Homeಮುಖಪುಟಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

- Advertisement -
- Advertisement -

ರಾಜಕಾರಣಿಯಾಗಿ ಬದಲಾದ ಸರಕಾರಿ ಅಧಿಕಾರಿ ಶಾ ಫೈಸಲ್ ಅವರನ್ನು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬರಖಾಸ್ತು ಮಾಡಿದ ತಕ್ಷಣ ಬಂಧಿಸಿರಲಿಲ್ಲ. ಅವರನ್ನು ಆಗಸ್ಟ್ 14ರಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲು ಯತ್ನಿಸುತ್ತಿರುವಾಗ ವಶಕ್ಕೆ ತಗೆದುಕೊಳ್ಳಲಾಯಿತು. ಅಧಿಕಾರಿಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಹಿಂದಿನ ದಿನ ಅವರು ಬಿಬಿಸಿಗೆ ನೀಡಿದ್ದ ಸಂದರ್ಶನದ ಬಗ್ಗೆ ವಿಚಾರಿಸಿದರು ಎಂದು ಅವರ ಗೆಳೆಯರೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ತಿಳಿಸಿದ್ದಾರೆ.

ಅವರನ್ನು ಶ್ರೀನಗರಕ್ಕೆ ಹೊತ್ತೊಯ್ದು, ಕರಾಳ ಸಾರ್ವಜನಿಕ ಸುರಕ್ಷಾ ಕಾಯಿದೆ (Public Safety Act) ಅಡಿಯಲ್ಲಿ ಬಂಧಿಸಲಾಯಿತು. ಈ ಕಾಯಿದೆಯ ಪ್ರಕಾರ ಸರಕಾರವು ಯಾರನ್ನೇ ಆಗಲಿ ವಿಚಾರಣೆ ಇಲ್ಲದೇ ಆರು ತಿಂಗಳುಗಳ ಕಾಲ ಬಂಧನದಲ್ಲಿ ಇಡಬಹುದು. (ಪ್ರಜಾಪ್ರಭುತ್ವಕ್ಕೆ ಜಯವಾಗಲಿ!)

ಆವರು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ತೊಂದರೆ ಉಂಟುಮಾಡಿರಲಿಲ್ಲ ಬದಲಿಗೆ ಶಾ ಫೈಸಲ್ ಹಾರ್ವರ್ಡಿಗೆ ಓಡಿಹೋಗುತ್ತಿದ್ದರು. (ಮಹಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಜನರನ್ನು ಕೈಬಿಟ್ಟು ಹೋಗುವವನು ಯಾವ ರಾಜಕಾರಣಿ! ಸರಕಾರವು ಈ ಬಂಧನದಿಂದ ಅವರಿಗೆ ಉಪಕಾರವನ್ನೇ ಮಾಡಿದೆ ಎಂದು ಕೆಲವು ಜನರು ಯೋಚಿಸುತ್ತಿರುವುದರಲ್ಲಿ ಅಚ್ಚರಿ ಏನಿಲ್ಲ!)

ನಿಜ ಕಾರಣ!

ಶಾ ಫೈಸಲ್ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದಕ್ಕೆ ನೈಜಕಾರಣವೆಂದರೆ ಅವರು ಬಿಬಿಸಿಗೆ ಸಂದರ್ಶನ ನೀಡಿರುವುದು ಎಂಬುದು ಸ್ಪಷ್ಟವಾಗಿದೆ. ಅವರು ಕಾಶ್ಮೀರಕ್ಕೆ ಆಜಾದಿ ಕೇಳಿದರೇ? ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದರೇ? ಇಲ್ಲವೇ ಇಲ್ಲ! ಬದಲಾಗಿ ಅವರು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ನರೇಂದ್ರ ಮೋದಿ ಸರಕಾರ ಬರಖಾಸ್ತುಗೊಳಿಸಿದ್ದನ್ನು ಮತ್ತು ಅದನ್ನು ಮಾಡಲಾದ ವಿಧಾನಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದರು ಅಷ್ಟೇ. ಮೋದಿ ಸಂವಿಧಾನದ ಕೊಲೆ ಮಾಡುತ್ತಿದ್ದಾರೆ ಎಂದವರು ಹೇಳಿದ್ದರು. ಇದನ್ನೇ ಪ್ರತಿಪಕ್ಷಗಳು ಈ ಸರಕಾರಕ್ಕೆ ಸಂಬಂಧಿಸಿದಂತೆ ಹೇಳುತ್ತಲೇ ಬಂದಿವೆ.

