಂಜಾಬ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಕೊರತೆಯ ಬಗ್ಗೆ ಕೇಂದ್ರಕ್ಕೆ ನೆನಪಿಸಿದೆ. ಆದರೆ ಪ್ರಧಾನಿ ಇದರ ಬಗ್ಗೆ ಗಮನ ಹರಿಸದೆ ಲಸಿಕೆ ಕೊರತೆಯ ಸಮಯದಲ್ಲಿ ‘ಉತ್ಸವ’ ಆಚರಿಸಲು ಕರೆ ನೀಡಿರುವುದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದಾದ್ಯಂತ ಕೊರೊನಾ ಸಮಸ್ಯೆಗಳು ಹೆಚ್ಚುತ್ತಿರಬೇಕಾದರೆ ಪ್ರಧಾನಿಯು ‘ಉತ್ಸವ’ಕ್ಕೆ ಕರೆ ನೀಡಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಲಸಿಕೆ ಉತ್ಸವಕ್ಕೆ ಪ್ರಧಾನಿ ಕರೆ: ಲಸಿಕೆ ಕೊರತೆ ಗಂಭೀರ ವಿಚಾರ, ಉತ್ಸವ ಅಲ್ಲ ಎಂದ ರಾಹುಲ್ ಗಾಂಧಿ