ಉತ್ತರಪ್ರದೇಶದ ಬಾರ್ಖೇರಾ ಪೊಲೀಸರ ವಶದಲ್ಲಿದ್ದ 40 ವರ್ಷದ ಮುಸ್ಲಿಂ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಪೊಲೀಸರ ಹಲ್ಲೆಯಿಂದ ಮೃತಪಟ್ಟಿರುವುದಾಗಿ ಕುಟುಂಬವು ಆರೋಪಿಸಿದೆ.
ಪಹರ್ ಗಂಜ್ ಪ್ರದೇಶದ ನಿವಾಸಿ ಬಶೀರ್ ಖಾನ್ನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಆದರೆ ಪೋಲಿಸರ ಹಲ್ಲೆಯ ಬಳಿಕ ಖಾನ್ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮೃತನ ಸಹೋದರ ಜಮೀರ್ ಈ ಕುರಿತು ಪೊಲೀಸರ ವಿರುದ್ಧ ದೂರು ನೀಡಿದ್ದಾರೆ.
ಆದರೆ ಕಸ್ಟಡಿಯಲ್ಲಿ ಥಳಿತದಿಂದ ಸಾವು ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಖಾನ್ ವಿರುದ್ಧ ಕೊಲೆ, ಮಾರಣಾಂತಿಕ ಹಲ್ಲೆ ಸೇರಿದಂತೆ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 20 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಮೃತನ ಸೋದರ ಜಮೀರ್ ಸಲ್ಲಿಸಿರುವ ದೂರಿನಂತೆ ಖಾನ್ ಪತ್ನಿ ಶಬಾನಾ ಗುರುವಾರ ಪೊಲೀಸರಿಗೆ ದೂರು ನೀಡಿ ಆತ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಆರೋಪಿಸಿದ್ದಳು. ಪೋಲಿಸರು ಗುರುವಾರ ತಡರಾತ್ರಿ ಖಾನ್ ಮನೆಗೆ ತೆರಳಿ ಆತನನ್ನು ಠಾಣೆಗೆ ಕರೆದೊಯ್ದಿದ್ದರು. ಪೋಲಿಸರು ಖಾನ್ನನ್ನು ಮನೆಯಿಂದ ಹೊರಗೆಳೆದು ಥಳಿಸಿದ್ದಾರೆ. ನಾನು ಪೋಲಿಸ್ ಜೀಪ್ನ್ನು ಹಿಂಬಾಲಿಸಿದೆ ಮತ್ತು ಬಾರ್ಖೇರಾ ಠಾಣೆಗೆ ಹೋಗಿ ಸಹೋದರನಿಗೆ ನೋಡಿದಾಗ ಆತ ಲಾಕಪ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಎಂದು ಜಮೀರ್ ದೂರಿನಲ್ಲಿ ಹೇಳಿದ್ದಾರೆ.
ಬಿಸಲ್ಪುರ್ ಸರ್ಕಲ್ ಅಧಿಕಾರಿ ಸತೀಶ್ ಶುಕ್ಲಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಖಾನ್ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಕುಟುಂಬದ ಸದಸ್ಯರಿಂದ ಬಂದ ದೂರು ಮತ್ತು ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿದ ಬಿಜೆಪಿಯ ಮಾಜಿ ಸಂಸದ ಸುರೇಶ್ ಗೋಪಿ