ಇದಕ್ಕಾಗಿ ಅವರ ಬಂಧನವಾಯಿತು, ಅವರ ನಾಗರಿಕ ಹಕ್ಕುಗಳನ್ನು ಅಮಾನತಿನಲ್ಲಿಡಲಾಯಿತು ಮತ್ತು ಅವರ ಧ್ವನಿಯನ್ನು ಅಡಗಿಸಲಾಯಿತು. ಸರ್ವಾಧಿಕಾರಿ ಆಡಳಿತಗಳು ಮಾಡುತ್ತಾ ಬಂದಿರುವುದು ಇದನ್ನೇ. ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಡಿದ್ದೂ ಇದನ್ನೇ. ಸಾರ್ವಜನಿಕರ ಜೊತೆ ಮಾತನಾಡದಂತೆ ತಡೆಯಲು ಪ್ರತಿಪಕ್ಷಗಳ ನಾಯಕರನ್ನು ಬಂಧಿಸಲಾಗುತ್ತದೆ. ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾದಾಗ ಸರ್ವಾಧಿಕಾರಿ ಆಡಳಿತಗಳು ಇದನ್ನೇ ಮಾಡಲು ಹೊರಡುತ್ತವೆ.

ಇದಕ್ಕಾಗಿಯೇ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಅವರ ಕುಟುಂಬದ ಹಲವಾರು ಸದಸ್ಯರನ್ನು ಬಂಧನದಲ್ಲಿ ಇರಿಸಲಾಗಿರುವುದು. ಇವರೆಲ್ಲರೂ ಪ್ರತ್ಯೇಕತಾವಾದವು ತಾರಕಕ್ಕೇರಿದ್ದ ಸಂದರ್ಭದಲ್ಲಿ ತಮ್ಮ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ, ಭಾರತದ ಧ್ವಜವನ್ನು ಎತ್ತಿಹಿಡಿದಿದ್ದ ಭಾರತೀಯ ರಾಜಕಾರಣಿಗಳು. ಆದರೆ, ಇಂದು ಅವರನ್ನೇ ದಮನಿಸಿ, ತಾತ್ಕಾಲಿಕ ಸೆರೆಮನೆಗೆ ತಳ್ಳಲಾಗಿದೆ.

ಅವರನ್ನು ಜೈಲಿಗೆ ತಳ್ಳಿರುವುದು ಅವರ ಆತ್ಮಸಾಕ್ಷಿಗಾಗಿ; ಕೇವಲ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬಷ್ಟೇ ಕಾರಣಕ್ಕಾಗಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಈ ಅನ್ಯಾಯಕ್ಕೆ ಹೆಚ್ಚಿನವರು ಬಾಯ್ಮಾತಿನ ಸೇವೆಗಿಂತ ಹೆಚ್ಚೇನನ್ನೂ ಮಾಡದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. “ಕಾನೂನು ಮತ್ತು ಶಿಸ್ತನ್ನು ಕಾಪಾಡಲು ಪ್ರತಿಬಂಧಕ ಬಂಧನ” ಎಂಬುದು ಸರ್ವಾನುಮತದ ಭ್ರಮೆ ಹುಟ್ಟಿಸುವಂತೆ ಬ್ರಿಟಿಷ್ ರಾಜ್‌ನಲ್ಲಿ ನೀಡಲಾಗುತ್ತಿದ್ದ ಸಿದ್ಧ ನೆಪ. (ಅದನ್ನೇ ಮೋದಿ ಅನುಸರಿಸುತ್ತಿರುವುದು)

ಭಿನ್ನಮತಕ್ಕೆ ಮುನ್ನವೇ ಬಾಯಿಗೆ ಬೀಗ!

ಆಗಸ್ಟ್ 5ರಂದು ಘೋಷಿಸಲಾದ ಏಕಪಕ್ಷೀಯ ಸಾಂವಿಧಾನಿಕ ಬದಲಾವಣೆಯ ಬಳಿಕ ಮೋದಿ ಸರಕಾರವು ಕಾಶ್ಮೀರದಲ್ಲಿ ಎಲ್ಲವೂ ಕುಶಲಮಂಗಲ, ಕಾಶ್ಮೀರಿಗಳು ತುಂಬಾ ಕುಶಿಯಾಗಿದ್ದಾರೆ ಎಂಬ ಸುಳ್ಳಿನ ಕಂತೆಯನ್ನು ಬಿತ್ತಲು ಯತ್ನಿಸಿತ್ತು. ಈ ಕಟ್ಟುಕತೆಯನ್ನು ಎತ್ತಿಹಿಡಿಯಲು ಯಾವುದೇ ಕಾಶ್ಮೀರಿ ರಾಜಕಾರಣಿ ಟಿವಿಯಲ್ಲಿ ಕಾಣಿಸಿಕೊಳ್ಳದಿರುವುದು ಅಥವಾ ಬೀದಿಗಳಲ್ಲಿ ಮೋದಿ ಸರಕಾರದ ಕ್ರಮವನ್ನು ವಿರೋಧಿಸದಿರುವುದು ಅಗತ್ಯವಾಗಿತ್ತು.

