ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಲಾಕೌಟ್ ತೆರೆವುಗೊಳಿಸಬೇಕೆಂಬ ಸರ್ಕಾರದ ಆದೇಶವನ್ನು ಧಿಕ್ಕರಿಸುತ್ತಿದ್ದು, ಕಾರ್ಮಿಕರನ್ನು ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ಕಂಪೆನಿಯ ಕಾರ್ಮಿಕರು ಆರೋಪಿಸಿದ್ದಾರೆ.
ಕಂಪನಿಯ ಆಡಳಿತ ಮಂಡಳಿಯ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿದ್ದ ಕಂಪೆನಿಯ ವಿರುದ್ಧ 3500 ಕಾರ್ಮಿಕರು ನಡೆಸುತ್ತಿರುವ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ. ನವೆಂಬರ್ 10 ರಿಂದ ಮುಷ್ಕರದ ಕಾರಣ ಹೇಳಿ ಕಂಪೆನಿಯು ಲಾಕ್ಔಟ್ ಮಾಡಿದೆ. ಈ ನಡುವೆ ಕಾರ್ಮಿಕರು ಧಿಡೀರ್ ಲಾಕ್ ಔಟ್ ಮಾಡಿದ ಕಂಪನಿಯ ನಿರ್ಧಾರವನ್ನು ವಿರೋಧಿಸಿ ಹಾಗೂ ಕಾರ್ಮಿಕರ ಕೆಲಸದ ಸಮಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕೆನ್ನುವ ಬೇಡಿಕೆ ಸೇರಿದಂತೆ ಇನ್ನೂ ಹತ್ತಾರು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಈ ನಡುವೆ ಕಂಪೆನಿ ಹಾಗೂ ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆದಿದ್ದರೂ ಅದು ಯಶಸ್ವಿಯಾಗಿರಲಿಲ್ಲ.
ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನಿ ಆಡಳಿತದ ನಡುವಿನ ತಿಕ್ಕಾಟ: ಟೊಯೋಟಾದಲ್ಲಿ ನಡೆಯುತ್ತಿರುವುದೇನು?
ಈ ನಡುವೆ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್ಔಟ್ ತೆರವುಗೊಳಿಸಬೇಕೆಂದು ನವೆಂಬರ್ 18 ರಂದು ಆದೇಶ ಹೊರಡಿಸಿತ್ತು. ಆದರೆ ಇದೀಗ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.
ಇದನ್ನೂ ಓದಿ: ಟೊಯೊಟಾ ಕಾರ್ ಕಂಪನಿ ಲಾಕ್ ಔಟ್?- ಬೀದಿಗಿಳಿದು ಪ್ರತಿಭಟಿಸುತ್ತಿರುವ 3500 ಕಾರ್ಮಿಕರು!
ಇಂದು ಬೆಳಿಗ್ಗೆಯಿಂದಲೇ ಕಂಪೆನಿಯ ಹೊರಗಡೆ ಸಾವಿರಾರು ಕಾರ್ಮಿಕರು ನೆರೆದಿದ್ದು, ತಮ್ಮ ಕೆಲಸ ನಿರ್ವಹಿಸಲು ಕಾಯುತ್ತಾ ನಿಂತಿದ್ದರೂ ಕಂಪೆನಿ ಒಳಗಡೆಗೆ ಬಿಟ್ಟಿರಲಿಲ್ಲ. ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ನೂರಾರು ಸಂಖ್ಯೆಯ ಪೊಲೀಸರು ನೆರೆದಿದ್ದಾರೆ. ಸರ್ಕಾರದ ಆದೇಶದ ಹೊರತಾಗಿಯೂ ಕಂಪೆನಿಯು ಉದ್ಯೋಗಿಗಳನ್ನು ಕೆಲಸ ನಿರ್ವಹಿಸುತ್ತೇವೆ ಎಂದು ಹೊರಟರೂ ಬಿಡದೆ ಇರುವುದಕ್ಕಿ ಸಾವಿರಾರು ಕಾರ್ಮಿಕರು ಮುಖ್ಯದ್ವಾರದ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಟೊಯೊಟಾ: 5 ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಪ್ರತಿಭಟನೆ- ದರ್ಪ ತೋರುತ್ತಿರುವ ಕಂಪನಿ ಆಡಳಿತ!