ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರಿಗೆ ಬುಲೆಟ್ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಫಾಲ್ ಪಶ್ಚಿಮದ ಗಡಿಯಲ್ಲಿರುವ ಲಮ್ಶಾಂಗ್ ಪ್ರದೇಶದ ಕಡಂಗ್ಬಂಡ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಕೆಲವು ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ನೋಂಗ್ತೋಂಬಮ್ ಮೈಕೆಲ್ (33) ಮತ್ತು ಮೈಸ್ನಮ್ ಖಬಾ (23) ಎಂದು ಗುರುತಿಸಲಾಗಿದೆ. ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಡೆಸಿದ ದಾಳಿಗೆ ಪ್ರತಿಯಾಗಿ ಶಿಬಿರದಲ್ಲಿನ ಸ್ವಯಂಸೇವಕರು ಪ್ರತಿದಾಳಿ ನಡೆಸಿದ್ದಾರೆ. ಇದರ ಪರಿಣಾಮವಾಗಿ ಗುಂಡಿನ ಚಕಮಕಿ ನಡೆದಿದೆ. ಮಹಿಳೆಯರು ಸೇರಿದಂತೆ ಹಲವು ಮಂದಿ ತಮ್ಮ ಜೀವ ರಕ್ಷಣೆಗೆ ಓಡಿಹೋಗುತ್ತಿರುವ ದೃಶ್ಯ ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ. ಈ ಪ್ರದೇಶಕ್ಕೆ ಹೆಚ್ಚುವರಿ ಭದ್ರತೆಯನ್ನು ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಕಾಂಗ್ಪೋಕ್ಪಿ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವಿನ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ನಂತರ ಕಡಂಗ್ಬಂಡ್ ಮತ್ತು ನೆರೆಯ ಕೌಟ್ರುಕ್ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸುರಕ್ಷಿತ ಸ್ಥಳಗಳಿಗೆ ಓಡಿಹೋದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ಪ್ರದೇಶಕ್ಕೆ ದೌಡಾಯಿಸಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವು ಕೌಟ್ರುಕ್ ಮತ್ತು ಕಡಂಗ್ಬಂಡ್ ಗ್ರಾಮಗಳ ಮೇಲೆ ತೀವ್ರ ಹಾನಿಯನ್ನುಂಟುಮಾಡಿದೆ. ಇಲ್ಲಿ ಕುಕಿ ಮತ್ತು ಮೈತೈ ಸಮುದಾಯಗಳ ಗುಂಪುಗಳ ನಡುವೆ ಹಲವಾರು ಸಶಸ್ತ್ರ ಸಂಘರ್ಷಗಳು ನಡೆದಿದೆ.
ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3, 2023ರಂದು ‘ಬುಡಕಟ್ಟು ಐಕಮತ್ಯ ಮೆರವಣಿಗೆ’ ಆಯೋಜಿಸಲಾಗಿತ್ತು. ಇದು ಬಳಿಕ ಜನಾಂಗೀಯ ಹಿಂಸಾಚಾರಕ್ಕೆ ತಿರುಗಿತ್ತು. ಮೇ.3ರಿಂದ ಮಣಿಪುರದಲ್ಲಿ ಕುಕಿಗಳು ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯದಲ್ಲಿ ಕನಿಷ್ಠ 60,000 ಜನರು ನಿರಾಶ್ರಿತರಾಗಿದ್ದಾರೆ. ಡಿ.4ರಂದು ತೆಂಗೊಪಾಲ್ ಜಿಲ್ಲೆಯ ಲೀತು ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಮೃತಪಟ್ಟಿದ್ದರು. ಕೆಲ ದಿನಗಳ ಕಾಲ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತ್ಯೇಕವಾದ ಘಟನೆಯಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೈತೈ ಮತ್ತು ಕುಕಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮೈತೈ ಸಮುದಾಯದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇದಲ್ಲದೆ ಮಣಿಪುರ ಗಡಿಭಾಗದ ಮೊರೆಹ್ ಪಟ್ಟಣದಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ಸಶಸ್ತ್ರದಾರಿ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದರು.
ಇದನ್ನು ಓದಿ: ದಲಿತ ರೈತರಿಗೆ ಇಡಿ ಸಮನ್ಸ್ ಪ್ರಕರಣ: ನಿರ್ಮಲಾ ಸೀತಾರಾಮನ್ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS ಅಧಿಕಾರಿ ಅಮಾನತು