ಅತ್ಯಲ್ಪ ಅವಧಿಗೆ ಗೃಹಬಂಧನದಲ್ಲಿರುವಾಗಲೇ ಮೆಹಬೂಬಾ ಮುಫ್ತಿಗೆ ಟ್ವೀಟ್ ಮಾಡಲು ಸಾಧ್ಯವಾಗಿತ್ತು. ಅವರು ಹೀಗೆ ಬರೆದಿದ್ದರು: “ಮೋದಿ ಜೀಗೆ ಸಿಕ್ಕ ಭಾರೀ ಬಹುಮತವು- ಅವರು ಮುತ್ಸದ್ದಿಯಂತೆ ಕಾಶ್ಮೀರದ ಜನತೆಯತ್ತ ಕೈಚಾಚುತ್ತಾರೆ; ಅವರು ಕೂಡಾ ಅಟಲ್ ಜೀ ಅವರು ತುಳಿದ ದಾರಿಯನ್ನೇ ತುಳಿಯುತ್ತಾರೆ ಎಂಬ ನಂಬಿಕೆಯನ್ನು ನಮ್ಮಲ್ಲಿ ಮೂಡಿಸಿತ್ತು. ಎಂತಹ ವಿಶ್ವಾಸದ್ರೋಹವಿದು.”

ಫಾರೂಕ್ ಅಬ್ದುಲ್ಲಾ ಅವರನ್ನು ಬಹಿರಂಗಪಡಿಸದ ಗೃಹಬಂಧನದಲ್ಲಿ ಇರಿಸಲಾಗಿದೆ. ಆದರೆ, ಅವರು ಬಂಧನದಲ್ಲಿಲ್ಲ ಎಂದು ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ್ದಾರೆ.

ಭಾರತದ ಗೃಹಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು (ಫೈಸಲ್ ಮತ್ತು ಫಾರೂಕ್) ಹೇಳಿದ್ದಾರೆ. ಫಾರೂಕ್ ಗೃಹಬಂಧನದಿಂದ ತಪ್ಪಿಸಿಕೊಂಡುಬಂದು ಎನ್‌ಡಿಟಿವಿಯ ಜೊತೆ ಮಾತನಾಡಿದರು. ಈಗ ಅವರು ಮತ್ತೆ ಗೃಹಬಂಧನದಲ್ಲಿದ್ದು, ಒಂದು ಮಸೀದಿಯಲ್ಲಿ ಈದ್ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಅವರ ಬೇಡಿಕೆಯನ್ನು ಕೂಡಾ ನಿರಾಕರಿಸಲಾಯಿತು.

ಓಮರ್ ಅಬ್ದುಲ್ಲಾ ತನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುವ ಕೊಂಚವೇ ಮುನ್ನ ಜನರಿಗೆ ಹೇಳಿದ್ದೆಂದರೆ, ಶಾಂತವಾಗಿರಿ, ಹಿಂಸಾಚಾರಕ್ಕೆ ಇಳಿಯಬೇಡಿ ಎಂದು. ಈ ಗುಲಾಮಿ- ಕರಣಿಕ-ಕಾರಕೂನ ವರದಿಗಾರರ ಮೂಲಕ ಕೆಳಮಟ್ಟದ ಅಪಪ್ರಚಾರದ ಕತೆಗಳನ್ನು ಹರಿಯಬಿಡಲಾಗುತ್ತದೆ- ಏನೆಂದರೆ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ‘ಜೈಲಿನಲ್ಲಿ’ ಹೋರಾಟ ನಡೆಸುತ್ತಿದ್ದಾರೆ! (ಪ್ರಜಾಪ್ರಭುತ್ವವನ್ನು ಕೊಂದ ಬಳಿಕ ಈ ಮೋದಿ ಸರಕಾರ ತುಚ್ಛವಾದ ವ್ಯಂಗ್ಯದಿಂದ ಇಂತಹಾ ಆನಂದವನ್ನು ಅನುಭವಿಸುತ್ತಿದೆ.)

