ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ರೆಕಾರ್ಡ್ ಮಾಡಲು ಸ್ಪೀಕರ್ಗೆ ಸೂಚಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಂಡಿಸಿದ ನಂತರ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಇಂದು (ಜ.9) ವಿಧಾನಸಭೆಯಿಂದ ಹೊರನಡೆದಿದ್ದಾರೆ.
ರಾಜ್ಯ ಸರ್ಕಾರ ಸಿದ್ಧಪಡಿಸಿದ ಮತ್ತು ಸ್ಪೀಕರ್ ಅನುವಾದಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ರೆಕಾರ್ಡ್ ಮಾಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು. ರಾಜ್ಯಪಾಲರು ತಮ್ಮ ಭಾಷಣಕ್ಕೆ ಸರ್ಕಾರ ಸಿದ್ಧಪಡಿಸದ ಕೆಲವು ಭಾಗಗಳನ್ನು ಸೇರಿಸಿದ್ದಾರೆ ಎಂದು ವರದಿಯಾಗಿದೆ.
ಜಾತ್ಯತೀತತೆಯ ಬಗ್ಗೆ ಉಲ್ಲೇಖಗಳನ್ನು ಒಳಗೊಂಡಿರುವ, ತಮಿಳುನಾಡು ಶಾಂತಿಯ ಸ್ವರ್ಗ ಎಂದು ಬಣ್ಣಿಸಲಾದ ಮತ್ತು ಪೆರಿಯಾರ್, ಬಿ.ಆರ್.ಅಂಬೇಡ್ಕರ್, ಕೆ.ಕಾಮರಾಜ್, ಸಿ.ಎನ್.ಅಣ್ಣಾದೊರೈ, ಕರುಣಾನಿಧಿ ಅವರಂತಹ ನಾಯಕರನ್ನು ಸ್ಮರಿಸಿ ರಾಜ್ಯ ಸರ್ಕಾರವು ಸಿದ್ಧಪಡಿಸಿದ ಭಾಷಣದ ಭಾಗಗಳನ್ನು ರಾಜ್ಯಪಾಲರು ಬಿಟ್ಟಿಬಿಟ್ಟರು. ಆನಂತರ ಮುಖ್ಯಮಂತ್ರಿ ನಿರ್ಣಯ ಮಂಡಿಸಿದರು. ಆಡಳಿತಾರೂಢ ಡಿಎಂಕೆ ಪ್ರತಿಪಾದಿಸುವ ‘ದ್ರಾವಿಡ ಮಾದರಿ’ಯ ಉಲ್ಲೇಖವನ್ನೂ ಅವರು ಓದಲಿಲ್ಲ.
#WATCH | Chennai: A ruckus breaks out at the Tamil Nadu assembly soon after Governor RN Ravi begins his address as the Session begins.
A few MLAs of DMK alliance parties are raising slogans against the Governor.
(Video Source: Tamil Nadu Assembly) pic.twitter.com/M8gzGDwKO7
— ANI (@ANI) January 9, 2023
ರಾಜ್ಯಪಾಲರ ಕ್ರಮವು ವಿಧಾನಸಭೆ ಸದನದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ನಿರ್ಣಯದಲ್ಲಿ ಎಂ.ಕೆ. ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಈ ಹಿಂದೆ ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿದ್ದವು. ಪ್ರತಿಭಟನೆಯ ನಂತರ, ಘೋಷಣೆಗಳನ್ನು ಕೂಗಲಾಗಿದೆ.
ರಾಜ್ಯಪಾಲ ರವಿ ವಿರುದ್ಧ ವಿಧಾನಸಭೆಯಲ್ಲಿ ‘ತಮಿಳುನಾಡು ಬಿಟ್ಟು ತೊಲಗಿ’ ಘೋಷಣೆಗಳು ಪ್ರತಿಧ್ವನಿಸಿದವು. ಆಡಳಿತಾರೂಢ ಡಿಎಂಕೆ ಶಾಸಕರು, “ಬಿಜೆಪಿ, ಆರೆಸ್ಸೆಸ್ ಸಿದ್ಧಾಂತವನ್ನು ಹೇರಬೇಡಿ” ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸಂಸದ ಕಾರ್ತಿ ಪಿ.ಚಿದಂಬರಂ ಅವರು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದ್ದಾರೆ.
“ತಮಿಳಗಂ ತಮಿಳುನಾಡಿಗೆ ಹೆಚ್ಚು ಸೂಕ್ತವಾದ ಹೆಸರು” ಎಂದು ರಾಜ್ಯಪಾಲರು ಇತ್ತೀಚೆಗೆ ಹೇಳಿಕೆ ನೀಡಿದ ಬಳಿಕ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ವಿವಾದ ಉಂಟಾಗಿದೆ. ಡಿಎಂಕೆ ಶಾಸಕರು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ್ದಾರೆ.
