ಗೌರವ ಡಾಕ್ಟರೇಟ್ ಪಡೆಯುವಲ್ಲಿ ವ್ಯಾಪಕ ಹಗರಣಗಳು ನಡೆಯುತ್ತಿವೆ. ಸಾವಿರ ಡಾಲರ್ ನೀಡಿ ಅನ್ಲೈನ್ನಲ್ಲಿ ಗೌರವ ಡಾಕ್ಟರೇಟ್ ಪಡೆಯುವಂತಹ ಪರಿಸ್ಥಿತಿ ಇದೆ. ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಬೇಕು ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಸುದ್ಧಿ ಸಂಪಾದಕ ಡಾ.ಮೈ.ಸಿ.ಪಾಟೀಲ್ ತಿಳಿಸಿದರು.
ತುಮಕೂರು ನಗರದ ಕನ್ನಡಭವನದಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಪಿಎಚ್ಡಿ ಪಡೆದವರಿಗೆ ಅಭಿನಂದಿಸಿ ಅವರು ಮಾತನಾಡಿದರು.
ಗೌಡ (ಗೌರವ ಡಾಕ್ಟರೇಟ್) ಪಡೆಯುವಲ್ಲಿ ಅಕ್ರಮ, ಅನ್ಯಾಯ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ಹೋದರೆ ಅರ್ಜಿದಾರನಿಗೆ ದಂಡ ಹಾಕಲಾಯಿತು. ನ್ಯಾಯಾಧೀಶರೂ ಕೂಡ ಅಕ್ರಮಗಳನ್ನೇ ಸಮರ್ಥಿಸುವಂತಹ ವಾತಾವರಣ ಇರುವುದು ವಿಷಾದನೀಯ. ಹಾಗಾಗಿ ಅಕ್ರಮ ವಿಶ್ವವಿದ್ಯಾಲಯಗಳ ಬಗ್ಗೆ ಎಚ್ಚರಿಕೆ ಇರಬೇಕು. ಗೌರವ ಡಾಕ್ಟರೇಟ್ ವ್ಯಕ್ತಿಯ ಗೌರವ ಹೆಚ್ಚಿಸುವ ಬದಲು ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿವೆ. ಅಂತಹ ವಿವಿಗಳಿಂದ ಡಾಕ್ಟರೇಟ್ ಪಡೆಯಬಾರದು. ಅತ್ತ ಆಕರ್ಷಿತರಾಗಬಾರದು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ.ಎನ್.ಎಸ್.ರವಿಕುಮಾರ್, ಬೇರೆಯವರು ಬರೆದದ್ದನ್ನೇ ಯಥಾವತ್ತಾಗಿ ಹಾಕಿಕೊಂಡು ಪಿಎಚ್ಡಿ ಮಾಡುವುದು ಬೇಡ. ಅದು ಕನ್ನಡಕ್ಕೆ ಎಸಗಿದ ದ್ರೋಹವಾಗುತ್ತದೆ. ನಕಲು ಮಾಡಿದರೆ ಮೋಸ ಮಾಡಿದಂತೆ ಆಗುತ್ತದೆ. ಬೇಕಾದರೆ ಬೇರೆಯವರು ಏನು ಬರೆದು ನಿಲ್ಲಿಸಿದ್ದಾರೋ ಅಲ್ಲಿಂದ ಬೇಕಾದರೆ ಮುಂದುವರಿಸಿ ಪಿಎಚ್ಡಿ ಬರೆಯಿರಿ. ಅದು ಬಿಟ್ಟು ನಕಲು ಒಳ್ಳೆಯ ಲಕ್ಷಣವಲ್ಲ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕ ಮಾತನಾಡಿ, ಕನ್ನಡದ ಅಸ್ಮಿತೆ ಕಳೆದುಹೋಗುತ್ತಿರುವ ಸಂದರ್ಭ ಇದು. ಕನ್ನಡ ಅಂದರೆ ಭಾಷೆ, ನಾಡು, ಬದುಕು, ಜೀವನ ಕ್ರಮ, ಆಹಾರ ಪದ್ದತಿ ಎಲ್ಲವೂ ಆಗಿದೆ. ಒಂದು ಭಾಷೆ ಹೋದರೆ ಇದೆಲ್ಲವೂ ನಾಶವಾಗುತ್ತದೆ. ಬಹುಸಂಸ್ಕೃತಿಯ ಒಂದು ಕೊಂಡಿಹೋದರೂ ಆ ಜನಾಂಗದ ಇರುವಿಕೆಯೇ ಇಲ್ಲವಾಗುತ್ತದೆ. ಹಾಗಾಗಿ ಕನ್ನಡ ರಕ್ಷಣೆ ಮಾಡಬೇಕು ಎಂದು ಹೇಳಿದರು.
ನಾವು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಪಿಎಚ್ಡಿ ಬರೆಯುವ ಸಂದರ್ಭದಲ್ಲಿ ಇಂತಹ ಪದಗಳು, ಇಂತಹ ವಾಕ್ಯ, ಇಂತಹ ವಸ್ತು ಇರಬಾರದು ಎಂಬ ನಿಯಮಗಳು ಬರಬಹುದು. ಇದನ್ನು ಮನಗಂಡು ಪಿಎಚ್ಡಿ ಪಡೆದಿರುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸೂಕ್ಷ್ಮ ಸನ್ನಿವೇಶದಲ್ಲಿ ಸಾಹಿತ್ಯದ ಉಳಿವಿಗೆ ಸಾಹಿತ್ಯ ಪರಿಷತ್ ಇರುತ್ತದೆ. ತಾವು ಕೂಡ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರೆ ಒಳ್ಳೆಯದಾಗುತ್ತದೆ. ಬುದ್ದ ಬಸವ, ಅಂಬೇಡ್ಕರ್, ಕುವೆಂಪು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!
https://m.facebook.com/story.php?story_fbid=2096049643859814&id=100003643969161
ಗೌರವ ಡಾಕ್ಟರೇಟ್ ಕರ್ಮಕಾಂಡ ಇಲ್ಲಿದೆ ನೋಡಿ .