ಕೆಲವು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರನ್ನು ಕೂಡಾ ಆಗ್ರಾ ಮತ್ತು ಬರೇಲಿಯಲ್ಲಿರುವ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ತನ್ನನ್ನು ಯಾವ ಕಾರಣಕ್ಕಾಗಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಮೆಹಬೂಬಾ ಮುಫ್ತಿಯವರ ಮಗಳು ಗೃಹಸಚಿವ ಅಮಿತ್ ಶಾಗೆ ಪತ್ರ ಬರೆದು ಕೇಳಲಿಚ್ಛಿಸಿದ್ದಾರೆ.

ಅವರೇನು ಬರೆದ್ದಿದ್ದಾರೆಂದರೆ, “ಏನಿದ್ದರೂ, ನಾನು ವಿವಿಧ ಪತ್ರಿಕೆಗಳಿಗೆ, ಮಾಧ್ಯಮ ಪೋರ್ಟಲ್‌ಗಳಿಗೆ ನೀಡಿದ ಸಂದರ್ಶನಗಳು ನನ್ನ ಬಂಧನಕ್ಕೆ ಕಾರಣ ಎಂದು ಭದ್ರತಾ ಸಿಬ್ಬಂದಿಗಳು ಹೇಳಿದ್ದಾರೆ. ವಾಸ್ತವವಾಗಿ, ನಾನು ಇನ್ನೊಮ್ಮೆ ಮಾತಾಡಿಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅವರು ನನ್ನನ್ನು ಬೆದರಿಸಿದ್ದಾರೆ.”

ಮಾತನಾಡಿದರೆ ಜಾಗ್ರತೆ!

ಇದು ಹೇಗೆ ಕಾಣುತ್ತಿದೆ ಎಂದರೆ, ಮೋದಿ-ಶಾ (ಗಳಸ್ಯ-ಕಂಠಸ್ಯ) ಅವರು ಕೇವಲ ಭಾರತೀಯ ಸಂವಿಧಾನದ ವಿಧಿ 370 ಮಾತ್ರವಲ್ಲ; ವಿಧಿ 19ನ್ನೂ ವಜಾ ಗೊಳಿಸಿದೆ. (ಅದು ನಮ್ಮ ನಿಮ್ಮೆಲ್ಲರಿಗೆ ಅನ್ವಯಿಸುವಂತದ್ದು!) ಈ ವಿಧಿ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಹಲವಾರು ಮೂಲಭೂತ ಹಕ್ಕುಗಳನ್ನೂ ಕೊಟ್ಟಿದೆ. ಈ ತನಕ ಎಷ್ಟು ರಾಜಕಾರಣಿಗಳನ್ನು ಬಂಧಿಸಲಾಗಿದೆ ಎಂದು ನಿಖರವಾಗಿ ಗೊತ್ತಿಲ್ಲ; ಆದರೆ, ಮೋದಿ-ಶಾ ಹೇಳಿಕೆಗಳಿಗಿಂತ ಅದು ವ್ಯತಿರಿಕ್ತವಾಗಿದೆ. ಸುಮಾರು 400ರಷ್ಟು ರಾಜಕಾರಣಿಗಳನ್ನು ಎರಡೇ ದಿನಗಳಲ್ಲಿ ಬಂಧಿಸಲಾಗಿತ್ತು ಎಂದು ವರದಿಗಳು ಹೇಳುತ್ತವೆ. ಪತ್ರಕರ್ತರ ಬಂಧನ ಆರಂಭವಾಗಿದೆ.

ಇಂದು ಯಾರೂ ಭಾರತದಲ್ಲಿ ಕಾಶ್ಮೀರದ ಜೊತೆಗೆ ಸ್ಪಂದಿಸುತ್ತಿಲ್ಲ. ಆದರೆ, ಇದೇ ತಂತ್ರವನ್ನು ಈ ಮೋದಿ ಸರಕಾರ ಭಾರತದಾದ್ಯಂತ ಅನುಸರಿಸುವುದಿಲ್ಲ ಎಂದು ಹೇಳಬಲ್ಲವರು ಯಾರು? ಪ್ರತಿಪಕ್ಷಗಳವರನ್ನು ಜೈಲಿಗೆ ತಳ್ಳಿ, ಸ್ಥಳೀಯ ಮಾಧ್ಯಮಗಳನ್ನು ಹೊಸಕಿ, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಈ  ಸರಕಾರ ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವಾಗ, ಅಲ್ಲಿನ ಜನರು ಸಂತೋಷವಾಗಿದ್ದಾರೋ, ಕಡುಕೋಪದಲ್ಲಿದ್ದಾರೋ ಎಂದು ನಮಗೆಲ್ಲಾ ಗೊತ್ತಾಗುವುದಾದರೂ ಹೇಗೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

ಕೃಪೆ-ಶಿವಂ ವಿಜ್ (ದಿ ಪ್ರಿಂಟ್)

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...