(‘ನಾಡು’ ಎಂಬ ಪದವು ಭೂಮಿ ಎಂದರ್ಥವನ್ನು ಹೊಂದಿದೆ. ಕೆಲವೊಮ್ಮೆ ದೇಶ ಅಥವಾ ರಾಷ್ಟ್ರ-ರಾಜ್ಯ ಎಂದು ಅರ್ಥೈಸಲಾಗುತ್ತದೆ. ‘ತಮಿಳಗಂ’ ಎಂದರೆ ತಮಿಳರು ವಾಸಿಸುವ ಪ್ರದೇಶ ಎಂಬುದಾಗಿದೆ.)
“ದುರದೃಷ್ಟವಶಾತ್ ತಮಿಳುನಾಡಿನಲ್ಲಿ ನಾವು ದ್ರಾವಿಡರು ಎಂಬ ಹಿಂಜರಿಕೆಯ ರಾಜಕಾರಣವಿದೆ. ಸಂವಿಧಾನದ ಬಲದಿಂದ ನಮ್ಮನ್ನು ಒಟ್ಟುಗೂಡಿಸಲಾಗಿದೆ. ನಾವು ದೇಶದ ಭಾಗವಲ್ಲ ಎಂಬ ವಿಚಾರವನ್ನು ಬಲಪಡಿಸಲು ಅರ್ಧಶತಮಾನ ಕಾಲ ಪ್ರಯತ್ನಿಸಲಾಗಿದೆ. ಇಡೀ ದೇಶಕ್ಕೆ ಅನ್ವಯಿಸುವ ಎಲ್ಲವನ್ನೂ ತಮಿಳುನಾಡು ವಿರೋಧಿಸುತ್ತಿದೆ”ಎಂದು ರಾಜ್ಯಪಾಲರು ಬುಧವಾರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದರು. ಕಾಶಿ-ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಅಭಿನಂದಿಸುವ ಕಾರ್ಯಕ್ರಮ ಅದಾಗಿತ್ತು.
“ಇದೊಂದು ಅಭ್ಯಾಸವಾಗಿದೆ. ಅನೇಕ ಪ್ರಬಂಧಗಳನ್ನು ಸುಳ್ಳು ಮತ್ತು ಕಳಪೆ ಕಾಲ್ಪನಿಕ ಸಂಗತಿಗಳಿಂದ ಬರೆಯಲಾಗಿದೆ. ಇದನ್ನು ಹೋಗಲಾಡಿಸಬೇಕು. ಸತ್ಯವು ಮೇಲುಗೈ ಸಾಧಿಸಬೇಕು. ವಾಸ್ತವವಾಗಿ, ತಮಿಳುನಾಡು ಭಾರತದ ಆತ್ಮವನ್ನು ಹಿಡಿದಿಟ್ಟುಕೊಂಡಿರುವ ನಾಡು. ಆದರೆ ತಮಿಳಗಂ ಎಂಬುದು ಸೂಕ್ತ ಪದವಾಗಿ ಹೋಗಿದೆ” ಎಂದಿದ್ದರು ರಾಜ್ಯಪಾಲರು.
ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ವಾಗ್ವಾದ ನಡೆದಿದ್ದು, ಬಿಜೆಪಿಯ ಆಶಯದಂತೆ ರಾಜ್ಯಪಾಲ ರವಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಡಳಿತರೂಢ ಪಕ್ಷ ಆರೋಪಿಸಿದೆ.
“ರಾಜ್ಯಪಾಲ ಆರ್.ಎನ್.ರವಿ ಅವರು ದಿನನಿತ್ಯ ಒಂದಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗೊಂದಲ, ಪ್ರತ್ಯೇಕತೆ ಮತ್ತು ಸಂಘರ್ಷ ಸೃಷ್ಟಿಸುತ್ತಿದ್ದಾರೆ. 50 ವರ್ಷಗಳ ದ್ರಾವಿಡ ರಾಜಕಾರಣದಲ್ಲಿ ಜನರಿಗೆ ಮೋಸ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ” ಎಂದು ಟೀಕೆಗಳು ವ್ಯಕ್ತವಾಗಿವೆ.
ಡಿಎಂಕೆ ವಕ್ತಾರ ಸೇಲಂ ಧರಣೀಧರನ್ ಪ್ರತಿಕ್ರಿಯಿಸಿದ್ದು, “ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಇಂದು ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಭಾಷಣದ ವೇಳೆ ಕೆಲವು ಪ್ರಮುಖ ವಿಷಯಗಳನ್ನು ಬಿಟ್ಟು ಸಾಂವಿಧಾನಿಕ ನಿಯಮಗಳಿಂದ ಉಲ್ಲಂಘಿಸಿದ್ದಾರೆ. ಈ ರಾಜ್ಯಪಾಲರು ರಾಜಕೀಯ ಅಜೆಂಡಾವನ್ನು ಹೊಂದಿದ್ದಾರೆ. ಅವರು ತಮಿಳುನಾಡಿನ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.